Asianet Suvarna News Asianet Suvarna News

ಹಸಿ ಕಸ ವಾಸನೆ ತಡೆಗೆ ಹೊಸ ತಂತ್ರಜ್ಞಾನ: ಸಿಎಂ ಬೊಮ್ಮಾಯಿ

ಹೊಸ ತಂತ್ರಜ್ಞಾನದ ಮೂಲಕ ಕಸದ ದುರ್ವಾಸನೆ ಕಡಿಮೆ ಬನಶಂಕರಿಯಲ್ಲಿ ಈ ತಂತ್ರಜ್ಞಾನ ಯಶಸ್ವಿ: ಬೊಮ್ಮಾಯಿ

New Technology to Prevent Raw Garbage Smell in Bengaluru Says CM Basavaraj Bommai grg
Author
First Published Sep 16, 2022, 8:18 AM IST

ವಿಧಾನ ಪರಿಷತ್‌(ಸೆ.16):  ರಾಜಧಾನಿ ಬೆಂಗಳೂರಿನಲ್ಲಿ ತ್ಯಾಜ್ಯ ನಿರ್ವಹಣೆ ಅತ್ಯಂತ ಕ್ಲಿಷ್ಟಕರ ಸಮಸ್ಯೆಯಾಗಿದೆ. ಕಸ ಸಂಸ್ಕರಣೆಗೆ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಉದ್ದೇಶಿಸಲಾಗಿದ್ದು,ವಾಣಿಜ್ಯ ಪ್ರದೇಶ ಹಾಗೂ ವಾರ್ಡ್‌ ಮಟ್ಟದಲ್ಲಿ ಹಸಿ ಕಸ ಸಂಸ್ಕರಣೆ ಘಟಕ ಸ್ಥಾಪನೆ ಮಾಡುವ ಚಿಂತನೆ ಇದೆ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕಾಂಗ್ರೆಸ್‌ ಸದಸ್ಯ ಪಿ.ಆರ್‌.ರಮೇಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಮುಖವಾಗಿ ಹಸಿ ಹಾಗೂ ಒಣ ಕಸಿಗಳ ವಿಂಗಡಣೆ ಬಹುದೊಡ್ಡ ಸಮಸ್ಯೆ ಇದೆ. ನಗರದಲ್ಲಿ ದಿನಕ್ಕೆ 5 ಸಾವಿರ ಮೆಟ್ರಿಕ್‌ ಟನ್‌ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಆದರೆ ಕೇವಲ 2 ಸಾವಿರ ಮೆಟ್ರಿಕ್‌ ಟನ್‌ ಮಾತ್ರ ಸಂಸ್ಕರಣೆ ಆಗುತ್ತಿದೆ. ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆ, ಕಾಂಪೋಸ್ಟ್‌ ಗೊಬ್ಬರ ತಯಾರಿಸುವ ಮಾತುಗಳನ್ನು ಅನೇಕ ವರ್ಷಗಳಿಂದ ಹೇಳುತ್ತಾ ಬಂದಿದ್ದರೂ, ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ.

ಒಣ ಕಸದ ಜಾಗದಲ್ಲಿ ಹಸಿ ಕಸ, ಘನತ್ಯಾಜ್ಯ ಘಟಕಕ್ಕೆ ಬೀಗ ಜಡಿದ ಯು.ಟಿ.ಖಾದರ್!

ಹಸಿ ಕಸ ಸಂಸ್ಕರಣೆ ಘಟಕ ಸ್ಥಾಪಿಸಿದರೆ ಸುತ್ತಲಿನ ಜನರಿಗೆ ದುರ್ವಾಸನೆ ಬರುತ್ತದೆ. ಹೀಗಾಗಿ ಜನರ ಇಂತಹ ಘಟಕ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸುತ್ತಾರೆ. ಈ ಎಲ್ಲ ಕಾರಣಗಳಿಂದ ಹೊಸ ತಂತ್ರಜ್ಞಾನದ ಮೂಲಕ ದುರ್ವಾಸನೆ ಬರದಂತೆ ಹೊಸ ತಂತ್ರಜ್ಞಾನ ಉಳ್ಳ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ. ಬನಶಂಕರಿಯಲ್ಲಿ ಇಂತಹ ಒಂದು ಘಟಕ ಯಶಸ್ವಿಯಾಗಿದೆ. ಇಂತಹ ಘಟಕವನ್ನು ವಾಣಿಜ್ಯ ಪ್ರದೇಶ, ಮಾರುಕಟ್ಟೆಸೇರಿದಂತೆ ವಾರ್ಡ್‌ಗಳಲ್ಲಿ ಸ್ಥಾಪಿಸುವ ಚಿಂತನೆ ಇದೆ ಎಂದು ವಿವರಿಸಿದರು.

ತ್ಯಾಜ್ಯ ನಿರ್ವಹಣೆಗೆ ಈಗಾಗಲೇ ಪ್ರತ್ಯೇಕ ಕಂಪನಿ ಸ್ಥಾಪಿಸಿ ಪೂರ್ಣ ಪ್ರಮಾಣದ ಅಧಿಕಾರ ನೀಡಲಾಗಿದೆ. ಎಲ್ಲ ಬಗೆಯ ತ್ಯಾಜ್ಯದ ನಿರ್ವಹಣೆಯನ್ನು ಈ ಕಂಪನಿಯೇ ಮಾಡಲಿದೆ. ಹಾಲಿ ಇರುವ ಕಸ ಸಂಸ್ಕರಣಾ ಘಟಕಗಳಲ್ಲಿ ಹೊಸ ತಾಂತ್ರಿಕತೆ ಹಾಗೂ ಸಂಶೋಧನಾ ಕೈಗೊಳ್ಳುವ ನಿಟ್ಟಿನಲ್ಲಿ ಸುಬ್ಬರಾಯನಪಾಳ್ಯ ಘಟಕದಲ್ಲಿ ನವೀನ ತಂತ್ರಜ್ಞಾನ ಅಥವಾ ವಿಧಾನಗಳಿಂದ ಕಸವನ್ನು ಸಂಸ್ಕರಣೆ ಮತ್ತು ಸಂಶೋಧನೆ ಮಾಡುವ ಕೆಲಸವನ್ನು ಪ್ರಾಯೋಗಿಕವಾಗಿ ರುದ್ರಾಕ್ಷ ವೇಸ್ಟ್‌ ಯುಟಿಲೀಟಿಸ್‌ ಆರ್‌ ಆ್ಯಂಡ್‌ ಡಿ ಸಂಸ್ಥೆಗೆ ವಹಿಸಲಾಗಿದೆ. ಈ ಸಂಸ್ಥೆಯ ಅಧ್ಯಯನ ಮಾಡಿ ಸಲ್ಲಿಸುವ ಸಂಶೋಧನಾ ವರದಿಯನ್ನು ಪಾಲಿಕೆಯೊಂದಿಗೆ ಹಂಚಿಕೊಳ್ಳಲು ತಿಳಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
 

Follow Us:
Download App:
  • android
  • ios