Asianet Suvarna News Asianet Suvarna News

ಧಾರವಾಡ: ಕರ್ನಾಟಕ ವಿಶ್ವದ್ಯಾಲಯ ಕುಲಪತಿ ನೇಮಕಕ್ಕೆ ಜಾತಿಯ ಸೋಂಕು?

ಶೋಧನಾ ಸಮಿತಿ ಸದಸ್ಯರ ಆಕ್ಷೇಪದ ಮಧ್ಯೆಯೂ ಸರ್ಕಾರಕ್ಕೆ ಮೂವರ ಹೆಸರು ಶಿಫಾರಸು| ಮೂವರೂ ಒಂದೇ ಸಮುದಾಯದವರು, ಇವರಿಗಿಂತ ಅರ್ಹರಿದ್ದಾರೆ ಎಂದ ಸದಸ್ಯರು| ಪೆನಲ್‌ನಲ್ಲೂ ಮಹಿಳಾ ಮತ್ತು ಲಿಂಗಾಯತೇತರ ವ್ಯಕ್ತಿಗಳ ಹೆಸರನ್ನು ದಾಖಲಿಸಲು ಹಿಂದೇಟು| 

One Member objected to Shodhana Committee for Appointment of Chancellor of KUD
Author
Bengaluru, First Published Sep 5, 2020, 1:41 PM IST

ಮಲ್ಲಿಕಾರ್ಜುನ ಸಿದ್ದಣ್ಣವರ

ಹುಬ್ಬಳ್ಳಿ(ಸೆ.05): ಕಳೆದ 15 ತಿಂಗಳಿಂದ ಖಾಲಿ ಇರುವ ಧಾರವಾಡದ ಕರ್ನಾಟಕ ವಿಶ್ವದ್ಯಾಲಯದ ಕುಲಪತಿ ಹುದ್ದೆಯ ನೇಮಕಾತಿಗಾಗಿ ‘ಶೋಧನಾ ಸಮಿತಿ’ ಸರ್ಕಾರಕ್ಕೆ ಸಲ್ಲಿಸಿರುವ ಮೂವರು ಅಭ್ಯರ್ಥಿಗಳ ಪಟ್ಟಿಗೆ ಸಮಿತಿಯ ಸದಸ್ಯರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕಾಯಂ ಕುಲಪತಿ ನೇಮಕ ಮತ್ತಷ್ಟು ಗೋಜಲಾಗಿದೆ.

ಶೋಧನಾ ಸಮಿತಿ ಕಳೆದ ಆಗಸ್ಟ್‌ 29 ರಂದು ಉನ್ನತ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಿ ಸಲ್ಲಿಸಿರುವ ಮೂವರು ಅಭ್ಯರ್ಥಿಗಳ ಪಟ್ಟಿ ಸರ್ವಸಮ್ಮತವಾಗಿಲ್ಲ, ಕುಲಪತಿ ನೇಮಕ ಅಧಿನಿಯಮ 14.4ಕ್ಕೆ ವಿರುದ್ಧವಾಗಿದೆ. ಅಧ್ಯಕ್ಷರ ಏಕಪಕ್ಷೀಯ ನಿಲುನಿಂದ ಮತ್ತು ಜಾತಿಯ ಸೋಂಕಿನಿಂದ ಕೂಡಿದೆ ಎಂದು ಸಮಿತಿ ಸದಸ್ಯರೊಬ್ಬರು ಸೆ. 2ರಂದು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ದಾಖಲೆ ಸಮೇತ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿರುವುದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.

ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಅನಂತಪುರ ಕೇಂದ್ರೀಯ ವಿಶ್ವದ್ಯಾಲಯದ ಕುಲಪತಿ ಡಾ.ಎಸ್‌.ಎ.ಕೋರಿ, ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಪೊ›.ಕೆ.ಬಿ.ಗುಡಸಿ, ಕವಿವಿ ವಿಜ್ಞಾನ ವಿಭಾಗದ ಪೊ›ಫೆಸರ್‌ ತಾರಾನಾಥ ಅವರ ಹೆಸರುಗಳನ್ನು ಸಮಿತಿ ಶಿಫಾರಸು ಮಾಡಿದೆ.

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಅತಿಥಿ ಕುಲಪತಿಗಳೇ ಗತಿ!

ಏಕಪಕ್ಷೀಯ ನಿರ್ಧಾರ:

ಈ ಕುಲಪತಿ ನೇಮಕಕ್ಕಾಗಿ ಸರ್ಕಾರ ಬೆಂಗಳೂರು ನಿಮ್ಹಾನ್ಸ್‌ ಕೌನ್ಸೆಲಿಂಗ್‌ ವಿಭಾಗದ ನಿರ್ದೇಶಕ ಡಾ.ಬಿ.ಎನ್‌. ಗಂಗಾಧರ ಅವರ ಅಧ್ಯಕ್ಷತೆಯಲ್ಲಿ ಶೋಧನಾ ಸಮಿತಿ (ಸಚ್‌ರ್‍ ಕಮಿಟಿ) ರಚಿಸಿತ್ತು. ಕುವೆಂಪು ವಿಶ್ರಾಂತ ಕುಲಪತಿ ಪೊ›. ಜೋಗನ್‌ ಶಂಕರ್‌, ಗುಜರಾತ್‌ ವಿವಿ ಕುಲಪತಿ ಡಾ.ಬಿ.ಎಚ್‌. ಚವ್ಹಾಣ, ಯುಜಿಸಿಯ ಡಾ. ಎ. ಚವ್ಹಾಣ ಅವರನ್ನು ಸದಸ್ಯರನ್ನಾಗಿ ನೇಮಿಸಿತ್ತು.

ಕವಿವಿ ಕುಲಪತಿ ಹುದ್ದೆಗೆ ಒಟ್ಟು 97 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಅವುಗಳಲ್ಲಿ ವಿವಿಧ ಕಾರಣಗಳಿಂದ 25 ಅರ್ಜಿಗಳು ತಿರಸ್ಕೃತಗೊಂಡಿವೆ. ಉಳಿದವುಗಳಲ್ಲಿ ಈ ಮೂವರನ್ನು ಶೋಧಿಸಲಾಗಿದೆ. ಕೊರೋನಾ ಹಾವಳಿಯ ಹಿನ್ನೆಲೆಯಲ್ಲಿ ಈ ಸಮಿತಿಗೆæ 6 ತಿಂಗಳ ಅವಧಿಯಲ್ಲಿ ಕೇವಲ ಎರಡು ಬಾರಿ ಮಾತ್ರ ಸಭೆ ಸೇರಲು ಸಾಧ್ಯವಾಗಿದೆ. ಹಾಗಾಗಿ ಆಕಾಂಕ್ಷಿಗಳ ಅರ್ಜಿಗಳನ್ನು ರೋಸ್ಟರ್‌ ಅನುಗುಣವಾಗಿ ವರ್ಗವಾರು ವಿಂಗಡಿಸಿ, ಸೇವಾ ಹಿರಿತನ, ವೃತ್ತಿಯಲ್ಲಿನ ಸಾಧನೆ, ಪುಸ್ತಕ ಪ್ರಕಟಣೆ, ಇಲ್ಲಿತರ ಸೇವೆಯ ಆಧಾರದಲ್ಲಿ ಮೆರಿಟ್‌ ಲಿಸ್ಟ್‌ ತಯಾರಿಸಿ ಸೂಕ್ತರನ್ನು ಶೋಧಿಸುವ ಕೆಲಸ ಆಗಲೇ ಇಲ್ಲವಂತೆ.

ಅಧ್ಯಕ್ಷರು ಸಮಿತಿಯ ಸರ್ವಸಮ್ಮತ ಒಪ್ಪಿಗೆ ಪಡೆಯದೇ ಏಕಪಕ್ಷೀಯವಾಗಿ ಈ ಮೂವರ ಪಟ್ಟಿಅಂತಿಮಗೊಳಿಸಿ ಶಿಫಾರಸು ಮಾಡಲು ಮುಂದಾದಾಗ ಸದಸ್ಯರು ಅದಕ್ಕೆ ಸಹಿ ಮಾಡಲು ನಿರಾಕರಿಸಿದ್ದಾರೆ. ಆದಾಗ್ಯೂ ಅಧ್ಯಕ್ಷರು ಆ ಅರೆಬರೆ ಶಿಫಾರಸನ್ನೇ ಈಗ ಸರ್ಕಾರಕ್ಕೆ ಸಲ್ಲಿಸಿದ್ದರಿಂದ ಸಭೆಯಲ್ಲಿ ಸಹಿ ಮಾಡಲು ಒಪ್ಪದ ಸದಸ್ಯರು ಸರ್ಕಾರಕ್ಕೆ ಪತ್ರ ಬರೆದು ಆಕ್ಷೇಪಿಸಿದ್ದಾರೆ ಎನ್ನಲಾಗಿದೆ.

ಧಾರವಾಡ: ಕಾಯಂ ಕುಲಪತಿಗಳಿಲ್ಲದೇ ಸೊರಗುತ್ತಿದೆ ಕರ್ನಾಟಕ ವಿವಿ!

ಮೂವರದೂ ಒಂದೇ ಸಮುದಾಯ:

ಈ ಶಿಫಾರಸಿಗೆ ಒಪ್ಪದಿರಲು ಮತ್ತು ಆಕ್ಷೇಪಿಸಲು ಪ್ರಮುಖ ಕಾರಣ ಮೂವರೂ ಅಭ್ಯರ್ಥಿಗಳು ಒಂದೇ ಸಮುದಾಯ (ಲಿಂಗಾಯತ)ಕ್ಕೆ ಸೇರಿದವರು ಎನ್ನುವುದು. ಕುಲಪತಿ ನೇಮಕ ಅಧಿನಿಯಮ 14.4ರ ಪ್ರಕಾರ ಅರ್ಹತೆ, ಸಮಾನತೆ, ಸಮದರ್ಶಿತ್ವ ಮತ್ತು ಸಾಮಾಜಿಕ ನ್ಯಾಯದ ಅಡಿಯಲ್ಲಿ ನೇಮಕಾತಿ ಆಗಬೇಕು. ಅದು ಇಲ್ಲಿ ಆಗಿಲ್ಲ, ಯಾವುದೋ ಒತ್ತಡಕ್ಕೆ ಮಣಿದು ಇಲ್ಲಾ ಇನ್ನಾವುದೋ ಕಾರಣಕ್ಕೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಈ ಶಿಫಾರಸು ಮಾಡಲಾಗಿದೆ ಎನ್ನುವುದು ಸದಸ್ಯರ ಆಕ್ಷೇಪ.

ಲಿಂಗಾಯತರಲ್ಲೇ ಸಾಕಷ್ಟುಜನ ಮಹಿಳೆಯರು, ಪುರುಷರು ಇವರಿಗಿಂತ ಹೆಚ್ಚು ಅರ್ಹತೆ, ಹಿರಿತನ, ಸಾಧನೆ ಮಾಡಿದವರು ಇದ್ದರೂ ಅವರನ್ನು ಕಡೆಗಣಿಸಿ 10 ವರ್ಷಗಳ ಪೊ›ಫೆಸರ್‌ ಹುದ್ದೆ ನಿರ್ವಹಿಸದ ಅನರ್ಹರೂ ಸೇರಿದಂತೆ ಮೂವರನ್ನು ಕುಲಪತಿ ಹುದ್ದೆಗೆ ಶಿಫಾರಸು ಮಾಡಲಾಗಿದೆ. ಅಲ್ಲದೇ ಈ ಹುದ್ದೆಗೆ ಅರ್ಹರಾದ ಎಷ್ಟೋಜನ ಬ್ರಾಹ್ಮಣ, ಒಕ್ಕಲಿಗ, ಹಿಂದುಳಿದ,, ದಲಿತರು, ಅಲ್ಪಸಂಖ್ಯಾತ ಸಮುದಾಯದ ಮಳೆಯರು, ಪುರುಷರು ಇದ್ದಾಗ್ಯೂ ಅವರನ್ನೆಲ್ಲ ಸಾರಾಸಗಟಾಗಿ ತಿರಸ್ಕರಿಸಿ ಸ್ವಜನಪಕ್ಷಪಾತದಿಂದ ಈ ಪಟ್ಟಿತಯಾರಿಸಿ, ಶಿಫಾರಸು ಮಾಡಲಾಗಿದೆ. ಇದೆಲ್ಲವನ್ನೂ ಕೂಲಂಕುಷವಾಗಿ ಗಮನಿಸಿದರೆ ಕರ್ನಾಟಕ ವಿಶ್ವದ್ಯಾಲಯವನ್ನು ಕೊರೋನಾಕ್ಕಿಂತ ಜಾತಿಯ ಸೋಂಕು ಹೆಚ್ಚು ಬಾಧಿಸುತ್ತಿದೆ ಎಂದು ಆಕ್ಷೇಪಿಸಿದ ಸದಸ್ಯರು ತಮ್ಮ ಪತ್ರದಲ್ಲಿ ವಿಷಾದಿಸಿದ್ದಾರೆ.

ಕನಿಷ್ಠ ಪಕ್ಷ ಪೆನಲ್‌ನಲ್ಲೂ ಮಹಿಳಾ ಮತ್ತು ಲಿಂಗಾಯತೇತರ ವ್ಯಕ್ತಿಗಳ ಹೆಸರನ್ನು ದಾಖಲಿಸಲು ಹಿಂದೇಟು ಹಾಕಲಾಗಿದೆ. ತಾರತಮ್ಯದಿಂದ ಕೂಡಿದ ಈ ಪಟ್ಟಿಯನ್ನು ಒಪ್ಪಿಕೊಂಡರೆ ಅರ್ಹ ಗೌರವಾ​ನ್ವಿತರಿಗೆ ಅನ್ಯಾಯ ಮಾಡಿದಂತೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಬೆನ್ನು ತೋರಿಸಿದಂತಾಗಲಿದೆ ಎಂದು ಆಕ್ಷೇಪಿಸಿದವರ ಕಳಕಳಿ.

ಕುಲಪತಿ ಹುದ್ದೆಗೆ ಕುಲಪತಿ!

ಕುಲಪತಿಯಾಗಲು 10 ವರ್ಷಗಳ ಕಾಲ ಪೊಫೆಸರ್‌ ಹುದ್ದೆ ನಿರ್ವಹಿಸಿರಬೇಕು ಎನ್ನುವುದು ಕಡ್ಡಾಯ. ಆದರೆ ಹಿಂದೆ ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬರೀ ಉಪನ್ಯಾಸಕರಾಗಿದ್ದ (ಪ್ರಭಾರ ಪ್ರಾಚಾರ್ಯ) ಡಾ.ಎಸ್‌.ಎ. ಕೋರಿ ಅನಂತಪುರ ಕೇಂದ್ರೀಯ ಕುಲಪತಿ! ಆದಾಗ್ಯೂ ಅರವನ್ನೇ ಇಲ್ಲಿಗೆ ತರಬೇಕೆನ್ನುವ ಲಾಬಿ ಶುರುವಾಗಿರುವುದು ಆಕಾಂಕ್ಷಿಗಳನ್ನು ಹುಬ್ಬೇರಿಸುವಂತೆ ಮಾಡಿದೆ.
 

Follow Us:
Download App:
  • android
  • ios