ಜಾತಿ ಎನ್ನುವುದು ಬಹಳ ಅಪಾಯಕಾರಿ. ಜಾತಿಯಿಂದಲೇ ಯಾರು ದೊಡ್ಡವರು, ಬುದ್ಧಿವಂತರು ಅಥವಾ ಜ್ಞಾನಿ ಆಗಲು ಸಾಧ್ಯವಿಲ್ಲ. ಸೂಕ್ತ ಅವಕಾಶ, ಪ್ರೋತ್ಸಾಹ ಸಿಕ್ಕರೆ ಯಾರು ಬೇಕಾದರೂ ವಿದ್ಯಾವಂತರು, ಜ್ಞಾನಿಗಳಾಗಬಹುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.

ಚಿಕ್ಕಬಳ್ಳಾಪುರ (ಸೆ.25): ಜಾತಿ ಎನ್ನುವುದು ಬಹಳ ಅಪಾಯಕಾರಿ. ಜಾತಿಯಿಂದಲೇ ಯಾರು ದೊಡ್ಡವರು, ಬುದ್ಧಿವಂತರು ಅಥವಾ ಜ್ಞಾನಿ ಆಗಲು ಸಾಧ್ಯವಿಲ್ಲ. ಸೂಕ್ತ ಅವಕಾಶ, ಪ್ರೋತ್ಸಾಹ ಸಿಕ್ಕರೆ ಯಾರು ಬೇಕಾದರೂ ವಿದ್ಯಾವಂತರು, ಜ್ಞಾನಿಗಳಾಗಬಹುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು. ಜಿಲ್ಲೆಯ ಗೌರಿಬಿದನೂರಿನ ಡಾ.ಬಿ.ಆರ್‌.ಅಂಬೇಡ್ಕರ್‌ ಸಮಾನತಾ ಸೌಧದಲ್ಲಿ ಶನಿವಾರ ಇತ್ತೀಚೆಗೆ ಆಗಲಿದ ನಾಡಿನ ಹಿರಿಯ ಸಾಂಸ್ಕೃತಿಕ ಚಿಂತಕ ಹಾಗೂ ಸಾಹಿತಿ ಪ್ರೊ.ಬಿ.ಗಂಗಾಧರಮೂರ್ತಿ ರವರಿಗೆ ಅವಿಭಜಿತ ಕೋಲಾರ ಜಿಲ್ಲೆ ಜನಪರ ವೇದಿಕೆ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

Add Asianetnews Kannada as a Preferred SourcegooglePreferred

ಜ್ಞಾನ ವಂಶಪಾರ್ಯಂಪರ್ಯವಲ್ಲ: ಕೆಲವು ಮಂದಿ ಬುದ್ಧಿ, ಜ್ಞಾನ ಬೆಳೆಯುವುದು ವಂಶಪರಂಪರೆಯಿಂದಾಗಿ ಎಂದು ದಾರಿ ತಪ್ಪಿಸುತ್ತಾರೆ. ಹಾಗೆ ಆಗಿದ್ದರೆ ಅಂಬೇಡ್ಕರ್‌ ಅಷ್ಟೊಂದು ಮೇಧಾವಿ ಆಗಲಿಕ್ಕೆ , ವಾಲ್ಮೀಕಿ ರಾಮಾಯಣ, ವ್ಯಾಸರು ಮಹಾಭಾರತ ಬರೆಯಲು ಸಾಧ್ಯವಾಗುತ್ತಿತ್ತೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಸತ್ಯ ಸಂಗತಿಗಳನ್ನು ಮರೆಮಾಚಲು ಮೇಲ್ವರ್ಗದ ಜನತೆ ಇತಿಹಾಸ ತಿರುಚುವ ಕೆಲಸಕ್ಕೆ ಆಗಲೇ ಮುಂದಾಗಿದ್ದರು. ಈಗಲೂ ಅದೇ ಕೆಲಸ ಮುಂದುವರೆದಿದೆ. ಆ ಕಾರಣಕ್ಕೆ ಅಂಬೇಡ್ಕರ್‌ ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗಿದ್ದರೂ ಕೂಡ ಸಂವಿಧಾನ ಶಿಲ್ಪಿ ಎಂಬ ಪದ ಪಠ್ಯಪುಸ್ತಕದಿಂದ ಕೈ ಬಿಟ್ಟರು ಎಂದು ಬಿಜೆಪಿ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ನನ್ನ ಕೊಲೆಗೆ 2 ತಂಡ ರಚಿಸಿದ್ದರು: ನಿಡುಮಾಮಿಡಿ ಶ್ರೀ

ಅಸಮಾನತೆ ಇರುವವರೆಗೆ ಮೀಸಲು: ಜಾತಿ ವ್ಯವಸ್ಥೆಯಿಂದಲೇ ಸಮಾಜದಲ್ಲಿ ಸಾಮಾಜಿಕ, ಆರ್ಥಿಕ, ರಾಜಕೀಯ ಅಸಮಾನತೆ ಬೇರೂರಿದೆ. ಜಾತಿ ವ್ಯವಸ್ಥೆ ಹೋಗದೇ ಸಮಾಜ ಬದಲಾವಣೆ ಅಸಾಧ್ಯ. ಜಾತಿ ವ್ಯವಸ್ಥೆಯಿಂದಲೇ ಭ್ರಷ್ಟಾಚಾರ ಕೂಡ ಹೆಚ್ಚಾಗಿದೆ. ಸಮಾಜಕ್ಕೆ ಜಾತಿ ವ್ಯವಸ್ಥೆ ಒಂದು ಕೆಟ್ಟರೋಗ. ಮೀಸಲಾತಿ ಇನ್ನೆಷ್ಟುವರ್ಷ ಇರಬೇಕು ಎಂದು ಕೆಲವರು ಪ್ರಶ್ನೆಸುತ್ತಾರೆ. ಆದರೆ ಜಾತಿ ಅಸಮಾನತೆ ಇರುವವರೆಗೂ ಮೀಸಲಾತಿ ಇರಬೇಕು, ಮೀಸಲಾತಿ ಪ್ರಶ್ನೆ ಮಾಡುತ್ತಿದ್ದವರಿಗೆ ಶೇ.10 ರಷ್ಟುಮೀಸಲಾತಿ ಸಿಕ್ಕಿದೆ. ಯಾವ ಸಮಾಜ ಕೂಡ ಮೀಸಲಾತಿಯಿಂದ ಹೊರಗೆ ಉಳಿದಿಲ್ಲ. ಕರ್ನಾಟಕದ ಜಲಿಯನ್‌ ವಾಲಾಬಾಗ್‌ ಎಂದು ಕರೆಯುವ ವಿದುರಾಶ್ವತ್ಥದ ಅಭಿವೃದ್ಧಿ ಹಿಂದೆ ಪ್ರೊ.ಬಿ.ಗಂಗಾಧರಮೂರ್ತಿ ಇದ್ದರೆಂದರು.

ನುಡಿನಮನದಲ್ಲಿ ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ, ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿ, ಗೌರಿಬಿದನುರು ಶಾಸಕ ಎನ್‌.ಎಚ್‌.ಶಿವಶಂಕರರೆಡ್ಡಿ, ದಸಂಸ ರಾಜ್ಯ ಸಂಚಾಲಕ ಗಡ್ಡಂ ವೆಂಕಟೇಶ್‌, ಬಾಗೇಪಲ್ಲಿ ಪ್ರಜಾ ವೈದ್ಯ ಡಾ.ಅನಿಲ್‌ ಕುಮಾರ್‌, ಸಾಮಾಜಿಕ ಹೋರಾಟಗಾರ ಎನ್‌.ಮುನಿಸ್ವಾಮಿ, ಗೊಲ್ಲಹಳ್ಳಿ ಶಿವಪ್ರಸಾದ್‌, ಮುನಿರೆಡ್ಡಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಡಾ.ಆರ್‌.ಕೆ.ಸರೋಜಾ, ಡಾ.ಸಿ.ನಾಗರತ್ನ, ದಲಿತ ಮುಖಂಡ ಅಣ್ಣಯ್ಯ, ಲೇಖಕ ಯೋಗೇಶ್‌ ಮಾಸ್ಟರ್‌, ಹೋರಾಟಗಾರ್ತಿ ವಿ.ಗೀತಾ, ದಸಂಸ ಜಿಲ್ಲಾ ಸಂಚಾಲಕ ಸಿ.ಜಿ.ಗಂಗಪ್ಪ, ರಂಗಭೂಮಿ ಕಲಾವಿದ ನಾಯಕ್‌ ಮತ್ತಿತರರು ಇದ್ದರು.

ರಾಜ್ಯದ 176 ಗ್ರಾಪಂಗಳಿಗೆ ಗಾಂಧಿ ಗ್ರಾಮ ಪುರಸ್ಕಾರ

ಸಮ ಸಮಾಜ, ಜಾತ್ಯಾತೀತ ಸಮಾಜ ನಿರ್ಮಾಣಕ್ಕೆ ಚಿಂತಕರಾದ ಪ್ರೊ.ಬಿ.ಗಂಗಾಧರಮೂರ್ತಿ ಒತ್ತು ಕೊಟ್ಟಿದ್ದರು. ಸಮಾಜ ಪರಿವರ್ತನೆ ಆಗಬೇಕು, ಸಾಮಾಜಿಕ ವ್ಯವಸ್ಥೆ ಬದಲಾಗಬೇಕೆಂದು ದಲಿತ, ಸಾಂಸ್ಕೃತಿಕ ಚಳವಳಿಗೆ ಮಾರ್ಗದರ್ಶನರಾಗಿ ಸ್ಪೂರ್ತಿ ತುಂಬಿ ಅಂಬೇಡ್‌್ಕರ್‌, ಗಾಂಧಿ ಹಾಗೂ ಕಮ್ಯೂನಿಸ್ಟ್‌ ಚಿಂತನೆ, ವಿಚಾರಾಧರೆಗಳನ್ನು ಮೈಗೂಡಿಸಿಕೊಂಡು ರಾಜೀ ಇಲ್ಲದ ಹೋರಾಟ ನಡೆಸಿದ್ದರು.
- ಸಿದ್ದರಾಮಯ್ಯ ಮಾಜಿ ಸಿಎಂ