ಆರೋಗ್ಯ ತುರ್ತು ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಸಂಪೂರ್ಣ ಜಾರಿ ಇರುವುದರಿಂದ ಭಾನುವಾರ ಯಾವುದೇ ಕಾರ್ಯಕ್ರಮ, ಮಾರುಕಟ್ಟೆ ಸೇರಿದಂತೆ ಯಾವುದಕ್ಕೂ ಅವಕಾಶವೇ ಇಲ್ಲ: ಜಿಲ್ಲಾಧಿಕಾರಿ ಪಿ. ಸುನೀ​ಲ​ಕು​ಮಾ​ರ್‌| ಭಾನುವಾರದಂದು ಲಾಕ್‌ಡೌನ್‌| ಭಾನು​ವಾರ ಮದುವೆ ನಿಗ​ದಿ​ಗೊ​ಳಿ​ಸಿ​ದ​ವ​ರಿಗೆ ಸಂಕ​ಷ್ಟ|

ಕೊಪ್ಪಳ(ಮೇ.21): ಮೇ 31ರ ವರೆಗೂ ಭಾನುವಾರ ಸಂಪೂರ್ಣ ಲಾಕ್‌ಡೌನ್‌ ಇರುತ್ತದೆ. ಅಂದು ಮದುವೆ ಮತ್ತಿತರರ ಸಮಾರಂಭಗಳಿಗೆ ಪರವಾನಗಿ ನೀಡಿದ್ದರೂ ರದ್ದು ಮಾಡಲಾಗಿದ್ದು, ಭಾನುವಾರ ಮದುವೆ ಮಾಡುವಂತಿಲ್ಲ.
ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಇಂಥದೊಂದು ಆದೇಶ ಹೊರಡಿಸಿದ್ದಾರೆ!

ಆರೋಗ್ಯ ತುರ್ತು ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಸಂಪೂರ್ಣ ಜಾರಿ ಇರುವುದರಿಂದ ಭಾನುವಾರ ಯಾವುದೇ ಕಾರ್ಯಕ್ರಮ, ಮಾರುಕಟ್ಟೆ ಸೇರಿದಂತೆ ಯಾವುದಕ್ಕೂ ಅವಕಾಶವೇ ಇಲ್ಲ. ಹೀಗಾಗಿ, ಎಲ್ಲರೂ ಈ ಆದೇಶವನ್ನು ಪಾಲನೆ ಮಾಡಬೇಕು ಮತ್ತು ಈಗಾಗಲೇ ಭಾನುವಾರದಂದು ಮದುವೆ ಮಾಡುವುದಕ್ಕೆ ಅವಕಾಶ ನೀಡಿದ್ದರೆ ಅದನ್ನು ರದ್ದು ಮಾಡಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಮೇ 24 ಮತ್ತು ಮೇ 31ರಂದು ಇದ್ದು, ಅಂದು ಎರಡು ದಿನವೂ ಸಂಪೂರ್ಣ ಲಾಕ್‌ಡೌನ್‌ ಇರುತ್ತದೆ ಎಂದು ಪ್ರತ್ಯೇಕ ಆದೇಶವನ್ನು ಹೊರಡಿಸಲಾಗಿದ್ದು, ನೂರಾರು ಸಂಖ್ಯೆಯಲ್ಲಿ ಇದ್ದ ಮದುವೆ ಸಮಾರಂಭಗಳಿಗೆ ತೀವ್ರ ಸಮಸ್ಯೆಯಾಗಲಿದೆ.

ಟಿಬಿ ಡ್ಯಾಂಗೆ ಸಮಾನಾಂತರ ಡ್ಯಾಂ: ಸಮೀಕ್ಷೆಗೆ ಸರ್ಕಾರ ಅಸ್ತು

ಇಲ್ಲ ಕಡಿವಾಣ

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ಮದುವೆ ಸಮಾರಂಭಗಳು ಎಗ್ಗಿಲ್ಲದೇ ನಡೆಯುತ್ತಿವೆ. ನೂರಾರು ಸಂಖ್ಯೆಯಲ್ಲಿ ಜನರು ಸೇರಿರುತ್ತಾರೆ. ಜಿಲ್ಲಾಡಳಿತ ಕೇವಲ ಆದೇಶ ಮಾಡಿ ಕೈ ತೊಳೆದುಕೊಳ್ಳುತ್ತದೆಯೇ ಹೊರತು, ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ಮದುವೆಗಳನ್ನು ನಿಯಂತ್ರಣ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಕೊಪ್ಪಳ ತಾಲೂಕಿನಲ್ಲಿಯೇ ಕಳೆದ ನಾಲ್ಕಾರು ದಿನಗಳಿಂದ ಭಾರಿ ಸಂಖ್ಯೆಯಲ್ಲಿ ಮದುವೆಗಳು ನಡೆಯುತ್ತಿದ್ದು, ಜನರು ಅಷ್ಟೇ ದೊಡ್ಡ ಪ್ರಮಾಣದಲ್ಲಿ ಸೇರುತ್ತಿದ್ದಾರೆ.

ಬಂದಿಲ್ಲ ಫಲಿತಾಂಶ

ಜಿಲ್ಲೆಯಲ್ಲಿ ಆತಂಕಕ್ಕೆ ಹೆಚ್ಚಳಕ್ಕೆ ಕಾರಣವಾಗಿರುವ ಭಿಕ್ಷುಕರ ಪರೀ​ಕ್ಷಾ ವರದಿಗಳು ಇನ್ನು ಬಂದಿಲ್ಲ. ಅವುಗಳ ಬಂದ ಮೇಲೆಯೇ ಪಾಸಿಟಿವ್‌ ಪ್ರಕರಣದ ಪ್ರಾಥಮಿಕ ಸಂಪರ್ಕ ವ್ಯಕ್ತಿಗಳ ಕೊರೋನಾ ಸ್ಫೋಟ ಎಷ್ಟರಮಟ್ಟಿಗೆ ಆಗಿದೆ ಎನ್ನುವುದು ಗೊತ್ತಾಗುತ್ತದೆ. ಅದರಲ್ಲೂ ನಾನಾ ಊರುಗಳನ್ನು ಸುತ್ತಾಡಿರುವ ಪ್ರಾಥಮಿಕ ಭಿಕ್ಷುಕರ ವರದಿ ನೆಗಟಿವ್‌ ಬರಲಿ ಎಂದು ಇಡೀ ಜಿಲ್ಲೆಯ ಬೇಡಿಕೊಳ್ಳುತ್ತಿದೆ. ಇದಕ್ಕಾಗಿ ತುದಿಗಾಲ ಮೇಲೆ ನಿಂತು ಫಲಿತಾಂಶವನ್ನು ಕಾಯುತ್ತಿದ್ದಾರೆ ಜನರು.

ಯಾರು ಹೊಣೆ?

ಮುಂಬೈದಿಂದ ಬಂದ ವ್ಯಕ್ತಿಯನ್ನು ಜನರಲ್‌ ಬಸ್ಸಿನಲ್ಲಿ ಕರೆದುಕೊಂಡು ಹೋಗಿದ್ದು ಯಾಕೆ ಎನ್ನುವ ಪ್ರಶ್ನೆಗೆ ಜಿಲ್ಲಾಡಳಿತವೇ ಉತ್ತರಿಸಬೇಕಾಗಿದೆ. ಪ್ರಯಾಣಿಕರ ಸಂಚಾರಕ್ಕೆ ಬಿಟ್ಟಿರುವ ಬಸ್ಸುಗಳಲ್ಲಿ ಮಹಾರಾಷ್ಟ್ರದಿಂದ ಬಂದಿರುವ ವ್ಯಕ್ತಿಯನ್ನು ಗುರುತಿಸಿಯೂ ಅಧಿಕಾರಿಗಳು ಸಾಮಾನ್ಯ ಬಸ್ಸಿನಲ್ಲಿ ಯಾಕೆ ಕಳುಹಿಸಿದರು? ಪ್ರತ್ಯೇಕ ವಾಹನದ ಮೂಲಕ ಕ್ವಾರಂಟೈನ್‌ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ವಿಶ್ಲೇಷಣೆ ಮಾಡಲಾಗುತ್ತದೆ.