ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ಪಕ್ಷದ ಸರ್ಕಾರ ಈ ಹಿಂದಿನ ಬಿಜೆಪಿ ಸರ್ಕಾರದಂತೆ ಅವೈಜ್ಞಾನಿಕವಾಗಿ ಒಳಮೀಸಲಾತಿ ಜಾರಿಗೊಳಿಸಲು ಮುಂದಾದರೆ, ಬಿಜೆಪಿ ಪಕ್ಷಕ್ಕೆ ಆದ ಗತಿಯೇ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷಕ್ಕೂ ಆಗಲಿದೆ ಎಂದು ಓಡ್‌ ಕಮ್ಯುನಿಟಿ ಕೌನ್ಸಿಲ್‌ ಆಫ್‌ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ರವಿ ಮಾಕಳಿ ತಿಳಿಸಿದ್ದಾರೆ.

ತುಮಕೂರು : ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ಪಕ್ಷದ ಸರ್ಕಾರ ಈ ಹಿಂದಿನ ಬಿಜೆಪಿ ಸರ್ಕಾರದಂತೆ ಅವೈಜ್ಞಾನಿಕವಾಗಿ ಒಳಮೀಸಲಾತಿ ಜಾರಿಗೊಳಿಸಲು ಮುಂದಾದರೆ, ಬಿಜೆಪಿ ಪಕ್ಷಕ್ಕೆ ಆದ ಗತಿಯೇ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷಕ್ಕೂ ಆಗಲಿದೆ ಎಂದು ಓಡ್‌ ಕಮ್ಯುನಿಟಿ ಕೌನ್ಸಿಲ್‌ ಆಫ್‌ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ರವಿ ಮಾಕಳಿ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸುಮಾರು 11 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಭೋವಿ ಸಮಾಜಕ್ಕೆ ಒಳಮೀಸಲಾತಿ ಜಾರಿಯಾದರೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಸಾಕಷ್ಟುಹೊಡೆತ ಬೀಳಲಿದೆ. ಹಾಗಾಗಿ ಒಳಮೀಸಲಾತಿ ವರ್ಗೀಕರಣ ಶಿಫಾರಸು ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡಲಾಗಿದೆ ಎಂದರು.

ಕಟ್ಟಡ, ದೇವಾಲಯ, ಮಸೀದಿ, ಮಂದಿರಗಳನ್ನು ಕಟ್ಟುವ ಶ್ರಮಜೀವಿಗಳ ಸಮೂಹವಾಗಿರುವ ಭೋವಿ ಸಮಾಜ ರಾಷ್ಟ್ರದಲ್ಲಿಯೇ ಗಟ್ಟಿಯಾಗಿ ಕಟ್ಟುವ ನಿಟ್ಟಿನಲ್ಲಿ ಓಡ್‌ ಕಮ್ಯುನಿಟಿ ಕೌನ್ಸಿಲ್‌ ಅಫ್‌ ಇಂಡಿಯಾ ಹೆಸರಿನಲ್ಲಿ ಸಂಘಟನೆಗೆ ಇಳಿದಿದ್ದೇವೆ. ಸದದಲ್ಲಿಯೇ ಒಸಿಸಿಐನ ರಾಷ್ಟ್ರೀಯ ಸಮ್ಮೇಳನ ಕರ್ನಾಟಕದಲ್ಲಿ ನಡೆಯಲಿದೆ ಎಂದು ನುಡಿದರು.

ರಾಜ್ಯದಲ್ಲಿಯೂ ಸಂಘಟನೆಯನ್ನು ಬಲವಾಗಿ ಕಟ್ಟುವ ಉದ್ದೇಶದಿಂದ ಈಗಾಗಲೇ ಅವಧಿ ಪೂರ್ಣಗೊಂಡಿರುವ ಭೋವಿ ಸಮಾಜದ ಸಂಘಟನೆ ಗಳಿಗೆ ಹೊಸ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನೇಮಕ ನಡೆಯುತ್ತಿದ್ದು, ತುಮಕೂರು ಜಿಲ್ಲಾಧ್ಯಕ್ಷರಾಗಿ ಅಂತರಸನಹಳ್ಳಿಯ ಪುರುಷೋತ್ತಮ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಅವರು ಮತ್ತಷ್ಟುಕ್ರಿಯಾಶೀಲರಾಗಿ ಭೋವಿ ಸಮಾಜವನ್ನು ಕಟ್ಟಲಿದ್ದಾರೆ ಎಂದು ರವಿ ಮಾಕಳಿ ಸ್ಪಷ್ಟಪಡಿಸಿದರು.

ಒಸಿಸಿಐನ ರಾಜ್ಯಾಧ್ಯಕ್ಷ ಆನಂದಪ್ಪ ಮಾತನಾಡಿ, ಭೋವಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತು ದೊರೆಯಬೇಕೆಂಬುದು ಸಂಘದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಸಂಘಟನೆಯನ್ನು ಬಲಪಡಿಸಲು ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಲಾಗುತ್ತಿದೆ. ಈ ಹಿಂದಿನ ರಾಜ್ಯ ಸರ್ಕಾರ ಒಳಮೀಸಲಾತಿ ವರ್ಗೀಕರಣಕ್ಕೆ ಪರಿಶಿಷ್ಟಜಾತಿಯಲ್ಲಿನ ಶೇ.99 ಜಾತಿಗಳ ವಿರೋಧವಿದ್ದರೂ ಜಾರಿ ಮಾಡಲು ಹೋಗಿ ತನ್ನ ಅಧಿಕಾರವನ್ನೇ ಕಳೆದುಕೊಂಡಿದೆ. ಕಾಂಗ್ರೆಸ್‌ ನಮ್ಮ ಎಚ್ಚರಿಕೆಯನ್ನು ನಿರ್ಲಕ್ಷಿಸಿದರೆ ಸರ್ವಪತನ ಕಾಣಲಿದೆ ಎಂದರು.

ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಊರುಕೆರೆ ಉಮೇಶ್‌ ಮಾತನಾಡಿ, 1973ರಲ್ಲಿ ಅಂದಿನ ಶಾಸಕರಾಗಿದ್ದ ಗಂಗಾಭೋವಿ ಅವರು ನಮಗೆ ತೋಟಗಾರಿಕೆ ಇಲಾಖೆಯ ಪಕ್ಕದಲ್ಲಿ ಜಾಗ ಕೊಡಿಸಿದ್ದರು.ಸದರಿ ಜಾಗದಲ್ಲಿ ಇಂದು ಹಾಸ್ಟೆಲ್‌ ತಲೆ ಎತ್ತಿ ನೂರಾರು ವಿದ್ಯಾರ್ಥಿಗಳಿಗೆ ಆಸರೆಯಾಗಿದೆ. ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಮುಂದಿನ ಡಿಸೆಂಬರ್‌ನಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.

ಒಸಿಸಿಐನ ತುಮಕೂರು ಜಿಲ್ಲಾಧ್ಯಕ್ಷ ಪುರುಷೋತ್ತಮ ಉಪಸ್ಥಿತರಿದ್ದರು. ಸುದ್ದಿಗೋಷ್ಟಿಯಲ್ಲಿ ಒಸಿಸಿಐನ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಧರ್‌, ದಕ್ಷಿಣ ಭಾರತ ಅಧ್ಯಕ್ಷ ಜೈಶಂಕರ್‌, ಪಾಲಿಕೆ ಸದಸ್ಯ ಮಂಜುನಾಥ್‌, ವಿಶ್ವನಾಥ್‌,ಯೋಗೀಶ್‌, ಶಿವಕುಮಾರ್‌, ವೆಂಕಟಸ್ವಾಮಿ, ಶ್ರೀನಿವಾಸಮೂರ್ತಿ, ಎಲ್ಲಾ ತಾಲೂಕು ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಎಲ್ಲಾ ರಂಗದಲ್ಲಿಯೂ ಹಿಂದುಳಿದಿರುವ ಭೋವಿ ಸಮಾಜಕ್ಕೆ ಗುರುಗಳು ದೊರೆತ ನಂತರ ಯುವಕರಲ್ಲಿ ಜಾಗೃತಿ ಮೂಡಿದ ಪರಿಣಾಮ, ಇಂದು ಶೈಕ್ಷಣಿಕವಾಗಿ ಸಾಕಷ್ಟುಅಭಿವೃದ್ಧಿ ಕಾಣುತಾಗಿದೆ. ಅಲ್ಲದೆ, ಆರ್ಥಿಕ, ರಾಜಕೀಯವಾಗಿಯೂ ಸಾಕಷ್ಟುಅಭಿವೃದ್ಧಿ ಕಾಣಲು ಸಾಧ್ಯವಾಗಿದೆ. ಪ್ರಸ್ತುತ ನಮ್ಮ ಸಮಾಜದ 7 ಜನ ಶಾಸಕರಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಮತ್ತು ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಎಲ್ಲಾ ಪಕ್ಷಗಳಲ್ಲಿ ಮನವಿ ಮಾಡಲಾಗಿದೆ.