Asianet Suvarna News Asianet Suvarna News

ಕನ್ನಡಕ್ಕೆ ಯಾವುದೇ ಭಾಷೆ ಸಾಟಿಯಿಲ್ಲ: ವೀರಭದ್ರಯ್ಯ

ಕನ್ನಡ ಸಂಪದ್ಭರಿತ ಭಾಷೆ, ಕನ್ನಡಕ್ಕೆ ಯಾವುದೇ ಭಾಷೆ ಸಾಟಿಯಿಲ್ಲ. ಕನ್ನಡಕ್ಕೆ ಕುತ್ತು ಬಂದಿರುವುದು ಗ್ರಾಮೀಣರಿಂದಲ್ಲ, ಬೆಂಗಳೂರಿನಲ್ಲಿ ಕನ್ನಡಿಗರು ಅನ್ಯ ಭಾಷಿಕರ ಅಬ್ಬರದಲ್ಲಿ ಅಲ್ಪಸಂಖ್ಯಾತರಾಗುತ್ತಿದ್ದು, ಆಳುವ ಸರ್ಕಾರಗಳು ಕನ್ನಡ ಭಾಷೆ ಉಳಿಸಿ ಬೆಳಸುವ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಸಲಹೆ ನೀಡಿದರು.

No language can compare to Kannada Veerabhadraiah snr
Author
First Published Jan 31, 2023, 6:23 AM IST

 ಮಧುಗಿರಿ :  ಕನ್ನಡ ಸಂಪದ್ಭರಿತ ಭಾಷೆ, ಕನ್ನಡಕ್ಕೆ ಯಾವುದೇ ಭಾಷೆ ಸಾಟಿಯಿಲ್ಲ. ಕನ್ನಡಕ್ಕೆ ಕುತ್ತು ಬಂದಿರುವುದು ಗ್ರಾಮೀಣರಿಂದಲ್ಲ, ಬೆಂಗಳೂರಿನಲ್ಲಿ ಕನ್ನಡಿಗರು ಅನ್ಯ ಭಾಷಿಕರ ಅಬ್ಬರದಲ್ಲಿ ಅಲ್ಪಸಂಖ್ಯಾತರಾಗುತ್ತಿದ್ದು, ಆಳುವ ಸರ್ಕಾರಗಳು ಕನ್ನಡ ಭಾಷೆ ಉಳಿಸಿ ಬೆಳಸುವ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಸಲಹೆ ನೀಡಿದರು.

ತಾಲೂಕಿನ ಆಂಧ್ರದ ಗಡಿ ಭಾಗಕ್ಕೆ ಹೊಂದಿರುವ ಕೊಡಿಗೇನಹಳ್ಳಿಯಲ್ಲಿ ಸೋಮವಾರ ನಡೆದ ಹೋಬಳಿ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಆಂಧ್ರದ ಗಡಿ ಭಾಗದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ಹೆಚ್ಚು ನಡೆಯಬೇಕು. ಪ್ರತಿ ಬೀದಿಯಲ್ಲೂ ಕನ್ನಡದ ತೇರು ಎಳೆಯುವಂತಾಗಬೇಕು ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್‌.ಸಿದ್ದಲಿಂಗಪ್ಪ ಮಾತನಾಡಿ, ದೊಡ್ಡರಂಗೇಗೌಡರಂತಹ ಮೇರು ವ್ಯಕ್ತಿತ್ವದ ಮಹನೀಯರನ್ನು ಕೊಡುಗೆಯಾಗಿ ನೀಡಿದ ಕೀರ್ತಿ ತಾಲೂಕಿಗೆ ಸಲ್ಲುತ್ತದೆ. ಗಡಿ ಭಾಗದ ಕೊಡಿಗೇನಹಳ್ಳಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು ಗಡಿ ನಾಡಿನಲ್ಲಿ ಕನ್ನಡದ ತೇರು ಎಳೆಯುವ ಕ್ರಮ ಶ್ಲಾಘನೀಯ. ಗಡಿ ಗ್ರಾಮಗಳಲ್ಲಿ ತೆಲುಗಿನ ಮೇಲಾಟದಲ್ಲೂ ಕನ್ನಡ ಭಾಷೆ ಉಳಿದುಕೊಂಡು ಬಂದಿದೆ. ಕನ್ನಡಕ್ಕಿರುವ ಜೀರ್ಣಶಕ್ತಿ ಅಂತದ್ದು. ಇತರೆ ಭಾಷೆಗಳ ಪದಗಳನ್ನು ಕನ್ನಡಕ್ಕೆ ಎರವಲು ಪಡೆದುಕೊಂಡಿದ್ದರೂ ಕನ್ನಡ ಮೇರು ಭಾಷೆಯಾಗಿ ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಇಂಗ್ಲಿಷ್‌ ಭಾಷೆಯನ್ನು ಕನ್ನಡದಷ್ಟೇ ಎತ್ತರಕ್ಕೇರಿಸಿ ಬೆಳಸಿದ ಕೀರ್ತಿ ಕನ್ನಡಿಗರಿಗೆ ಸಲ್ಲುತ್ತದೆ. ಕನ್ನಡ ಕಲೆಯನ್ನು ಇಂದಿಗೂ ಜೀವಂತವಾಗಿರಿಸಿದವರು ಗ್ರಾಮೀಣರು. ಈ ವಿಚಾರದಲ್ಲಿ ಕೊಡಿಗೇನಹಳ್ಳಿ ಭಾಗದ ಜನತೆ ಎತ್ತರಕ್ಕೆ ನಿಲ್ಲುತ್ತಾರೆ ಎಂದರು.

ಶಾಸಕ ಎಂ.ವಿ.ವೀರಭದ್ರಯ್ಯ, ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಇಬ್ಬರೂ ಸೇರಿ ಕನ್ನಡ ಭವನವನ್ನು ಪೂರ್ಣಗೊಳಿಸಲು ಸಹಕರಿಸಬೇಕು. ಆ ನಿಟ್ಟಿನಲ್ಲಿ ಪ್ರತಿ ನಿತ್ಯ ಕನ್ನಡದ ಕಾರ್ಯಕ್ರಮಗಳು ನಡೆಯುವ ವಾತಾವರಣ ನಿರ್ಮಾಣವಾಗಬೇಕು ಎಂದರು.

ತಗ್ಗಿಹಳ್ಳಿ ರಾಮಕೃಷ್ಣ ಆಶ್ರಮದ ರಮಾನಂದಸ್ವಾಮೀಜಿ ಮಾತನಾಡಿ, ಗಡಿ ಭಾಗದಲ್ಲಿ ಕನ್ನಡ ಮೆರವಣಿಗೆ ಹಮ್ಮಿಕೊಂಡಿರುವುದು ಸಂತಸದ ವಿಚಾರ. ತೆಲುಗು ಮಿಶ್ರಿತ ಭಾಷಿಕರು ಹೆಚ್ಚಿರುವ ಇಂತಹ ಗಡಿನಾಡಿನಲ್ಲಿ ಕನ್ನಡ ಕಾರ್ಯಕ್ರಮ ನಡೆಸುವುದು ಸಾಮಾನ್ಯದ ವಿಷಯವಲ್ಲ. ಗ್ರಾಮೀಣ ಪ್ರದೇಶದಲ್ಲಿರುವ ಸಾಹಿತಿಗಳನ್ನು ಗುರುತಿಸಿ, ಗೌರವಿಸುವ ಕೆಲಸವಾಗಬೇಕು. ಕನ್ನಡಿಗರಿಗೆ ಹೊರಗಿನವರು ಸಮಸ್ಯೆಯಲ್ಲ, ನಮ್ಮವರೇ ಕನ್ನಡ ಭಾಷೆಗೆ ಸಮಸ್ಯೆಯಾಗಿದ್ದು, ಮಾತೃಭಾಷೆ ಅಚ್ಚುಕಟ್ಟಾಗಿರಬೇಕು. ಕಿವಿಗೆ ಇಂಪೆನಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಅಧ್ಯಕ್ಷೆ ಸಹನಾ ನಾಗೇಶ್‌, ಉಪಾಧ್ಯಕ್ಷ ರಾಮಚಂದ್ರಪ್ಪ, ಗೌರವ ಕಾರ್ಯದರ್ಶಿ ಗಂಗಾಧರ್‌ ವಿ.ರೆಡ್ಡಿಹಳ್ಳಿ, ಕಾರ್ಯದರ್ಶಿ ರಂಗಧಾಮಯ್ಯ, ಹೋಬಳಿ ಘಟಕದ ಅಧ್ಯಕ್ಷ ಕೆ.ಎಲ್‌.ನಂದೀಶಯ್ಯ, ಗೌರವಾಧ್ಯಕ್ಷ ರವಿಮೋಹನರೆಡ್ಡಿ, ಪ್ರೊ,ಕಾಳೇನಹಳ್ಳಿ ನರಸಿಂಹಯ್ಯ, ಗ್ರಾಪಂ ಅಧ್ಯಕ್ಷೆ ನಸ್ರೀನ್‌ ತಾಜ್‌, ನಿರ್ದೇಶಕರಾದ ಎಂ.ವಿ.ಮೂಡ್ಲಗಿರೀಶ್‌, ವೀಣಾಶ್ರೀನಿವಾಸ್‌, ಉಮಾಮಲ್ಲೇಶ್‌, ಲಲಿತಾಂಬ ಲಕ್ಷ್ಮೇನರಸಯ್ಯ, ಗಾಯಿತ್ರಿ ನಾರಾಯಣ್‌, ನಂಜಮ್ಮ ಸಿದ್ದಪ್ಪ, ಉಮಾಮಹೇಶ್‌, ನಿವೃತ್ತ ಪ್ರಾಂಶುಪಾಲ ಮರಿಬಸಪ್ಪ, ಜಿ.ಪ್ರೌ.ಶಾ.ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಚನ್ನಿಗರಾಮಯ್ಯ, ಅಮರಾವತಿ ದ್ರೇಹಚಾರ್‌, ತಾಲೂಕು ಸಂಘದ ಅಧ್ಯಕ್ಷ ರಂಗಧಾಮಯ್ಯ, ನರಸಿಂಹರೆಡ್ಡಿ, ನರಸರೆಡ್ಡಿ, ಜಬಿವುಲ್ಲಾ, ಕಲಿದೇವಪುರ ಶಿವಕುಮಾರ್‌ ಸೇರಿದಂತೆ ಕನ್ನಡಾಭಿಮಾನಿಗಳು ಇದ್ದರು.

ಕನ್ನಡ ಕಟ್ಟುವ ಕೆಲಸವಾಗಲಿ: ಸಮ್ಮೇಳನಾಧ್ಯಕ್ಷ

ಸಮ್ಮೇಳನಾಧ್ಯಕ್ಷ ಕೆ.ಪಿ.ಅಶ್ವತ್ಥನಾರಾಯಣ್‌ ಮಾತನಾಡಿ, ಆಂಧ್ರದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಇಂತಹ ಪ್ರದೇಶದಲ್ಲಿ ಕನ್ನಡ ಕಟ್ಟುವ ಕೆಲಸವಾಗಬೇಕು. ಸ್ಥಳೀಯವಾಗಿ ಉನ್ನತ ಶಿಕ್ಷಣ ಸಿಗಬೇಕು. ವೃತ್ತಿಪರ ತರಬೇತಿಗಳು ದೊರಕಬೇಕು. ನಮ್ಮ ಕನ್ನಡ ನಾಡಿನ ನೆಲ, ಜಲ, ತಲಪರಿಗೆ, ಕೆರೆ, ಕಟ್ಟೆಗಳು, ಪರಿಸರಗಳನ್ನು ಸಂರಕ್ಷಿಸಿ ಜನಮುಖಿ ಕೆಲಸವಾಗಬೇಕು. ಜಯಮಂಗಲಿ ನದಿ ನೀರನ್ನು ನಾವು ಬಳಸಬೇಕು.ಯುವ ಜನಾಂಗಕ್ಕೆ ಸ್ಥಳೀಯವಾಗಿ ಉದ್ಯೋಗ ದೊರಕಬೇಕು. ರೈತರು, ಮಹಿಳೆಯರಯ, ಬಡವರು, ಕೂಲಿಕಾರ್ಮಿಕರಿಗೆ ಇನ್ನೂ ಹೆಚ್ಚು ಸೌಲಭ್ಯಗಳು ಸಿಗಬೇಕು. ಈ ಎಲ್ಲ ಸಮಸ್ಯೆಗಳು ಸುಧಾರಣೆ ಆದಾಗ ಮಾತ್ರ ಕನ್ನಡ ಕಟ್ಟುವ ಸಮಾರಂಭಗಳಿಗೆ ಅಥÜರ್‍,ಗೌರವ ಬರುತ್ತದೆ. ಈ ನಿಟ್ಟಿನಲ್ಲಿ ನಮ್ಮನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ಪ್ರಜೆಗಳ ಹಿತ ಕಾಪಾಡಲು ಮುಂದಾಗಬೇಕು ಎಂದರು.

Follow Us:
Download App:
  • android
  • ios