ಚಿತ್ರದುರ್ಗದ ಈ ಹಳ್ಳಿಗಳಿಗೆ ಬರುತ್ತಿರುವ ವಿದ್ಯುತ್ ಬಿಲ್ ನೋಡಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಭಾಗ್ಯಜ್ಯೋತಿ ಯೋಜನೆಯಡಿ ವಿದ್ಯುತ್ ಬಳಸುತ್ತಿದ್ದರೂ ಈ ಗ್ರಾಮಸ್ಥರಿಗೆ ಸಾವಿರಾರು ರೂಪಾಯಿ ಬಿಲ್ ಬರುತ್ತಿದೆ! ಇದಕ್ಕೆ ಕಾರಣ ಯಾರು ಗೊತ್ತಾ? ಮುಂದೆ ಓದಿ

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ(ಜು.18): ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚಾಗಿ ಜನರು ಭಾಗ್ಯಜ್ಯೋತಿ ಯೋಜನೆಯ ಕರೆಂಟ್ ಅನ್ನೇ ಉಪಯೋಗಿಸುತ್ತಾರೆ. ಆದ್ರೆ ಈ ಒಂದು ಪಂಚಾಯ್ತಿಯಲ್ಲಿ ಮಾತ್ರ ಭಾಗ್ಯಜ್ಯೋತಿ ವಿದ್ಯುತ್ ಬಳಸಿದ್ರೂ ಪ್ರತೀ ಮನೆಗೆ ಸಾವಿರಗಟ್ಟಲೇ ಬಿಲ್ ಬರ್ತಿರೋದಕ್ಕೆ ಜನರು ಶಾಕ್ ಆಗಿದ್ದಾರೆ. ಅಷ್ಟಕ್ಕೂ ಇಡೀ ಜಿಲ್ಲೆಯಲ್ಲಿ ಆ ಒಂದು ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಿಗೆ ಮಾತ್ರ ಯಾಕೆ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಬಿಲ್ ಬರ್ತಿರಬಹುದು ಅಂದ್ಕೊಂಡ್ರಾ? ಇಲ್ಲಿದೆ ನೋಡಿ ಆ ಕುರಿತಾದ ಒಂದು ಸ್ಪೆಷಲ್ ರಿಪೋರ್ಟ್.

Add Asianetnews Kannada as a Preferred SourcegooglePreferred

 ಚಿತ್ರದುರ್ಗ(Chitradurga) ತಾಲ್ಲೂಕಿನ ಲಿಂಗಾವರಹಟ್ಟಿ((Lingavarahatti) ಗ್ರಾಮದಲ್ಲಿ. ಸುಮಾರು ಆರೇಳು ತಿಂಗಳುಗಳಿಂದಲೂ ಪ್ರತೀ ಮನೆಗೆ ಈ ಗ್ರಾಮವಲ್ಲದೇ ಹಳೇ ದ್ಯಾಮವ್ವನಹಳ್ಳಿ(Dyamavvanhalli) ಗ್ರಾ.ಪಂ ವ್ಯಾಪ್ತಿಗೆ ಬರುವ ಲಿಂಗಾವರಹಟ್ಟಿ, ಕಾಸವರಹಟ್ಟಿ, ಹೊಸ ದ್ಯಾಮ್ವನಹಳ್ಳಿ ಸೇರಿ ಸುಮಾರು ೪೦೦೦ ಕ್ಕೂ ಅಧಿಕ ಮನೆಗಳ ಪರಿಸ್ಥಿತಿ ಇದೇ ಆಗಿದೆ. ಈ ಕುರಿತು ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನವಾಗಿಲ್ಲ. ಏನೋ ಒಂದು ತಿಂಗಳು ಮಿಸ್ಸಾಗಿ ಬಂದಿರಬಹುದು ಬಿಡು ಎಂದು ಗ್ರಾಮದ ಅನೇಕರು ಸಾವಿರಗಟ್ಟಲೇ ಕಂರೆಟ್ ಬಿಲ್ ಕಟ್ಟಿದ್ದಾರೆ. ಆದ್ರೆ ಪ್ರತೀ ತಿಂಗಳೂ ಇದೇ ರೀತಿ ಬಿಲ್ ಬರ್ತಿರೋದ್ರಿಂದ ಗಾಬರಿಗೊಂಡ ಜನರು ಆತಂಕದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇದನ್ನೂ ಓದಿ: ದ್ವೀಪದಂತಾಗಿರುವ ಉಕ್ಕಡಗಾತ್ರಿ ಕ್ಷೇತ್ರ: ಭಕ್ತರು ಎಚ್ಚರ ವಹಿಸುವಂತೆ ಜಿಲ್ಲಾಡಳಿತ

ಗ್ರಾಮೀಣ ಭಾಗದಲ್ಲಿ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿರುವ ರೈತರಿಗೆ ಈ ರೀತಿ ಸಾವಿರಾರು ರೂಪಾಯಿ ಬಿಲ್ ಬಂದ್ರೆ ಅವರು ಪಾವತಿಸುವಾದರೂ ಹೇಗೆ ಎನ್ನುವ ಚಿಂತೆ ಶುರುವಾಗಿದೆ. ಅಷ್ಟಕ್ಕೂ ಈ ರೀತಿ ಆಗೋದಕ್ಕೆ ಕಾರಣ ಏನಿರಬಹುದು ಎಂದು ಕೆದಕಿದಾಗ, ತಿಳಿದುಬಂದಿದ್ದು ಏನೆಂದರೆ, ಈ ಹಿಂದೆ ಇದ್ದ ದ್ಯಾಮವ್ವನಹಳ್ಳಿ ಪಂಚಾಯ್ತಿ ಬಿಲ್ ಕಲೆಕ್ಟರ್(Bill Collector) ಮಾಡಿರೋ ಎಡವಟ್ಟಿನಿಂದ ಹಾಗೂ ತಿಂದು ತೇಗಿರೋ ಕಾರಣದಿಂದ ಅಧಿಕಾರಿಗಳು ಆತನನ್ನು ಕೆಲಸದಿಂದ ವಜಾಗೊಳಿಸಿದ್ದಾರೆ. ಆದ್ರೆ ತಪ್ಪು ಮಾಡಿರೋ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳೋದು ಬಿಟ್ಟು ಬಡ ಜನರಿಗೆ ಬಿಲ್ (Power bill) ಕಟ್ಟಲೇಬೇಕು ಎಂದು ಒತ್ತಾಯ ಮಾಡ್ತಿರೋದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕೂಡಲೇ ಅಧಿಕಾರಿಗಳು ಸರಿಪಡಿಸಿ ರೈತರಿಗೆ ಆಗ್ತಿರೋ ಹೊರೆ ಕಡಿಮೆ ಮಾಡದೇ ಇದ್ರೆ, ಗ್ರಾಮದ ಎಲ್ಲಾ ಮೀಟರ್ ಬೋರ್ಡ್ ಗಳನ್ನು ಕಿತ್ತು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಸಂಡೂರು: ಭಾರೀ ಮಳೆಗೆ ಕೆಸರಲ್ಲಿ ಬಿದ್ದು ಎದ್ದು ಬಂದ ಎಮ್ಮೆಗಳಂತಾದ ಸರ್ಕಾರಿ ಬಸ್‌ಗಳು..!

 ನಾವು ಇಡೀ ದಿನ ಕೂಲಿ ಮಾಡಿ ಬಂದ್ರೆ ಮಾತ್ರ ಆ ದಿನ ಗಂಜಿ ಮನೆಯಲ್ಲಿ ಮಾಡೋಕ್ ಆಗೋದು. ಆದ್ರೆ ಯಾರೋ ಮಾಡಿರೋ ತಪ್ಪಿಗೆ ಸಾವಿರಗಟ್ಟಲೇ ಪವರ್ ಬಿಲ್ ನಾವೇಕೆ ಕಟ್ಟಬೇಕು. ಮೊದಲೆಲ್ಲಾ ಭಾಗ್ಯಜ್ಯೋತಿ ಯೋಜನೆ ಎಂದು ಸುಮಾರು ೧೦೦ ರೂ ಬಿಲ್ ಬರ್ತಿತ್ತು ಆದ್ರೆ ಏಕಾಏಕಿ ಆರೇಳು ತಿಂಗಳುಗಳಿಂದ ಯಾಕೆ ಸಾವಿರಗಟ್ಟಲೇ ಬಿಲ್ ಬರ್ತಿದೆ ಎಂದು ಗ್ರಾಮ ಮಹಿಳೆ ಪ್ರಶ್ನೆ ಮಾಡಿದರು. ನಾವು ಯಾವುದೇ ಕಾರಣಕ್ಕೂ ಬಿಲ್‌ ಪಾವತಿ ಮಾಡಲ್ಲ ಅಧಿಕಾರಿಗಳು ಪರಿಶೀಲನೆ ನಡೆಸಬೇಕು.
- ಲಕ್ಷ್ಮಿಕಾಂತ್ ಗ್ರಾಮದ ರೈತ


 ಅದೇನೋ ಗಾದೆನೇ ಇದ್ಯಲ್ಲ; ಎತ್ತಿಗೆ ಜ್ವರ ಬಂದ್ರ ಎಮ್ಮೆಗೆ ಬರೆ ಹಾಕಿದ್ರಂತೆ ಹಂಗಾಗಿದೆ ನಮ್ಮ ಪರಿಸ್ಥಿತಿ. ಪಂಚಾಯ್ತಿ ಬಿಲ್ ಕಲೆಕ್ಟರ್ ಮಾಡಿರೋ ತಪ್ಪಿಗೆ ಸುಮಾರು ೪೦೦೦ ಸಾವಿರ ಮನೆಗಳ ವಾರಸುದಾರರು ಸಾವಿರಗಟ್ಟಲೇ ಬಿಲ್ ಪಾವತಿಸಬೇಕಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳ ಒತ್ತಡ ಹಾಕ್ತಿರೋದು ಖಂಡನೀಯ. ಕೂಡಲೇ ಮೇಲಾಧಿಕಾರಿಗಳು ಈ ಕುರಿತು ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

- ರಾಜಮ್ಮ. ಗ್ರಾಮಸ್ಥರು