'ನಾಯಕ ಸಮುದಾಯ ರಾಜಕೀಯವಾಗಿ ತುಳಿಯಲು ಬಿಜೆಪಿ ಯತ್ನ'
ಬಿಜೆಪಿ ಸಮುದಾಯವನ್ನು ತುಳಿಯುವ ಯತ್ನ ಮಾಡುತ್ತಿದೆ ಎಂದು ಆರೋಪಿಸಲಾಗಿದೆ.
ಮೈಸೂರು (ಅ.14): ನಾಯಕ ಸಮುದಾಯದ ಬಿ.ಶ್ರೀರಾಮಲು ಅವರಿಗೆ ಸಚಿವ ಖಾತೆ ಬದಲಾವಣೆ ಮಾಡುವ ಮೂಲಕ ಸಮುದಾಯವನ್ನು ರಾಜಕೀಯವಾಗಿ ತುಳಿಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ದ್ಯಾವಪ್ಪ ನಾಯಕ ಆರೋಪಿಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಮತ್ತು ರಾಜ್ಯದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆಯಲು ನಾಯಕ ಜನಾಂಗದ ಪ್ರಭಾವಿ ಮುಖಂಡ ಬಿ. ಶ್ರೀರಾಮುಲು ಮುಖ್ಯ ಕಾರಣವಾಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶಿರಾ ಬೈಎಲೆಕ್ಷನ್ ಅಖಾಡ; ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಚುನಾವಣಾ ಸಂದರ್ಭದಲ್ಲಿ ನಾಯಕ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಶೇ.7.5 ಮೀಸಲಾತಿ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ವಚನ ನೀಡಿ ಜನಾಂಗವನ್ನು ಓಲೈಸಿಕೊಂಡು ಶೇ.80ರಷ್ಟುಮತಗಳನ್ನು ಹಾಕಿಸಿಕೊಂಡು. ಈಗ ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡದೆ, ಇದ್ದ ಆರೋಗ್ಯ ಖಾತೆಯನ್ನು ಕಿತ್ತುಕೊಳ್ಳುವ ಮೂಲಕ ಬಿಜೆಪಿ ಸರ್ಕಾರ ಸಮುದಾಯವನ್ನು ತುಳಿಯುಲು ಮುಂದಾಗಿರುವುದು ಸರಿಯಲ್ಲ ಎಂದು ತೀವ್ರವಾಗಿ ಖಂಡಿಸಿದರು.
ಕೊರೋನಾ ಸಂಕಷ್ಟದ ಪರಿಸ್ಥಿತಿಯಲ್ಲೂ ರಾಜ್ಯಾದ್ಯಂತ ಪ್ರವಾಸ ಮಾಡಿ, ಎಲ್ಲ ಜಿಲ್ಲಾಸ್ಪತ್ರೆಗಳಿಗೆ ಭೇಟಿ ನೀಡುವ ಮೂಲಕ ಶ್ರೀರಾಮುಲು ಅವರು ಆರೋಗ್ಯ ಖಾತೆಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದರು. ಖಾತೆಯನ್ನು ಕಿತ್ತುಕೊಳ್ಳುವ ಹುನ್ನಾರವೇನು? ಬಿಜೆಪಿ ಸರ್ಕಾರ ಏನೇ ಕುತಂತ್ರ ಮಾಡಿದರೂ ನಾಯಕ ಸಮುದಾಯ ಶ್ರೀರಾಮುಲು ಅವರ ಜೊತೆಯಲ್ಲಿರುತ್ತದೆ ಎಂದರು.