ಆರೈಕೆ ಕೇಂದ್ರ ನಿರ್ಮಾಣದ ಕುರಿತು ಆಧಾರವಿಲ್ಲದೆ ಆರೋಪ ಮಾಡುವ ಬದಲು ಪ್ರತಿಪಕ್ಷ ನಾಯಕರು ಕೊರೋನಾ ಸೋಂಕು ನಿಯಂತ್ರಣ ಕಾರ್ಯದಲ್ಲಿ ಕೈಜೋಡಿಸುವ ಕೆಲಸ ಮಾಡಲಿ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ.

ಬೆಂಗಳೂರು(ಜು.28): ಆರೈಕೆ ಕೇಂದ್ರ ನಿರ್ಮಾಣದ ಕುರಿತು ಆಧಾರವಿಲ್ಲದೆ ಆರೋಪ ಮಾಡುವ ಬದಲು ಪ್ರತಿಪಕ್ಷ ನಾಯಕರು ಕೊರೋನಾ ಸೋಂಕು ನಿಯಂತ್ರಣ ಕಾರ್ಯದಲ್ಲಿ ಕೈಜೋಡಿಸುವ ಕೆಲಸ ಮಾಡಲಿ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಬಿಐಇಸಿ ಕೊರೋನಾ ಆರೈಕೆ ಕೇಂದ್ರ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆರೈಕೆ ಕೇಂದ್ರದ ಬಗ್ಗೆ ಕೇವಲ ಊಹಾಪೋಹ ಆಧರಿಸಿ ಆರೋಪ ಮಾಡಿದ್ದಾರೆ. ಆದರೆ, ಈ ಕೇಂದ್ರದ ಪ್ರತಿಯೊಂದು ವೆಚ್ಚವೂ ಪಾರದರ್ಶಕವಾಗಿದೆ ಎಂದು ಸಮರ್ಥಿಸಿಕೊಂಡರು.

ಕೋವಿಡ್ ಸಂಕಷ್ಟಕ್ಕೆ ರೋಟರಿಯಿಂದ 36 ಕೋಟಿ ರುಪಾಯಿ ದೇಣಿಗೆ

ಆರೈಕೆ ಕೇಂದ್ರಕ್ಕೆ ಹಾಸಿಗೆ, ಮಂಚ, ಫ್ಯಾನ್‌, ಟೇಬಲ್‌, ಕುಡಿಯುವ ನೀರು, ನೆಲದ ಮ್ಯಾಟ್‌ ಸೇರಿ 7 ಸಾಮಗ್ರಿಗಳನ್ನು ಖರೀದಿಗೆ 4.02 ಕೋಟಿ ರು. ವೆಚ್ಚ ಮಾಡಲಾಗಿದೆ. ಬಾತ್‌ ರೂಂ, ಟಾಯ್ಲೆಟ್‌, ಮಗ್‌ ಸೇರಿ ಒಟ್ಟು 19 ಸಾಮಗ್ರಿಗಳನ್ನು ಬಾಡಿಗೆ ಪಡೆಯಲಾಗಿದ್ದು ತಿಂಗಳಿಗೆ 4.96 ಕೋಟಿ ರು. ಬಾಡಿಗೆ ನೀಡಬೇಕಾಗಲಿದೆ. ಇನ್ನು ಫ್ಲೋರಿಂಗ್‌ ಮಾಡಲು 2.92 ಕೋಟಿ ರು. ವೆಚ್ಚ ಮಾಡಲಾಗಿದ್ದು, ಒಟ್ಟು 11.9 ಕೋಟಿ ರು. ಈಗ ವೆಚ್ಚ ಮಾಡಲಾಗಿದೆ.

ಕಾಂಗ್ರೆಸ್‌ ಪ್ರತಿಭಟನೆಯಲ್ಲಿ ಭಾರಿ ಹೈಡ್ರಾಮಾ: ಸಾಮಾಜಿಕ ಅಂತರ ಮಾಯ!

ಮುಂದಿನ ತಿಂಗಳಿಂದ ಬಾಡಿಗೆ ಮೊತ್ತವಾಗಿ 4.96 ಕೋಟಿ ರು. ಮಾತ್ರ ವೆಚ್ಚ ಮಾಡಲಾಗುವುದು ಎಂದು ವಿವರಿಸಿದರು. ಖರೀದಿ ಮಾಡಿರುವ ಏಳು ವಸ್ತುಗಳನ್ನು ಮರು ಬಳಕೆ ಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ. ಆರೈಕೆ ಕೇಂದ್ರ ಮುಗಿದ ನಂತರ ಸರ್ಕಾರಿ ಆಸ್ಪತ್ರೆಗಳು, ಹಾಸ್ಟೆಲ್‌ಗಳಲ್ಲಿ ಮರುಬಳಕೆ ಮಾಡಲಾಗುವುದು ಎಂದು ತಿಳಿಸಿದರು.

ವೃಥಾ ಆರೋಪ ಸಲ್ಲದು:

ಇಡೀ ವಿಶ್ವವನ್ನೇ ಸೋಂಕು ಕಾಡುತ್ತಿದೆ. ಹಲವಾರು ತಜ್ಞರು ವರದಿಗಳನ್ನು ನೀಡಿದ್ದು, ಡಿಸೆಂಬರ್‌ ಕೊನೆವರೆಗೂ ಸೋಂಕು ಇರಬಹುದು ಹೇಳಿದ್ದಾರೆ. ಹೀಗಾಗಿ, ವಿಪಕ್ಷ ನಾಯಕರು ವೃಥಾ ಆರೋಪದ ಬದಲು ಕೋವಿಡ್‌ ನಿಯಂತ್ರಣ ಕಾರ್ಯದಲ್ಲಿ ಕೈಜೋಡಿಸಿ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಿ ಎಂದು ಆರ್‌. ಅಶೋಕ್‌ ಹೇಳಿದ್ದಾರೆ.