ಶಾಸಕ ಡಿ.ಜಿ. ಶಾಂತನಗೌಡಅವರು ಹೊನ್ನಾಳಿಯಿಂದ ದಾವಣಗೆರೆಗೆ ಬಸವಾಪಟ್ಟಣ ಮಾರ್ಗವಾಗಿ ನೂತನ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಈ ಹೊಸ ಸೇವೆಯು ಉತ್ತರ ಮತ್ತು ದಕ್ಷಿಣ ಕರ್ನಾಟಕದ ಸಂಪರ್ಕ ಕೊಂಡಿಯಾಗಿರುವ ಹೊನ್ನಾಳಿಯ ಜನತೆಗೆ ಅನುಕೂಲವಾಗಲಿದ್ದು, ಇದರ ಸದುಪಯೋಗ ಪಡೆಯುವಂತೆ ಜನತೆಗೆ ಕರೆ ನೀಡಿದರು.

ದಾವಣಗೆರೆ: ದೇಶದಲ್ಲಿಯೇ ಕರ್ನಾಟಕ ಸರ್ಕಾರ ಬಡವರಿಗಾಗಿ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ. ಆ ಮೂಲಕ ದೇಶದಲ್ಲಿನ ಇತರೆ ರಾಜ್ಯಗಳಿಗೂ ಕೂಡ ಮಾದರಿಯಾಗಿದೆ. ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಅತ್ಯಂತ ಯಶಸ್ವಿಯಾಗಿದ್ದು ಸಂತಸದ ಸಂಗತಿ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೋಮವಾರ ಪಟ್ಟಣದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ನೂತನವಾಗಿ ಆರಂಭಿಸಲಾದ ಹೊನ್ನಾಳಿ- ಬೆನಕನಹಳ್ಳಿ- ಕೈಮರ- ದಾಗಿನಕಟ್ಟೆ- ಕತ್ತಲಗೆರೆ ಬಸವಾಪಟ್ಟಣ ಮಾರ್ಗ ಮೂಲಕ ದಾವಣಗೆರೆಗೆ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಸ್ ಸಮಯ ಈ ರೀತಿಯಾಗಿದೆ

ಬೆಳಗ್ಗೆ ಹೊನ್ನಾಳಿಯಿಂದ ಈ ಮಾರ್ಗವಾಗಿ ದಾವಣಗೆರೆಗೆ 4 ಸಿಂಗಲ್ ಟ್ರಿಪ್ ಮಾಡಿ ನಂತರ ಸಂಜೆ 6 ಗಂಟೆಗೆ ಹೊನ್ನಾಳಿಯಿಂದ ಶಿವಮೊಗ್ಗ ತಲುಪಿ, ಸಂಜೆ 7 ಗಂಟೆಗೆ ಶಿವಮೊಗ್ಗದಿಂದ ಹೊನ್ನಾಳಿಗೆ ರಾತ್ರಿ 8 ಗಂಟೆಗೆ ಬಂದು ತಲುಪಲಿದೆ. ಜನತೆ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇ‍ಳಿದರು.

ರಸ್ತೆ ಸಂಚಾರ ವ್ಯವಸ್ಥೆಯಲ್ಲಿ ಹೊನ್ನಾಳಿ ಅತ್ಯಂತ ಆಯಕಟ್ಟಿನ ಭೌಗೋಳಿಕ ಪ್ರದೇಶದಲ್ಲಿದೆ. ಇದು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಸಂಪರ್ಕ ಕೊಂಡಿಯಂತಿದೆ. ಪ್ರತಿ ದಿನ 250ಕ್ಕೂ ಹೆಚ್ಚು ಬಸ್‌ಗಳನ್ನು ಹೊನ್ನಾಳಿ ಮಾರ್ಗದ ಮೂಲಕ ಹಾದುಹೋಗುತ್ತಿವೆ. ಪ್ರಸ್ತುತ ಹೊನ್ನಾಳಿ ಡಿಪೋದಲ್ಲಿ ಸುಮಾರು 62 ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಹೇಳಿದರು.

ಈ ಸಂದರ್ಭ ಕಾಂಗ್ರೆಸ್ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎಚ್.ಎ. ಉಮಾಪತಿ, ಕಾಂಗ್ರೆಸ್ ಹೊನ್ನಾಳಿ ಬ್ಲಾಕ್ ಅಧಕ್ಷ್ಯ ಸಣ್ಣಕ್ಕಿ ಬಸವನಗೌಡ, ಸಾಸ್ವೇಹಳ್ಳಿ ಬ್ಲಾಕ್ ಅಧ್ಯಕ್ಷ ಆರ್.ನಾಗಪ್ಪ, ಕೆಎಸ್‌ಆರ್‌ಟಿಸಿ ಡಿಪೋ ವ್ವವಸ್ಥಾಪಕ ರಾಮಚಂದ್ರಪ್ಪ, ಮೇಲ್ವಿಚಾರಕ ಮಂಜುನಾಥ ಸೇರಿದಂತೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಇದ್ದರು.