ನವಲಗುಂದ: ನಿದ್ದೆಯ ಗುಂಗಿನಲ್ಲಿ ತಡೆಗೋಡೆಯಿಂದ ಕೆರೆಗೆ ಬಿದ್ದ ಭೂಪ..!
* ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ನಡೆದ ಘಟನೆ
* ನಿದ್ದೆಯ ಗುಂಗಿನಲ್ಲಿ ಉರುಳಿ 15 ಫೂಟ್ ಎತ್ತರದ ತಡೆಗೋಡೆಯಿಂದ ಕೆರೆಯಲ್ಲಿ ಬಿದ್ದ ವ್ಯಕ್ತಿ
* ಹುಬ್ಬಳ್ಳಿ ಕಿಮ್ಸ್ ಅಸ್ಪತ್ರೆಗೆ ದಾಖಲು
ನವಲಗುಂದ(ಜೂ.05): ಪಟ್ಟಣದ ಹೃದಯ ಭಾಗದಲ್ಲಿರುವ ನೀಲಮ್ಮನ ಕೆರೆಯ ದಡದಲ್ಲಿ ವ್ಯಕ್ತಿಯೋರ್ವ ವಿಶ್ರಾಂತಿ ಪಡೆಯುವ ವೇಳೆ ತಡೆಗೋಡೆಯ ಕಟ್ಟೆಯ ಮೇಲಿಂದ ಕೆರೆಯಲ್ಲಿ ಬಿದ್ದ ಘಟನೆ ನಡೆದಿದೆ.
ಇಲ್ಲಿನ ಕೋರ್ಟ್ ಸಿಬ್ಬಂದಿ ಚಿದಾನಂದ ಎಂಬಾತ ಮಧ್ಯಾಹ್ನದ ವೇಳೆ ಊಟಕ್ಕೆಂದು ನೀಲಮ್ಮನ ಕೆರೆಗೆ ಹೋದಾಗ ತಡೆಗೋಡೆಯ ಮೇಲೆ ಊಟಮಾಡಿ ಅಲ್ಲಿಯೇ ಮಲಗಿದ್ದಾನೆ. ಈ ವೇಳೆ ನಿದ್ದೆಯ ಗುಂಗಿನಲ್ಲಿ ಉರುಳಿ 15 ಫೂಟ್ ಎತ್ತರದ ತಡೆಗೋಡೆಯಿಂದ ಕೆರೆಯಲ್ಲಿ ಬಿದ್ದ ಪರಿಣಾಮ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಇದನ್ನು ಗಮನಿಸಿದ ಪುರಸಭೆ ಸಿಬ್ಬಂದಿ ಶೆಟ್ಟೆಪ್ಪ ಹುಣಶಿಮರದ ಸ್ಥಳಕ್ಕೆ ದೌಡಾಯಿಸಿ ಆತನನ್ನು ರಕ್ಷಿಸಿ ಕೆರೆಯ ದಡಕ್ಕೆ ತಂದರು.
ಹುಬ್ಬಳ್ಳಿ: ಒಂದೇ ಕುಟುಂಬದ ನಾಲ್ವರು ಕೊರೋನಾಗೆ ಬಲಿ
ಕೆರೆಯು ಆಳವಾಗಿರುವುದರಿಂದ ಹೊರತರಲು ಪೊಲೀಸರು, ಪುರಸಭೆ ಸಿಬ್ಬಂದಿ ಹಾಗೂ ಕೋರ್ಟಿನ ಸಿಬ್ಬಂದಿ ಹಾಗೂ ಸಾರ್ವಜನಿಕರು ಹರಸಾಹಸ ಪಡುವಂತಾಗಿತ್ತು. ನಂತರ 108ಕ್ಕೆ ಕರೆ ಮಾಡಿ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ಗೆ ಕಳುಹಿಸಲಾಗಿದೆ.