ಪಾಲಿಕೆಯಿಂದ ತೆರವು ಮಾಡಿದರೆ ಹೆಚ್ಚಿನ ಹಾನಿ ಆತಂಕ, ಅಧಿಕಾರಿಗಳು ಮಾರ್ಕ್ ಮಾಡಿದ್ದ ಜಾಗ ತೆರವು

ಬೆಂಗಳೂರು(ಸೆ.17): ಯಲಹಂಕ ಹಾಗೂ ದಾಸರಹಳ್ಳಿ ವಲಯದಲ್ಲಿ ಶುಕ್ರವಾರವೂ ಒತ್ತುವರಿ ಕಾರ್ಯಾಚರಣೆ ಮುಂದುವರಿಸಲಾಗಿದೆ. ಆದರೆ, ಮಹದೇವಪುರ ವಲಯದಲ್ಲಿ ತೆರವು ಕಾರ್ಯ ನಡೆಸದೇ ಕೇವಲ ಸರ್ವೇ ಕಾರ್ಯ ನಡೆಸಲಾಗಿದೆ. ದಾಸರಹಳ್ಳಿ ವಲಯ ನೆಲಗದರನಹಳ್ಳಿ ರಸ್ತೆ ರುಕ್ಮಿಣಿ ನಗರದಲ್ಲಿ ಕಳೆದ ಗುರುವಾರ 11 ಕಡೆ ಒತ್ತುವರಿ ತೆರವು ಮಾಡಲಾಗಿತ್ತು, ಶುಕ್ರವಾರವೂ ಅದೇ ಸ್ಥಳದಲ್ಲಿ ತೆರವು ಕಾರ್ಯಾಚರಣೆ ನಡೆಸಿ ರಾಜಕಾಲುವೆಯ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಯಿತು. ಬಿಬಿಎಂಪಿಯ ಜೆಸಿಬಿ ಮತ್ತು ಹಿಟಾಚಿ ಯಂತ್ರಗಳು ಕಟ್ಟಡ ಅಥವಾ ಗೋಡೆ ತೆರವು ಮಾಡುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಆಗಲಿದೆ ಎಂಬ ಕಾರಣಕ್ಕೆ ಶುಕ್ರವಾರ ಮಾಲಿಕರೇ ಸರ್ವೇ ಅಧಿಕಾರಿಗಳು ಗುರುತಿಸಿದ ಮಾರ್ಕಿಂಗ್‌ಗೆ ಅನುಗುಣವಾಗಿ ಸ್ವಯಂ ತೆರವು ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಲಹಂಕ ವಲಯ ಕುವೆಂಪುನಗರ ವಾರ್ಡ್‌ ಸಿಂಗಾಪುರ ಲೇಔಟ್‌ನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಸಲಾಗಿದ್ದು, ಲ್ಯಾಂಡ್‌ ಮಾರ್ಕ್ ಅಪಾರ್ಟ್‌ಮೆಂಟ್‌ನಲ್ಲಿ ಬಾಕಿಯಿದ್ದ ಕೆಲಸವನ್ನು ಪೂರ್ಣಗೊಳಿಸಲಾಗಿದೆ.

Lake Encroachment: ಅಧಿವೇಶನದಲ್ಲೇ ಕೆರೆ ನುಂಗಣ್ಣರ ಪಟ್ಟಿ ಬಿಡುಗಡೆ ಮಾಡುವೆ: ಸಚಿವ ಅಶೋಕ್‌

ಮಹದೇವಪುರದಲ್ಲಿ ಪಾಲಿಕೆ ಸರ್ವೇ ಮಾತ್ರ

ಮಹದೇವಪುರ ವಲಯದಲ್ಲಿ ಭೂಮಾಪಕ ಇಲಾಖೆ ಹಾಗೂ ಕಂದಾಯ ಇಲಾಖೆಯ ತಹಸೀಲ್ದಾರ್‌ ನೇತೃತ್ವದಲ್ಲಿ ವಾಗ್ದೇವಿ ಮುನ್ನೇಕೊಳಲು, ಕಸವನಹಳ್ಳಿ, ದೊಡ್ಡಕನ್ನಹಳ್ಳಿಯಲ್ಲಿ ಬರುವ ಎ.ಬಿ.ಕೆ ವಿಲೇಜ್‌, ಪ್ರೆಸ್ಟೀಜ್‌ ಟೆಕ್‌ ಪಾರ್ಕ್, ವಿಪ್ರೋ, ಸನ್ನೀ ಬ್ರೂಕ್ಸ್‌, ಬೆಳತ್ತೂರು, ಸಾದರಮಂಗಲ, ಬಿಲ್ಲಿನೇನಿ ಸಾಸ ಅಪಾರ್ಚ್‌ಮೆಂಟ್‌ನ ಒಳ ಪ್ರದೇಶ, ಸಾಯಿ ಗಾರ್ಡನ್‌ ಬಡಾವಣೆ, ವರ್ತೂರಿನಿಂದ ಶೀಲವಂತನ ಕೆರೆ ಸೇರಿದಂತೆ ಇನ್ನಿತರೆ ಕಡೆ ಸರ್ವೇ ಕಾರ್ಯ ನಡೆಸಿ ಮಾರ್ಕಿಂಗ್‌ ಮಾಡಲಾಯಿತು.

ವಾಸಿಸುವ ಕಟ್ಟಡ ಇದ್ದರೆ ನೋಟಿಸ್‌

ಸರ್ವೇ ಕಾರ್ಯ ನಡೆಸುವ ವೇಳೆ ನಿವೇಶನ ಮತ್ತು ಕಾಂಪೌಂಡ್‌ಗಳಿದ್ದರೆ ತಕ್ಷಣ ತೆರವುಗೊಳಿಸಲಾಗುತ್ತದೆ. ಒಂದು ವೇಳೆ ಕಟ್ಟಡವಿದ್ದು, ಅದರಲ್ಲಿ ಜನರು ವಾಸವಿದ್ದರೆ ನೋಟಿಸ್‌ ನೀಡಿ ತೆರವುಗೊಳಿಸಲಾಗುವುದು ಎಂದು ಮಹದೇವಪುರ ವಲಯದ ಮುಖ್ಯ ಎಂಜಿನಿಯರ್‌ ಬಸವರಾಜ್‌ ಕಬಾಡೆ ಮಾಹಿತಿ ನೀಡಿದ್ದಾರೆ.