Asianet Suvarna News Asianet Suvarna News

ಎಚ್ಚರ.. ಅನುಮತಿ ಇಲ್ಲದೆ ರಸ್ತೆ ಅಗೆದರೆ ದಂಡ: BBMP ಖಡಕ್ ಸೂಚನೆ

ಬಿಬಿಎಂಪಿ ಅನುಮತಿ ಇಲ್ಲದೇ ರಸ್ತೆ ಕತ್ತರಿಸುವ ಖಾಸಗಿ ಸಂಸ್ಥೆಗಳು ಹಾಗೂ ಸರ್ಕಾರಿ ಇಲಾಖೆಗಳಿಗೆ ದಂಡ ವಿಧಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದ್ದಾರೆ. 

penalty for digging a road without permission says bbmp commissioner tushar girinath gvd
Author
First Published Nov 3, 2023, 9:27 AM IST

ಬೆಂಗಳೂರು (ನ.03): ಬಿಬಿಎಂಪಿ ಅನುಮತಿ ಇಲ್ಲದೇ ರಸ್ತೆ ಕತ್ತರಿಸುವ ಖಾಸಗಿ ಸಂಸ್ಥೆಗಳು ಹಾಗೂ ಸರ್ಕಾರಿ ಇಲಾಖೆಗಳಿಗೆ ದಂಡ ವಿಧಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದ್ದಾರೆ. ಮಹದೇವಪುರ ವಲಯ ವ್ಯಾಪ್ತಿಯ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಗುರುವಾರ ನಡೆದ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಬೆಸ್ಕಾಂ, ಜಲಮಂಡಳಿ ಸೇರಿದಂತೆ ಇನ್ನಿತರೆ ಇಲಾಖೆಗಳು ಪಾಲಿಕೆಯ ಅನುಮತಿಯಿಲ್ಲದೆ ರಸ್ತೆ ಕತ್ತರಿಸಿದರೆ ಸಂಬಂಧಪಟ್ಟ ಇಲಾಖೆಗೆ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಆದ್ಯತೆ ಮೇರೆಗೆ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಗುಂಡಿ ಮುಚ್ಚಿ ನಂತರ ವಾರ್ಡ್ ರಸ್ತೆಗಳಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳಿಗೆ ತಿಳಿಸಿದರು. ಎಂಜಿನಿಯರಿಂಗ್ ವಿಭಾಗದ ವಿವಿಧ ಕಾಮಗಾರಿಗಳ ತ್ವರಿತವಾಗಿ ಪ್ರಾರಂಭಿಸಬೇಕು. ಆಯಾ ವಾರ್ಡ್‌ಗಳಲ್ಲಿ ಅನಧಿಕೃತ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿದ್ದಾರೆಯೇ ಎಂಬುದನ್ನು ವಾರ್ಡ್ ಎಂಜಿನಿಯರ್‌ಗಳು ಹಾಗೂ ನಗರ ಯೋಜನಾ ವಿಭಾಗದ ಸಹಾಯಕ ನಿರ್ದೇಶಕರು ಜಂಟಿ ತಪಾಸಣೆ ನಡೆಸಿ ಅನಧಿಕೃತ ಕಟ್ಟಡ ನಿರ್ಮಾಣ ಕಂಡುಬಂದರೆ ಸಂಬಂಧಪಟ್ಟವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಸೂಚಿಸಿದರು.

ಕಿರುಕುಳ ಕೊಟ್ಟ ಯುವಕನ ಕಚ್ಚಿ ಕೊಂದ ನಾಗರಹಾವು: ಸತ್ತವನ ಮೊಬೈಲ್‌ನಲ್ಲಿತ್ತು ಬೆಚ್ಚಿಬೀಳಿಸುವ ದೃಶ್ಯ!

ಮಹದೇವಪುರ ವಲಯದ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಪಾದಚಾರಿ ಮಾರ್ಗಗಳನ್ನು ವಲಯ ಜಂಟಿ ಆಯುಕ್ತರು ಹಾಗೂ ಘನತ್ಯಾಜ್ಯ ವಿಭಾಗದ ಅಧೀಕ್ಷಕ ಅಭಿಯಂತರರ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸುವಂತೆ ತಿಳಿಸಿದರು. ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿರುವ ಸ್ಥಳದಲ್ಲಿ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಒತ್ತುವರಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ತಹಸೀಲ್ದಾರರಿಂದ ಒತ್ತುವರಿ ತೆರವಿಗಾಗಿ ಆದೇಶಿಸಿದ ಕೂಡಲೇ ಒತ್ತುವರಿ ತೆರವು ನಡೆಸಬೇಕು ಎಂದರು.

ದರ್ಶನ್‌ ಮನೆ ನಾಯಿ ಕಚ್ಚಿದ ಪ್ರಕರಣ: ಹೀಗೇ ಆದರೆ ಕೋರ್ಟಿಗೆ ಹೋಗುವೆ ಎಂದ ದೂರುದಾರೆ!

ರಾಜಕಾಲುವೆ ನೀರು ಸರಾಗವಾಗಿ ಹರಿದು ಹೋಗಲು ಸದಾ ಸ್ವಚ್ಛವಾಗಿಡಬೇಕು. ಬೆಳ್ಳಂದೂರು ಬಳಿ ಪ್ರೆಸ್ಟೀಜ್ ವತಿಯಿಂದ ರಾಜಕಾಲುವೆ ನಿರ್ಮಾಣ ಮಾಡಲಾಗುತ್ತಿದ್ದು, ಕಂದಾಯ ಇಲಾಖೆಯ ಸಮೀಕ್ಷೆಯನುಸಾರ ರಾಜಕಾಲುವೆ ನಿರ್ಮಾಣ ಮಾಡುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಕಂದಾಯ ಸರ್ವೇ ಪ್ರಕಾರ ರಾಜಕಾಲುವೆಯ ಅಗಲ ಕಡಿಮೆ ಮಾಡಿದ್ದಲ್ಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ನಿರ್ದೇಶಿಸಿದರು. ಸಭೆಯಲ್ಲಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್, ವಲಯ ಆಯುಕ್ತ ಇಬ್ರಾಹಿಂ ಮೊಮಿನ್, ವಲಯ ಜಂಟಿ ಆಯುಕ್ತೆ ಡಾ.ದಾಕ್ಷಾಯಿಣಿ, ಪಾಲಿಕೆ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರಹ್ಲಾದ್, ಯೋಜನಾ ವಿಭಾಗದ ಮುಖ್ಯ ಅಭಿಯಂತರ ಲೋಕೇಶ್, ಮೆಟ್ರೋ, ಜಲಮಂಡಳಿ ಹಾಗೂ ಬೆಸ್ಕಾಂ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.

Follow Us:
Download App:
  • android
  • ios