ಇತ್ತೀಚಿಗೆ ಸುರಿದ ಮಳೆಯಿಂದ ನೆನೆದು ಶಿಥಿಲಗೊಂಡಿದ್ದ ಮನೆಯೊಂದು ಕುಸಿದು ವೃದ್ಧೆಯೊಬ್ಬರು ಸಾವನ್ನಪ್ಪಿದ್ದು, ಮಣ್ಣಿನಡಿ ಸಿಲುಕಿದ್ದ ಇನ್ನಿಬ್ಬರನ್ನು ಗ್ರಾಮಸ್ಥರು ರಕ್ಷಿಸಿದ ಘಟನೆ ತಾಲೂಕಿನ ಮತ್ತೂರು ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.

ಕೊಪ್ಪಳ (ಅ.6) : ಇತ್ತೀಚಿಗೆ ಸುರಿದ ಮಳೆಯಿಂದ ನೆನೆದು ಶಿಥಿಲಗೊಂಡಿದ್ದ ಮನೆಯೊಂದು ಕುಸಿದು ವೃದ್ಧೆಯೊಬ್ಬರು ಸಾವನ್ನಪ್ಪಿದ್ದು, ಮಣ್ಣಿನಡಿ ಸಿಲುಕಿದ್ದ ಇನ್ನಿಬ್ಬರನ್ನು ಗ್ರಾಮಸ್ಥರು ರಕ್ಷಿಸಿದ ಘಟನೆ ತಾಲೂಕಿನ ಮತ್ತೂರು ಗ್ರಾಮದಲ್ಲಿ ಬುಧವಾರ ಸಂಭವಿಸಿದೆ. ಗಾಯಗೊಂಡಿರುವ ಇಬ್ಬರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಮೃತ ವೃದ್ಧೆಯನ್ನು ಬಸಮ್ಮ(65) ಎಂದು ಗುರುತಿಸಲಾಗಿದೆ. ಗಾಯಗೊಂಡಿದ್ದ ಅವಳ ಪತಿ ಶಿವನಗೌಡ ಹಾಗೂ ಶಂಕ್ರಮ್ಮ ಎಂಬವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇವರು ಹಳೇ ಮನೆಯಲ್ಲಿ ವಾಸ ಮಾಡುತ್ತಿದ್ದರು. ಇತ್ತೀಚೆಗೆ ನಿರಂತರ ಸುರಿದ ಮಳೆಯಿಂದಾಗಿ ಮನೆ ಗೋಡೆ ನೆನೆದಿತ್ತು. ಬುಧವಾರ ದಿಢೀರ್‌ ಚಾವಣಿ ಕುಸಿದಿದೆ. ಇದರಿಂದ ಮನೆಯಲ್ಲಿಯೇ ಇದ್ದ ಹಿರಿಯರು ಮಣ್ಣಿನಲ್ಲಿ ಸಿಲುಕಿದ್ದಾರೆ. ಬಸಮ್ಮ ಎಂಬವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡು ಮಣ್ಣಿನಲ್ಲಿಯೇ ಸಿಲುಕಿದ್ದರು. ಇದನ್ನು ನೋಡಿದ ಅಕ್ಕಪಕ್ಕದ ಜನರು ಅವರನ್ನು ಮಣ್ಣಿನಿಂದ ಹೊರತೆಗೆದು ತಕ್ಷಣ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಿದರು.

ಘಟನೆಯ ಮಾಹಿತಿ ತಿಳಿದ ಸಂಸದ ಸಂಗಣ್ಣ ಕರಡಿ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಗ್ರಾಮಕ್ಕೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಅಳವಂಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

ಕೊಪ್ಪಳ: ಭಾರೀ ಮಳೆ, ಹಳ್ಳದಲ್ಲಿ ಕೊಚ್ಚಿ ಹೋದ ನಾಲ್ವರು ಮಹಿಳೆಯರು..!