Asianet Suvarna News Asianet Suvarna News

Bengaluru: ಬಸ್ ಹತ್ತುವಾಗ ಬಿದ್ದ ವ್ಯಕ್ತಿ: ಚಕ್ರ ಹರಿದು 2 ಕಾಲು ಜಖಂ

ಮುಂಬಾಗಿಲಿನಿಂದ ಬಿಎಂಟಿಸ್‌ ಬಸ್‌ ಏರುವಾಗ ಆಯತಪ್ಪಿ ರಸ್ತೆಗೆ ಬಿದ್ದಾಗ ಬಸ್‌ನ ಹಿಂಬದಿ ಚಕ್ರಗಳು ವ್ಯಕ್ತಿಯ ಕಾಲುಗಳ ಮೇಲೆ ಹರಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಯಶವಂತಪುರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

person who came to treatment was met with accident two legs damaged at bengaluru gvd
Author
First Published Apr 9, 2023, 8:34 AM IST

ಬೆಂಗಳೂರು (ಏ.09): ಮುಂಬಾಗಿಲಿನಿಂದ ಬಿಎಂಟಿಸ್‌ ಬಸ್‌ ಏರುವಾಗ ಆಯತಪ್ಪಿ ರಸ್ತೆಗೆ ಬಿದ್ದಾಗ ಬಸ್‌ನ ಹಿಂಬದಿ ಚಕ್ರಗಳು ವ್ಯಕ್ತಿಯ ಕಾಲುಗಳ ಮೇಲೆ ಹರಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಯಶವಂತಪುರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಉಡುಪಿ ಮೂಲದ ರವಿ (50) ಗಾಯಗೊಂಡವರು. ಶುಕ್ರವಾರ ರಾತ್ರಿ 10.10ರ ಸುಮಾರಿಗೆ ಯಶವಂತಪುರ ಸರ್ಕಲ್‌ನಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ರವಿಯ ಎರಡೂ ಕಾಲುಗಳು ಸಂಪೂರ್ಣ ಜಜ್ಜಿ ಹೋಗಿದ್ದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. 

ಸದ್ಯಕ್ಕೆ ಯಾವುದೇ ಪ್ರಾಣಾಪಾಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳು ರವಿ ಉಬ್ಬಸ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಶುಕ್ರವಾರ ಉಡುಪಿಯಿಂದ ಬೆಂಗಳೂರಿಗೆ ಬಂದಿದ್ದರು. ರಾತ್ರಿ ಯಶವಂತಪುರ ಸರ್ಕಲ್‌ನಿಂದ ಮೆಜೆಸ್ಟಿಕ್‌ ತೆರಳಲು ಬಸ್‌ಗಾಗಿ ಕಾಯುತ್ತಿದ್ದರು. ಯಶವಂತಪುರ ಸರ್ಕಲ್‌ನಲ್ಲಿ ಮುಂಬಾಗಿಲಿನಿಂದ ಬಿಎಂಟಿಸಿ ಬಸ್‌ ಏರಲು ಮುಂದಾಗಿದ್ದಾರೆ. ಆದರೆ ಚಾಲಕ ಬಸ್‌ ಮುಂದಕ್ಕೆ ಚಲಾಯಿಸಿದಾಗ ರವಿ ಆಯತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಬಸ್‌ನ ಹಿಂಬದಿ ಚಕ್ರಗಳು ರವಿ ಅವರ ಎರಡೂ ಕಾಲುಗಳ ಮೇಲೆ ಹರಿದಿವೆ. 

ಬೈಕ್‌ಗೆ ಡಿಕ್ಕಿ ಹೊಡೆದಿದ್ದನ್ನು ಪ್ರಶ್ನಿಸಿದ್ದಕ್ಕೆ ಚಾಕು ತೋರಿಸಿ ಬೆದರಿಕೆ: ಚಾಲಕನ ಬಂಧನ

ಗಂಭೀರವಾಗಿ ಗಾಯಗೊಂಡಿದ್ದ ರವಿಯನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆಗೆ ಬಿಎಂಟಿಸಿ ಬಸ್‌ ಚಾಲಕನ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬಂಧ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಯಶವಂತಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರಣಿ ಅಪಘಾತ, ಮೂರು ಕಾರುಗಳು ಜಖಂ: ಸರಣಿ ಅಪಘಾತ ಸಂಭವಿಸಿ ಮೂರು ಕಾರುಗಳು ಜಖಂಗೊಂಡು ಚಾಲಕರು ಗಾಯಗೊಂಡು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ನಿಡಘಟ್ಟಚೆಕ್‌ಪೋಸ್ಟ್‌ ಬಳಿ ನಡೆದಿದೆ. ಗುಡ್‌ ಫ್ರೈ ಡೇ, ಶನಿವಾರ ಮತ್ತು ಭಾನುವಾರ ಸರ್ಕಾರಿ ರಜೆ ಇರುವ ಕಾರಣ ಮೈಸೂರು ಮತ್ತಿತರ ಕಡೆಗಳಿಗೆ ಪ್ರವಾಸಕ್ಕೆ ತೆರಳುವ ಉದ್ದೇಶದಿಂದ ಮುಂಜಾನೆ 6 ಗಂಟೆಯಿಂದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಹೆಚ್ಚಾಗಿತ್ತು. ತಾಲೂಕಿನ ನಿಡಘಟ್ಟಬಳಿ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ನಿರ್ಮಾಣವಾಗಿದ್ದ ಚೆಕ್‌ಪೋಸ್ಟ್‌ ಬಳಿ ವಾಹನಗಳ ವೇಗ ನಿಯಂತ್ರಣಕ್ಕಾಗಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. 

ನಕಲಿ ಪಾಸ್‌ಪೋರ್ಟ್‌ ಮಾಡಿಸಿ ವಿದೇಶ ಸುತ್ತಿ ಬಂದ ಬಾಂಗ್ಲಾ ಪ್ರಜೆಗಳಿಬ್ಬರ ಬಂಧನ

ಬೆಂಗಳೂರಿನಿಂದ ಮೈಸೂರಿಗೆ ಅತಿ ವೇಗವಾಗಿ ತೆರಳುತ್ತಿದ್ದ ಸ್ಕೋಡಾ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಅಳವಡಿಸಲಾಗಿದ್ದ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದೆ. ಸ್ಕೋಡಾ ಕಾರಿನ ಹಿಂದೆ ಬರುತ್ತಿದ್ದ ಮೂರು ಕಾರುಗಳ ಚಾಲಕರುಗಳು ಬ್ರೇಕ್‌ ಹಾಕಿದ ಕಾರಣ ಸರಣಿ ಅಪಘಾತ ಸಂಭವಿಸಿ ಡಿಕ್ಕಿಯ ರಭಸಕ್ಕೆ 4 ಬ್ಯಾರಿಕೇಡ್‌ಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಕಳೆದ ವಾರದಿಂದ ಆರೇಳು ಅಪಘಾತಗಳು ಈ ಸ್ಥಳದಲ್ಲಿ ನಡೆದಿವೆ. ಚುನಾವಣಾ ಕಾರ್ಯ ಮುಗಿಯುವವರೆಗೆ ರಸ್ತೆ ಸುರಕ್ಷತೆ ಬಗ್ಗೆ ಮತ್ತು ವಾಹನಗಳ ವೇಗ ನಿಯಂತ್ರಣಕ್ಕೆ ರಸ್ತೆ ಡುಬ್ಬ ನಿರ್ಮಿಸಿ ಅಪಘಾತ ನಿಯಂತ್ರಣಕ್ಕೆ ತರಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.

Follow Us:
Download App:
  • android
  • ios