Asianet Suvarna News Asianet Suvarna News

ಚಿಕ್ಕಮಗಳೂರು ನಗರದ ಆಸುಪಾಸಿನಲ್ಲೇ ಬೀಡುಬಿಟ್ಟ ಬಿಟ್ಟ ಕಾಡಾನೆಗಳು: ಆತಂಕದಲ್ಲಿ ಜನತೆ

ಬೀಟಮ್ಮ ಸೇರಿದಂತೆ ಗುಂಪಿನಲ್ಲಿರುವ ಭೀಮ ಆನೆಗಳಿಗೆ ಅರಣ್ಯ ಇಲಾಖೆ ರೇಡಿಯೋ ಕಾಲರ್ ಅಳವಡಿಸಿರುವುದರಿಂದ ಕ್ಷಣ ಕ್ಷಣಕ್ಕೂ ಅವರುಗಳ ಚಲನ ವಲನಗಳು ಇಲಾಖೆ ಗಮನಕ್ಕೆ ಬರುತ್ತಿದೆ. ಇದನ್ನಾಧರಿಸಿ ಅರಣ್ಯ ಸಿಬ್ಬಂದಿ ವಾಟ್ಸ್ ಆಪ್ ಗ್ರೂಪ್ಗಳಲ್ಲಿ ಮಾಹಿತಿ ಹಂಚಿಕೊಂಡು ಗ್ರಾಮಸ್ಥರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ.

people are Anxious Due to Elephants Enter to Near Chikkamagaluru grg
Author
First Published Feb 10, 2024, 10:28 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಫೆ.10):  ಕಳೆದ 20 ದಿನಗಳಿಂದ ಚಿಕ್ಕಮಗಳೂರು ನಗರದ ಆಸುಪಾಸಿನಲ್ಲೇ ಬೀಡುಬಿಟ್ಟಿರುವ ಬೀಟಮ್ಮ ಗುಂಪಿನ ಕಾಡಾನೆಗಳು ಕಳೆದ ಎರಡು ದಿನಗಳಿಂದ ಹಿರೇಕೊಳಲೆ ಹಾಗೂ ಅಕ್ಕಪಕ್ಕದ ಗ್ರಾಮಗಳನ್ನು ಸುತ್ತಿವರಿದಿದ್ದು, ಜನತೆಯನ್ನು ಕಂಗಾಲಾಗಿಸಿವೆ. 

ಬೀಟಮ್ಮ ಸೇರಿದಂತೆ ಗುಂಪಿನಲ್ಲಿರುವ ಭೀಮ ಆನೆಗಳಿಗೆ ಅರಣ್ಯ ಇಲಾಖೆ ರೇಡಿಯೋ ಕಾಲರ್ ಅಳವಡಿಸಿರುವುದರಿಂದ ಕ್ಷಣ ಕ್ಷಣಕ್ಕೂ ಅವರುಗಳ ಚಲನ ವಲನಗಳು ಇಲಾಖೆ ಗಮನಕ್ಕೆ ಬರುತ್ತಿದೆ. ಇದನ್ನಾಧರಿಸಿ ಅರಣ್ಯ ಸಿಬ್ಬಂದಿ ವಾಟ್ಸ್ ಆಪ್ ಗ್ರೂಪ್ಗಳಲ್ಲಿ ಮಾಹಿತಿ ಹಂಚಿಕೊಂಡು ಗ್ರಾಮಸ್ಥರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ.

ಲವ್ ಜಿಹಾದ್ ಆರೋಪಿಸಿ ನೈತಿಕ ಪೊಲೀಸ್ ಗಿರಿ: ಹಿಂದೂಪರ ಸಂಘಟನೆಯ 7 ಮಂದಿ ಬಂಧನ, ರುಮಾನ್ ವಿರುದ್ಧವೂ ಪ್ರತಿದೂರು

ಬೇಲೂರಿನಿಂದ ಆಗಮಿಸಿರುವ ಕಾಡಾನೆಗಳು ಗುಂಪು : 

ಕೆ.ಆರ್.ಪೇಟೆಯಲ್ಲಿ ಮೊದಲು ಕಾಣಿಸಿಕೊಂಡಿದ್ದ ಆನೆಗಳ ಹಿಂಡು ಕದ್ರಿಮಿದ್ರಿ, ವಸ್ತಾರೆ, ಕಬ್ಬಿಣ ಸೇತುವೆ, ಆಲದಗುಡ್ಡೆ ಸುತ್ತಮುತ್ತ ಹಲವು ಗ್ರಾಮಗಳಲ್ಲಿ ಸಂಚರಿಸಿ ದೊಡ್ಡ ಪ್ರಮಾಣದಲ್ಲಿ ಬೆಳೆಗಳನ್ನು ತಿಂದು, ತುಳಿದು ಹಾಳುಗೆಡವಿದ್ದು, ಇದೀಗ ನೆಲ್ಲೂರನ್ನು ಬಳಿಸಿಕೊಂಡು ಹಿರೇಕೊಳಲೆ ಸಮೀಪಕ್ಕೆ ಬಂದು ಬೀಡುಬಿಟ್ಟಿವೆ.ಮೂಡಿಗೆರೆ ಆನೆ ಕಾರ್ಯಪಡೆ ಮತ್ತು ಅರಣ್ಯ ಸಿಬ್ಬಂದಿಗಳು ಈ ಗುಂಪಿನ ಮೇಲೆ ಕಟ್ಟೆಚ್ಚರ ವಹಿಸಿದ್ದು, ಕ್ಷಣ ಕ್ಷಣದ ಚಲನ ವಲನದ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.ಇಂದು ಬೆಳಗ್ಗೆ ಕಾರಿಮನೆ, ಕೆಂಗೆಟ್ಟೆ ಎಸ್ಟೇಟ್ ಭಾಗದಲ್ಲಿ ಕಾಣಿಸಿಕೊಂಡಿದ್ದ ಆನೆಗಳ ಹಿಂಡು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ  ಹಿರೇಕೊಳಲೆ, ಚಿಕ್ಕೊಳಲೆ, ಜೋಳದಾಳು ಸುತ್ತಮುತ್ತಲಿನ ಗ್ರಾಮಸ್ಥರು, ತೋಟ ಕಾರ್ಮಿಕರು, ವಾಹನ ಸವಾರರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿತ್ತು.

ಗಂಭೀರವಾಗಿ ಪರಿಗಣಿಸಿ ಆನೆಗಳನ್ನು ಹಿಮ್ಮೆಟ್ಟಿಸಲು ಒತ್ತಾಯ : 

ಮಧ್ಯಾಹ್ನದ ವೇಳೆಗೆ ನಂದಿಪುರ, ಕಾರ್ಬೈಲು, ತುದಿಯಾಲ, ಮಡ್ಕಲ್, ಮಾಕೋನಹಳ್ಳಿ, ಚಂದ್ರಪುರ ಭಾಗದಲ್ಲಿ ಇರುವ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿತ್ತು.ಇದೇ ವೇಳೆ ಗುಂಪಿನಿಂದ ಬೇರ್ಪಟ್ಟ ಎರಡು ಆನೆಗಳು ಹೊಸಪೇಟೆ, ಹಂಗರವಳ್ಳಿ, ಸಾಲಗುಂಬ್ರಿ, ಕೆಳಹಾಂದಿ, ಮುಳ್ಳುಂಡೆ, ಬಾರಿಕೆರೆ, ನಂದಿಪುರ ಗ್ರಾಮದ ಸುತ್ತಲೂ ಸಂಚರಿಸಿ ಸಾರ್ವಜನಿಕರನ್ನು ಭೀತಿಗೊಳಿಸಿವೆ.ಸುಮಾರು 24 ಆನೆಗಳಿರುವ ಹಿಂಡು ಈವರೆಗೆ ಯಾವುದೇ ಜೀವಹಾನಿ ಉಂಟುಮಾಡಿಲ್ಲವಾದರೂ ಯಾವುದೇ ಸಂದರ್ಭದಲ್ಲಿ ಅಪಾಯಕಾರಿಯಾಗಿ ವರ್ತಿಸಬಹುದು ಎನ್ನುವ ಭೀತಿ ಈ ಭಾಗದ ಜನರದ್ದಾಗಿದ್ದರೆ, ಅವುಗಳು ಸ್ವಾಭಾವಿಕವಾಗಿ ಬಂದ ಮಾರ್ಗದಲ್ಲೇ ಹಿಂತಿರುಗಬೇಕು ಎನ್ನುವ ಕಾರಣಕ್ಕೆ ಬಲವಂತದ ಕ್ರಮಗಳನ್ನು ಕೈಗೊಳ್ಳಲು ಇಲಾಖೆ ಹಿಂದೇಟು ಹಾಕುತ್ತಿದೆ. ಚುನಾಯಿತ ಪ್ರತಿನಿಧಿಗಳು, ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಆನೆಗಳನ್ನು ಹಿಮ್ಮೆಟ್ಟಿಸಲು ಕ್ರಮ ಕೈಗೊಂಡು ಜನರಲ್ಲಿ ನೆಮ್ಮದಿ ಮೂಡಿಸಬೇಕು ಎನ್ನುವ ಆಗ್ರಹಗಳು ಕೇಳಿಬಂದಿವೆ.

Follow Us:
Download App:
  • android
  • ios