ತುಂಗಭದ್ರಾ ನದಿಯಲ್ಲಿ ನೀರುನಾಯಿಗಳು ನದಿಯ ದಡದಲ್ಲಿ ಓಡಾಡುತ್ತಿರುವ, ಈಜಾಡುತ್ತಿರುವ ದೃಶ್ಯಗಳು ಪ್ರವಾಸಿಗರೊಬ್ಬರ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಕೊಪ್ಪಳ(ಜು.17):  ಅಳಿವಿನಂಚಿನಲ್ಲಿರುವ ಮತ್ತು ಅಪರೂಪದ ಸಸ್ತನಿ ಜಾತಿಗೆ ಸೇರಿದ ನೀರುನಾಯಿಗಳು ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಚೆಲ್ಲಾಟವಾಡುತ್ತಿರುವ ಅಪರೂಪದ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನದ ಬಳಿ ತುಂಗಭದ್ರಾ ನದಿಯಲ್ಲಿ ನೀರುನಾಯಿಗಳು ನದಿಯ ದಡದಲ್ಲಿ ಓಡಾಡುತ್ತಿರುವ, ಈಜಾಡುತ್ತಿರುವ ದೃಶ್ಯಗಳು ಪ್ರವಾಸಿಗರೊಬ್ಬರ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ತುಂಗಭದ್ರಾ ನದಿಯನ್ನು ನೀರುನಾಯಿಗಳ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ನೀರುನಾಯಿಗಳು ಅಪರೂಪದ ಪ್ರಾಣಿಗಳಾಗಿವೆ. ಸಾಮಾನ್ಯವಾಗಿ ನಡುಗಡ್ಡೆಯಲ್ಲಿ ವಾಸಿಸುವ ಇವು ತುಂಗಭದ್ರಾ ನದಿ ಭರ್ತಿಯಾಗಿ ಹರಿಯುತ್ತಿರುವುದರಿಂದ ದಡಕ್ಕೆ ಬರುತ್ತಿವೆ.

Add Asianetnews Kannada as a Preferred SourcegooglePreferred

ತುಂಗಭದ್ರಾ ನದಿಯನ್ನು ನೀರುನಾಯಿಗಳ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಿದ ಮೇಲೆ ನೀರುನಾಯಿಗಳ ಸಂತತಿ ವೃದ್ಧಿಯಾಗುತ್ತಿದೆ ಎಂದು ಹೇಳಲಾಗುತ್ತಿದೆ.

ತುಂಗಭದ್ರಾ ಡ್ಯಾಂನಿಂದ ನದಿಗೆ 1 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು: ಹಂಪಿಯ ಸ್ಮಾರಕಗಳು ಜಲಾವೃತ..!

ತುಂಗಭದ್ರಾ ನದಿಯಲ್ಲಿ ನೀರುನಾಯಿಗಳ ಸಂಖ್ಯೆ ಹೇರಳವಾಗಿದೆ. ಈಗ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲಾಗಿರುವುದರಿಂದ ಅವುಗಳ ಸಂರಕ್ಷಣೆಗೆ ಅನುಕೂಲವಾಗಿದೆ ಅಂತ ಪರಿಸರ ತಜ್ಞ ಅಬ್ದುಲ್‌ ಸಮದ್‌ ಕೊಟ್ಟೂರು ತಿಳಿಸಿದ್ದಾರೆ. 

ತುಂಗಭದ್ರಾ ಜಲಾಶಯದಿಂದ 1.50 ಲಕ್ಷ ಕ್ಯುಸೆಕ್‌ ನೀರು ಬಿಡುಗಡೆ

ಮುನಿರಾಬಾದ್‌: ತುಂಗಭದ್ರಾ ಜಲಾಶಯದ 33 ಗೇಟುಗಳ ಪೈಕಿ 30 ಗೇಟ್‌ಗಳಿಂದ ನದಿಗೆ ಶನಿವಾರ 1,49,766 ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ.

ಜಲಾಶಯಕ್ಕೆ ಒಳಗೆ ಹರಿದು ಬರುತ್ತಿರುವ ನೀರಿನ ಪ್ರಮಾಣವೂ 1,49,766 ಲಕ್ಷ ಕ್ಯುಸೆಕ್‌ಗಳಾಗಿದ್ದು, ಇಷ್ಟೇ ಪ್ರಮಾಣದ ನೀರನ್ನು ಹರಿಸಲಾಗುತ್ತಿದೆ. ಜಲಾಶಯದ 33 ಗೇಟುಗಳ ಪೈಕಿ 30 ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲಾಗುತ್ತಿದೆ. 10 ಗೇಟ್‌ಗಳನ್ನು ಎರಡೂವರೆ ಅಡಿ ಎತ್ತರಕ್ಕೆ ಹಾಗೂ 20 ಗೇಟ್‌ಗಳನ್ನು ನಾಲ್ಕು ಅಡಿ ಎತ್ತರಕ್ಕೆ ಎತ್ತಿ ನದಿಗೆ ನೀರನ್ನು ಹರಿಸಲಾಗುತ್ತಿದೆ. ನಾಲ್ಕನೇ ದಿನವೂ ತುಂಗಭದ್ರಾ ಜಲಾಶಯದ ನದಿ ಪಾತ್ರದಲ್ಲಿ ಪ್ರವಾಹ ಉಂಟಾಗಿದೆ. ಹಂಪಿಯ ಸ್ಮಾರಕಗಳು ಜಲಾವೃತಗೊಂಡಿವೆ. ಕಂಪ್ಲಿ ಹಾಗೂ ಗಂಗಾವತಿ ನಗರಗಳ ನಡುವೆ ರಸ್ತೆ ಸಂಪರ್ಕ ಕಡಿದು ಹೋಗಿದೆ.