Asianet Suvarna News Asianet Suvarna News

ಪ್ರವಾಹದಿಂದ ಹಾನಿ: 8 ವರ್ಷ ಹಳೆಯ ತೂಗು ಸೇತುವೆ ದುರಸ್ತಿಗೆ ಆಗ್ರಹ

ಕೂಡಿಗೆ ಕಣಿವೆ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗುಸೇತುವೆ ದುರಸ್ತಿ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. 8 ವರ್ಷಗಳ ಹಿಂದೆ ಮಲೆನಾಡು ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಾಣಗೊಂಡಿರುವ ತೂಗುಸೇತುವೆ ಪ್ರವಾಹದಿಂದ ಹಾನಿಗೀಡಾಗಿ ಸಂಚಾರಕ್ಕೆ ತೊಡಕುಂಟಾಗಿತ್ತು.

people requests to repair 8 years old hanging bridge in Kudige madikeri
Author
Bangalore, First Published Jan 2, 2020, 9:48 AM IST

ಮಡಿಕೇರಿ(ಜ.02): ಕುಶಾಲನಗರ ಸಮೀಪದ ಕೂಡಿಗೆ ಕಣಿವೆ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗುಸೇತುವೆ ದುರಸ್ತಿ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

8 ವರ್ಷಗಳ ಹಿಂದೆ ಮಲೆನಾಡು ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಾಣಗೊಂಡಿರುವ ತೂಗುಸೇತುವೆ ಪ್ರವಾಹದಿಂದ ಹಾನಿಗೀಡಾಗಿ ಸಂಚಾರಕ್ಕೆ ತೊಡಕುಂಟಾಗಿತ್ತು. ಈ ಬಗ್ಗೆ ಸ್ಥಳೀಯರ ದೂರಿನ ಹಿನ್ನಲೆಯಲ್ಲಿ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್‌ ಅವರು ಸೇತುವೆಯನ್ನು ತುರ್ತಾಗಿ ದುರಸ್ತಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ, ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ ಎಂದು ತಿಳಿಸಿರುವ ಗಡಿ ಭಾಗದ ನಾಗರಿಕರು ಅಪಾಯ ಸಂಭವಿಸುವ ಮುನ್ನ ಎಚ್ಚರವಹಿಸಬೇಕು ಎಂದು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಕೋಲಾರ: ಲಾರಿ ಪಲ್ಟಿ, ರಸ್ತೆಯಲ್ಲಿ ಚೆಲ್ಲಾಡಿದ ಲಕ್ಷಾಂತರ ಮೌಲ್ಯದ ಟೊಮೆಟೋ

ಕುಶಾಲನಗರ ಸಮೀಪದ ಕಣಿವೆ ಬಳಿ ಕಾವೇರಿ ನದಿಗೆ 2010-11 ರಲ್ಲಿ ಅಡ್ಡಲಾಗಿ ತೂಗುಸೇತುವೆ ನಿರ್ಮಾಣಗೊಂಡಿದ್ದು, ಕಳೆದ ಕೆಲವು ವರ್ಷಗಳಿಂದ ಕೊಡಗು ಮತ್ತು ಮೈಸೂರು ಜಿಲ್ಲೆಯ ಗಡಿಗ್ರಾಮಗಳ ಸಂಪರ್ಕ ಸೇತುವಾಗಿ ಕೆಲಸ ನಿರ್ವಹಿಸುತ್ತಿದೆ. ನೆರೆಯ ಮೈಸೂರು ಜಿಲ್ಲೆಯ ಗಡಿ ಗ್ರಾಮಗಳಿಂದ ಆಗಮಿಸುವ ಮತ್ತು ತೆರಳುವ ಕೂಲಿ ಕಾರ್ಮಿಕರು, ರೈತರು, ವಿದ್ಯಾರ್ಥಿಗಳು ದಿನನಿತ್ಯ ನೂರಾರು ಸಂಖ್ಯೆಯಲ್ಲಿ ಇದೇ ಸೇತುವೆಯನ್ನು ಅವಲಂಬಿಸಿದ್ದಾರೆ.

ಸೇತುವೆಯ ಮೈಸೂರು ಜಿಲ್ಲೆ ಭಾಗದ ದೊಡ್ಡಕಮರವಳ್ಳಿ, ಚಿಕ್ಕ ಕಮರವಳ್ಳಿ, ಅಂಬ್ಲಾರೆ, ಮಂಟಿಕೊಪ್ಪಲು ಸೇರಿದಂತೆ ಹಲವು ಗ್ರಾಮಗಳ ಜನತೆಗೆ ಕಣಿವೆ, ಕೂಡಿಗೆ, ಹೆಬ್ಬಾಲೆ, ಕುಶಾಲನಗರದ ಕಡೆಗೆ ತೆರಳಲು ಹತ್ತಿರದ ಮಾರ್ಗವಾಗಿದೆ.

ದಿನದೊಳಗೆ ಉಡುಪಿ ಜಿಲ್ಲೆಯಲ್ಲಿ ಎಸ್ಪಿ ಬದಲು!

ಸೇತುವೆಯನ್ನು ಶಾಶ್ವತವಾಗಿ ಸರಿಪಡಿಸಬೇಕು. ಇಲ್ಲದಿದ್ದಲ್ಲಿ ಪರ್ಯಾಯವಾಗಿ ವಾಹನ ಸಂಚಾರಕ್ಕೆ ಯೋಗ್ಯವಾದ ಸಂಪರ್ಕ ರಸ್ತೆ ನಿರ್ಮಿಸಬೇಕು ಎನ್ನುವುದು ದೊಡ್ಡಕಮರವಳ್ಳಿ ವ್ಯಾಪ್ತಿಯ ಮಂಟಿಕೊಪ್ಪಲು ಗ್ರಾಮದ ಮಾಜಿ ಸೈನಿಕ ಈರಪ್ಪ ಅವರ ಅನಿಸಿಕೆಯಾಗಿದೆ. ದಿನನಿತ್ಯ ತಮ್ಮ ಕೃಷಿ ಚಟುವಟಿಕೆಗೆ ಈ ಸೇತುವೆಯನ್ನು ಅವಲಂಬಿಸಬೇಕಾಗಿದೆ. ವಾಹನ ಸಂಚಾರಕ್ಕೆ ಸುಮಾರು 20 ಕಿ.ಮೀ. ದೂರದ ದಾರಿಯನ್ನು ಕ್ರಮಿಸಬೇಕಾಗಿದೆ ಎಂದು ಅವರು ತಮ್ಮ ಸಮಸ್ಯೆಯನ್ನು ತೋಡಿಕೊಂಡಿದ್ದಾರೆ.

ವಿದೇಶದಿಂದ ಬಂದ ಮೇಸೇಜ್‌ಗಳಿಂದ ಮಂಗಳೂರಲ್ಲಿ ಗಲಭೆ..?

ಮೈಸೂರು ಗಡಿಭಾಗದಿಂದ ಬರುವ ನೂರಾರು ವಿದ್ಯಾರ್ಥಿಗಳಲ್ಲಿ ಶೇ.25ರಷ್ಟುವಿದ್ಯಾರ್ಥಿಗಳು ಸೇತುವೆಯ ಸಮಸ್ಯೆ ತಲೆದೋರಿದ ನಂತರ ತಮ್ಮ ಶಿಕ್ಷಣವನ್ನೇ ತೊರೆದಿದ್ದಾರೆ ಎಂದು ಮಂಟಿಕೊಪ್ಪಲು ನಿವಾಸಿ ಲೋಕೇಶ್‌ ಅವರ ಅಳಲು. ಅಪಾಯವನ್ನು ಅರಿತ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ ಎಂದಿದ್ದಾರೆ. ತಕ್ಷಣ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಕೊಡಗು ಮೈಸೂರು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದ್ದಾರೆ. ವಾಸ್ತವ ಅಂಶವೆಂದರೆ ಸೇತುವೆಯ ನಿರ್ವಹಣೆಗಾಗಿ ಸಂಬಂಧಿಸಿದ ಇಲಾಖೆಗೆ ಹಸ್ತಾಂತರ ಮಾಡದಿರುವುದು ಈ ಎಲ್ಲಾ ಅವಾಂತರಗಳಿಗೆ ಕಾರಣ ಎನ್ನಲಾಗಿದೆ.

ಆದಷ್ಟುಬೇಗನೆ ಮೈಸೂರು ಮತ್ತು ಕೊಡಗು ವ್ಯಾಪ್ತಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಕಣಿವೆ ಬಳಿಯ ತೂಗುಸೇತುವೆಗೆ ಶಾಶ್ವತ ಕಾಯಕಲ್ಪ ಕಲ್ಪಿಸುವಲ್ಲಿ ಚಿಂತನೆ ಹರಿಸಬೇಕಾಗಿದೆ.

Follow Us:
Download App:
  • android
  • ios