Asianet Suvarna News Asianet Suvarna News

ಕೃಷ್ಣ ನದಿ ಒಳಹರಿವು ಹೆಚ್ಚಳ: ಆಲಮಟ್ಟಿಅಣೆಕಟ್ಟೆಗೆ ಜೀವಕಳೆ!

ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟಪ್ರದೇಶದಲ್ಲಿ ಎರಡು ದಿನಗಳಿಂದ ಮಳೆ ಹೆಚ್ಚಿದ್ದು ಇದರಿಂದಾಗಿ ಆಲಮಟ್ಟಿಜಲಾಶಯದ ಒಳಹರಿವಿನಲ್ಲಿ ವ್ಯಾಪಕ ಏರಿಕೆಯಾಗಿದೆ. ಕ್ಷಣ ಕ್ಷಣಕ್ಕೂ ಒಳಹರಿವು ಹೆಚ್ಚುತ್ತಿದೆ. ಒಡಲಲ್ಲಿ ನೀರಿಲ್ಲದೇ ಸೊರಗಿದ್ದ ಕೃಷ್ಣೆಯ ಒಡಲಿನಲ್ಲಿ ಅಲೆಗಳ ಆರ್ಭಟ ಜೋರಾಗಿದೆ.

Overflowing Alamattee Reservoir at bagalkote district rav
Author
First Published Jul 22, 2023, 1:36 PM IST

ಆಲಮಟ್ಟಿ (ಜು.22) : ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟಪ್ರದೇಶದಲ್ಲಿ ಎರಡು ದಿನಗಳಿಂದ ಮಳೆ ಹೆಚ್ಚಿದ್ದು ಇದರಿಂದಾಗಿ ಆಲಮಟ್ಟಿಜಲಾಶಯದ ಒಳಹರಿವಿನಲ್ಲಿ ವ್ಯಾಪಕ ಏರಿಕೆಯಾಗಿದೆ. ಕ್ಷಣ ಕ್ಷಣಕ್ಕೂ ಒಳಹರಿವು ಹೆಚ್ಚುತ್ತಿದೆ. ಒಡಲಲ್ಲಿ ನೀರಿಲ್ಲದೇ ಸೊರಗಿದ್ದ ಕೃಷ್ಣೆಯ ಒಡಲಿನಲ್ಲಿ ಅಲೆಗಳ ಆರ್ಭಟ ಜೋರಾಗಿದೆ.

ಶುಕ್ರವಾರ ಬೆಳಗ್ಗೆ 70780 ಕ್ಯುಸೆಕ್‌ ಇದ್ದ ಒಳಹರಿವು ಸಂಜೆಯ ವೇಳೆಗೆ 96805 ಕ್ಯುಸೆಕ್‌ಗೆ ಏರಿಕೆಯಾಗಿದೆ.

Bagalkot: ಎತ್ತಿನಹೊಳೆ ಸಂತ್ರಸ್ಥರಂತೆ ಆಲಮಟ್ಟಿ ಹಿನ್ನೀರು ಸಂತ್ರಸ್ಥರಿಗೂ ಭೂಮಿ ಸಹಿತ ಪರಿಹಾರ ಕೊಡಿ

ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆ:

ಕಳೆದ ಮೂರ್ನಾಲ್ಕು ದಿನಗಳಿಂದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯುತ್ತಿದೆ. ಶುಕ್ರವಾರ ಕೃಷಾ ಉಗಮ ಸ್ಥಾನ ಮಹಾಬಳೇಶ್ವರದಲ್ಲಿ 103 ಮಿ.ಮೀ, ಕೊಯ್ನಾದಲ್ಲಿ 84 ಮಿ.ಮೀ, ನವಜಾದಲ್ಲಿ 95 ಮಿ.ಮೀ, ವರಣಾದಲ್ಲಿ 50 ಮಿ.ಮೀ, ರಾಧಾನಗರಿಯಲ್ಲಿ 157 ಮಿ.ಮೀ, ದೂಧಗಂಗಾದಲ್ಲಿ 75 ಮಿ.ಮೀ, ತರಳಿಯಲ್ಲಿ 20 ಮಿ.ಮೀ, ಕನ್ಹೇರದಲ್ಲಿ 35 ಮಿ.ಮೀ ಮಳೆಯಾಗಿದೆ.

ಕರ್ನಾಟಕಕ್ಕೆ ಬಂದು ಸೇರುವ ರಾಜಾಪುರ ಬ್ಯಾರೇಜ್‌ ಬಳಿ ಕೃಷ್ಣೆಯ ಹರಿವು 71333 ಕ್ಯುಸೆಕ್‌ ಇದೆ. ಕರ್ನಾಟಕದ ಕಲ್ಲೋಳ ಬ್ಯಾರೇಜ್‌ ಬಳಿ ಕೃಷಾ ನದಿಯ ಹರಿವು ಒಟ್ಟಾರೆ 90479 ಕ್ಯುಸೆಕ್‌ ಇತ್ತು.

ಈ ನೀರು 72 ಗಂಟೆಗಳ ನಂತರ ಆಲಮಟ್ಟಿಜಲಾಶಯವನ್ನು ತಲುಪಲಿದೆ.

ವಿದ್ಯುತ್‌ ಉತ್ಪಾದನೆ ಆರಂಭ:

ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಆಲಮಟ್ಟಿಜಲಾಶಯದಿಂದ 5000 ಕ್ಯುಸೆಕ್‌ ನೀರನ್ನು ಜಲಾಶಯದ ಬಲಭಾಗದ ಆಲಮಟ್ಟಿವಿದ್ಯುತ್‌ ಉತ್ಪಾದನಾ ಘಟಕದ ಮೂಲಕ ಹರಿಸಲಾಯಿತು. ಇದರಿಂದಾಗಿ ವಿದ್ಯುತ್‌ ಉತ್ಪಾದನಾ ಕೇಂದ್ರದ ಒಂದು ಘಟಕದ ಮೂಲಕ 25 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆ ಆರಂಭಗೊಂಡಿದೆ ಎಂದು ವಿದ್ಯುತ್‌ ಉತ್ಪಾದನಾ ಘಟಕದ ಕಾರ್ಯನಿರ್ವಾಹಕ ಎಂಜಿನಿಯರ್‌ ಚಂದ್ರಶೇಖರ ದೊರೆ ತಿಳಿಸಿದರು.

ಕೆರೆಗಳ ಭರ್ತಿಗೆ ನೀರು:

ಕುಡಿಯುವ ನೀರು ಹಾಗೂ ಕೆರೆಗಳ ಭರ್ತಿಗಾಗಿ ಆಲಮಟ್ಟಿಜಲಾಶಯದಿಂದ ನೀರು ಹರಿಸುವ ಪ್ರಕ್ರಿಯೆ ಶುಕ್ರವಾರದಿಂದ ಆರಂಭಗೊಂಡಿದೆ. ನಾರಾಯಣಪುರ ಜಲಾಶಯದ ಹಿನ್ನೀರು ಹಾಗೂ ಅಲ್ಲಿನ ನಾರಾಯಣಪುರ ಎಡದಂಡೆ ಕಾಲುವೆಯ ಮೂಲಕ ಇಂಡಿ ಶಾಖಾ ಕಾಲುವೆ, ಗುತ್ತಿ ಬಸವಣ್ಣ ಏತ ನೀರಾವರಿ ಮೂಲಕ ಆ ಭಾಗದ ಕುಡಿಯುವ ನೀರಿನ ಸಂಗ್ರಹಾರಕ್ಕೆ ನೀರು ಅಗತ್ಯವಿದೆ. ಅದಕ್ಕಾಗಿ 2 ಟಿಎಂಸಿ ಅಡಿ ನೀರನ್ನು ಆಲಮಟ್ಟಿಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ ಹಂತ ಹಂತವಾಗಿ ಆರಂಭಿಸುವ ಪ್ರಕ್ರಿಯೆ ಶುಕ್ರವಾರ ಆರಂಭಗೊಂಡಿದೆ.

ಆಲಮಟ್ಟಿ ಡ್ಯಾಂ ಬಳಿ ಬುರ್ಕಾ ತಂದ ಆತಂಕ..!

ಇನ್ನೂ ಆಲಮಟ್ಟಿಭಾಗದ ವಿವಿಧ ನೀರಾವರಿ ಯೋಜನೆಗಳ ಮೂಲಕ ಕೆರೆಗಳ ಭರ್ತಿಗಾಗಿ 2.5 ಟಿಎಂಸಿ ಅಡಿ ನೀರು ಹರಿಸುವ ಪ್ರಕ್ರಿಯೆಯೂ ಆರಂಭಗೊಂಡಿದೆ.

ಜಲಾಶಯದ ಮಟ್ಟ:

ಶುಕ್ರವಾರ ಸಂಜೆ ಲಭ್ಯವಾದ ಮಾಹಿತಿಯ ಪ್ರಕಾರ 519.60 ಮೀ. ಗರಿಷ್ಠ ಎತ್ತರದ ಜಲಾಶಯದಲ್ಲಿ 512.02 ಮೀ.ವರೆಗೆ ನೀರು ಸಂಗ್ರಹವಿತ್ತು. ಜಲಾಶಯಕ್ಕೆ ಸಂಜೆ 96805 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. 123 ಟಿಎಂಸಿ ಅಡಿ ಸಂಗ್ರಹದ ಆಲಮಟ್ಟಿಜಲಾಶಯದಲ್ಲಿ 41 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಸದ್ಯ 5000 ಕ್ಯುಸೆಕ್‌ ನೀರನ್ನು ಜಲಾಶಯದಿಂದ ಹೊರಕ್ಕೆ ಬಿಡಲಾಗುತ್ತಿದೆ.

Follow Us:
Download App:
  • android
  • ios