ರಾಜಸ್ಥಾನದ ಅಲೆಮಾರಿ ಕುಟುಂಬಗಳು ಬೀಡುಬಿಟ್ಟಿದ್ದು, ಕೈಗೆಟುಕುವ ದರದಲ್ಲಿ ಗಾಳಿ ತುಂಬುವ ಪ್ಲಾಸ್ಟಿಕ್ ಗೊಂಬೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಕುದುರೆ, ನವಿಲು, ಆನೆಯಂತಹ ಆಕರ್ಷಕ ಗೊಂಬೆಗಳು ಕಡಿಮೆ ಬೆಲೆಗೆ ಸಿಗುತ್ತಿರುವುದರಿಂದ, ಮಕ್ಕಳಿಂದ ಹಿಡಿದು ಪಾಲಕರವರೆಗೂ ಎಲ್ಲರೂ ಖರೀದಿಗೆ ಮುಗಿಬೀಳುತ್ತಿದ್ದು, ವ್ಯಾಪಾರ ಜೋರಾಗಿ ನಡೆಯುತ್ತಿದೆ.

ಉತ್ತರ ಕನ್ನಡ: ಗೊಂಬೆಗಳೆಂದರೆ ಯಾವ ಮಕ್ಕಳಿಗೆ ಇಷ್ಟವಾಗುವುದಿಲ್ಲ ಹೇಳಿ? ಯಾವುದಾದರೂ ಜಾತ್ರೆಗೆ ಹೋದರೆ ನನಗೆ ಆ ಗೊಂಬೆ ಬೇಕು ಈ ಗೊಂಬೆ ಬೇಕು ಎಂದು ಮಕ್ಕಳು ಪಾಲಕರಿಗೆ ಕಾಡುವುದು ಸಹಜ. ಈಗ ಗಾಳಿ ತುಂಬುವ ಪ್ಲಾಸಿಕ್ ಗೊಂಬೆ ಮಾರಾಟಗಾರರು ಪಟ್ಟಣಕ್ಕೆ ಲಗ್ಗೆ ಇಟ್ಟಿದ್ದು, ಎಲ್ಲೆಂದರಲ್ಲಿ ಕಾಣ ಸಿಗುತ್ತಿವೆ.

ಪಟ್ಟಣದ ಶಿವಾಜಿ ಸರ್ಕಲ್, ಬಸ್ ನಿಲ್ದಾಣ ಸೇರಿ ಸುತ್ತಮುತ್ತ ಎತ್ತ ನೋಡಿದರೂ ಗೊಂಬೆ ವ್ಯಾಪಾರಸ್ಥರೇ ಕಾಣುತ್ತಿದ್ದಾರೆ. ವ್ಯಾಪಾರ ಕೂಡ ಜೋರಾಗಿಯೇ ನಡೆದಿದೆ. ಕನಿಷ್ಠ ದರದಲ್ಲಿ ಕುದುರೆ, ನವಿಲು, ಕೋಳಿ, ಆನೆ, ಜೀಬ್ರಾ, ಹೀಗೆ ತರ ತರಹದ ಗಾಳಿ ತುಂಬಿದ ಗೊಂಬೆಗಳನ್ನು ಮಾರಾಟ ಮಾಡಲಾಗುತ್ತಿದೆ. ಅಂಗಡಿ ಅಥವಾ ಜಾತ್ರೆಗಳಿಗೆ ಹೋದರೆ ₹100 ಕ್ಕೆ ಸಿಗುವ ಗೊಂಬೆಗಳು ಇಲ್ಲಿ ₹50ಕ್ಕೆ ಸಿಗುತ್ತಿರುವುದರಿಂದ ಗ್ರಾಹಕರು ಕೂಡ ಗೊಂಬೆ ಖರೀದಿಸುವಲ್ಲಿ ಹಿಂದೆ ಬೀಳುತ್ತಿಲ್ಲ.

ಸುಮಾರು 15-20 ಕುಟುಂಬಗಳು

ರಾಜಸ್ಥಾನದಿಂದ ಅಲೆಮಾರಿ ಜನಾಂಗದ ಸುಮಾರು 15-20 ಕುಟುಂಬಗಳು 4-5 ಮಹಿಂದ್ರಾ ಪಿಕಪ್ ವಾಹನದಲ್ಲಿ ಗೊಂಬೆಗಳನ್ನು ಹೊತ್ತು ಇಲ್ಲಿಗೆ ಬಂದಿದ್ದು, ಪಟ್ಟಣದ ಶಿವಾಜಿ ಸರ್ಕಲ್, ಬಸ್ ನಿಲ್ದಾಣ, ಬಸವನ ಬೀದಿ ಸುತ್ತ ಹತ್ತಾರು ಕಡೆ ಗೊಂಬೆ ಮಾರಾಟ ಮಾಡುತ್ತಿದ್ದಾರೆ. ದಿನಕ್ಕೆ ಒಬ್ಬೊಬ್ಬರು ಕನಿಷ್ಠ 100ಕ್ಕೂ ಅಧಿಕ ಗೊಂಬೆಗಳನ್ನು ಮಾರಾಟ ಮಾಡುತ್ತಿದ್ದಾರೆ.

ಗೊಂಬೆ ಮಾತ್ರವಲ್ಲದೇ ಸಂಜೆಯಾಗುತ್ತಿದ್ದಂತೆ ಗಾಳಿ ತುಂಬಿದ ಬಾಲ್, ದೀಪದ ಬಲೂನ್ ಕೂಡ ಮಾರಾಟ ಮಾಡುತ್ತಾರೆ. ಇದು ನೋಡುಗರಿಗೆ ಆಕರ್ಷಣೀಯ ಹಾಗೂ ಬೆಲೆ ಕೂಡ ಕಡಿಮೆಯಾಗಿದ್ದರಿಂದ ನೋಡಿದ ತಕ್ಷಣ ಜನ ಇವುಗಳನ್ನು ಖರೀದಿಸಲು ಮುಂದಾಗುತ್ತಾರೆ.

ಇದನ್ನೂ ಓದಿ: ಆಗಸ್ಟ್ 5ಕ್ಕೆ ಕಾರಂತ ಬಡಾವಣೆ ನಿವೇಶನಕ್ಕೆ ಅರ್ಜಿ; ಬೆಲೆ ಎಷ್ಟು? ಮಧ್ಯಮ ವರ್ಗಕ್ಕೆ ಸಿಗುತ್ತಾ?

ಬೇರೆ ಯಾವುದೇ ಉದ್ಯೋಗವಿಲ್ಲದ ಕಾರಣ ಗೊಂಬೆ ವ್ಯಾಪಾರವೇ ನಮ್ಮ ಜೀವನಕ್ಕೆ ಆಧಾರವಾಗಿದೆ. ಇತರ ಭಾಗಗಳಿಗೆ ಹೋಲಿಸಿದರೆ ಪಟ್ಟಣದಲ್ಲಿ ವ್ಯಾಪಾರ ಚೆನ್ನಾಗಿದೆ. ಗೊಂಬೆಯ ವ್ಯಾಪಾರಕ್ಕೆ ಜನರಿಂದ ಸ್ಪಂದನೆ ಸಿಗುತ್ತಿದೆ. 2-3 ದಿನ ಇಲ್ಲಿ ವ್ಯಾಪಾರ ಮಾಡಿ ಬಳಿಕ ಬೇರೆಡೆಗೆ ತೆರಳುತ್ತೇವೆ ಎನ್ನುತ್ತಾರೆ ಗೊಂಬೆ ವ್ಯಾಪಾರಸ್ಥ ರಾಮಪ್ರಸಾದ.

ಇದನ್ನೂ ಓದಿ: ಬೆಂಗಳೂರಿಗರೇ ಗುಡ್‌ನ್ಯೂಸ್: ಸಸಿ ನೆಡಲು ಜಾಗ ಇದೆಯಾ? ಪಾಲಿಕೆಯ ಈ ನಂಬರ್‌ಗೆ ವಾಟ್ಸಪ್ ಮಾಡಿ ಸಾಕು