ಚಳಿಗಾಲದಲ್ಲಿ ಒಣ ಹವೆ ಇರುತ್ತದೆ. ಈ ಸಮಯದಲ್ಲಿ ಚರ್ಮ ಹಾಗೂ ಶ್ವಾಸಕೋಶ ಕಾಪಾಡುವುದು ತುಂಬ ಮುಖ್ಯ. ಆದರೆ, ಧಾರವಾಡದಲ್ಲಿ ಹಲವು ಕಾರಣಗಳಿಂದ ಏಳುತ್ತಿರುವ ಧೂಳು ಕುಡಿದು ಜನರ ಆರೋಗ್ಯ ಮತ್ತಷ್ಟು ಹದಗೆಡುತ್ತಿದೆ

ಧಾರವಾಡ(ಡಿ.13): ರಾಷ್ಟ್ರ ರಾಜಧಾನಿ ದೆಹಲಿಯು ಧೂಳು-ಮಂಜಿನಿಂದ ತುಂಬಿರುವಾಗ ಇತ್ತ ಸಾಂಸ್ಕೃತಿಕ ರಾಜಧಾನಿ ಖ್ಯಾತಿ ಧಾರವಾಡದ ಜನರು ನಿತ್ಯ ಧೂಳಿನಲ್ಲಿ ಮಜ್ಜನ ಮಾಡುವಂತಾಗಿದೆ.

Add Asianetnews Kannada as a Preferred SourcegooglePreferred

ನಗರವನ್ನು ಆವರಿಸಿರುವ ಧೂಳಿನ ಹಾವಳಿಯಿಂದ ಜನರು ಚರ್ಮದ ಅಲರ್ಜಿ ಮತ್ತು ಉಸಿರಾಟದ ತೊಂದರೆ ಅನುಭವಿಸುವಂತಾಗಿದೆ. ರಸ್ತೆ ಕಾಮಗಾರಿಗಳು ಜನರ ಆರೋಗ್ಯ ಸಮಸ್ಯೆಗಳನ್ನು ಉಲ್ಬಣಿಸುತ್ತಿವೆ. ಈ ಬಾರಿ ಸುರಿದ ಮಳೆಗೆ ನಗರದ ಬಹುತೇಕ ರಸ್ತೆಗಳು ಹಾಳಾಗಿದ್ದು, ಗುಂಡಿಗಳು ಸೃಷ್ಟಿಯಾಗಿವೆ. ಈಗ ಒಣ ಹವೆಯಿಂದಾಗಿ ಗುಂಡಿಗಳಲ್ಲಿ ಧೂಳು ಸೇರುತ್ತಿದೆ. ಭಾರೀ ಮೋಟಾರು ವಾಹನವು ರಸ್ತೆಯ ಮೇಲೆ ಹಾದುಹೋದಾಗ, ಧೂಳು ಗಾಳಿಯಲ್ಲಿ ಬೆರೆತು ಜನರ ಶ್ವಾಸಕೋಶ ತುಂಬಿಕೊಳ್ಳುತ್ತಿದೆ.

ಬಿಜೆಪಿಯವರಿಗೆ ಅಭಿವೃದ್ಧಿ ಬೇಕಿಲ್ಲ, ಬರೀ ರಾಜಕೀಯ ಅಷ್ಟೇ ಬೇಕು: ಸಂತೋಷ ಲಾಡ್

ಸಿಸಿ ರಸ್ತೆಯಾಗಿ ಪರಿವರ್ತಿಸಲು ಕೈಗೆತ್ತಿಕೊಂಡ ರಸ್ತೆಗಳು ಹಣದ ಕೊರತೆಯಿಂದ ಅರ್ಧಕ್ಕೆ ನಿಂತಿವೆ. ಉದಯ್ ಹಾಸ್ಟೆಲ್ ವೃತ್ತದಿಂದ ರೈಲು ನಿಲ್ದಾಣ, ಬಾಸೆಲ್ ಮಿಷನ್ ಶಾಲೆಯಿಂದ ಹಿಂದಿ ಪ್ರಚಾರ ಸಭೆ, ಡಿಸಿ ಕಚೇರಿಯಿಂದ ಹಿಂದಿ ಪ್ರಚಾರ ಸಭಾ ವೃತ್ತ, ಹಳೆ ಡಿಎಸ್‌ಪಿ ವೃತ್ತದಿಂದ ಐಸ್ ಗೇಟ್, ನರೇಗಲ್ ಪೆಟ್ರೋಲ್ ಪಂಪ್‌ನಿಂದ ಪುರಸಭೆ ವೃತ್ತ, ಕೆಸಿಡಿ ವೃತ್ತದಿಂದ ಸಪ್ತಾಪುರ ಭಾವಿವರೆಗೆ, ದಾಸನಕೊಪ್ಪ ವೃತ್ತದಿಂದ ಸಪ್ತಾಪುರದ ವರೆಗೆ. ಕನ್ನಡ ಶಾಲೆ, ಮಾಳಮಡ್ಡಿಯಲ್ಲಿನ ಒಳರಸ್ತೆ, ಸಪ್ತಾಪುರ ಮೊದಲ ಮತ್ತು ಎರಡನೇ ಕ್ರಾಸ್, ಬನಶಂಕರಿ ನಗರ ಮತ್ತು ವ್ಯಾಪ್ತಿ. ತೇಜಸ್ವಿನಗರ ಸೇತುವೆವರೆಗೆ ಟೋಲ್‌ನಾಕಾ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲು ಕಾಯುತ್ತಿವೆ.

ರಸ್ತೆಯ ಎರಡೂ ಬದಿಯಲ್ಲಿರುವ ನಿವಾಸಿಗಳು ಧೂಳಿನ ಅಲರ್ಜಿ ಮತ್ತು ಉಸಿರಾಟದ ತೊಂದರೆಗಳನ್ನು ತಪ್ಪಿಸಲು ದಿನವಿಡೀ ಬಾಗಿಲು ಮತ್ತು ಕಿಟಕಿ ಮುಚ್ಚುವ ಸ್ಥಿತಿ ಉಂಟಾಗಿದೆ. ಇಷ್ಟಾಗಿಯೂ ಮನೆಯ ವಸ್ತುಗಳು ಧೂಳು ಆವರಿಸಿವೆ. ಹಿರಿಯ ನಾಗರಿಕರು ಮತ್ತು ಮಕ್ಕಳು ಕೆಮ್ಮು ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. 

ಬಸ್ಸಿನ ಕರಿ ಧೂಳು:

ಧಾರವಾಡ ಮೊದಲಿನಂತಿಲ್ಲ. ವಾಹನಗಳ ಭರಾಟೆ ಜಾಸ್ತಿಯಾಗಿದೆ. ಅದರಲ್ಲೂ ಬಸ್‌ಗಳು ಬಿಡುವ ಕಾರ್ಬನ್‌ ಹೊಗೆಯು ಧಾರವಾಡ ಪರಿಸರಕ್ಕೆ ಧಕ್ಕೆಯಾಗುತ್ತಿದೆ. ಸಿಟಿ ಬಸ್‌, ಗ್ರಾಮೀಣ ಬಸ್‌ ಹಾಗೂ ಹೊರ ಜಿಲ್ಲೆಗಳಿಗೆ ಹೋಗುವ ಬಹುತೇಕ ಬಸ್‌ಗಳು ವಿಪರೀತ ಕಾರ್ಬನ್ ಬಿಡುತ್ತಿದ್ದು, ಅವುಗಳ ಹಿಂಬದಿ ಇತರ ಸವಾರರು ಹೋದರೆ ಕಪ್ಪು ಹೊಗೆ ಕುಡಿದು ಸುಸ್ತಾಗುತ್ತಿದ್ದಾರೆ.

ಸಿದ್ದರಾಮಯ್ಯ ಮೀಸಲಾತಿ ಕೊಡದಿದ್ರೆ ಏನಂತೆ ಮುಂದೆ ಇನ್ನೊಬ್ಬ ಬರ್ತಾನೆ; ಜಯಮೃತ್ಯುಂಜಯ ಶ್ರೀ ತಿರುಗೇಟು

ಯಾವುದೇ ಅಧಿಕಾರಿಯಾಗಲಿ, ಚುನಾಯಿತ ಪ್ರತಿನಿಧಿಯಾಗಲಿ ಅರ್ಧಕ್ಕೆ ನಿಂತ ಕಾಮಗಾರಿ ವೀಕ್ಷಿಸಿ ಬೇಗ ಪೂರ್ಣಗೊಳಿಸುವ ಯಾವ ಪ್ರಯತ್ನ ಮಾಡುತ್ತಿಲ್ಲ. ಇನ್ನಾದರೂ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹದಗೆಟ್ಟ ರಸ್ತೆಗಳ ಸ್ಥಿತಿಯತ್ತ ಗಮನಹರಿಸಿ ಗುತ್ತಿಗೆದಾರರಿಗೆ ರಸ್ತೆ ನಿರ್ವಹಣೆ ಹೊಣೆ ವಹಿಸಿ ಜನರನ್ನು ಧೂಳಿನ ಹಾವಳಿಯಿಂದ ರಕ್ಷಿಸಬೇಕು ಎಂಬುದು ಧಾರವಾಡ ನಿವಾಸಿಗಳ ಆಗ್ರಹ.

ಧಾರವಾಡ ಪರಿಸರ ಕಾಪಾಡಿ

ಚಳಿಗಾಲದಲ್ಲಿ ಒಣ ಹವೆ ಇರುತ್ತದೆ. ಈ ಸಮಯದಲ್ಲಿ ಚರ್ಮ ಹಾಗೂ ಶ್ವಾಸಕೋಶ ಕಾಪಾಡುವುದು ತುಂಬ ಮುಖ್ಯ. ಆದರೆ, ಧಾರವಾಡದಲ್ಲಿ ಹಲವು ಕಾರಣಗಳಿಂದ ಏಳುತ್ತಿರುವ ಧೂಳು ಕುಡಿದು ಜನರ ಆರೋಗ್ಯ ಮತ್ತಷ್ಟು ಹದಗೆಡುತ್ತಿದೆ. ಕೂಡಲೇ ರಸ್ತೆ ಕಾಮಗಾರಿ ಮುಗಿಸುವುದು ಹಾಗೂ ವಾಹನಗಳ ಕಾರ್ಬನ್‌ ಕಡಿಮೆ ಉಗುಳುವಂತೆ ಕ್ರಮ ವಹಿಸಬೇಕು ಎಂದು ಬಿಜೆಪಿ ಮುಖಂಡ, ಹೋರಾಟಗಾರರಾದ ಪಿ.ಎಚ್‌. ನೀರಲಕೇರಿ ತಿಳಿಸಿದ್ದಾರೆ.