Asianet Suvarna News Asianet Suvarna News

ಆಘಾತಕಾರಿ ಸುದ್ದಿ: ಇಂತಹ ಲಕ್ಷಣ ಇದ್ದವರಲ್ಲೇ ಕೊರೋನಾ ಸೋಂಕು ಹೆಚ್ಚಳ..!

ಬೆಂಗಳೂರಿನಲ್ಲಿ ಕೊರೋನಾ ಆತಂಕಕಾರಿ ಹಂತಕ್ಕೆ| ರೋಗಲಕ್ಷಣಗಳುಳ್ಳ ಪ್ರತಿ 100 ಮಂದಿ ಪೈಕಿ ಪರೀಕ್ಷೆಗೆ ಒಳಪಟ್ಟ17 ಮಂದಿಗೆ ಸೋಂಕು ದೃಢ| ರಾಜ್ಯದ ಸರಾಸರಿಗಿಂತ ಬೆಂಗ್ಳೂರಲ್ಲೇ ಹೆಚ್ಚಳ| ಜ್ವರ, ನೆಗಡಿ, ಕೆಮ್ಮು ಲಕ್ಷಣ ಕಂಡು ಬಂದರೆ ತಕ್ಷಣ ಪರೀಕ್ಷೆಗೆ ಒಳಗಾಗಿ| ನಿರ್ಲಕ್ಷ್ಯ ಮಾಡಿದ್ರೆ ಜೀವಕ್ಕೆ ಅಪಾಯ ಕಟ್ಟಿಟ್ಟಬುತ್ತಿ: ತಜ್ಞರ ಎಚ್ಚರಿಕೆ| 

People in Anxiety for Increasing Corona Cases in Bengaluru grg
Author
Bengaluru, First Published Mar 28, 2021, 8:10 AM IST

ಶ್ರೀಕಾಂತ್‌ ಎನ್‌.ಗೌಡಸಂದ್ರ

ಬೆಂಗಳೂರು(ಮಾ.28): ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಸೋಂಕು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, ಕಳೆದ ಏಳು ದಿನಗಳಲ್ಲಿ ಸಾಮಾನ್ಯ ರೋಗ ಲಕ್ಷಣಗಳುಳ್ಳ ಪ್ರತಿ 100 ಮಂದಿಯಲ್ಲಿ ಶೇ.17.1 ಮಂದಿಗೆ ಕೊರೋನಾ ಸೋಂಕು ಉಂಟಾಗುತ್ತಿರುವುದು ದೃಢಪಟ್ಟಿದೆ. ಆರೋಗ್ಯ ಇಲಾಖೆಯ ಈ ಅಂಕಿ-ಅಂಶಗಳ ಬಗ್ಗೆ ಆರೋಗ್ಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ವ್ಯಾಪಕವಾಗಿ ಕೊರೋನಾ ಸೋಂಕು ಹರಡುತ್ತಿದೆ. ಸಾಮಾನ್ಯ ರೋಗ ಲಕ್ಷಣಗಳುಳ್ಳ ಪ್ರತಿ 100 ಮಂದಿಯ ಪರೀಕ್ಷೆ ಪೈಕಿ 17.1 ಮಂದಿಗೆ ಕೊರೋನಾ ಸೋಂಕು ದೃಢಪಡುತ್ತಿದೆ. ರಾಜ್ಯದಲ್ಲಿ ಕಳೆದ ಒಂದು ವಾರದಲ್ಲಿ 19,149 ಮಂದಿ ರೋಗ ಲಕ್ಷಣಗಳುಳ್ಳವರಿಗೆ ಕೊರೋನಾ ಪರೀಕ್ಷೆ ನಡೆಸಿದ್ದು ಸರಾಸರಿ ಶೇ.2.7ರಂತೆ 526 ಮಂದಿಗೆ ಮಾತ್ರ ಸೋಂಕು ದೃಢಪಟ್ಟಿದೆ. ಇದರಲ್ಲಿ ಬೆಂಗಳೂರು ಒಂದರಲ್ಲೇ 235 ಮಂದಿಗೆ ಸೋಂಕು ದೃಢಪಟ್ಟಿದ್ದು, ರಾಜ್ಯದ ಸರಾಸರಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಸೋಂಕು ಹಾಗೂ ರೋಗಲಕ್ಷಣಗಳುಳ್ಳ ಸೋಂಕು ಗಂಭೀರ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದರಿಂದ ಈಗಾಗಲೇ ಬೆಂಗಳೂರಿನಲ್ಲಿ ಎರಡನೇ ಅಲೆ ಪ್ರಭಾವ ಉಂಟಾಗಿರುವುದು ಕಣ್ಣಿಗೆ ರಾಚುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

1,373 ಪರೀಕ್ಷೆಯಲ್ಲಿ 235 ಮಂದಿಗೆ ಸೋಂಕು:

ಮಾ.18ರಿಂದ ಮಾ.25ರ ವರೆಗೆ ಬೆಂಗಳೂರಿನಲ್ಲಿ ಸಾಮಾನ್ಯ ರೋಗ ಲಕ್ಷಣಗಳುಳ್ಳ 1,373 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ ಬರೋಬ್ಬರಿ 235 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದರಲ್ಲಿ 15 ಮಂದಿಗೆ ರಾರ‍ಯಪಿಡ್‌ ಆ್ಯಂಟಿಜೆನ್‌ ಹಾಗೂ 220 ಮಂದಿಗೆ ಆರ್‌ಟಿ-ಪಿಸಿಆರ್‌ ಮೂಲಕ ಸೋಂಕು ದೃಢಪಟ್ಟಿದೆ. ಹೀಗಾಗಿ ಸಾಮಾನ್ಯ ಜ್ವರ, ನೆಗಡಿ ಅಥವಾ ಕೆಮ್ಮಿನ ಲಕ್ಷಣಗಳ ಕಾಣಿಸಿಕೊಂಡರೆ ಕೂಡಲೇ ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಬೇಕು. ಅನಗತ್ಯ ನಿರ್ಲಕ್ಷ್ಯ ತೋರಿದರೆ ಜೀವಕ್ಕೆ ಅಪಾಯ ಉಂಟಾಗಬಹುದು ಎಂದು ಎಚ್ಚರಿಕೆ ನೀಡಿದರು.

ಒಬ್ಬ ಸೋಂಕಿತ ಸಿಕ್ಕರೆ 30 ಸಂಪರ್ಕಿತರ ಪತ್ತೆ ಹಚ್ಚಿ : ಒಬ್ಬನಿಂದ 406 ಜನಕ್ಕೆ ಕೋವಿಡ್‌

ಉಳಿದಂತೆ ಬೆಂಗಳೂರು ಗ್ರಾಮೀಣ ಭಾಗದಲ್ಲಿ ಪ್ರತಿ 100 ಮಂದಿ ರೋಗ ಲಕ್ಷಣಗಳುಳ್ಳವರ ಪೈಕಿ ಶೇ.10.3, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.10.1 ಮಂದಿಗೆ ಸೋಂಕು ದೃಢಪಟ್ಟಿದೆ. ಬೀದರ್‌-ಶೇ.9.8, ಕಲಬುರಗಿ-ಶೇ.8.4, ಉಡುಪಿ-ಶೇ.7, ಧಾರವಾಡ-ಶೇ.5.5, ಮೈಸೂರು-ಶೇ.5.2, ಬೆಳಗಾವಿ-ಶೇ.5, ತುಮಕೂರು-ಶೇ. 3.6, ರಾಯಚೂರು-ಶೇ.3.4, ಶಿವಮೊಗ್ಗ-ಶೇ.3.4ರಷ್ಟು ವರದಿಯಾಗಿದೆ. ಗದಗ-ಶೇ. 0.2, ಉತ್ತರ ಕನ್ನಡ-ಶೇ.0.3, ಚಾಮರಾಜನಗರದಲ್ಲಿ ಶೇ.0.5 ಕಡಿಮೆ ಸೋಂಕು ವರದಿಯಾಗಿದೆ.

ರೋಗ ಲಕ್ಷಣಗಳಿಲ್ಲದವರಲ್ಲಿ ಶೇ.0.8 ಪಾಸಿಟಿವಿಟಿ

ರಾಜ್ಯಾದ್ಯಂತ ರೋಗ ಲಕ್ಷಣಗಳಿಲ್ಲದ 4.26 ಲಕ್ಷ ಮಂದಿಯನ್ನು ಕಳೆದ ಒಂದು ವಾರದಲ್ಲಿ ಪರೀಕ್ಷೆಗೆ ಒಳಪಡಿಸಿದ್ದು ಶೇ.0.8ರಂತೆ 3,545 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ 2.17 ಲಕ್ಷ ಮಂದಿಗೆ ಪರೀಕ್ಷೆ ನಡೆಸಿದ್ದು ಈ ಪೈಕಿ ಶೇ.1.1 ರಷ್ಟು ಪಾಸಿಟಿವಿಟಿ ದರದಂತೆ 2,295 ಮಂದಿಗೆ ಸೋಂಕು ದೃಢಪಟ್ಟಿದೆ. ರೋಗ ಲಕ್ಷಣಗಳಿಲ್ಲದವರಲ್ಲಿ ಹೆಚ್ಚು ಸೋಂಕು ವರದಿಯಾಗುತ್ತಿರುವ ಪೈಕಿ ಶೇ.2ರಷ್ಟುಪಾಸಿಟಿವಿಟಿ ದರದೊಂದಿಗೆ ಬೀದರ್‌ ಮೊದಲ ಸ್ಥಾನದಲ್ಲಿದೆ. ಉಳಿದಂತೆ ಬೆಂಗಳೂರು ಗ್ರಾಮಾಂತರ ಶೇ.1.8, ಕಲಬುರಗಿ ಶೇ.1.7, ದಕ್ಷಿಣ ಕನ್ನಡ ಶೇ.1.4, ಉಡುಪಿಯಲ್ಲಿ ಶೇ.1.3 ಪಾಸಿಟಿವಿಟಿ ದರ ವರದಿಯಾಗಿದೆ. ಬಾಗಲಕೋಟೆ, ರಾಮನಗರ, ದಾವಣಗೆರೆ, ಹಾವೇರಿ ತಲಾ ಶೇ.0.1 ರಷ್ಟು ಮಂದಿಗೆ ಮಾತ್ರ ಸೋಂಕು ದೃಢಪಟ್ಟಿದೆ.
 

Follow Us:
Download App:
  • android
  • ios