Asianet Suvarna News Asianet Suvarna News

Bengaluru: ನಗರದಲ್ಲಿ ಮತ್ತೆ ಒತ್ತುವರಿ ತೆರವು ಕಾರ್ಯಾಚರಣೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು ನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪುನರ್‌ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಪ್ರಾಮಾಣಿಕವಾಗಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಿದ್ದೆವು. 

Operation to clear encroachments again in Bengaluru Says CM Siddaramaiah gvd
Author
First Published May 24, 2023, 7:55 AM IST

ಬೆಂಗಳೂರು (ಮೇ.24): ಬೆಂಗಳೂರು ನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪುನರ್‌ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಪ್ರಾಮಾಣಿಕವಾಗಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಿದ್ದೆವು. ಶೇ.50ಕ್ಕೂ ಹೆಚ್ಚು ಒತ್ತುವರಿಗಳನ್ನು ಮುಲಾಜಿಲ್ಲದೆ ತೆರವುಗೊಳಿಸಿದ್ದೆವು. ಇದೀಗ ಮತ್ತೆ ಒತ್ತುವರಿ ತೆರವು ಕಾರ್ಯಾಚರಣೆ ಪ್ರಾರಂಭ ಮಾಡುತ್ತೇವೆ ಎಂದು ಹೇಳಿದರು. 

ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬೆಂಗಳೂರು ನಗರದಲ್ಲಿ ಮಳೆಯಿಂದ ಆಗುವ ಹಾನಿ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ನೀರು ನಿಂತ ಕೆಳ ಸೇತುವೆಗಳಲ್ಲಿ ಸಾರ್ವಜನಿಕ ವಾಹನಗಳ ಸಂಚಾರ ನಿರ್ಬಂಧಿಸುವಂತೆ ಸೂಚನೆ ನೀಡಲಾಗಿದೆ. ಜತೆಗೆ ಅವುಗಳನ್ನು ವೈಜ್ಞಾನಿಕವಾಗಿ ಸರಿಪಡಿಸುವಂತೆಯೂ ತಿಳಿಸಲಾಗಿದೆ. ಚರಂಡಿ ಮಾರ್ಗಗಳಲ್ಲಿ ಹೂಳೆತ್ತಿ ಸರಾಗವಾಗಿ ಮಳೆ ನೀರು ಹರಿದು ಹೋಗುವಂತೆ ಮಾಡಬೇಕು. 

ಡಿಸೆಂಬರ್‌ನಲ್ಲಿ ಬೊಮ್ಮಸಂದ್ರಕ್ಕೆ ನಮ್ಮ ಮೆಟ್ರೋ: ಶೇ.80ರಷ್ಟು ಟ್ರ್ಯಾಕ್‌ ಅಳವಡಿಕೆ ಪೂರ್ಣ

ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗದಂತೆ ತಡೆಯಲು ಕ್ರಮ ಕೈಗೊಳ್ಳಬೇಕು. ಇದಕ್ಕೆ ಅಗತ್ಯವಿರುವ ಒತ್ತುವರಿ ತೆರವು, ತಡೆ ಗೋಡೆ ನಿರ್ಮಾಣದಂತಹ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಒತ್ತುವರಿ ತೆರವು ವಿರುದ್ಧ ಯಾರಾರ‍ಯರು ನ್ಯಾಯಾಲಯಕ್ಕೆ ಹೋಗಿದ್ದಾರೋ ಅದರ ಬಗ್ಗೆಯೂ ಪರಿಶೀಲನೆ ನಡೆಸುವಂತೆ ಕಾನೂನು ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ತಿಳಿಸಿದರು. ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ವಿವಿಧ ಸಚಿವರು ಹಾಜರಿದ್ದರು.

ಕೆಟ್ಟ ಸ್ಥಿತಿಯ ಅಂಡರ್‌ ಪಾಸ್‌ ಬಂದ್‌: ನಗರದಲ್ಲಿ ಅತ್ಯಂತ ಕೆಟ್ಟಸ್ಥಿತಿಯಲ್ಲಿರುವ ಅಂಡರ್‌ ಪಾಸ್‌ಗಳನ್ನು ಬಂದ್‌ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿರುವ ರೈಲ್ವೆ ಅಂಡರ್‌ ಪಾಸ್‌ ಸೇರಿ ಒಟ್ಟು 53 ಅಂಡರ್‌ ಪಾಸ್‌ಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥರಿಗೆ ಸೂಚಿಸಲಾಗಿದೆ. 

ಮಳೆ ನೀರು ಹರಿದು ಹೋಗುವ ವ್ಯವಸ್ಥೆ ಇಲ್ಲದ ಅಂಡರ್‌ ಪಾಸ್‌ಗಳಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಅಂಡರ್‌ ಪಾಸ್‌ನಲ್ಲಿ ನೀರು ಸಂಗ್ರಹವಾಗದಂತೆ ಚರಂಡಿ ವ್ಯವಸ್ಥೆ, ಅಂಡರ್‌ ಪಾಸ್‌ನಲ್ಲಿ ನೀರು ಪಂಪ್‌ ಮಾಡುವುದು. ಮಳೆ ನೀರು ಅಂಡರ್‌ ಪಾಸ್‌ಗೆ ಬಂದು ಸೇರದಂತೆ ಕಾಲುವೆ ಮಾಡುವುದು ಸೇರಿದಂತೆ ಇನ್ನಿತರೆ ಕೆಲಸ ಮಾಡಿಸಿ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

20 ಮನೆಗಳಿಗೆ ನೀರು: 45 ನಿಮಿಷದಲ್ಲಿ ಕೆಲವು ಸ್ಥಳದಲ್ಲಿ 50 ಮಿ.ಮೀ ವರೆಗೆ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಮಹಾಲಕ್ಷ್ಮಿ ಲೇಔಟ್‌ನಲ್ಲಿ ಕಾಮಗಾರಿ ಹಿನ್ನೆಲೆಯಲ್ಲಿ ಮಳೆ ನೀರು 15 ಮನೆಗಳಿಗೆ ಹಾಗೂ ಡಿಜೆ ಹಳ್ಳಿಯಲ್ಲಿ ಐದು ಮನೆಗಳಿಗೆ ನೀರು ನುಗ್ಗಿದೆ ಎಂದು ತುಷಾರ್‌ ತಿಳಿಸಿದರು.

ವಿಧಾನಸಭಾ ಕ್ಷೇತ್ರವಾರು 28 ಟೆಂಡರ್‌ ಮಾಡಿ .32 ಕೋಟಿ ವೆಚ್ಚದಲ್ಲಿ ವರ್ಷದಲ್ಲಿ ಮೂರು ಬಾರಿ ರಾಜಕಾಲುವೆ ಹೂಳು ತೆಗೆದು ಸ್ವಚ್ಛಗೊಳಿಸಲಾಗುತ್ತದೆ. ಈಗಾಗಲೇ ಎರಡು ಬಾರಿ ಸ್ವಚ್ಛ ಮಾಡಲಾಗಿದೆ. ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕಳೆದ ಒಂದು ವಾರದಿಂದ ನಡೆಸಲಾಗುತ್ತಿದೆ. ಕೆ.ಆರ್‌.ಪುರ ಹಾಗೂ ಬೊಮ್ಮನಹಳ್ಳಿಯಲ್ಲಿ ತೆರವು ಕಾರ್ಯ ಮಾಡಲಾಗುತ್ತಿದೆ. ಒಟ್ಟು 607 ಸ್ಥಳದಲ್ಲಿ ಒತ್ತುವರಿ ಆಗಿದೆ. 118 ಕಡೆ ರಾಜಕಾಲುವೆ ತೆರವು ಮಾಡಲು ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ. ಉಳಿದ ಕಡೆ ತೆರವು ಕಾರ್ಯಾಚರಣೆ ಮಾಡಲಾಗುವುದು ಎಂದು ತಿಳಿಸಿದರು.

ಜಂತರ್‌ ಮಂತರ್‌ನಲ್ಲಿ ಕುಸ್ತಿಪಟುಗಳ ಹೋರಾಟ ನ್ಯಾಯಯುತ: ನಟ ಕಿಶೋರ್‌ ಬೆಂಬಲ

ರಾಜಕಾಲುವೆಯಲ್ಲಿ ಕಾಮಗಾರಿ ಸ್ಥಗಿತ: ಮಳೆಗಾಲ ಆರಂಭಗೊಂಡಿರುವುದರಿಂದ ರಾಜಕಾಲುವೆಯಲ್ಲಿನ ಕಾಮಗಾರಿ ಸ್ಥಗಿತಗೊಳಿಸಲು ಬಿಬಿಎಂಪಿ ಹಾಗೂ ಬೆಂಗಳೂರು ಜಲಮಂಡಳಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೆಚ್ಚಿನ ಪ್ರಮಾಣದ ಕಟ್ಟಡ ತ್ಯಾಜ್ಯ ಸಂಗ್ರಹ ಆದ ಕಡೆ ತೆರವುಗೊಳಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತುಷಾರ್‌ ವಿವರಿಸಿದರು.

Follow Us:
Download App:
  • android
  • ios