'ಹೊರಗಿಂದ ಬಂದವರಿಗೆಲ್ಲ ಕ್ವಾರಂಟೈನ್ ಬೇಡ, ಲಕ್ಷಣವಿದ್ರೆ ಮಾತ್ರ ಸಾಕು'..!
ಜಿಲ್ಲೆಯಿಂದ ಜಿಲ್ಲೆಗೆ ಪ್ರಯಾಣ ಬೆಳೆಸುವವರು ಹದಿನಾಲ್ಕು ದಿನ ಕ್ವಾರಂಟೈನ್ ಆಗಬೇಕು ಎಂಬ ಆದೇಶವನ್ನು ಸರ್ಕಾರ ಹಿಂದಕ್ಕೆ ಪಡೆದಿದೆ. ಬದಲಿಗೆ ಕೊರೋನಾ ಸೋಂಕಿನ ಲಕ್ಷಣ ಕಂಡು ಬಂದವರನ್ನು ಮಾತ್ರ ಕ್ವಾರಂಟೈನ್ ಮಾಡಿ, ಉಳಿದವರನ್ನು ಬಿಡಲು ಸೂಚಿಸಿದೆ.
ಮೈಸೂರು(ಮೇ.07): ಜಿಲ್ಲೆಯಿಂದ ಜಿಲ್ಲೆಗೆ ಪ್ರಯಾಣ ಬೆಳೆಸುವವರು ಹದಿನಾಲ್ಕು ದಿನ ಕ್ವಾರಂಟೈನ್ ಆಗಬೇಕು ಎಂಬ ಆದೇಶವನ್ನು ಸರ್ಕಾರ ಹಿಂದಕ್ಕೆ ಪಡೆದಿದೆ. ಬದಲಿಗೆ ಕೊರೋನಾ ಸೋಂಕಿನ ಲಕ್ಷಣ ಕಂಡು ಬಂದವರನ್ನು ಮಾತ್ರ ಕ್ವಾರಂಟೈನ್ ಮಾಡಿ, ಉಳಿದವರನ್ನು ಬಿಡಲು ಸೂಚಿಸಿದೆ.
ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಆರೋಗ್ಯ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ. ಆದರೂ ಜಿಲ್ಲೆಯಿಂದ ಜಿಲ್ಲೆಗೆ ಬರುವ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದ್ದು, ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಬುಧವಾರ ಸುಮಾರು 1 ಕಿ.ಮೀ. ದೂರ ಟ್ರಾಫಿಕ್ ಜಾಮ್ ಆಗಿತ್ತು. ಬೆಂಗಳೂರಿನಿಂದ ಮೈಸೂರಿಗೆ ಬರುವ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಕಳೆದ 40 ದಿನಗಳಿಂದ ಬೆಂಗಳೂರಿನಲ್ಲಿಯೇ ಸಿಲುಕಿದ್ದ ಅನೇಕರು ಮಂದಿ ತವರಿಗೆ ಹಿಂದಿರುಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಸ್ ಪಡೆದು ಬಂದವರನ್ನು ಪರಿಶೀಲಿಸಿ ಮತ್ತು ಆರೋಗ್ಯ ತಪಾಸಣೆ ನಡೆಸಿದ ಬಳಿಕ ಒಳಗೆ ಬಿಡಲಾಗುತ್ತಿದೆ.
ಪಾಸ್ ಇಲ್ಲದೆ ಬಂದವರನ್ನು ಯಾವುದೇ ಮುಲಾಜಿಲ್ಲದೆ ಹಿಂದಿರುಗಿ ಕಳುಹಿಸಲಾಗುತ್ತಿದೆ. ಇದಕ್ಕಾಗಿ ಕಂದಾಯ, ಪೊಲೀಸ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ತಪಾಸಣೆಯಲ್ಲಿ ತೊಡಗಿದೆ. ಅಂತರ ರಾಜ್ಯ ಹಾಗೂ ಅಂತರ ಜಿಲ್ಲಾ ಪ್ರಯಾಣಿಕರ ತಪಾಸಣೆ ಜೋರಾಗಿದ್ದು, ಸುಮಾರು 1 ಕಿ.ಮೀ. ದೂರ ವಾಹನಗಳು ಸಾಲುಗಟ್ಟಿನಿಂತಿದ್ದವು. ಪಾಸ್ ಇಲ್ಲದೆ, ನಕಲಿ ಪಾಸ್ ಕೊಂಡು ಬಂದವರಿಗೆ ಹಿಂದಕ್ಕೆ ಕಳುಹಿಸಲಾಯಿತು.
ಕೊರೋನಾ ವಾರಿಯರ್ ಲೇಡಿ PSI ಮೇಲೆ ಬಿಜೆಪಿ ಮುಖಂಡನ ದರ್ಪ
ಕೇರಳ ಮತ್ತು ಆಂಧ್ರಪ್ರದೇಶ ಮೂಲದ ಜನರನ್ನು ಪೊಲೀಸರು ಹಿಂದಕ್ಕೆ ಕಳುಹಿಸಿದ್ದಾರೆ. ನಿಗದಿತ ಪಾಸ್ ಇಲ್ಲದ ಕಾರಣಕ್ಕೆ ಅವರನ್ನು ಹಿಂದಕ್ಕೆ ಕಳುಹಿಸಲಾಗಿದ್ದು, ನಗರ ಪ್ರವೇಶಿಸುವ ವಾಹನಕ್ಕೆ ಸ್ಟಿಕ್ಕರ್ ಅಂಟಿಸಿ, ಆರೋಗ್ಯ ಪರಿಶೀಲಿಸಿದ ನಂತರ ಒಳಗೆ ಬಿಟ್ಟರು.