Asianet Suvarna News Asianet Suvarna News

ಕೃಷಿ ಕ್ಷೇತ್ರ ಕಪಿಮುಷ್ಟಿಗೆ ತೆಗೆದುಕೊಳ್ಳುವ ಹುನ್ನಾರ: ರಾಕೇಶ್‌ ಟಿಕಾಯತ್‌

ಕೇಂದ್ರ ಸರ್ಕಾರದ ಕರಾಳ ಕೃಷಿ ಕಾಯ್ದೆ ಜಾರಿಯಾದರೆ ತಿನ್ನುವ ಅನ್ನ ತಿಜೋರಿಯಲ್ಲಿ ನೋಡಬೇಕಾಗುತ್ತದೆ| ಈ ಹಿಂದೆ ಸುಷ್ಮಾ ಸ್ವರಾಜ್‌ ಮತ್ತು ಅರುಣ ಜೇಟ್ಲಿ ಗುತ್ತಿಗೆ ಕೃಷಿ ಪದ್ಧತಿ ವಿರೋಧಿಸಿದ್ದರು| ಈಗ ಅದೇ ಪಕ್ಷದ ಸರ್ಕಾರ ಕಾಯ್ದೆ ಜಾರಿಗೊಳಿಸಿದೆ: ಕೇಂದ್ರದ ವಿರುದ್ಧ ರಾಕೇಶ್‌ ಟಿಕಾಯತ್‌ ವಾಗ್ದಾಳಿ| 

National Farmer Leader Rakesh Tikait Talks over Agriculture Act grg
Author
Bengaluru, First Published Mar 22, 2021, 11:31 AM IST

ಹಾವೇರಿ(ಮಾ.21): ಬಂಡವಾಳ ಶಾಹಿಗಳು ಹಲವು ಕ್ಷೇತ್ರಗಳನ್ನು ಹಿಡಿತಕ್ಕೆ ತೆಗೆದುಕೊಂಡು ಈಗ ಕೃಷಿ ಕ್ಷೇತ್ರವನ್ನು ಕಪಿಮುಷ್ಟಿಗೆ ತೆಗೆದುಕೊಳ್ಳಲು ಹೊರಟಿವೆ. ಅವರಿಗೆ ನೆರವಾಗಲು ಕೇಂದ್ರ ಸರ್ಕಾರ ಕಾನೂನು ಜಾರಿಗೆ ತಂದಿದ್ದು, ಈ ಬಗ್ಗೆ ಜಾಗ್ರತರಾಗಬೇಕು ಎಂದು ರಾಷ್ಟ್ರೀಯ ರೈತ ನಾಯಕ ರಾಕೇಶ್‌ ಟಿಕಾಯತ್‌ ಕರೆ ನೀಡಿದ್ದಾರೆ.

ಇಲ್ಲಿಯ ಮುನ್ಸಿಪಲ್‌ಹೈಸ್ಕೂಲ್‌ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ರೈತರ ಮಹಾ ಪಂಚಾಯತ್‌ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ ಕರಾಳ ಕೃಷಿ ಕಾಯ್ದೆ ಜಾರಿಯಾದರೆ ತಿನ್ನುವ ಅನ್ನ ತಿಜೋರಿಯಲ್ಲಿ ನೋಡಬೇಕಾಗುತ್ತದೆ. ಇದು ಇಲ್ಲಿಗೆ ನಿಲ್ಲಬೇಕಾದರೆ ನಿದ್ರೆಯಲ್ಲಿರುವ ಯುವ ಜನತೆ ಎಚ್ಚೆತ್ತುಕೊಳ್ಳಬೇಕು. 3 ತಿಂಗಳಿಂದ ದೆಹಲಿಯಲ್ಲಿ ಕಾಯ್ದೆ ವಿರೋಧಿಸಿ ಹೋರಾಟ ನಡೆಸುತ್ತಿದ್ದರೂ ಸರ್ಕಾರ ನಮ್ಮೊಂದಿಗೆ ಮಾತುಕತೆಗೆ ಮುಂದಕ್ಕೆ ಬರುತ್ತಿಲ್ಲ. ಆದ್ದರಿಂದ ಈ ಹೋರಾಟ ಎಲ್ಲಿಯವರೆಗೆ ಮುಂದುವರಿಯುತ್ತದೆ ಎನ್ನಲು ಸಾಧ್ಯವಿಲ್ಲ. ನಂಬಿಕೆ ಮತ್ತು ಕೃಷಿ ಪದ್ಧತಿಯನ್ನು ನಂಬಿರುವ ದೇಶದಲ್ಲಿ ಈಗ ಗೊಂದಲದ ಸ್ಥಿತಿ ನಿರ್ಮಾಣವಾಗಿದೆ. ಹೆಸರಿಗೆ ಮಾತ್ರ ಒಂದು ಪಕ್ಷದ ಸರ್ಕಾರವಿದ್ದರೂ, ಒಬ್ಬನೇ ವ್ಯಕ್ತಿಯ ಸರ್ವಾಧಿಕಾರಿ ಸರ್ಕಾರವನ್ನು ನಾವಿಂದು ನೋಡುತ್ತಿದ್ದೇವೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

ರೈತರು ತಮ್ಮ ಟ್ರಾಕ್ಟರ್‌ಗಳನ್ನೇ ಶಸ್ತ್ರದ ರೀತಿಯಲ್ಲಿ ಬಳಸಬೇಕು. ದೆಹಲಿಯಲ್ಲಿ 3 ಲಕ್ಷ ಟ್ರ್ಯಾಕ್ಟರ್‌ ತಂದು ನಡೆಸಿದ ರಾರ‍ಯಲಿ ರೀತಿಯಲ್ಲಿ ಬೆಂಗಳೂರಿನಲ್ಲಿ ಹೋರಾಟ ರೂಪಿಸಬೇಕು. ನಾವು ಬೆಂಬಲ ಬೆಲೆ ಕೇಳಿದರೆ ಅದನ್ನು ಕೊಡಲು ಸರ್ಕಾರ ಸಿದ್ಧವಿಲ್ಲ. ಎಪಿಎಂಸಿ ಕಾಯ್ದೆ ಜಾರಿಯಾದರೆ ರೈತರು ತಾವು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಬಹುದು ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಅವರೇ ಹೇಳಿದಂತೆ ಇನ್ನು ಮುಂದೆ ನಾವು ಜಿಲ್ಲಾಧಿಕಾರಿ ಕಚೇರಿ, ತಹಸೀಲ್ದಾರ್‌ಕಚೇರಿಗೆ ನಾವು ಬೆಳೆದ ಕೃಷಿ ಉತ್ಪನ್ನ ತೆಗೆದುಕೊಂಡು ಹೋಗಿ ಮಾರಾಟ ಮಾಡೋಣ. ಅಲ್ಲಿ ಅಧಿಕಾರಿಗಳೇ ಅದನ್ನು ಖರೀದಿಸಲು ಒತ್ತಾಯಿಸಿ ಮುಂದೆ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

'ಸಿದ್ದ​ರಾ​ಮಯ್ಯ ಜಾರಿ​ಗೊ​ಳಿ​ಸಿ​ದ ಯೋಜ​ನೆ​ಗಳೇ ಮತ್ತೆ ಪಕ್ಷ​ವನ್ನು ಅಧಿ​ಕಾ​ರಕ್ಕೆ ತರಲಿವೆ'

2021ನೇ ಇಸ್ವಿಯು ಆಂದೋಲನದ ವರ್ಷ. ಇದಕ್ಕೆ ಎಲ್ಲರೂ ಮಾನಸಿಕವಾಗಿ ಸಿದ್ಧರಾಗಬೇಕು. ಗುತ್ತಿಗೆ ಕೃಷಿ ಹೆಸರಿನಲ್ಲಿ ರೈತರ ತುಂಡು ಭೂಮಿಯನ್ನೂ ಕಿತ್ತುಕೊಳ್ಳುವ ಹುನ್ನಾರ ನಡೆಯುತ್ತಿದೆ. ಎಲ್ಲರಿಗೂ ಬದುಕಿನ ಅಭದ್ರತೆ ಕಾಡುತ್ತಿದೆ. ಆದ್ದರಿಂದ ಯುವ ಜನತೆ ಮಣ್ಣಿನ ಸಂಬಂಧ ಬೆಳೆಸಿಕೊಳ್ಳಬೇಕು. ನಮ್ಮ ಜಮೀನು ಉಳಿಸಿಕೊಳ್ಳುವ ಆಂದೋಲನದಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದ್ದಾರೆ.

ದೇಶ ಮಾರುವ ಹುನ್ನಾರ:

ಭಾರತೀಯ ಕಿಸಾನ್‌ ಯುನಿಯನ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯುದ್ಧವೀರಸಿಂಗ್‌ ಮಾತನಾಡಿ, ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ರೈತರ ಕಲ್ಯಾಣದ ಗುರಿ ಹೊಂದಿಲ್ಲ. ಬದಲಾಗಿ ಬಂಡವಾಳಶಾಹಿಗಳ ನಡುವೆ ಗುಪ್ತ ಒಪ್ಪಂದ ಮಾಡಿಕೊಂಡು ದೇಶವನ್ನು ಮಾರಾಟ ಮಾಡಲು ಹೊರಟಿದೆ ಎಂದು ಕಿಡಿಕಾರಿದ್ದಾರೆ.

ರೈತ ವಿರೋಧಿಯಾಗಿರುವ ಮೂರು ಕಾನೂನುಗಳನ್ನು ಜಾರಿಗೆ ತರುವ ಮೂಲಕ ಕೃಷಿ ವ್ಯವಸ್ಥೆಯನ್ನೇ ಹಾಳು ಮಾಡಲು ಹೊರಟಿದೆ. ಈ ವಿಚಾರದಲ್ಲಿ ದೇಶದಲ್ಲಿ ದೊಡ್ಡ ಯುದ್ಧ ಆರಂಭಗೊಂಡಿದೆ. ಈ ಯುದ್ಧ ಕೇವಲ ಉತ್ತರಕ್ಕೆ ಸಿಮೀತವಾಗದೇ ದಕ್ಷಿಣಕ್ಕೂ ಪಸರಿಸುತ್ತಿದೆ. ಸರ್ಕಾರ ಜಾರಿಗೊಳಿಸುವ ಹೊಸ ಕಾನೂನುಗಳ ಬುನಾದಿಯೇ ತಪ್ಪಾಗಿದೆ. ಈ ಕರಾಳ ಶಾಸನಗಳ ಆತ್ಮವೇ ತಪ್ಪು. ಬಂಡವಾಳಶಾಹಿಗಳ ಪರವಾದ ಕಾನೂನು ಲೋಕಸಭೆ, ರಾಜ್ಯಸಭೆಯಲ್ಲಿ ಚರ್ಚೆ ನಡೆಸದೇ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿರುವುದು ಕಪ್ಪುಚುಕ್ಕೆಯಾಗಿದೆ ಎಂದು ಆರೋಪಿಸಿದ್ದಾರೆ. 

ಈ ಹಿಂದೆ ಸುಷ್ಮಾ ಸ್ವರಾಜ್‌ ಮತ್ತು ಅರುಣ ಜೇಟ್ಲಿ ಅವರು ಗುತ್ತಿಗೆ ಕೃಷಿ ಪದ್ಧತಿ ವಿರೋಧಿಸಿದ್ದರು. ಈಗ ಅದೇ ಪಕ್ಷದ ಸರ್ಕಾರ ಕಾಯ್ದೆ ಜಾರಿಗೊಳಿಸಿದೆ. ದೇಶಾದ್ಯಂತ ರೈತ ವಿರೋಧಿ ಕಾನೂನನ್ನು ಹಿಂಪಡೆಯಲು ಚಳವಳಿ ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ತನ್ನ ಮೊಂಡುತನವನ್ನು ಬಿಟ್ಟಿಲ್ಲ ಎಂದು ಹರಿಹಾಯ್ದರು.

ಇಳಿ​ವ​ಯ​ಸ್ಸಲ್ಲಿ ನೋಡಿಕೊಳ್ಳದ ಮಕ್ಕಳಿಂದ ಆಸ್ತಿ ಹಿಂಪಡೆದ ತಂದೆ-ತಾಯಿ..!

ಬಂಡವಾಳಶಾಹಿಗಳು ಕೃಷಿ ಕ್ಷೇತ್ರಕ್ಕೆ

ಅಂಬಾನಿ, ಆದಾನಿಯಂತಹ ಬಂಡವಾಳಶಾಹಿಗಳು ಕೃಷಿ ಕ್ಷೇತ್ರಕ್ಕೆ ಲಗ್ಗೆ ಇಡಲು ಮುಂದಡಿ ಇಟ್ಟಿದ್ದಾರೆ. ಭವಿಷ್ಯದ ದಿನಗಳಲ್ಲಿ ಪಾನ್‌ಕಾರ್ಡ್‌ಹೊಂದಿದವರೆಲ್ಲ ವ್ಯಾಪಾರಿಗಳಾಗಿ ರೈತರಿಗೆ ಮೋಸ ಮಾಡುವ ಸಾಧ್ಯತೆ ಇದೆ.
ರಾಷ್ಟ್ರದಲ್ಲಿಂದು ಧರ್ಮ, ಜಾತಿಯ ಅಫೀಮನ್ನು ಜನರಲ್ಲಿ ತುಂಬಲಾಗುತ್ತಿದೆ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ರಾಮನ ಹೆಸರಿನಲ್ಲಿ ಇಂದು ಒಂದು ಹಿಡಿ ಅಕ್ಕಿ ಕೇಳುತ್ತಿದ್ದಾರೆ. ಆದರೆ ರಾಮ ರೈತನ ಮನ, ಮನೆ ಹಾಗೂ ಕೃಷಿ ಭೂಮಿಯಲ್ಲಿದ್ದಾನೆ. ಇದನ್ನು ಆಡಳಿತ ನಡೆಸುವವರು ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ. 

ಸಮಾವೇಶದಲ್ಲಿ ರಾಜ್ಯ ರೈತ ಮುಖಂಡರಾದ ಕೆ.ಟಿ. ಗಂಗಾಧರ, ಬಾಬಾಗೌಡ ಪಾಟೀಲ, ಕೋಡಿಹಳ್ಳಿ ಚಂದ್ರಶೇಖರ್‌, ಕುರಬೂರ ಶಾಂತಕುಮಾರ್‌, ನಂದಿನಿ ಜಯರಾಮ, ಚುಕ್ಕಿ ನಂಜುಂಡಸ್ವಾಮಿ, ಶಶಿಕಾಂತ ಪಡಸಲಗಿ, ವೀರೇಂದ್ರ ನರ್ವಾಲ್‌, ರಾಮಣ್ಣ ಕೆಂಚಳ್ಳೇರ ಮೊದಲಾದವರು ಇದ್ದರು.
 

Follow Us:
Download App:
  • android
  • ios