ಮಂಗಳೂರು: ಐಟಿ ದಾಳಿಗೆ ಫುಟ್ಬಾಲ್ ಪಂದ್ಯ ಹೆಸ್ರಲ್ಲಿ 60 ಕಾರ್ಬುಕ್..!
ಫುಟ್ಬಾಲ್ ಪಂದ್ಯಾವಳಿ ಹೆಸರಲ್ಲಿ ಕಾರ್ಬುಕ್| ಇಂಟರ್ಸ್ಟೇಟ್ ಫುಟ್ಬಾಲ್ ಚಾಂಪಿಯನ್ಶಿಪ್ ಸ್ಟಿಕ್ಕರ್| ಮೊನ್ನೆ ರಾತ್ರಿಯೇ ಮಂಗಳೂರಿಗೆ ಬಂದಿದ್ದ 250ಕ್ಕೂ ಹೆಚ್ಚು ಐಟಿ ಅಧಿಕಾರಿಗಳು| ದಾಳಿಗೆಂದೇ ಒಟ್ಟು 60 ಇನ್ನೋವಾ ಕಾರುಗಳ ಬಳಕೆ| ಕಾರು ಚಾಲಕರಿಗೆ ಫುಟ್ಬಾಲ್ ಆಟಗಾರರು ಬರಲಿದ್ದಾರೆ, ಸಿದ್ಧವಿರಿ ಎಂದು ಸೂಚನೆ|
ಮಂಗಳೂರು(ಫೆ.18): ದಕ್ಷಿಣ ಕನ್ನಡದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮೇಲೆ ಬೀಸಲು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಫುಟ್ಬಾಲ್ ಚಾಂಪಿಯನ್ಶಿಪ್ ಸೋಗಿನಲ್ಲಿ ಕಾರ್ಬುಕ್ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ.
ಯಾವ್ಯಾವ ಸ್ಥಳಗಳಿಗೆ ದಾಳಿ ಮಾಡಬೇಕು ಎಂಬ ಕುರಿತು ಮೊದಲೇ ಯೋಜನೆ ಹಾಕಿಕೊಂಡಿದ್ದ ಆದಾಯ ತೆರಿಗೆ ಇಲಾಖೆಯು ಮಂಗಳವಾರ ಸಂಜೆಯೇ 250ಕ್ಕೂ ಅಧಿಕ ಐಟಿ ಅಧಿಕಾರಿಗಳು, ಸಿಬ್ಬಂದಿಯನ್ನು ಕಳುಹಿಸಿಕೊಟ್ಟಿತ್ತು. ದಾಳಿ ಕುರಿತು ಯಾರಿಗೂ ಸಣ್ಣ ಸುಳಿವು ಕೂಡ ಸಿಗಬಾರದು ಎನ್ನುವ ಕಾರಣಕ್ಕೆ ಕೇರಳದಲ್ಲಿ ಅಂತಾರಾಜ್ಯ ಫುಟ್ಬಾಲ್ ಚಾಂಪಿಯನ್ಶಿಪ್ನಲ್ಲಿ ಪಾಲ್ಗೊಳ್ಳಬೇಕಿದೆ ಎಂದು ಹೇಳಿ ಸುಮಾರು 60 ಇನ್ನೋವಾಗಳನ್ನು ಟ್ರಾವೆಲ್ ಏಜೆನ್ಸಿಯೊಂದರ ಮೂಲಕ ಬುಕ್ ಮಾಡಲಾಗಿತ್ತು. ಅದರಂತೆ ಮಂಗಳವಾರ ರಾತ್ರಿಯೇ ಬೆಳ್ಳಂಬೆಳಗ್ಗೆ ಆಟಗಾರರು ಬರಲಿದ್ದಾರೆ, ಸಿದ್ಧವಾಗಿರಿ ಎಂಬ ಸೂಚನೆಯನ್ನು ಡ್ರೈವರ್ಗಳಿಗೆ ನೀಡಲಾಗಿತ್ತು.
ಅಧಿಕಾರಿಗಳ ಸೂಚನೆಯಂತೆ ಇನ್ನೋವಾ ಕಾರುಗಳು ಮುಂಜಾನೆ ಮೊದಲೇ ಸೂಚಿಸಿದ್ದ ಸ್ಥಳಗಳಿಗೆ ಬಂದಿದ್ದವು. ಕಾರು ಹತ್ತುವ ಮುನ್ನ ಅಧಿಕಾರಿಗಳು ಕಾರುಗಳಿಗೆ ‘ಇಂಟರ್ಸ್ಟೇಟ್ ಫುಟ್ಬಾಲ್ ಚಾಂಪಿಯನ್ಶಿಪ್’ ಎಂಬ ಸ್ಟಿಕ್ಕರ್ ಅನ್ನೂ ಅಂಟಿಸಿದ್ದರು.
ರಾಜ್ಯಾದ್ಯಂತ ಮೆಡಿಕಲ್ ಕಾಲೇಜುಗಳಿಗೆ ಐಟಿ ಶಾಕ್!
ಈ ಹಿಂದೆ ಕೊಡಗಿನಲ್ಲಿ ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ದಾಳಿ ನಡೆಸುವ ವೇಳೆಯೂ ಅಧಿಕಾರಿಗಳು ಇದೇ ರೀತಿಯ ತಂತ್ರ ಬಳಸಿದ್ದರು. ಮೈಸೂರಿನಲ್ಲಿ ಮದುವೆ ಹೆಸರಲ್ಲಿ ಕಾರ್ ಬುಕ್ ಮಾಡಿದ್ದ ಅಧಿಕಾರಿಗಳು ನಂತರ ಬೆಳ್ಳಂಬೆಳಗ್ಗೆ ರಶ್ಮಿಕಾ ಮನೆಗೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದರು.
ಉದ್ಯಮಿ ಶ್ರೀನಿವಾಸ ರಾವ್ ತಂದೆ ಅಸ್ವಸ್ಥ
ಮಂಗಳೂರಿನ ಪ್ರಸಿದ್ಧ ಉದ್ಯಮಿಗಳಲ್ಲೊಬ್ಬರಾದ ಶ್ರೀನಿವಾಸ ಸಮೂಹ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಮಾಲೀಕ ಶ್ರೀನಿವಾಸ ರಾವ್ ಅವರ ವೃದ್ಧ ತಂದೆ ಅಸ್ವಸ್ಥರಾದ ಘಟನೆಯೂ ನಡೆಯಿತು. ಶ್ರೀನಿವಾಸ ರಾವ್ ಅವರ ಜೈಲ್ ರಸ್ತೆಯಲ್ಲಿರುವ ಬಂಗಲೆ ಮೇಲೆ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಅವರ ವೃದ್ಧ ತಂದೆ ರಾಘವೇಂದ್ರ ರಾವ್ ಮನೆಯಲ್ಲೇ ಇದ್ದರು. ಐಟಿ ದಾಳಿ ವಿಚಾರ ತಿಳಿಯುತ್ತಿದ್ದಂತೆ ದಿಢೀರ್ ಅಸ್ವಸ್ಥಗೊಂಡ ಅವರನ್ನು ತಕ್ಷಣ ಆಂಬ್ಯುಲೆನ್ಸ್ನಲ್ಲಿ ಆಕ್ಸಿಜನ್ ತರಿಸಿ ಚಿಕಿತ್ಸೆ ನೀಡಲಾಯಿತು. ಈ ಘಟನೆಯಿಂದ ಐಟಿ ಅಧಿಕಾರಿಗಳು ಕೆಲಕಾಲ ವಿಚಲಿತರಾದರೂ ನಂತರ ರಾಘವೇಂದ್ರ ರಾವ್ ಚೇತರಿಸಿಕೊಂಡ ಬಳಿಕ ಕಾರ್ಯಾಚರಣೆ ಮುಂದುವರಿಸಿದರು.