ಕಾಳೇನ ಅಗ್ರಹಾರ ಮೆಟ್ರೋ ನಿಲ್ದಾಣದ ಕಾಮಗಾರಿ ನಡೆಯುತ್ತಿರುವುದರಿಂದ ಬನ್ನೇರುಘಟ್ಟ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಲೊಯೋಲಾ ಕಾಲೇಜು ಜಂಕ್ಷನ್‌ನಲ್ಲಿರುವ ಕೊತ್ನೂರು ಅಡ್ಡ ರಸ್ತೆಯ ಸಂಚಾರವನ್ನು ಡಿ.19ರಿಂದ ಮುಚ್ಚಲಾಗುವುದು.

ಬೆಂಗಳೂರು (ಡಿ.15): ಬೆಂಗಳೂರು ಮೆಟ್ರೋ ರೈಲು ನಿಗಮಿತವು (ಬಿಎಂಆರ್‌ಸಿಎಲ್‌) ಕಾಳೇನ ಅಗ್ರಹಾರ ಮೆಟ್ರೋ ನಿಲ್ದಾಣದ ಕಾಮಗಾರಿ ನಡೆಯುತ್ತಿರುವುದರಿಂದ ಬನ್ನೇರುಘಟ್ಟ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಲೊಯೋಲಾ ಕಾಲೇಜು ಜಂಕ್ಷನ್‌ನಲ್ಲಿರುವ ಕೊತ್ನೂರು ಅಡ್ಡ ರಸ್ತೆಯ ಸಂಚಾರವನ್ನು ಡಿ.19ರಿಂದ ಮುಚ್ಚಲಾಗುವುದು. ಸದರಿ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ಸುಗಮಗೊಳಿಸಲು ಪೊಲೀಸರು ಪರ್ಯಾಯ ಮಾರ್ಗಗಳನ್ನು ತಿಳಿಸಿದ್ದಾರೆ. ಸಾರ್ವಜನಿಕರು ಈ ಮಾರ್ಗಗಳನ್ನು ಸಾಗಬೇಕು ಎಂದು ಬಿಎಂಆರ್‌ಸಿಎಲ್‌ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಪರ್ಯಾಯ ಮಾರ್ಗಗಳು ಯಾವುವು?

  1. ಬನ್ನೇರುಘಟ್ಟದಿಂದ ಕೊತ್ನೂರು ಕಡೆಗೆ ಸಂಚರಿಸುವವರು, ಗೊಟ್ಟಿಗೆರೆಯಲ್ಲಿ ತಿರುವು ಪಡೆದು ಜಂಬೂ ಸವಾರಿ ದಿನ್ನೆ ಮೂಲಕ ಬಿ.ಕೆ.ಸರ್ಕಲ್ ತಲುಪಬಹುದು.
  2. ಜಯದೇವ ಜಂಕ್ಷನ್‌ನಿಂದ ಕೊತ್ನೂರು ಕಡೆಗೆ ಸಂಚರಿಸುವವರು, ಅರೆಕೆರೆ ಜಂಕ್ಷನ್‌ನಲ್ಲಿ ತಿರುವು ಪಡೆದು ಬ್ರಿಗೇಡ್ ಮಿಲೇನಿಯಂ ರಸ್ತೆ, ಅ‌ಬಿಐ ಲೇಔಟ್ ಮೂಲಕ ಬಿ.ಕೆ.ಸರ್ಕಲ್‌ ತಲುಪಬಹುದು.
  3. ಇನ್ನು ಬನ್ನೇರುಘಟ್ಟ ಮುಖ್ಯರಸ್ತೆಯ ವಾಹನ ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. 
  4. ಹೆಚ್ಚಿನ ಮಾಹಿತಿಗೆ ಪರ್ಯಾಯ ಮಾರ್ಗದ ರೇಖಾಚಿತ್ರವನ್ನು ಲಗತ್ತಿಸಲಾಗಿದೆ.

2023 ರಲ್ಲಿ ಹೊಸದಾಗಿ ನಮ್ಮ ಮೆಟ್ರೋದ 3 ವಿಸ್ತರಣೆ ಮಾರ್ಗ ಪಡೆಯಲಿರುವ ಬೆಂಗಳೂರು

ಸುರಂಗ ಮಾರ್ಗದಲ್ಲಿ ಊರ್ಜಾ ಟಿಬಿಎಂ ದಾಖಲೆ:
ಬೆಂಗಳೂರಿನಲ್ಲಿ ನಿರ್ಮಾಣ ಮಾಡುತ್ತಿರುವ ಮೆಟ್ರೋ ಮಾರ್ಗದಲ್ಲಿ ಸುರಂಗ ಮತ್ತು ಎತ್ತರಿಸಿದ (ಎಲಿವೇಟೆಡ್‌) ಮಾರ್ಗಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇನ್ನು ಕಾಳೇನ ಅಗ್ರಹಾರ ಮತ್ತು ನಾಗವಾರ ಪಿಂಕ್‌ ಲೂನ್‌ ಮಾರ್ಗದಲ್ಲಿ ಕಳೆದ ಆರು ತಿಂಗಳ ಹಿಂದೆ ಸುರಂಗ ಮಾರ್ಗ ಕೊರೆಯುವ ಊರ್ಜಾ ಟನಲ್ ಬೋರಿಂಗ್‌ ಮಿಷನ್‌ ಒಂದೇ ದಿನದಲ್ಲಿ 27 ಮೀಟರ್‌ ಸುರಂಗ ಕೊರೆದು ದಾಖಲೆ ನಿರ್ಮಿಸಿತ್ತು ಎಂದು ಬಿಎಂಆರ್‌ಸಿಎಲ್‌ ತಿಳಿಸಿತ್ತು. ಇನ್ನು ಕಲ್ಲಿನ ಭೂ ರಚನೆಗಳಿದ್ದರೆ ದಿನಕ್ಕೆ ಮೂರರಿಂದ ಐದು ಮೀಟರ್‌ ಮಾತ್ರ ಸುರಂಗ ಕೊರೆಯಲು ಸಾಧ್ಯವಾಗುತ್ತದೆ. ಸುರಂಗ ಕೊರೆಯುವ ಯಂತ್ರ ಮಣ್ಣಿನ ಪದರ ಸಿಕ್ಕರೆ 10ರಿಂದ 12 ಮೀಟರ್‌ ಸುರಂಗವನ್ನು ಒಂದೇ ದಿನದಲ್ಲಿ ಕೊರೆಯುತ್ತದೆ. ಆದರೆ, ಇಲ್ಲಿ ಒಂದೇ ದಿನದಲ್ಲಿ 27 ಮೀಟರ್‌ ಸುರಂಗ ಕೊರೆದಿರುವುದು ಈವರೆಗಿನ ದಾಖಲೆಯಾಗಿದೆ ಎಂದು ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದರು. 

Bengaluru: ಪೆಟಿಎಂ, ಯಾತ್ರಾ ಅಪ್ಲಿಕೇಶನ್ ಮೂಲಕವೂ ಮೆಟ್ರೋ ಟಿಕೆಟ್ ಲಭ್ಯ

2024ಕ್ಕೆ ಮಾರ್ಗ ಪೂರ್ಣ: ಇನ್ನು ರಾಜ್ಯ ರಾಜಧಾನಿಯಲ್ಲಿ ಬಿಎಂಆರ್‌ಸಿಎಲ್‌ ವತಿಯಿಂದ ಕೈಗೆತ್ತಿಕೊಂಡಿರುವ ಎರಡನೇ ಹಂತದ ಎಲ್ಲ ಮಾರ್ಗಗಳ ಕಾಮಗಾರಿಗಳನ್ನು 2025ಕ್ಕೆ ಪೂರ್ಣಗೊಳಿಸುವ ಗುರಿಯನ್ನು ಹಾಕಿಕೊಂಡಿತ್ತು. ಆದರೆ, ಕೋವಿಡ್‌ ಹಾಗೂ ಇತರೆ ಕಾರಣಗಳಿಂದಾಗಿ ಕಾಮಗಾರಿ ವಿಳಂಬ ಆಗುತ್ತಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಸಬೂಬು ಹೇಳುತ್ತಿದ್ದರು. ಈ ಬಗ್ಗೆ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೆಟ್ರೋ ೨ನೇ ಹಂತದ ಎಲ್ಲ ಕಾಮಗಾರಿಗಳನ್ನು 2024ಕ್ಕೆ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸುವಂತೆ ಸೂಚನೆ ನೀಡಿದ್ದರು. ಇದಕ್ಕೆ ಅನುಕೂಲ ಆಗುವಂತೆ ಯೋಜನೆಯನ್ನು ಪರಿಷ್ಕರಣೆ ಮಾಡಿಕೊಂಡು, ಹೆಚ್ಚಿನ ಮಿಷನರಿಗಳು ಮತ್ತು ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳುವಂತೆಯೂ ಸೂಚನೆ ನೀಡಿದ್ದರು. ಆದರೆ, ಈ ಬಗ್ಗೆ ಸರ್ಕಾರಕ್ಕೆ ಈವರೆಗೆ ಬಿಎಂಆರ್‌ಸಿಎಲ್‌ ಅಧಿಕಾರಿಗಳು ಸರ್ಕಾರಕ್ಕೆ ಯಾವುದೇ ಸ್ಪಷ್ಟೀಕರಣ ವರದಿಯನ್ನು ನೀಡಿಲ್ಲ.