*  ಯೋಜನೆ ವಿರೋಧಿಸುವವರ ಕುರಿತು ತನಿಖೆ ನಡೆಯಲಿದೆ*  ಅಗ್ನಿಪಥ ಯೋಜನೆಯ 4 ವರ್ಷ ಸೇವೆಯ ನಂತರ ಸರ್ಕಾರದ ನೌಕರಿಯಲ್ಲಿ ಅವಕಾಶ*  ಶೇ.10 ರಷ್ಟು ಮೀಸಲಾತಿಯನ್ನು ಸಹ ನೀಡುವುದಾಗಿ ಹೇಳಿದ್ದಾರೆ 

ಬಾಗಲಕೋಟೆ(ಜೂ.20): ಅಗ್ನಿಪಥ ಯೋಜನೆಯನ್ನು ವಿರೋ​ಧಿಸುವುದರ ಹಿಂದೆ ರಾಜಕೀಯ ಕೈವಾಡ ಇದೆ. ರಾಜ್ಯ ಮತ್ತು ದೇಶದಲ್ಲಿ ಈ ಹಿಂಸಾಚಾರದ ಹಿಂದೆ ಯಾರಿದ್ದಾರೆ ಎಂದು ಗೊತ್ತಿದ್ದು, ಈ ಬಗ್ಗೆ ತನಿಖೆಯಾಗಲಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ಜಿಲ್ಲೆಯ ಗಲಗಲಿ ಗ್ರಾಮದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂಸಾಚಾರದ ಪ್ರಕರಣದಲ್ಲಿ ಹಿಂದಿರುವ ಶಕ್ತಿಗಳನ್ನು ಶಿಕ್ಷಿಸಲು ತನಿಖೆ ಆರಂಭಗೊಂಡಿದ್ದು, ಅಗ್ನಿಪಥ ಯೋಜನೆ ಕುರಿತು ಕೇಂದ್ರ ಸರ್ಕಾರ ಅನ್ಯಾಯವಾಗದ ರೀತಿಯಲ್ಲಿ ಜಾರಿಗೊಳಿಸಲು ಮುಂದಾಗಿದ್ದರೂ ಸಹ ಹಿಂಸಾಚಾರದ ಪ್ರಕ್ರಿಯೆಗಳು ಏಕೆ ಎಂದು ಪ್ರಶ್ನಿಸಿದರು.

ಭ್ರಷ್ಟ ವ್ಯವಸ್ಥೆ ತೊಲಗಿಸಿದ ಕೀರ್ತಿ ಬಿಜೆಪಿಯದ್ದು: ಸಚಿವ ಕಾರಜೋಳ

ಅಗ್ನಿಪಥ ಯೋಜನೆಯ 4 ವರ್ಷ ಸೇವೆಯ ನಂತರ ಸರ್ಕಾರದ ನೌಕರಿಯಲ್ಲಿ ಅವಕಾಶವಿದೆ. ಶೇ.10 ರಷ್ಟುಮೀಸಲಾತಿಯನ್ನು ಸಹ ನೀಡುವುದಾಗಿ ಹೇಳಿದ್ದಾರೆ. ಹೀಗಿದ್ದರೂ ಸಹ ಪ್ರತಿಭಟನೆ ಆರಂಭಿಸಿ ಹಿಂಸಾಚಾರ ಮಾಡುವುದರಲ್ಲಿ ಏನು ಅರ್ಥವಿದೆ? ಪ್ರತಿಭಟನೆಯನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.

ರಾಹುಲ್‌ ಗಾಂಧಿ​ಯವರಿಗೆ ಇಡಿ ವಿಚಾರಣೆ ಸಂದರ್ಭದಲ್ಲಿ ಕಾಂಗ್ರೆಸ್‌ ನಡೆಸಿರುವ ಪ್ರತಿಭಟನೆ ಅಚ್ಚರಿ ತಂದಿದೆ. ಸ್ವಾತಂತ್ರ್ಯ ನಂತರದಲ್ಲಿ ಸಾಕಷ್ಟುಐಟಿ ರೇಡ್‌ಗಳಾಗಿವೆ. ನಾವು ಅವುಗಳನ್ನು ರಾಜಕೀಯಕರಣಗೊಳಿಸಿಲ್ಲ. ಆದರೆ, ಕಾಂಗ್ರೆಸಿಗರು ಯಾರನ್ನು ರಕ್ಷಣೆ ಮಾಡಲು ಹೊರಟಿದ್ದಾರೆ. .2 ಸಾವಿರ ಕೋಟಿ ಬೆಲೆ ಬಾಳುವ ಆಸ್ತಿಯನ್ನು .50 ಲಕ್ಷಕ್ಕೆ ಪರಬಾರೆ ಮಾಡಲು ಹೊರಟವರ ರಕ್ಷಣೆಗೆ ನಿಂತಿರುವುದು ಎಷ್ಟುಸರಿ ಎಂದು ಪ್ರಶ್ನಿಸಿದರು. ಬೆಂಗಳೂರಿನಲ್ಲಿನ ಪ್ರಧಾನಿ ಮೋದಿ ರೋಡ ಶೋ ರದ್ದಾಗಿರುವುದಕ್ಕೆ ಆಡಳಿತಾತ್ಮಕ ಕಾರಣಗಳು ಇದ್ದು ಅದನ್ನು ಸ್ಥಳೀಯ ಆಡಳಿತ ಗಮನಿಸುತ್ತಿದೆ ಎಂದರು.

ಪರಿಷತ್‌ ಚುನಾವಣೆಯಲ್ಲಿ ಪ್ರಕಾಶ ಹುಕ್ಕೇರಿ ಅವರನ್ನು ಮುದಿ ಎತ್ತು ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು ಚುನಾವಣೆಯ ಸಮಯದಲ್ಲಿ ಟೀಕೆ ಟಿಪ್ಪಣಿಗಳು ಸಹಜವಾಗಿದ್ದು, ಅವುಗಳು ಚುನಾವಣೆಗೆ ಮಾತ್ರ ಸೀಮಿತವಾಗಿರುತ್ತವೆ. ಅವುಗಳನ್ನು ಮುಂದುವರೆಸಬಾರದು ಎಂದ ತಿಳಿಸಿದರು.