Asianet Suvarna News Asianet Suvarna News

ಕೊರೋನಾ ಅಟ್ಟಹಾಸ: ಕೊಪ್ಪಳದ ಆಸ್ಪತ್ರೆಗಳೆಲ್ಲ ಫುಲ್‌, ಎಲ್ಲೂ ಖಾಲಿ ಇಲ್ಲ ಬೆಡ್‌..!

ಆಸ್ಪತ್ರೆಗಳು ಹೌಸ್‌ ಫುಲ್‌| ಸರ್ಕಾರಿ, ಖಾಸಗಿ ಆಸ್ಪತ್ರೆಯಲ್ಲಿಯೂ ಬೆಡ್‌ ಇಲ್ಲ| ಬರೀ ನೂರಾರು ಕೇಸ್‌ಗಳಿಗೆ ಆಸ್ಪತ್ರೆಗಳು ಫುಲ್‌| ಸಿನೆಮಾ ಥೇಟರ್‌ಗಳು ಖಾಲಿ ಖಾಲಿಯಾಗಿದ್ದು, ಆಸ್ಪತ್ರೆಗಳು ಹೌಸ್‌ ಫುಲ್‌| ಸರ್ಕಾರಿ ಹಾಸ್ಟೆಲ್‌ನಲ್ಲಿ 2-3 ದಿನಗಳಲ್ಲಿ ಕೋವಿಡ್‌ ತಾತ್ಕಾಲಿಕ ಆಸ್ಪತ್ರೆ ಪ್ರಾರಂಭ| 

Not Bed Available in Hospitals to Covid Patients in Koppal grg
Author
Bengaluru, First Published May 3, 2021, 9:30 AM IST

ಸೋಮರಡ್ಡಿ ಅಳವಂಡಿ

ಕೊಪ್ಪಳ(ಮೇ.03): ಹೌಸ್‌ ಫುಲ್‌.. ಹೌಸ್‌ ಫುಲ್‌... ಆಸ್ಪತ್ರೆಗಳು ಹೌಸ್‌ ಫುಲ್‌ .ಈ ಮಾತನ್ನು ದೂರದ ಬೆಂಗಳೂರಿನಲ್ಲಿ ಕೇಳುತ್ತಿದ್ದೆವು. ಆದರೆ, ಈಗ ಕೊಪ್ಪಳ ಜಿಲ್ಲೆಯಲ್ಲಿಯೂ ಈ ಹೌಸ್‌ಫುಲ್‌ ಶಬ್ಧ ಬಲವಾಗಿ ಕೇಳಿಬರುತ್ತಿದೆ. ಇದುವರೆಗೂ ನಾವು ಸಿನೆಮಾ ಥೇಟರ್‌ಗಳ ಮುಂದೆ ಈ ರೀತಿಯ ಹೌಸ್‌ ಫುಲ್‌ ಬೋರ್ಡ್‌ ನೋಡುತ್ತಿದ್ದೇವು. ಈಗ ಸಿನೆಮಾ ಥೇಟರ್‌ಗಳು ಖಾಲಿ ಖಾಲಿಯಾಗಿದ್ದು, ಆಸ್ಪತ್ರೆಗಳು ಹೌಸ್‌ ಫುಲ್‌ ಆಗಿವೆ.

ಮಹಾಮಾರಿ ಕೊರೋನಾ ಕೊಪ್ಪಳ ಜಿಲ್ಲೆಯಲ್ಲಿ ಅಬ್ಬರಿಸಲಾರಂಭಿಸಿದೆ. ಇತರೆ ಜಿಲ್ಲೆಗೆ ಹೋಲಿಕೆ ಮಾಡಿದರೆ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇಲ್ಲವಾದರೂ ಈಗಾಗಲೇ ಆಸ್ಪತ್ರೆಗಳು ಫುಲ್‌ ಆಗಿವೆ. ಜಿಲ್ಲೆಯಲ್ಲಿ ಆಸ್ಪತ್ರೆ ಹಾಗೂ ಬೆಡ್‌ಗಳ ಸೌಲಭ್ಯ ತೀರಾ ಕಡಿಮೆ. ಸುಮಾರು 2 ಸಾವಿರ ಕೇಸ್‌ ಆಗುತ್ತಿದ್ದಂತೆ ಜಿಲ್ಲೆಯಲ್ಲಿ ಆಸ್ಪತ್ರೆಗಳಲ್ಲಿ ಬೆಡ್‌ಗಳು ಫುಲ್‌ ಆಗಿವೆ. ಇದರಲ್ಲಿ ಶೇ. 10ರಷ್ಟು ರೋಗಿಗಳು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿಲ್ಲ. ಈಗಲೇ ಈ ಪರಿಸ್ಥಿತಿಯಾದರೆ ಇನ್ನು ಮೇ ಅಂತ್ಯಕ್ಕೆ ಆಗುವ ಹೆಚ್ಚಳ ಪ್ರಮಾಣದ ವೇಳೆಯಲ್ಲಿ ನಿಭಾಯಿಸುವುದು ದೊಡ್ಡ ಸವಾಲು. ಕೊಪ್ಪಳ ಜಿಲ್ಲಾಸ್ಪತ್ರೆಗಳಲ್ಲಿ ಬೆಡ್‌ ಫುಲ್‌ ಆಗಿರುವುದರಿಂದ ಬೇರೆ ಬೇರೆ ಜಿಲ್ಲೆಗಳಿಗೆ ರೋಗಿಗಗಳನ್ನು ಸಾಗಿಸಲಾಗುತ್ತದೆ. ಇದು ಎಲ್ಲರಿಗೂ ಸಾಧ್ಯವೇ? ಎನ್ನುವ ಪ್ರಶ್ನೆಗೆ ಯಾರ ಬಳಿಯೂ ಉತ್ತರ ಇಲ್ಲ.

"

ಕೊಪ್ಪಳ: ಮೂರೇ ದಿನದಲ್ಲಿ 73 ಸೋಂಕಿತರು, ಗ್ರಾಮಕ್ಕೆ ಬಿತ್ತು ಬೇಲಿ..!

ಸರ್ಕಾರಿ ಆಸ್ಪತ್ರೆ ಫುಲ್‌:

ಜಿಲ್ಲಾ ಕೇಂದ್ರದಲ್ಲಿರುವ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿಯೇ ಬೆಡ್‌ಗಳು ಫುಲ್‌ ಆಗಿವೆ. ಶನಿವಾರವೇ ಫುಲ್‌ ಆಗಿದ್ದು, ಈಗ ಅಲ್ಲಿ ದಾಖಲು ಮಾಡಿಕೊಳ್ಳಲು ಆಗುತ್ತಿಲ್ಲವಾದ್ದರಿಂದ ಖಾಸಗಿ ಆಸ್ಪತ್ರೆಗೆ ಬರೆದು ಕೊಡುತ್ತಿದ್ದಾರೆ. ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ 76 ಆಕ್ಸಿಜನ್‌ ಬೆಡ್‌ಗಳಿವೆ. ಇಲ್ಲಿ ಆಕ್ಸಿಜನ್‌ ಬೇಕಾಗಿರುವ 84 ರೋಗಿಗಳು ಇದ್ದಾರೆ. ಹೇಗೋ ನಿಭಾಯಿಸಲಾಗುತ್ತದೆ. ಉಸಿರಾಟ ಸುಧಾರಣೆಯಾದವರ ಆಕ್ಸಿಜನ್‌ ಅನ್ನು ಮೇಲಿಂದ ಮೇಲೆ ವರ್ಗಾಯಿಸಿ, ನಿಭಾಯಿಸಲಾಗುತ್ತಿದೆ ಎನ್ನಲಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ 20 ವೆಂಟಿಲೇಟರ್‌ ಬೆಡ್‌ಗಳು ಇದ್ದು, ಅವೆಲ್ಲವೂ ಫುಲ್‌ ಆಗಿವೆ. ಯಾರೇ ಜೀವ ಹೋಗುತ್ತದೆ ಎಂದು ಬಂದರೂ ವೆಂಟಿಲೇಟರ್‌ಗೆ ಲಭ್ಯವಿಲ್ಲ.

ರೇಫರಲ್‌ ಕಾರ್ಡ್‌:

ಜಿಲ್ಲಾಸ್ಪತ್ರೆಯಲ್ಲಿ ಬೆಡ್‌ ಇಲ್ಲದೆ ಇರುವುದರಿಂದ ಈಗ ರೆಫರಲ್‌ ಕಾರ್ಡ್‌ ನೀಡಲಾಗುತ್ತದೆ. ಅಂದರೆ ಸರ್ಕಾರಿ ವೆಚ್ಚದಲ್ಲಿಯೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯ ಬಹುದಾಗಿದೆ. ಇಲ್ಲಿ ಬೆಡ್‌ ಇಲ್ಲದಿರುವ ಕಾರಣಕ್ಕೆ ಸರ್ಕಾರಿ ಆಸ್ಪತ್ರೆಯಿಂದಲೇ ಶಿಫಾರಸು ಪಡೆದು ತೆರಳುವ ರೋಗಿಗಳಿಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಬೆಡ್‌ ನಿಗದಿ ಮಾಡಲಾಗಿದೆ. ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತದೆ. ಪ್ರಾರಂಭದಲ್ಲಿಯೇ ಬೆಡ್‌ಗಳ ಸಂಖ್ಯೆಯ ಕೊರತೆ ಉಂಟಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಖಾಸಗಿ ಆಸ್ಪತ್ರೆಯೂ ಫುಲ್‌:

ಸರ್ಕಾರಿ ಆಸ್ಪತ್ರೆಯಂತೆ ಬಹುತೇಕ ಖಾಸಗಿ ಆಸ್ಪತ್ರೆ ಬೆಡ್‌ಗಳು ಫುಲ್‌ ಆಗಿವೆ. ಕೆಲವೇ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಕೋವಿಡ್‌ ಚಿಕಿತ್ಸೆ ನೀಡುತ್ತಿದ್ದು, ಅಲ್ಲಿ ಫುಲ್‌ ಆಗಿರುವುದು ಸಮಸ್ಯೆಯಾಗಿದೆ. ಹೀಗಾಗಿ, ಬೆಡ್‌ ಸಂಖ್ಯೆ ಹೆಚ್ಚಿಸಿಕೊಳ್ಳುವಂತೆ ಈಗಾಗಲೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆ ನೀಡಿ, ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ಗಳ ಸಂಖ್ಯೆ ಹೆಚ್ಚಳ ಮಾಡಲಾಗುತ್ತದೆ.

ಕೊರೋನಾ ರಣಕೇಕೆ: ತಿಂಗಳಾದ್ರೂ ಹೆರಿಗೆಯಾದ ಪತ್ನಿ, ಮಗುವನ್ನೂ ನೋಡದ ಅಧಿಕಾರಿ..!

ಕೊಪ್ಪಳ ನಗರದ ಪ್ರತಿಷ್ಠಿತ ಕೆ.ಎಸ್‌. ಆಸ್ಪತ್ರೆಯಲ್ಲಿಯೂ ಕೋವಿಡ್‌ ಬೆಡ್‌ಗಳು ಫುಲ್‌ ಆಗಿವೆ. ಹೀಗಾಗಿ, ಈಗ ಪಕ್ಕದಲ್ಲಿಯೇ ಇರುವ ಹಾಸ್ಟೆಲ್‌ನಲ್ಲಿ ತಾತ್ಕಾಲಿಕ ಕೋವಿಡ್‌ ಆಸ್ಪತ್ರೆ ತೆರೆಯಲಾಗುತ್ತಿದೆ. ಕೆ.ಎಸ್‌. ಆಸ್ಪತ್ರೆ ಈ ದಿಟ್ಟ ನಿರ್ಧಾರಕ್ಕೆ ಮುಂದಾಗಿದೆ.

ಕಳೆದ ಬಾರಿಯೂ ಎರಡು ಹೋಟೆಲ್‌ಗಳಲ್ಲಿ ಕೋವಿಡ್‌ ಆಸ್ಪತ್ರೆಯನ್ನು ನಡೆಸಿದ್ದ ಕೆ.ಎಸ್‌. ಆಸ್ಪತ್ರೆ, ಈ ಬಾರಿ ತಮ್ಮ ಆಸ್ಪತ್ರೆಯ ಪಕ್ಕದಲ್ಲಿಯೇ ಇರುವ ಸರ್ಕಾರಿ ಹಾಸ್ಟೆಲ್‌ನಲ್ಲಿ 2-3 ದಿನಗಳಲ್ಲಿ ಕೋವಿಡ್‌ ತಾತ್ಕಾಲಿಕ ಆಸ್ಪತ್ರೆ ಪ್ರಾರಂಭಿಸಲಿದೆ.

ಕೋವಿಡ್‌ ಸಹಾಯವಾಣಿ

ಹರಿಶ್‌ ಜೋಗಿ - 9035129484
ರೆಮ್‌ಡಿಸಿವಿಆರ್‌ ಔಷಧಿ - ಡಾ. ಜಂಬಯ್ಯ - 9449843201
ಕೋವಿಡ್‌ ಸಾವು - ಕೃಷ್ಣಾ ಉಕ್ಕುಂದ -9448999237
ಆಕ್ಸಿಜನ್‌ ಸಪ್ಲೈ - ಡಾ. ಬಸಯ್ಯ -9449641224
ಆಸ್ಪತ್ರೆಯಲ್ಲಿ ಆಕ್ಸಿಜನ್‌ -ಸುಪ್ರೀತಾ - 9449520408
ಕೋವಿಡ್‌ ಆಸ್ಪತ್ರೆಯಲ್ಲಿ ಆಹಾರ - ದೊಡ್ಡಮನಿ -9449064799
ಕೋವಿಡ್‌ ವಾರ್‌ ರೂಮ್‌ - ಪ್ರಾಣೇಶ -9686409096
ಕೋವಿಡ್‌ ಕೇರ್‌ ಸೆಂಟರ್‌ - ನವೀನ್‌ -9731971388
ಕೋವಿಡ್‌ ಕಂಟ್ರೋಲ್‌ ರೂಮ್‌ -9449161217
ಜಿಲ್ಲಾಸ್ಪತ್ರೆ ಬೆಡ್‌ ನಿರ್ವಹಣೆ - 7892285129

ಜಿಲ್ಲಾಸ್ಪತ್ರೆಯಲ್ಲಿ ಈಗಾಗಲೇ ಕೋವಿಡ್‌ ಬೆಡ್‌ಗಳು ಫುಲ್‌ ಆಗಿವೆ. ಹೀಗಾಗಿ, ಈಗ ರೆಫರ್‌ ಮಾಡಲಾಗುತ್ತಿದ್ದು, ರೆಫರಲ್‌ ಕಾರ್ಡ್‌ ಪಡೆದು, ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಜಿಲ್ಲಾಸ್ಪತ್ರೆಯಲ್ಲಿ ಬೆಡ್‌ ನಿರ್ವಹಣೆ ಉಸ್ತುವಾರಿ ಡಾ. ನಾಗರಾಜ ತಿಳಿಸಿದ್ದಾರೆ.  

ಕೋವಿಡ್‌ ಪೇಶೆಂಟ್‌ಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಈಗಾಗಲೇ ಆಕ್ಸಿಜನ್‌ ಬೆಡ್‌ಗಳು ಫುಲ್‌ ಆಗಿವೆ. ಹೀಗಾಗಿ, ತಾತ್ಕಾಲಿಕ ಕೋವಿಡ್‌ ಆಸ್ಪತ್ರೆಯನ್ನು ಪ್ರತ್ಯೇಕವಾಗಿ ಪ್ರಾರಂಭಿಸಲಾಗುತ್ತಿದೆ ಎಂದು ಕೆ.ಎಸ್‌. ಆಸ್ಪತ್ರೆ ಡಾ. ಬಸವರಾಜ ಹೇಳಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

Follow Us:
Download App:
  • android
  • ios