ಕಡೂರು ಕ್ಷೇತ್ರದಲ್ಲಿ ಜೆಡಿಎಸ್ ಎಲ್ಲಿದೆ ಎಂದು ಟೀಕಿಸುವವರಿಗೆ ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಜನರೇ ಸಾಕ್ಷಿಯಾಗಿದ್ದಾರೆಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಕಡೂರು (ಏ.20): ಕಡೂರು ಕ್ಷೇತ್ರದಲ್ಲಿ ಜೆಡಿಎಸ್ ಎಲ್ಲಿದೆ ಎಂದು ಟೀಕಿಸುವವರಿಗೆ ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಜನರೇ ಸಾಕ್ಷಿಯಾಗಿದ್ದಾರೆಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಕಡೂರು ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಜೆಡಿಎಸ್ ಪಕ್ಷದ ಸಮಾವೇಶ ಮತ್ತು ಸದಸ್ಯತ್ವ ಅಭಿಯಾನ ಉಧ್ಘಾಟಿಸಿ ಮಾತನಾಡಿ ಇಂದಿನ ಕಾರ್ಯಕ್ರಮಕ್ಕೆ ಕಡೂರು ಕ್ಷೇತ್ರದ ಜನರನ್ನು ಅಪಾರ ಸಂಖ್ಯೆಯಲ್ಲಿ ಸೇರಿಸಿ ಕಾರ್ಯ ಕ್ರಮದ ಯಶಸ್ಸಿಗೆ ಸಹಕರಿಸಿರುವ ವೈಎಸ್ .ವಿ ದತ್ತಣ್ಣ ಮತ್ತು ಚೇತನ್ ಕೆಂಪರಾಜ್ ಹಾಗೂ ಕಾರ್ಯಕರ್ತರಿಗೆ ಪ್ರಣಾಮ ಸಲ್ಲಿಸುತ್ತೇನೆ.
ಚಿಕ್ಕಮಗಳೂರು,ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಶಾಸಕರು ಗೆಲ್ಲಲು ಸದಾ ನಿಮ್ಮ ಜೊತೆ ಇರುತ್ತೇನೆ. ಜೆಡಿಎಸ್ ಪಕ್ಷವು ರಾಜ್ಯದ 7.50 ಕೋಟಿ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದು. ಈ ಬಾರಿ ಎನ್ ಡಿ ಎ ಮೈತ್ರಿಕೂಟದ ಅಭ್ಯರ್ಥಿಗೆ ಟಿಕೇಟ್ ನೀಡಲಿದೆ ಎಂದರು.
ಕಷ್ಟ ಕಾಲದಲ್ಲಿ ದತ್ತಣ್ಣ ಕಡೂರು ಕ್ಷೇತ್ರದಲ್ಲಿ ಬಾವುಟ ಕಟ್ಟಿ ಪಕ್ಷ ಸಂಘಟಿಸಿ ಶಾಸಕರಾದರು. ಸೋತಾಗಲು ಪಕ್ಷ ದತ್ತರವನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿತು. ದೇವೇಗೌಡರು ಈ ಭಾಗದಲ್ಲಿ ಸಂಸದರಾದ ಅವಧಿಯಲ್ಲಿ ₹1400 ಕೋಟಿ ತರುವ ಮೂಲಕ ನೀರಾವರಿಗೆ ಆದ್ಯತೆ ನೀಡಿದ್ದಾರೆ. ಪಕ್ಷದ ಸದಸ್ಯತ್ವ ಮಾಡಲು ಮುಖಂಡರು ಮುಂದಾಗಬೇಕು ಎಂದರು.
ನಮಗೆ ಸಂತಸ ತಂದಿದೆ
ಮಾಜಿ ಶಾಸಕ ವೈ, ಎಸ್ ವಿ.ದತ್ತ ಮಾತನಾಡಿ, ಜೆಡಿಎಸ್ ಪಕ್ಷಕ್ಕೆ ಯುವಕರ ಆಕರ್ಷಣೆ ಮತ್ತು ಸಂಘಟನೆ ಕೂಡ ಬಲವಾಗಿದೆ. ಯುವಕ ಚೇತನ್ ಕೆಂಪರಾಜು ದೂರಿದಂತೆ ಕಾಂಗ್ರೆಸ್ ಪಕ್ಷದಿಂದ ಕಿರುಕುಳ ಹೆಚ್ಚಾಗಿದೆ. 2005ರಲ್ಲಿ ಬಾವುಟ ಕಟ್ಟಲು ಹೆದರುತ್ತಿದ್ದ ಸಮಯದಲ್ಲಿ ನಾನು ಪಕ್ಷದ ಬಾವುಟ ಕಟ್ಟಿ 1200 ಕಿಮೀ. ಪಾದಯಾತ್ರೆ ಮಾಡಿ ಜನರ ಹೋರಾಟದ ಧ್ವನಿಯಾಗಿ ಹಿಂದುಳಿದ ಎಲ್ಲ ಸಮಾಜಗಳ ಬೆಂಬಲದಿಂದ ಶಾಸಕನಾಗಿ ಕೆಲಸ ಮಾಡಿದ್ದೇನೆ. ಈದೀಗ ಕಡೂರು ಕ್ಷೇತ್ರದಲ್ಲಿ ನನಗೆ ಶಕ್ತಿಯಾಗಿ ನಿಖಿಲ್ ಬಂದಿರುವುದು ನಮಗೆ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಜೊತೆ ಇರುತ್ತೇನೆ ಎಂದರು.

