ಕರಾವಳಿ ನಿಯಂತ್ರಣ ವಲಯ ಮಾನದಂಡ ಸಡಿಲಿಕೆಗೆ ಕೇಂದ್ರ ಸರ್ಕಾರ ಸಮ್ಮತಿಸಿರುವುದರಿಂದ ಕರಾವಳಿಯುದ್ದಕ್ಕೂ ಪ್ರವಾಸೋದ್ಯಮ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಇರುವ ಅಡ್ಡಿ ನಿವಾರಣೆಯಾಗಲಿದೆ.

ವಸಂತಕುಮಾರ ಕತಗಾಲ

ಕಾರವಾರ(ಫೆ.18) : ಕರಾವಳಿ ನಿಯಂತ್ರಣ ವಲಯ ಮಾನದಂಡ ಸಡಿಲಿಕೆಗೆ ಕೇಂದ್ರ ಸರ್ಕಾರ ಸಮ್ಮತಿಸಿರುವುದರಿಂದ ಕರಾವಳಿಯುದ್ದಕ್ಕೂ ಪ್ರವಾಸೋದ್ಯಮ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಇರುವ ಅಡ್ಡಿ ನಿವಾರಣೆಯಾಗಲಿದೆ.

ನಿರೀಕ್ಷೆಯಂತೆ ಕುಮಟಾದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ(Kumata Super Specialty Hospital) ಘೋಷಣೆಯಾಗಿದೆ. ಶಿರಸಿಯಲ್ಲಿ ರಾಜ್ಯದ ಪ್ರಥಮ ಪರಿಸರ ವಿಶ್ವವಿದ್ಯಾಲಯ(sirasi Environmental University) ತಲೆ ಎತ್ತಲಿದೆ. ಈಗಾಗಲೆ ಸರ್ಕಾರ ಘೋಷಣೆ ಮಾಡಿದ ಹಲವು ಯೋಜನೆಗಳಿಗೆ ಬಜೆಟ್‌ನಲ್ಲಿ ಅಧಿಕೃತ ಮುದ್ರೆ ಒತ್ತಲಾಗಿದೆ.

ಸೋಲು ಖಚಿತವಾದಾಗ ಬಿಜೆಪಿಯಿಂದ ಕೋಮು ಗಲಭೆ ಸೃಷ್ಟಿ: ಬಿ.ಕೆ.ಹರಿಪ್ರಸಾದ್‌

ಕಾಲು ಸಂಕ ನಿರ್ಮಣ:

ಕಾರವಾರದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ ಕಾಮಗಾರಿ ಈ ವರ್ಷವೇ ಮುಕ್ತಾಯಗೊಳ್ಳಲಿದೆ. ಕಾರವಾರ ಎಂಜಿನಿಯರಿಂಗ್‌ ಕಾಲೇಜ್‌ ಕೆಐಟಿ ಮಾದರಿಯಲ್ಲಿ ಉನ್ನತೀಕರಣವಾಗಲಿದೆ. ಮಲೆನಾಡಿನಲ್ಲಿ ಕಾಲು ಸಂಕಗಳ ನಿರ್ಮಾಣಕ್ಕಾಗಿ .250 ಕೋಟಿ ಅನುದಾನ ಒದಗಿಸಲಾಗಿದೆ.

ಅಂಕೋಲಾದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಕೇಣಿ ಹಾಗೂ ಪಾವಿನಕುರ್ವೆಯಲ್ಲಿ ಬಂದರುಗಳ ಅಭಿವೃದ್ಧಿ, ಮಾಜಾಳಿ ಬಂದರು ನಿರ್ಮಾಣಕ್ಕೆ .275 ಕೋಟಿಯ ವಿಸ್ತೃತ ಯೋಜನಾ ವರದಿ ತಯಾರಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಶಿರಸಿಯಲ್ಲಿ ಪರಿಸರ ವಿಶ್ವವಿದ್ಯಾಲಯ ಈಗಾಗಲೆ ಘೋಷಿಸಲಾಗಿದ್ದು, ಬಜೆಟ್‌ನಲ್ಲಿ ಸೇರ್ಪಡೆ ಮಾಡಲಾಗಿದೆ. ಹೊನ್ನಾವರದಲ್ಲಿ ಚೆನ್ನಭೈರಾದೇವಿ ಪಾರ್ಕ್ ನಿರ್ಮಾಣ, ಶಿರಸಿಯಲ್ಲಿ ನಾರಾಯಣ ಗುರು ವಸತಿ ಶಾಲೆ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಮೀನುಗಾರ, ರೈತರಿಗೆ ಸಹಾಯಧನ:

ವನ್ಯಜೀವಿಗಳಿಂದ ಪ್ರಾಣ ಹಾನಿಯಾದಲ್ಲಿ ಪರಿಹಾರ ಈಗ .7.50 ಲಕ್ಷ ಇರುವುದನ್ನು .15 ಲಕ್ಷಕ್ಕೆ ಏರಿಸಲಾಗಿದೆ. 12,175 ಮೀನುಗಾರರಿಗೆ ಕಿಸಾನ್‌ ಕಾರ್ಡ್‌ ವಿತರಿಸಲು ಕ್ರಮ, ವಸತಿ ರಹಿತ ಮೀನುಗಾರರಿಗೆ 10 ಸಾವಿರ ಮನೆಗಳ ನಿರ್ಮಾಣ, ಸೀಮೆಎಣ್ಣೆಯಿಂದ ಮಾಲಿನ್ಯ ತಪ್ಪಿಸಲು ಪೆಟ್ರೋಲ್‌, ಡೀಸೆಲ್‌ ಆಧಾರಿತ ಮೋಟರ್‌ ಎಂಜಿನ್‌ ಅಳವಡಿಸಲು .50 ಸಾವಿರ ಸಹಾಯಧನ, ಯಾಂತ್ರೀಕೃತ ದೋಣಿಯಲ್ಲಿ ಜಿಪಿಎಸ್‌ ಸಂವಹನ ವ್ಯವಸ್ಥೆ ಬಗ್ಗೆ ಪ್ರಸ್ತಾಪಿಸಲಾಗಿದೆ. ಇದು ಮೀನುಗಾರರಿಗೆ ಅನುಕೂಲ ಉಂಟಾಗಲಿದೆ.

ಕೋಡ್ಕಣಿಯಲ್ಲಿ ಕೈಗಾರಿಕೆ ಸ್ಥಾಪನೆ:

ಜನಸಂಚಾರ ಹಾಗೂ ವಾಣಿಜ್ಯ ಸಂಚಾರಕ್ಕಾಗಿ ಮಂಗಳೂರ- ಕಾರವಾರ- ಗೋವಾ- ಮುಂಬೈ ಜಲಮಾರ್ಗವನ್ನು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲಾಗುವುದು.

ಕುಮಟಾ ತಾಲೂಕಿನ ಕೋಡ್ಕಣಿಯಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆ, ದಾಂಡೇಲಿ ಹಾಗೂ ಶಿರಸಿಯಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳ ನಿರ್ಮಾಣ, ಗಡಿ ಪ್ರದೇಶದ ರಸ್ತೆಗಳ ಸುಧಾರಣೆ, ಕನ್ನಡ ಭಾಷೆ, ಕಲೆ, ಶಿಕ್ಷಣ ಹಾಗೂ ಸಂಸ್ಕೃತಿ ವಿಕಾಸಕ್ಕೆ .150 ಕೋಟಿ ನೀಡುವುದಾಗಿ ಮುಖ್ಯಮಂತ್ರಿ ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಬನವಾಸಿ ಮಧುಕೇಶ್ವರ ದೇವಾಲಯ ಸಂಕೀರ್ಣ ಸಮಗ್ರ ಅಭಿವೃದ್ಧಿಗೆ ಅನುದಾನ, ಸೊಪ್ಪಿನಬೆಟ್ಟಸರ್ಕಾರಿ ಜಮೀನು ಮಂಜೂರಿಗಾಗಿ ನೀತಿ ರೂಪಿಸಲು ಸಮಿತಿ ರಚನೆ ಮಾಡುವುದಾಗಿ ಪ್ರಸ್ತಾಪಿಸಲಾಗಿದೆ.

ಇದರ ಜೊತೆಗೆ ರೈತರು, ಮೀನುಗಾರಿಕೆ, ಕೃಷಿ, ಆರೋಗ್ಯ, ಶಿಕ್ಷಣ ಮತ್ತಿತರ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳು ಜಿಲ್ಲೆಗೂ ಅನ್ವಯವಾಗಲಿದೆ.

ನಿರೀಕ್ಷಿತ ಶಿರಸಿ ಪ್ರತ್ಯೇಕ ಜಿಲ್ಲೆ ಘೋಷಣೆ ಹುಸಿ :

ನಿರೀಕ್ಷಣೆಯಲ್ಲಿದ್ದ ಶಿರಸಿ ಪ್ರತ್ಯೇಕ ಜಿಲ್ಲೆ ಘೋಷಣೆ ಆಗಿಲ್ಲ. ಈಗಾಗಲೇ ಘೋಷಣೆ ಆದ ಶಿರಸಿ ವಿಶ್ವ ವಿದ್ಯಾಲಯಕ್ಕೆ ಅಧಿಕೃತ ಮೊಹರು ಬಿದ್ದ ಖುಷಿ ಇದæ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗಷ್ಟೇ ಶಿರಸಿಗೆ ಆಗಮಿಸಿದ್ದರು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸನ್ಮಾನದ ವೇಳೆ ಸಾರ್ವಜನಿಕರಿಂದ ಅಹವಾಲುಗಳು, ಅರ್ಜಿಯ ಸುರಿಮಳೆಯೇ ಆಗಿತ್ತು. ಇದರಲ್ಲಿ ಹೆಚ್ಚಿನವುಗಳಲ್ಲಿ ಶಿರಸಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಕೆಯ ಬೇಡಿಕೆಗಳೇ ಇದ್ದವು. ಇಲ್ಲಿಯ ಜನತೆಯ ಬೇಡಿಕೆ ಮುಖ್ಯಮಂತ್ರಿಗೆ ನೇರವಾಗಿ ತಲುಪಿದ್ದರಿಂದ ಬಜೆಟ್‌ನಲ್ಲಿ ಹೊಸ ಜಿಲ್ಲೆಯ ಸಿಹಿ ಸುದ್ದಿ ಸಿಗಬಹುದು ಎಂದು ನಿರೀಕ್ಷಿಸಿದ್ದರು.

ಆದಾಗ್ಯೂ, ಶಿರಸಿಗೆ ಪರಿಸರ ವಿಶ್ವ ವಿದ್ಯಾಲಯ ಘೋಷಣೆ ಆಗಿದ್ದು, ಜನತೆಗೆ ಸ್ವಲ್ಪ ಸಮಾಧಾನ ತಂದಿದೆ.

ಶಿರಸಿ ಅರಣ್ಯ ಸಂಪತ್ತು, ಪರಿಸರ ಮಧ್ಯೆ ಇರುವ ನಗರವಾಗಿದೆ. ಇಲ್ಲಿ ಪರಿಸರ ಪ್ರಿಯರು, ಹೋರಾಟಗಾರರೂ ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ. ಹೀಗಾಗಿ, ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಪರಿಸರ ವಿಶ್ವ ವಿದ್ಯಾಲಯ ಸ್ಥಾಪನೆಗೆ ಸರ್ಕಾರ ಮುಂದಾಗಿರುವುದು ಹರ್ಷಕ್ಕೆ ಕಾರಣವಾಗಿದೆ.

ಶಿರಸಿಗೆ ಬಂತು ಮೊದಲ ಐಟಿ ಕಂಪನಿ ಆಲ್ಟ್‌ ಡಿಜಿಟಲ್‌ ಟೆಕ್ನಾಲಜಿ!

ಬನವಾಸಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಳೆದ ಕೆಲ ವರ್ಷಗಳಿಂದ ಹಣ ಬಿಡುಗಡೆ ಆಗದೇ, ಪ್ರಾಧಿಕಾರ ಹಲ್ಲಿಲ್ಲದ ಹುಲಿಯಂತಾಗಿತ್ತು. ರಾಜ್ಯ ಸರ್ಕಾರ ಈ ವರ್ಷ ಅನುದಾನದ ಮೊತ್ತ ತಿಳಿಸದಿದ್ದರೂ, ಬನವಾಸಿ ಮಧುಕೇಶ್ವರ ದೇವಾಲಯಗಳ ಸಂಕೀರ್ಣ ಅಭಿವೃದ್ಧಿ ಕುರಿತು ಪ್ರಸ್ತಾಪಿಸಲಾಗಿದೆ. ಹಲವು ವರ್ಷಗಳಿಂದ ಮಳೆಗಾಲದಲ್ಲಿ ಸೋರುವ ಮಧುಕೇಶ್ವರ ದೇವಾಲಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಇದರ ಜೊತೆ ಅನಾದಿ ಕಾಲದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಆದಿ ಮಧುಕೇಶ್ವರ ದೇವಾಲಯ ಸಹ ಅಭಿವೃದ್ಧಿಗೊಳ್ಳಬಹುದು ಎಂಬ ಆಶಯ ಮೂಡಿದೆ.

ಆರ್‌ಟಿಒಗೆ ಅಭಯಹಸ್ತ:

ಇನ್ನು, ನಗರದ ಪ್ರಾದೇಶಿಕ ಸಾರಿಗೆ ಇಲಾಖೆಗೆ ಬಜೆಟ್‌ನಲ್ಲಿ ಅಭಯಹಸ್ತ ಸಿಕ್ಕಿದೆ. ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಈ ಕಚೇರಿಗೆ ಆಧುನಿಕ ಸ್ಪರ್ಷ ಸಿಗಲಿರುವುದು ಸ್ಥಳೀಯರ ಹರ್ಷಕ್ಕೆ ಕಾರಣವಾಗಿದೆ.