ಲಾಕ್ಡೌನ್ ಮುಗಿಯುವವರೆಗೂ ಜೀವನ ಸಾಗಿಸೋದು ಹೇಗೆ ಸ್ವಾಮಿ..? ಮಹಿಳೆಯರ ಅಳಲು
ಶಾಸಕರ ಮುಂದೆ ಗೋಳಾಡಿದ ಮಹಿಳೆಯರು|ವಿವಿಧ ಬೇಡಿಕೆ ಈಡೇರಿಸುವಂತೆ ಸಿರುಗುಪ್ಪ 7, 8ನೇ ವಾರ್ಡಿನ ಮಹಿಳೆಯರಿಂದ ಮನವಿ| ಸರ್ಕಾರ ಕೇವಲ ಪಡಿತರ ಅಕ್ಕಿಯನ್ನು ಮಾತ್ರ ನೀಡುತ್ತಿದ್ದು, ಅಕ್ಕಿಯ ಜೊತೆಗೆ ಇತರೆ ಸಾಮಗ್ರಿಗಳು ಇದ್ದರೆ ಮಾತ್ರ ಅಡುಗೆ ಮಾಡಲು ಸಾಧ್ಯವಾಗುತ್ತದೆ| ದಾನಿಗಳಿಂದ ಹಾಗೂ ಸರ್ಕಾರದಿಂದ ಯಾವುದೇ ನೆರವು ನಮ್ಮ ವಾರ್ಡಿಗೆ ದೊರೆತ್ತಿಲ್ಲ|
ಸಿರುಗುಪ್ಪ(ಏ.27): ನಗರದ 7 ಮತ್ತು 8ನೇ ವಾರ್ಡಿನ ನೂರಾರು ಮಹಿಳೆಯರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದ ತಹಸೀಲ್ದಾರ್ ಕಚೇರಿಯಲ್ಲಿ ಶಾಸಕರ ಮುಂದೆ ತಮ್ಮ ಗೋಳನ್ನು ತೋಡಿಕೊಂಡರು.
7ನೇ ವಾರ್ಡಿನ ಮಹಿಳೆ ಮಾದೇವಮ್ಮ ಮಾತನಾಡಿ, ಕಳೆದ ಒಂದು ತಿಂಗಳಿಂದ ಮನೆಗಳಲ್ಲಿಯೇ ಇದ್ದೇವೆ. ಸರ್ಕಾರ ಕೇವಲ ಪಡಿತರ ಅಕ್ಕಿಯನ್ನು ಮಾತ್ರ ನೀಡುತ್ತಿದ್ದು, ಅಕ್ಕಿಯ ಜೊತೆಗೆ ಇತರೆ ಸಾಮಗ್ರಿಗಳು ಇದ್ದರೆ ಮಾತ್ರ ಅಡುಗೆ ಮಾಡಲು ಸಾಧ್ಯವಾಗುತ್ತದೆ. ದಾನಿಗಳಿಂದ ಹಾಗೂ ಸರ್ಕಾರದಿಂದ ಯಾವುದೇ ನೆರವು ನಮ್ಮ ವಾರ್ಡಿಗೆ ದೊರೆತ್ತಿಲ್ಲ. ಮನೆಗಳ ವಿದ್ಯುತ್ ಬಿಲ್, ಮನೆ ಬಾಡಿಗೆ, ಸ್ವಸಹಾಯ ಗುಂಪುಗಳಲ್ಲಿ ಸಾಲ ಪಡೆದಿದ್ದು ಕಂತುಗಳನ್ನು ಕಟ್ಟಲು ಕೂಡ ನಮ್ಮ ಹತ್ತಿರ ಹಣ ಇಲ್ಲ. ಇನ್ನು ಮೇ 3ರ ವರೆಗೂ ಸರ್ಕಾರ ನಿರ್ಬಂಧ ಹಾಕಿರುವುದರಿಂದ ಜೀವನ ಸಾಗಿಸುವುದು ಹೇಗೆ ಎಂದು ತಮ್ಮ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು. ವಾರ್ಡಿನ ನಿವಾಸಿಗಳಾದ ಹುಲಿಗೆಮ್ಮ, ಲಕ್ಷ್ಮಿ ತಮ್ಮ ಧ್ವನಿ ಗೂಡಿಸಿದರು.
ಮಾರಕ ಕೊರೋನಾ ಬಗ್ಗೆ ಜಾಗೃತಿ ಮೂಡಿಸಲು ಮುಂದಾದ ಕಲಾವಿದ: ಚಮ್ಮಾರನಿಗೆ ಒಲಿದ 'ಮೌತ್ ಆರ್ಟ್'
ಕೊರೋನಾ ವೈರಸ್ ಹರಡದಂತೆ ತಡೆಯಲು ಲಾಕ್ಡೌನ್ ಒಂದೇ ಮಾರ್ಗವಾಗಿದ್ದು, ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿಯೇ ಇರುವ ಮೂಲಕ ಕೊರೋನಾ ಸೋಂಕು ಹರಡಂತೆ ತಡೆಯಬೇಕಾಗಿದೆ. ರಾಜ್ಯ ಸರ್ಕಾರ ಬಡಜನತೆಗೆ ಅನುಕೂಲವಾಗುವಂತೆ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಧಾನ್ಯಗಳನ್ನು ವಿತರಿಸುತ್ತಿದೆ. ಕೇಂದ್ರ ಸರ್ಕಾರ ಜನ್ಧನ್ ಖಾತೆಯ ಮೂಲಕ 500 ಜಮೆ ಮಾಡಿದೆ. ಮನೆ ಬಾಡಿಗೆಯನ್ನು ಮೂರು ತಿಂಗಳಕಾಲ ಪಡೆಯದಂತೆ ಮನೆ ಮಾಲೀಕರಿಗೆ, ವಿದ್ಯುತ್ ಬಿಲ್ ಪಾವತಿಸಲು ಸಮಯ ನೀಡುವಂತೆ ಜೆಸ್ಕಾಂಗೆ, ಸಾಲದ ಕಂತುಗಳನ್ನು ಕಟ್ಟಲು ಸಮಾಯ ನೀಡುವಂತೆಯೂ ಸೂಚನೆ ನೀಡಲಾಗಿದ್ದು, ಸಾಲ ಮರುಪಾವತಿಸುವಂತೆ ಒತ್ತಡ ತಂದಲ್ಲಿ ತಹಸೀಲ್ದಾರರಿಗೆ ದೂರು ಸಲ್ಲಿಸುವಂತೆ ಶಾಸಕರು ತಿಳಿಸಿದರು.