ಆಶ್ರಯ ಮನೆ, ರೈತರು ಸೇರಿದಂತೆ ಕೆಳ ಮತ್ತು ಮಧ್ಯಮ ವರ್ಗದ ಜನರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಕಡಿಮೆ ದರದಲ್ಲಿ ಮರಳು ನೀಡಲು ಯೋಜನೆ| 10 ಲಕ್ಷದೊಳಗಿನ ಕಟ್ಟಡಗಳಿಗೆ 1 ಟನ್‌ ಮರಳಿಗೆ 100 ರಿಂದ 200 ರುಪಾಯಿ ನಿಗದಿ ಮಾಡಿ ಕಡಿಮೆ ದರದಲ್ಲಿ ನೀಡಲಾಗುವುದು: ನಿರಾಣಿ| 

ಬೆಳಗಾವಿ(ಮಾ.15): ಖನಿಜ ಸಂಪತ್ತು ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಹೆಚ್ಚಾಗಿದೆ. ವಿವಿಧ ರಾಜ್ಯಗಳಿಗೆ ಮಾದರಿಯಾಗುವ ನಿಟ್ಟಿನಲ್ಲಿ ಹೊಸ ರೀತಿಯ ಮೈನಿಂಗ್‌ ಯೋಜನೆ ರೂಪಿಸಲಾಗಿದ್ದು, ಶೀಘ್ರದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ. 

Add Asianetnews Kannada as a Preferred SourcegooglePreferred

ಬಾಕ್ಸೈಟ್‌ ರಸ್ತೆಯ ಕುಮಾರಸ್ವಾಮಿ ಬಡಾವಣೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನೂತನ ಕಚೇರಿ ಮತ್ತು ಜಿಲ್ಲಾ ಖನಿಜ ಭವನ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. 10 ಲಕ್ಷದೊಳಗಿನ ಮನೆ ಕಟ್ಟಡ ನಿರ್ಮಾಣ ಮಾಡಲು ಜನಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಯೋಜನೆ ಮಾಡಲಾಗಿದೆ. ಆಶ್ರಯ ಮನೆ, ರೈತರು ಸೇರಿದಂತೆ ಕೆಳ ಮತ್ತು ಮಧ್ಯಮ ವರ್ಗದ ಜನರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಕಡಿಮೆ ದರದಲ್ಲಿ ಮರಳು ನೀಡಲು ಯೋಜನೆ ರೂಪಿಸಲಾಗಿದ್ದು, 10 ಲಕ್ಷದೊಳಗಿನ ಕಟ್ಟಡಗಳಿಗೆ 1 ಟನ್‌ ಮರಳಿಗೆ 100 ರಿಂದ 200 ರುಪಾಯಿ ನಿಗದಿ ಮಾಡಿ ಕಡಿಮೆ ದರದಲ್ಲಿ ನೀಡಲಾಗುವುದು ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಬೆಳಗಾವಿ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಲೀಗಲ್‌ ಮೈನಿಂಗ್‌, ಬ್ಲಾಸ್ಟಿಂಗ್‌ ಟ್ರೈನಿಂಗ್‌ ಮತ್ತು ಮರಳು ಬೆಲೆ ನಿಗದಿ ಕುರಿತು ಸಾರಿಗೆ ಇಲಾಖೆ, ಅರಣ್ಯ ಇಲಾಖೆ, ಪೊಲೀಸ್‌ ಇಲಾಖೆ ಹಾಗೂ ಕ್ವಾರಿ ಮಾಲೀಕರ ಜೊತೆಗೆ ಸಭೆ ನಡೆಸಲಾಗುವುದು ಎಂದು ಹೇಳಿದರು.

ಜಾರ್ಖಂಡ್‌ ರಾಜ್ಯದ ಮಾದರಿಯಲ್ಲಿ ತರಬೇತಿ ಪಡೆದು ಬ್ಲಾಸ್ಟಿಂಗ್‌ ಮಾಡಲಾಗುವುದು ಹಾಗೂ ಪರಿಸರ ಹಾನಿಯಾಗದಂತೆ ಸಂರಕ್ಷಣೆ ಮಾಡಲಾಗುವುದು. ಈಗಿರುವ ಬ್ಲಾಸ್ಟಿಂಗ್‌ ಸ್ಥಳಗಳನ್ನು ಪರಿಶೀಲನೆ ನಡೆಸಿ, ತರಬೇತಿ ನೀಡಿದ ನಂತರ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಿ ಬ್ಲಾಸ್ಟಿಂಗ… ಮಾಡಲಾಗುವುದು ಎಂದು ಹೇಳಿದರು. ಮೈನಿಂಗ್‌ ಆಫ್‌ ಸ್ಕೂಲ್‌, ಮೈನಿಂಗ್‌ ಆಫ್‌ ಯುನಿವರ್ಸಿಟಿ ಪ್ರಾರಂಭಿಸುವ ಯೋಜನೆ ಮಾಡಲಾಗಿದೆ. ಇತರೆ ರಾಜ್ಯಗಳಿಗೆ ಮಾದರಿಯಾಗುವಂತೆ ಹೊಸ ರೀತಿಯ ವೈಜ್ಞಾನಿಕ ಮೈನಿಂಗ್‌ ಮಾಡಲಾಗುವುದು. ಮೈನಿಂಗ್‌ ಆಫ್‌ ಸ್ಕೂಲ್‌ ಮೂಲಕ ವೈಜ್ಞಾನಿಕ ತರಬೇತಿ ನೀಡಲಾಗುವುದು. ಹೊಸ ಮೈನಿಂಗ್‌ ನೀತಿ ಅತ್ಯಂತ ಕಡಿಮೆ ಸಮಯ ನಿಗದಿ ಮಾಡಿ ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ಬೆಳಗಾವಿ: ಫೇಸ್‌ಬುಕ್‌-ವಾಟ್ಸಾಪ್‌ನಲ್ಲಿ ಪ್ರಚೋದನಕಾರಿ ಪೋಸ್ಟ್‌, 4 ಮಂದಿ ವಿರುದ್ಧ FIR

ಬೆಳಗಾವಿ ಖನಿಜ ಭವನ ಸುಮಾರು 1.5 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ಖನಿಜ ಭವನ ನಿರ್ಮಾಣ ಮಾಡಲಾಗುವುದು. ಅನಧಿಕೃತ ಮೈನಿಂಗ್‌ ಮತ್ತು ಬ್ಲಾಸ್ಟಿಂಗ್‌ನಿಂದ ಸಮೀಪದ ಊರುಗಳಿಗೆ, ಜನರಿಗೆ ಯಾವುದೇ ತೊಂದರೆ ಆಗದಂತೆ ಹಾಗೂ ಪರಿಸರ ಸಂಪನ್ಮೂಲ ಹಾನಿಯಾಗದಂತೆ ಹೊಸ ಮಾದರಿ ಮೈನಿಂಗ್‌ ನಿಯಮಗಳಿಗೆ ತಮ್ಮ ಸಹಮತ ವ್ಯಕ್ತಪಡಿಸಿದರು.

ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಗುತ್ತಿಗೆದಾರರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮೈನಿಂಗ್‌ ವ್ಯವಸ್ಥೆ ಮಾಡಲಾಗಿದ್ದು, ಬ್ಲಾಸ್ಟಿಂಗ್‌ ವಿಚಾರದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ, ಜಿಪಂ ಸಿಇಒ ದರ್ಶನ್‌. ಎಚ್‌. ವಿ, ಪೊಲೀಸ್‌ ಆಯುಕ್ತ ಡಾ. ಕೆ. ತ್ಯಾಗರಾಜನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಉಪವಿಭಾಗಾಧಿಕಾರಿ ಅಶೋಕ ತೇಲಿ ಉಪಸ್ಥಿತರಿದ್ದರು. ಶೈಲಾ ಕೊಕ್ಕರಿ ನಿರೂಪಿಸಿದರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಬಿಂದನ ಪಾಟೀಲ ವಂದಿಸಿದರು.