Asianet Suvarna News Asianet Suvarna News

Mysuru| ಚಾಮುಂಡಿಬೆಟ್ಟ ಉಳಿಸುವಂತೆ ಪ್ರಧಾನಿಗೆ ಭೈರಪ್ಪ ಪತ್ರ

*  ಕೇಂದ್ರದ ಪ್ರಸಾದ ಯೋಜನೆಯಿಂದ ಚಾಮುಂಡಿಬೆಟ್ಟಕ್ಕೆ ತೊಂದರೆ
*  'ಪ್ರಸಾದ’ ಯೋಜನೆಯಡಿ ಕಾಂಕ್ರೀಟ್‌ ಕಾಡಾಗಲಿರುವ ಚಾಮುಂಡಿಬೆಟ್ಟ
*  ಈ ಯೋಜನೆ ಅನುಷ್ಠಾನಗೊಳಿಸಬಾರದು

Novelist SL Bhyrappa Letter PM Narendra Modi For Save Chamundi Hill in Mysuru grg
Author
Bengaluru, First Published Nov 24, 2021, 8:46 AM IST

ಮೈಸೂರು(ನ.24):  ಮೈಸೂರಿನ(Mysuru) ಚಾಮುಂಡಿಬೆಟ್ಟದ(Chamundi Hill) ಅಭಿವೃದ್ಧಿ ವಿಚಾರವಾಗಿ ಸರಸ್ವತಿ ಸನ್ಮಾನ್‌ ಪ್ರಶಸ್ತಿ ಪುರಸ್ಕೃತ ಖ್ಯಾತ ಕಾದಂಬರಿಕಾರ ಡಾ.ಎಸ್‌.ಎಲ್‌. ಭೈರಪ್ಪ(Dr SL Bhyrappa) ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಕೇಂದ್ರ ಸರ್ಕಾರದ(Central Government) ‘ಪ್ರಸಾದ’ ಯೋಜನೆಯಡಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳಿಂದ ಚಾಮುಂಡಿಬೆಟ್ಟ ಕಾಂಕ್ರೀಟ್‌ ಕಾಡಾಗಲಿದೆ. ಹೀಗಾಗಿ ಚಾಮುಂಡಿಬೆಟ್ಟವನ್ನು ಉಳಿಸಿ ಎಂದು ಪ್ರಧಾನಿ ಮೋದಿ(Narendra Modi) ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಜ್ಞಾನಪೀಠಕ್ಕೆ ಭೈರಪ್ಪ, ಮೊಯ್ಲಿ, ಕಣವಿ ಹೆಸರು ಶಿಫಾರಸು!

ಕೇಂದ್ರದ ‘ಪ್ರಸಾದ’ ಯೋಜನೆಯಿಂದ ಚಾಮುಂಡಿಬೆಟ್ಟಕ್ಕೆ ತೊಂದರೆ ಇದೆ. ಚಾಮುಂಡಿಬೆಟ್ಟ ಕಾಂಕ್ರೀಟ್‌ ಕಾಡು(Concrete Forest) ಮಾಡುವ ಈ ಯೋಜನೆಯನ್ನು ಅನುಷ್ಠಾನಗೊಳಿಸಬಾರದು. ಚಾಮುಂಡಿಬೆಟ್ಟಕ್ಕೆ ಹೋಗುವ ವಾಹನಗಳಿಗೆ ನಿರ್ಬಂಧಿಸಬೇಕು. ಪರಿಸರ ಸ್ನೇಹಿ ವಿದ್ಯುತ್‌ ಚಾಲಿತ ವಾಹನ(Electric Vehicles), ಬಸ್‌ಗಳನ್ನು ಸರ್ಕಾರವೇ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಚಾಮುಂಡಿಬೆಟ್ಟದಲ್ಲಿ ನಿರ್ಮಿಸಿರುವ ಮಲ್ಟಿಲೆವಲ್‌ ಪಾರ್ಕಿಂಗ್‌ ಕಟ್ಟಡ, ವಾಣಿಜ್ಯ ಮಳಿಗೆಗಳಿಂದ ಅಲ್ಲಿನ ಪ್ರಶಾಂತತೆ ಹಾಳಾಗಿ, ವಾಣಿಜ್ಯ ಕೇಂದ್ರವಾಗಿ ಮಾರ್ಪಟ್ಟಿದೆ. ಬೆಟ್ಟದಲ್ಲಿ ಇನ್ನಷ್ಟು ನಿರ್ಮಾಣ ಚಟುವಟಿಕೆ ಕೈಗೊಳ್ಳುವ ಬದಲು, ಅಲ್ಲಿರುವ ಕಟ್ಟಡಗಳನ್ನು ಕೆಡವಬೇಕು. ಚಾಮುಂಡಿಬೆಟ್ಟದಲ್ಲಿ 4 ಸಾವಿರ ಜನ ವಾಸವಿದ್ದಾರೆ. ಅವರನ್ನು ಬೇರೆ ಜಾಗಕ್ಕೆ ಸ್ಥಳಾಂತರಿಸಬೇಕು. ಅರ್ಚಕರು, ಸಿಬ್ಬಂದಿ ಇರಲು ಮಾತ್ರ ಅವಕಾಶ ಮಾಡಿಕೊಡಬೇಕು ಎಂದು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಏನಿದು ಪ್ರಸಾದ ಯೋಜನೆ?: 

ದೇಶದಲ್ಲಿ(India) ಧಾರ್ಮಿಕ ಪ್ರವಾಸೋದ್ಯಮಕ್ಕೆ(Religious Tourism) ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರಸಾದ (ತೀರ್ಥಯಾತ್ರೆ ಪುನಶ್ಚೇತನ ಮತ್ತು ಆಧ್ಯಾತ್ಮಿಕ, ಪಾರಂಪರಿಕವರ್ಧನೆ) ಯೋಜನೆ ಜಾರಿ ತಂದಿದೆ. ಈ ಮೂಲಕ ದೇಶದ ಪ್ರಮುಖ ಧಾರ್ಮಿಕ ಪ್ರವಾಸಿ ತಾಣಗಳನ್ನು ಪ್ರವಾಸೋದ್ಯಮಕ್ಕೆ ಪೂರಕವಾಗಿ ಅಭಿವೃದ್ಧಿಪಡಿಸುವುದು ಉದ್ದೇಶವಿದೆ. ರಾಜ್ಯದಲ್ಲಿ(Karnataka) ಚಾಮುಂಡಿಬೆಟ್ಟವನ್ನು ಈ ಯೋಜನೆಯಡಿ ಆಯ್ಕೆಯಾಗಿದ್ದು, ಇಲ್ಲಿ ಹೈಟೆಕ್‌ ಮಾದರಿಯ ಮಳಿಗೆ, ಮಹಾದೇಶ್ವರ ದೇಗುಲ ಪುನರುತ್ಥಾನ, ನಾರಾಯಣ ದೇವಸ್ಥಾನಕ್ಕೆ ಹೊಸ ರೂಪ, ಮಹಿಷಾಸುರ ಪ್ರತಿಮೆ ಬಳಿ ಹಂಪಿ ಶೈಲಿಯ ರಾಜಗೋಪುರ, ನಂದಿ ವಿಗ್ರಹ ವೀಕ್ಷಣೆಗೆ ವೀಕ್ಷಣಾ ತಾಣ, ವಿಶೇಷ ವ್ಯೂವ್‌ಪಾಯಿಂಟ್‌(View Point)  ನಿರ್ಮಿಸಲು ಉದ್ದೇಶಿಸಿದೆ.

ಚಾಮುಂಡಿಬೆಟ್ಟದ ರಕ್ಷಣೆಗಾಗಿ ಪ್ರಾಧಿಕಾರ ರಚನೆಗೆ ಆಗ್ರಹಿಸಿದ್ದ ಭೈರಪ್ಪ 

ಈ ಹಿಂದೆ ಕೂಡ ಮೈಸೂರಿನ ಚಾಮುಂಡಿಬೆಟ್ಟದ ರಕ್ಷಣೆಗಾಗಿ ಕೂಡಲೇ ಸರ್ಕಾರ ಚಾಮುಂಡಿಬೆಟ್ಟ ಪ್ರಾಧಿಕಾರ ರಚನೆ ಮಾಡಬೇಕು ಎಂದು ಮಾಜಿ ಮೇಯರ್‌ ಬಿ.ಎಲ್‌. ಭೈರಪ್ಪ ಆಗ್ರಹಿಸಿದ್ದರು. 

ಚಾಮುಂಡಿಬೆಟ್ಟದಲ್ಲಿ ಇತ್ತೀಚೆಗೆ ರಸ್ತೆ ಬದಿ ಕುಸಿಯಲು(Landslide) ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿರುವುದು, ಅವೈಜ್ಞಾನಿಕವಾಗಿ ನಿರ್ವಹಣೆ ಮಾಡುತ್ತಿರುವುದು ಕಾರಣವಾಗಿದೆ. ಇದೇ ಪರಿಸ್ಥಿತಿ ಬೆಟ್ಟದ ಇತರ ಕಡೆಯೂ ಇದ್ದು, ಚಾಮುಂಡಿಬೆಟ್ಟದ ರಕ್ಷಣೆಗಾಗಿ ಪ್ರಾಧಿಕಾರ ರಚಿಸಬೇಕು ಎಂದು ಅವರು ಇತ್ತೀಚೆಗೆ ಒತ್ತಾಯಿಸಿದ್ದರು. 

'ದ್ರೌಪದಿಗೆ ಅಪಮಾನ ಮಾಡಿದ ಭೈರಪ್ಪ ವಿರುದ್ಧ ಕ್ರಮಕ್ಕೆ ಕೈಗೊಳ್ಳಿ'

1909 ರಲ್ಲಿ ಅಂದಿನ ಮಹಾರಾಜರು ವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿದ್ದರು. ಬಳಿಕ ಈಗಿನ ರಸ್ತೆ ನಿರ್ಮಾಣ ವೇಳೆ ವೈಬ್ರೇಟರ್‌ ಬಳಸಲಾಗಿದೆ. ಇದರಿಂದಾಗಿ ಬಂಡೆಗಳು ಸಡಿಲಗೊಂಡಿವೆ. ಹೀಗಾಗಿ ರಸ್ತೆ ಕುಸಿತಗಳು ಸಂಭವಿಸುತ್ತಿವೆ. ಅಲ್ಲದೆ, ಪಾದದಿಂದ ಬೆಟ್ಟದ ತುದಿವರೆಗೆ ಎರಡು ಅಡಿ ವ್ಯಾಸದ ನೀರಿನ ಪೈಪ್‌ ಅಳವಡಿಕೆಗಾಗಿ ಹತ್ತು ಅಡಿ ಸುತ್ತಳತೆ ಹಳ್ಳ ತೆಗೆದಿದ್ದಾರೆ. ಇನ್ನು ಬೆಟ್ಟದಲ್ಲಿ ಆಗಾಗ್ಗೆ ಝರಿ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ. ವಾಸ್ತವವಾಗಿ ಬೆಟ್ಟದ ಮೇಲಿನ ಸುಮಾರು 500 ಮನೆಗಳಿಗೆ ಯುಜಿಡಿ ವ್ಯವಸ್ಥೆಯಿಲ್ಲ. ಇವರೆಲ್ಲ ಪಿಟ್‌ಗಳನ್ನು ತೆಗೆದಿದ್ದು, ಅವುಗಳ ನೀರೇ ಹೊರಬರುತ್ತಿದೆ. ಆದರೆ ನಿಜಕ್ಕೂ ಇವು ಝರಿಯಲ್ಲ ಎಂದು ಅವರು ತಿಳಿಸಿದರು.

ಇದರೊಡನೆ ಬೆಟ್ಟದ ದೈವಿವನ ಭಾಗದಲ್ಲಿಯೂ ಹಳ್ಳಗಳನ್ನು ತೆಗೆಯಲಾಗಿದೆ. ಬೆಟ್ಟದ ಸಮೀಪದ ಲಲಿತಾದ್ರಿಪುರದಲ್ಲಿ ಎಂಡಿಎ ವತಿಯಿಂದ ಬಹು ಮಹಡಿ ನಿವಾಸ ನಿರ್ಮಿಸಲು ಯೋಜಿಸಲಾಗಿದೆ. ಇದಕ್ಕಾಗಿ ನೆಲವನ್ನು ಸುಮಾರು 20 ಹೆಚ್ಚು ಅಡಿ ಅಗೆಯಬೇಕಾಗುತ್ತದೆ. ಇದರೊಡನೆ ಬೆಟ್ಟದ ಸುತ್ತಮುತ್ತಲಿನ ಕೆರೆಗಳು ಬಡಾವಣೆಗಳಾಗುತ್ತಿವೆ. ಈ ರೀತಿಯ ಎಲ್ಲಾ ಕಾರಣಗಳಿಂದಾಗಿ ಮುಂದೊಂದು ದಿನ ಚಾಮುಂಡಿಬೆಟ್ಟದ ಪರಿಸ್ಥಿತಿ ಕೊಡಗಿನಲ್ಲಿನ ಈಗಿನ ಪರಿಸ್ಥಿತಿ ರೀತಿಯಂತೆಯೇ ಆದರೂ ಆಶ್ಚರ್ಯವಿಲ್ಲ. ಹೀಗಾಗಿ ಸರ್ಕಾರ ಬೆಟ್ಟದ ರಕ್ಷಣೆಗೆ ಕೂಡಲೇ ಚಾಮುಂಡಿಬೆಟ್ಟ ಪ್ರಾಧಿಕಾರ ರಚನೆ ಮಾಡಬೇಕು ಎಂದು ಆಗ್ರಹಿಸಿದ್ದರು. 
 

Follow Us:
Download App:
  • android
  • ios