Asianet Suvarna News Asianet Suvarna News

ಭಾರತದಲ್ಲಿ ಹೊಂದಾಣಿಕೆ ಸಾಧ್ಯವಿಲ್ಲಾಂದ್ರೆ ಪಾಕ್‌ಗೆ ಹೋಗಬಹುದು ಎಂದ ಶಾಸಕ

ಮಾಜಿ ಸಚಿವ ಯು.ಟಿ. ಖಾದರ್‌ ಸಹಿತ ಯಾರಿಗೆಲ್ಲ ಈ ದೇಶದಲ್ಲಿ ನೆಲೆಸಲು, ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲವೋ, ದೇಶದಲ್ಲಿ ಅಸಹನೆ ಇದೆ ಎಂಬ ಭಾವನೆ ಬಂದಿದ್ದರೆ ಅವರೆಲ್ಲ ಪಾಕಿಸ್ತಾನಕ್ಕೆ ತೆರಳಿ ಅಲ್ಲಿಯ ಪೌರತ್ವಕ್ಕೆ ಅರ್ಜಿ ಸಲ್ಲಿಸುವುದಾದರೆ ಸ್ವಾಗತಾರ್ಹ ಎಂದು ಶಾಸಕ, ಆಡಳಿತ ಪಕ್ಷದ ಮುಖ್ಯ ಸಚೇತಕ ವಿ. ಸುನಿಲ್‌ ಕುಮಾರ್‌ ಹೇಳಿದ್ದಾರೆ.

people who cant adjust here can go Pakistan says mla sunil in udupi
Author
Bangalore, First Published Dec 22, 2019, 9:17 AM IST

ಉಡುಪಿ(ಡಿ.22): ಭಾರತ ದೇಶದ ಮುಸಲ್ಮಾನರ ಪೌರತ್ವವನ್ನು ಕಸಿದುಕೊಳ್ಳುವ ಪ್ರಶ್ನೆ ಇಲ್ಲ. ಮಾಜಿ ಸಚಿವ ಯು.ಟಿ. ಖಾದರ್‌ ಸಹಿತ ಯಾರಿಗೆಲ್ಲ ಈ ದೇಶದಲ್ಲಿ ನೆಲೆಸಲು, ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲವೋ, ದೇಶದಲ್ಲಿ ಅಸಹನೆ ಇದೆ ಎಂಬ ಭಾವನೆ ಬಂದಿದ್ದರೆ ಅವರೆಲ್ಲ ಪಾಕಿಸ್ತಾನಕ್ಕೆ ತೆರಳಿ ಅಲ್ಲಿಯ ಪೌರತ್ವಕ್ಕೆ ಅರ್ಜಿ ಸಲ್ಲಿಸುವುದಾದರೆ ಸ್ವಾಗತಾರ್ಹ ಎಂದು ಶಾಸಕ, ಆಡಳಿತ ಪಕ್ಷದ ಮುಖ್ಯ ಸಚೇತಕ ವಿ. ಸುನಿಲ್‌ ಕುಮಾರ್‌ ಹೇಳಿದ್ದಾರೆ.

ಅವರು ಶನಿವಾರ ಕಾರ್ಕಳದ ವಿಕಾಸ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಭದ್ರತೆಯ ನೆಲೆಯಲ್ಲಿ ಪೌರತ್ವ ಬಿಲ್‌ ಜಾರಿಗೊಳಿಸವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರಿಗೆ ಕಾಂಗ್ರೆಸ್‌ ಪಕ್ಷ, ಪೌರತ್ವ ಮಸೂದೆಯ ಬಗ್ಗೆ ಸ್ಪಷ್ಟವಾಗಿ ತಿಳಿಸದೆ ಅನಗತ್ಯ ವಿವಾದಗಳನ್ನು ಹುಟ್ಟುಹಾಕಿ ಅಶಾಂತಿ ಸೃಷ್ಟಿಸುವ ಪ್ರಯತ್ನ ಮಾಡುತ್ತಿದೆ ಎಂದಿದ್ದಾರೆ.

ಪೇಜಾವರ ಶ್ರೀ ಚಿಕಿತ್ಸೆಗೆ ಸ್ಪಂದನೆ : ಕಣ್ಣು ತೆರೆಯಲು ಪ್ರಯತ್ನ

ಪಾಕಿಸ್ತಾನ, ಅಪಘಾನಿಸ್ತಾನ, ಬಾಂಗ್ಲಾದೇಶದಿಂದ ನುಸುಳುಕೋರರಾಗಿ ಬಂದಂತಹ ಮುಸಲ್ಮಾನರಿಗೆ ಪೌರತ್ವ ಕೊಡುವ ಪ್ರಶ್ನೆಯೇ ಇಲ್ಲ. ಈ ಪೌರತ್ವ ಮಸೂದೆ ಜಾರಿಯಿಂದ ಭಾರತ ದೇಶದಲ್ಲಿ ನೆಲೆಸಿರುವ ಮುಸಲ್ಮಾನರಿಗೆ ಯಾವುದೇ ಸಮಸ್ಯೆ ತೊಂದರೆಗಳಿಲ್ಲ ಎಂದು ಗೊತ್ತಿದ್ದರೂ ರಸ್ತೆಗೆ ಇಳಿದು ಶಾಂತಿ ಕದಡುವ ಪ್ರಯತ್ನ ಸರಿಯಲ್ಲ. ಪ್ರತಿಭಟನಾಕಾರರು ಯಾರ ಪರವಾಗಿ ಹೋರಾಟ ಮಾಡುತ್ತಿದ್ದಾರೆ..? ಯಾವ ದೇಶದ ನಿಷ್ಠೆಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಯಾವ ದೇಶದ ನಿಷ್ಠೆಗಾಗಿ ಕಾಂಗ್ರೆಸ್‌ ಹಾಗೂ ಮುಸಲ್ಮಾನರು ಇಂದು ಧ್ವನಿ ಎತ್ತುತ್ತಿದ್ದಾರೆ ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕಾಗಿದೆ ಎಂದು ಆಗ್ರಹಿಸಿದ ಶಾಸಕ ಸುನಿಲ್‌ ಕುಮಾರ್‌, ಪೌರತ್ವ ಮಸೂದೆ ಜಾರಿಗೆ ಸಹಕಾರ ನೀಡುವ ಮೂಲಕ ದೇಶದ ಭದ್ರತೆಯನ್ನು ಇನ್ನಷ್ಟುಗಟ್ಟಿಗೊಳಿಸಲು ಕೈಜೋಡಿಸಬೇಕೆಂದು ಆಶಿಸುವುದಾಗಿ ಹೇಳಿದ್ದಾರೆ.

ಶ್ರೀಗಳ ಬಗ್ಗೆ ಅಪಪ್ರಚಾರ ಬೇಡ, ಚಿಕಿತ್ಸೆಗೆ ಸ್ಪಂದಿಸ್ತಿದ್ದಾರೆ: ವಿರೇಂದ್ರ ಹೆಗ್ಗಡೆ

ಗಲಭೆಗೆ ಖಾದರ್‌ ಮೈನ್‌ ಬ್ಯಾಟ್ಸ್‌ಮ್ಯಾನ್‌: ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆ, ಗಲಭೆ ನಿಯಂತ್ರಣ, ಪೊಲೀಸರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ತಡೆಯಲು ಪೊಲೀಸರು ತೆಗೆದುಕೊಂಡ ಕ್ರಮವನ್ನು ಸಮರ್ಥಿಸಿಕೊಳ್ಳಲು ನಾವು ಸಿದ್ಧ ಎಂದು ಸುನಿಲ್‌ ಕುಮಾರ್‌ ಹೇಳಿದ್ದಾರೆ.

ಅಧಿಕಾರದಲ್ಲಿದ್ದ ಸಂದರ್ಭ ಪರೋಕ್ಷವಾಗಿ ಪ್ರೇರಣೆ ನೀಡುವ ಮೂಲಕ ಗಲಭೆಗಳನ್ನು ಮಾಡುತ್ತಿದ್ದು ಇದೀಗ ಅಧಿಕಾರದಲ್ಲಿ ಇಲ್ಲದ ಸಂದರ್ಭ ಮಾಜಿ ಸಚಿವ ಯು.ಟಿ. ಖಾದರ್‌ ನೇರವಾಗಿ ಬೆಂಬಲ ನೀಡಿರುವ ಮೂಲಕ ಗಲಭೆಗೆ ಕಾರಣರಾಗಿದ್ದಾರೆ. ಮಂಗಳೂರಿನಲ್ಲಿ ನಡೆದ ಗಲಭೆಗೆ ಯು.ಟಿ. ಖಾದರ್‌ ಮೈನ್‌ ಬ್ಯಾಟ್ಸ್‌ಮ್ಯಾನ್‌ ಆಗಿದ್ದು ಅವರ ಸಹಚರರು ತಂಡದ ಸದಸ್ಯರಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಮಂಗಳೂರು: ಪ್ರತಿಭಟನೆ ನಡೆಸಿದ ರಾಜ್ಯಸಭಾ ಸದಸ್ಯ ಬಿನೊಯ್‌ ವಶಕ್ಕೆ

ಮಂಗಳೂರು ಆಶಾಂತಿಗೆ ಕಾರಣರಾದವರ ಮೇಲೆ ಮೊಕದ್ದಮೆ ಹೊರಿಸಿ ಗಡಿಪಾರು ಮಾಡಬೇಕೆಂದು ಸುನಿಲ್‌ ಕುಮಾರ್‌ ಆಗ್ರಹಿಸಿದ್ದಾರೆ. ಕಲಂ 370 ವಿಧಿ, ತ್ರಿವಳಿ ತಲಾಖ್‌, ರಾಮ ಮಂದಿರದ ತೀರ್ಪು ಬಂದಾಗ ಗಲಭೆ ಗಲಾಟೆಗಳು ನಡೆದಿಲ್ಲ. ಆದರೆ ಈ ಪೌರತ್ವ ತಿದ್ದುಪಡಿಯಲ್ಲಿ ದೇಶದಲ್ಲಿರುವ ಮುಸಲ್ಮಾನರಿಗೆ ತೊಂದರೆಯಾಗುವಂತಹ ಅಂಶವಾದರೂ ಏನಿದೆ. ಅದರ ವಿರುದ್ಧ ಪ್ರತಿಭಟನೆ ನಡೆಸುವರಿಗೆ ದೇಶ ನಿಷ್ಠೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಈ ಹಿಂದೆಯೂ ಬಿಜೆಪಿ ಸಂಸದರಾದ ನಳಿನ್‌ ಕುಮಾರ್‌, ಶೋಭಾ ಕರಂದ್ಲಾಜೆ ಅವರು ‘ಬೆಂಕಿ’ ಹೇಳಿಕೆ ನೀಡಿದ್ದರಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ಸುನೀಲ್‌ ಕುಮಾರ್‌, ಬೆಂಕಿ ಹಾಕುವುದಾಗಿ ಯಾರೇ ಹೇಳಿಕೆ ನೀಡಿದರು ಅದು ತಪ್ಪು ಎಂದಿದ್ದಾರೆ.

Follow Us:
Download App:
  • android
  • ios