ಅನೈತಿಕ ಸಂಬಂಧ ಆರೋಪದ ಅಡಿಯಲ್ಲಿ ಯುವಕನನ್ನು ಅಪಹರಿಸಿ ಕೊಲೆ ಮಾಡಿದ್ದ ಇಬ್ಬರು ಯುವಕರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. 

ಬೆಂಗಳೂರು [ಜ.21]: ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎಂದು ಆರೋಪಿಸಿ ಮಸೀನ್‌ ಎಂಬಾತನನ್ನು ಹತ್ಯೆ ಮಾಡಿದ್ದ ಆರೋಪಿಗಳ ಮೇಲೆ ಭಾರತೀ ನಗರ ಠಾಣೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

Add Asianetnews Kannada as a Preferred SourcegooglePreferred

ಭಾರತೀನಗರ ನಿವಾಸಿಗಳಾದ ಮೊಹಮ್ಮದ್‌ ರಿಜ್ವಾನ್‌(29) ಮತ್ತು ಪರ್ವೇಜ್‌ ಅಹಮದ್‌(28) ಗುಂಡೇಟು ತಗುಲಿದೆ. ಇದೇ ವೇಳೆ ಪ್ರಕರಣದ ಇತರೆ ಆರೋಪಿಗಳಾದ ಮೊಹಮ್ಮದ್‌ ಸಫಾನ್‌, ಸೈಯದ್‌ ಅಲಿ, ಯಾಸೀನ್‌ ಖಾನ್‌, ಶಾಹೀದ್‌ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಭಾರತೀನಗರ ನಿವಾಸಿ ಇರ್ಷಾದ್‌ ಎಂಬಾತನನ್ನು ಕೆಲವರು ಗಾಂಜಾ ಸೇವನೆ ವಿಚಾರಕ್ಕೆ ಹತ್ಯೆಗೈದಿದ್ದರು. ಆತನ ಪತ್ನಿ ಜತೆ ಕೊಲೆಯಾದ ಮೊಹಮ್ಮದ್‌ ಮತೀನ್‌ ಅನೈತಿಕ ಸಂಬಂಧ ಹೊಂದಿದ್ದ. ಜತೆಗೆ ಪತಿಯನ್ನು ಕಳೆದುಕೊಂಡಿದ್ದ ಮಹಿಳೆ ತನ್ನ ಸಹೋದರಿಯನ್ನು ಮತೀನ್‌ ಜತೆ ಮದುವೆ ಮಾಡಲು ಸಿದ್ದತೆ ನಡೆಸಿದ್ದಳು. ಈ ವಿಚಾರ ತಿಳಿದ ಇರ್ಷಾದ್‌ ಸಹೋದರ ಮೊಹಮ್ಮದ್‌ ರಿಜ್ವಾನ್‌ ತನ್ನ ಸಹಚರರ ಜತೆ ಸೇರಿ ಜ.16ರಂದು ಮತೀನ್‌ನನ್ನು ಶಿವಾಜಿನಗರದಿಂದ ಅಪಹರಿಸಿ ಬಾಗಲೂರಿನ ನಿರ್ಜನ ಪ್ರದೇಶದಲ್ಲಿ ಹತ್ಯೆಗೈದಿದ್ದ.

ಬಾಂಬ್ ನಿಷ್ಕ್ರಿಯಗೊಳಿಸಿದ ತಜ್ಞರು: ನಿಟ್ಟುಸಿರು ಬಿಟ್ಟ ಮಂಗಳೂರಿಗರು

ಆರೋಪಿಗಳ ಜಾಡು ಬೆನ್ನತ್ತಿದ್ದ ಪೊಲೀಸರು ಮೊಹಮ್ಮದ್‌ ತಂಜೀಲ್‌ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈತನ ಮಾಹಿತಿ ಆಧರಿಸಿ ರಿಜ್ವಾನ್‌ ಮತ್ತು ಫರ್ವೇಜ್‌ ಅಡಗಿರುವ ಸ್ಥಳ ಪತ್ತೆ ಹಚ್ಚಿದ್ದರು. ಸೋಮವಾರ ನಸುಕಿನ ಮೂರು ಗಂಟೆ ಸುಮಾರಿಗೆ ಇಬ್ಬರು ಆರೋಪಿಗಳು ನಂಬರ್‌ ಪ್ಲೇಟ್‌ ಇಲ್ಲದ ದ್ವಿಚಕ್ರ ವಾಹನದಲ್ಲಿ ಕಲಪಲ್ಲಿ ಸ್ಮಶಾನದ ರಸ್ತೆಯಲ್ಲಿ ಸಂಚರಿಸುತ್ತಿದ್ದರು. ಭಾರತೀನಗರ ಇನ್‌ಸ್ಪೆಕ್ಟರ್‌ ಜಿ.ಪಿ.ರಮೇಶ್‌ ತಮ್ಮ ತಂಡದೊಂದಿಗೆ ಆರೋಪಿಗಳ ಬಂಧನಕ್ಕೆ ಮುಂದಾಗಿದ್ದರು. ಈ ವೇಳೆ ಕಾನ್‌ಸ್ಟೇಬಲ್‌ ಮಜರ್‌ ಬೇಗ್‌ ಎಂಬವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಈ ವೇಳೆ ಆತ್ಮರಕ್ಷಣೆಗಾಗಿ ಪಿಐ ರಮೇಶ್‌, ಆರೋಪಿಗಳ ಕಾಲುಗಳಿಗೆ ಗುಂಡು ಹಾರಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.