ಕೇರಳದ ವೈನಾಡಿನಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯದಲ್ಲಿ ಹೆಚ್ಚಿದ ನೀರಿನ ಮಟ್ಟ ಕಪಿಲಾ ನದಿಯಲ್ಲಿ ಹೆಚ್ಚಿನ ನೀರು ಹರಿದು ಬರುತ್ತಿರುವುದರಿಂದ ನದಿ ಪಾತ್ರದ ಜನರಿಗೆ ಎಚ್ಚರಿಕೆ

ನಂಜನಗೂಡು (ಜು.24): ಕೇರಳದ ವೈನಾಡಿನಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯದಿಂದ 30 ಸಾವಿರ ಕ್ಯುಸೆಕ್‌ಗೂ ಹೆಚ್ಚಿನ ನೀರು ಹರಿಸಲಾಗಿದ್ದು, ಕಪಿಲಾ ನದಿಯಲ್ಲಿ ಹೆಚ್ಚಿನ ನೀರು ಹರಿದು ಬರುತ್ತಿರುವುದರಿಂದ ನದಿ ಪಾತ್ರದ ಜನರು ಎಚ್ಚರಿಕೆ ವಹಿಸಬೇಕು ಎಂದು ತಹಸೀಲ್ದಾರ್‌ ಮೋಹನ ಕುಮಾರಿ ಹೇಳಿದರು.

Add Asianetnews Kannada as a Preferred SourcegooglePreferred

ಸ್ನಾನ ಘಟ್ಟದ ಬಳಿಯ ಐತಿಹಾಸಿಕ ಹದಿನಾರು ಕಲ್ಲು ಮಂಟಪ ಹಾಗೂ ಸ್ನಾನ ಘಟ್ಟದ ಸೋಪಾನ ಕಟ್ಟೆಗಳು ಮುಳುಗಿವೆ, ತಾಲೂಕಿನ ಬೊಕ್ಕಹಳ್ಳಿ, ಕುಳ್ಳಂಕನ ಹುಂಡಿ, ಪಟ್ಟಣದ ಹಳ್ಳದಕೇರಿ, ಕುರಬಗೇರಿ, ಗೌರಿ ಘಟ್ಟ, ತೋಪಿನ ಬೀದಿಯ ತಗ್ಗು ಪ್ರದೇಶಗಳು ಮುಳುಗಡೆಯಾಗುವ ಸಂಭವವಿದ್ದು, ಹೆಚ್ಚಿನ ನಿಗಾ ವಹಿಸುವಂತೆ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನದಿಯಲ್ಲಿ ಪ್ರವಾಹ ಹೆಚ್ಚಾದರೆ ತಗ್ಗು ಪ್ರದೇಶದಲ್ಲಿ ಮನೆಗಳಲ್ಲಿ ವಾಸವಾಗಿರುವವರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುವುದು ಎಂದು ಅವರು ಹೇಳಿದರು.

ಮುಡಿ ಸೇವೆ ರದ್ದು : ಕಪಿಲಾ ನದಿಯಲ್ಲಿ ನೀರಿನ ಮಟ್ಟಹೆಚ್ಚಾಗುತ್ತಿರುವುದರಿಂದ ಸ್ನಾನ ಘಟ್ಟದಲ್ಲಿ ಸ್ನಾನ ಮಾಡುವುದನ್ನು ನಿರ್ಬಂಧಿಸಲಾಗಿದೆ. ಹೀಗಾಗಿ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ವತಿಯಿಂದ ನಡೆಸಲಾಗುತ್ತಿದ್ದ ಮುಡಿ ಸೇವೆಯನ್ನು ಸ್ನಾನ ಘಟ್ಟದಲ್ಲಿ ಪ್ರವಾಹ ಕಡಿಮೆಯಾಗುವವರೆಗೆ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ದೇವಾಲಯದ ಇಒ ರವೀಂದ್ರತಿಳಿಸಿದ್ದಾರೆ.

ಭೀಕರ ಮಳೆ, ಪ್ರವಾಹಕ್ಕೆ ರಾಯಘಡದಲ್ಲಿ ಭೂಕುಸಿತ; 36 ಸಾವು,6 ಜಿಲ್ಲೆಯಲ್ಲಿ ರೆಡ್ ಅಲರ್ಟ್!

ಕಬಿನಿಯಿಂದ 30,000 ಕ್ಯುಸೆಕ್‌ ನೀರು ಹೊರಕ್ಕೆ:

ಕೇರಳದ ವೈನಾಡು ಸೇರಿದಂತೆ ಜಲಾನಯನ ಪ್ರದೇಶದಲ್ಲಿ ಕಳೆದೊಂದು ವಾರದಿಂದ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಿದ್ದು, 30 ಸಾವಿರ ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಕಬಿನಿ ಜಲಾಶಯವು 2284 ಅಡಿ ಗರಿಷ್ಟಮಟ್ಟಹೊಂದಿದೆ. ಶುಕ್ರವಾರ ಮಧ್ಯಾಹ್ನದ ವೇಳೆಗೆ ಜಲಾಶಯದಲ್ಲಿ 2280.81 ಅಂಡಿ ನೀರು ಸಂಗ್ರಹವಾಗಿತ್ತು. ಜಲಾಶಯಕ್ಕೆ 25,489 ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, 30 ಸಾವಿರ ಕ್ಯುಸೆಕ್‌ ನೀರು ಹೊರ ಬಿಡಲಾಗುತ್ತಿದೆ. ನಾಲೆಗಳಿಗೆ 800 ಕ್ಯುಸೆಕ್‌ ನೀರು ಬಿಡಲಾಗುತ್ತಿದೆ.

ಜಲಾಶಯ ಗರಿಷ್ಠ ಮಟ್ಟತಲುಪುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಲಾಶಯದಿಂದ 30 ಸಾವಿರ ಕ್ಯುಸೆಕ್‌ ನೀರು ಹೊರ ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಬಿನಿ ಜಲಾನಯನ ಪ್ರದೇಶವಾದ ಸರಗೂರು, ಮಾದಾಪುರ, ಸಂಗಮ, ಕಣೇನೂರು, ಹುಲ್ಲಹಳ್ಳಿ, ಬಿದರಗೂಡು, ಚಿಕ್ಕಯ್ಯನಛತ್ರ, ನಂಜನಗೂಡು, ಸುತ್ತೂರು, ಟಿ. ನರಸೀಪುರ ಮುಂತಾದ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ.

ಬೆಳಗಾವಿಯಲ್ಲಿ ಭಾರೀ ಮಳೆ: 51 ಗ್ರಾಮ ಜಲಾವೃತ..!

ಎಡೆಬಿಡದೆ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಆದರೂ ಕೆಲವರು ಕಬಿನಿ ಜಲಾಶಯದ ಮೇಲೆ ಸಂಚರಿಸುವುದರಿಂದ ಜಲಾಶಯದ ದ್ವಾರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್‌್ತ ನಿಯೋಜಿಸಲಾಗಿತ್ತು. ನಂಜನಗೂಡಿನ ಹಳೆ ಸೇತುವೆ, ಹೆಜ್ಜೆಗೆ ಸೇತುವೆ. ಕಂಬಗಳು ಬಹುತೇಕ ಮುಳುಗಡೆಯಾಗಿವೆ. ಅಲ್ಲದೆ ದೇವಲಾಯದ ಮೆಟ್ಟಿಲುಗಳು ಭಾಗಶಃ ಮುಳುಗಿವೆ.

ಅಲ್ಲದೆ ನದಿ ಪಾತ್ರದಲ್ಲಿನ ನಿವಾಸಿಗಳು ಮತ್ತು ರೈತರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ನದಿ ಪಾತ್ರದಲ್ಲಿ ಜಾನುವಾರು ಮೇಯಿಸುವುದು ಮತ್ತು ಸಾರ್ವಜನಿಕರು ಅಡ್ಡಾಡದಂತೆ ಸೂಚಿಸಲಾಗಿದೆ.. ಈ ಹಿನ್ನೆಲೆಯಲ್ಲಿ ತಗ್ಗು ಪ್ರದೇಶದಲ್ಲಿ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಅವರು ತಿಳಿಸಿದ್ದಾರೆ.

ಪ್ರವಾಹ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ 

ಕಬಿನಿ ಜಲಾನಯನ ಪ್ರದೇಶದಲ್ಲಿ ಹೆಚ್ಚಾಗಿ ಮಳೆಯಾಗುತ್ತಿದ್ದು, ಜುಲೈ 22 ರಂದು ಕಬಿನಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ 18000 ಕ್ಯುಸೆಕ್‌ಗಿಂತ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ 30,000 ಕ್ಯುಸೆಕ್‌ ನೀರನ್ನು ಕಬಿನಿ ನದಿಗೆ ಹರಿಸಲಾಗುವುದು. ಕಬಿನಿ ನದಿಯ ಪಾತ್ರದಲ್ಲಿರುವ ಮತ್ತು ನದಿಯ ಎರಡೂ ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕಬಿನಿ ಜಲಾಶಯದ ಕಾರ್ಯಪಾಲಕ ಎಂಜಿನಿಯರ್‌ ಸಿ.ವಿ. ಸುರೇಶ್‌ ಬಾಬು ತಿಳಿಸಿದ್ದಾರೆ.