Asianet Suvarna News Asianet Suvarna News

ದೇಶ ನಿರ್ಮಾಣವೆಂದರೆ ಮೌಲ್ಯಗಳ ಜೊತೆ ಬದುಕುವುದು: ಆದರ್ಶ ಗೋಖಲೆ

ದೇಶ ನಿರ್ಮಾಣವೆಂದರೆ ಮೌಲ್ಯಗಳ ಜೊತೆ ಬದುಕುವುದು. ಮಾನವನ ದೇಹವೇ ಭಾರತ. ನಾನೇ ಭಾರತವಾಗಿ, ಭಾರತವೇ ನಾವಾದಾಗ ಭಾರತ ಬೆಳಗುತ್ತದೆ, ಬೆಳೆಯುತ್ತದೆ ಎಂದು ವಾಗ್ಮಿ ಆದರ್ಶ ಗೋಖಲೆ ಅಭಿಫ್ರಾಯಪಟ್ಟರು.

Nation  development  means living with values: Adarsh Gokhale SNR
Author
First Published Dec 16, 2023, 9:45 AM IST

 ತುಮಕೂರು :  ದೇಶ ನಿರ್ಮಾಣವೆಂದರೆ ಮೌಲ್ಯಗಳ ಜೊತೆ ಬದುಕುವುದು. ಮಾನವನ ದೇಹವೇ ಭಾರತ. ನಾನೇ ಭಾರತವಾಗಿ, ಭಾರತವೇ ನಾವಾದಾಗ ಭಾರತ ಬೆಳಗುತ್ತದೆ, ಬೆಳೆಯುತ್ತದೆ ಎಂದು ವಾಗ್ಮಿ ಆದರ್ಶ ಗೋಖಲೆ ಅಭಿಫ್ರಾಯಪಟ್ಟರು.

ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಯುವರೆಡ್‌ ಕ್ರಾಸ್‌ ಘಟಕವು ಶುಕ್ರವಾರ ಆಯೋಜಿಸಿದ್ದ ದೇಶದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶ ನಿರ್ಮಾಣದ ಪಕ್ರಿಯೆಗೆ ರಾಷ್ಟ್ರೀಯತೆಯ ತುಡಿತ, ಪ್ರಖರ ರಾಷ್ಟ್ರ ಪ್ರೇಮ, ನಾಡನ್ನು ಕಟ್ಟುವಂತಹ ಆದರ್ಶ, ಕಲ್ಪನೆ, ಉತ್ತಮ ಚಿಂತನೆಗಳು, ಮಾನಸಿಕವಾಗಿ, ದೈಹಿಕವಾಗಿ ಸದೃಢರಾಗಿರುವ ಯುವಕರಿಂದ ಮಾತ್ರ ಸಾಧ್ಯ. ಸ್ವತಂತ್ರರಾಗಿ 100 ವರ್ಷ ತುಂಬುತ್ತಿರುವ ಗಳಿಗೆಯಲ್ಲಿ ನಾಡಿನ ಅಭಿವೃದ್ಧಿಯೆಂದರೆ ದೇಶ ಪ್ರೇಮ, ಬದುಕಿನ ಸಮಯವನ್ನು ದೇಶಕ್ಕಾಗಿ ಮುಡಿಪಾಗಿಡುವುದು ಎಂದು ತಿಳಿಸಿದರು.

ಆಲಸ್ಯ, ಅಜ್ಞಾನ, ಅಸೂಯೆ ತೊರೆದು ದೇಶವನ್ನು ಬೆಳಸಬೇಕು. ಆಡಳಿತಾತ್ಮಕ, ಆರ್ಥಿಕತೆಯನ್ನು ಉತ್ತಮವಾಗಿ ರೂಪಿಸಬೇಕು. ಪಂಡಿತ್ ಮದನ್ ಮೋಹನ್ ಮಾಳವೀಯ ಅವರು ಹೇಳಿದಂತೆ ಸತ್ಯದ ಆಯ್ಕೆ, ಅಧ್ಯಯನದ ಮೇಲೆ ಗಮನಹರಿಸುವ ಬ್ರಹ್ಮಚರ್ಯ, ದೈಹಿಕ ಸಶಕ್ತತೆಗೆ ವ್ಯಾಯಾಮ, ಪ್ರಜ್ಞೆಯನ್ನು ಜಾಗೃತಗೊಳಿಸುವ ವಿದ್ಯೆ, ದೇಹ ಭಕ್ತಿ ತೊರೆದು ದೇಶ ಭಕ್ತಿ, ಅಹಂ ತೊರೆಯುವ ಆತ್ಮ ತ್ಯಾಗ ಗುಣಗಳಿದ್ದಾಗ ಉತ್ಕೃಷ್ಟ ಭಾರತದ ನಿರ್ಮಾಣ ಸಾಧ್ಯ ಎಂದರು.

ಗ್ರಾಮ ಪಂಚಾಯಿತಿ ಸದಸ್ಯನಿಂದ ಪ್ರಧಾನ ಮಂತ್ರಿಯ ಆಯ್ಕೆಯವರೆಗೂ ಪ್ರಜಾಪ್ರಭುತ್ವವಿದೆ. ಅಭಿವೃದ್ಧಿ ಬಯಸುವ, ದೇಶ ಬೆಳೆಸುವ ನಾಯಕನನ್ನು ಆಯ್ಕೆ ಮಾಡಿದಾಗ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ, ಹಿರಿಯರ ಕನಸುಗಳು ನನಸಾಗುತ್ತವೆ. ಇತಿಹಾಸ, ತ್ಯಾಗ, ಪರಂಪರೆ, ಶೌರ್ಯದ ಅರಿವಿರಬೇಕು. ಸ್ವಾಭಿಮಾನದಿಂದ ಬದುಕಿದ ಭಾರತಕ್ಕಾಗಿ ಬದುಕುವ ಅವಕಾಶ ಯುವಕರು ನಿಮ್ಮದಾಗಿಸಿಕೊಳ್ಳಬೇಕು ಎಂದು ಹೇಳಿದರು.

ಜನಸಂಖ್ಯೆಯನ್ನು ಮಾನವ ಸಂಪನ್ಮೂಲವಾಗಿ ಬಳಸಿಕೊಳ್ಳುವ ದೇಶದ ಅಭಿವೃದ್ಧಿ ವೇಗವಾಗಿರುತ್ತದೆ. ಸಂಪತ್ತಿನ ಕೊರತೆಯಾದರೂ ಬದುಕಬಹುದು. ಆದರೆ, ಮೌಲ್ಯಗಳ ಕೊರತೆಯಾದರೆ ಬದುಕು ಶೂನ್ಯ. ದೇಶದ ಗಡಿಕಾಯುವ ಸೈನಿಕ ಯಾರಿಗಾಗಿ ದುಡಿಯುತ್ತಿದ್ದಾನೆ, ಬದುಕುತ್ತಿದ್ದಾನೆ ಎಂಬ ನೆನಹು ಇದ್ದಲ್ಲಿ ಭಾರತಗೆದ್ದ ಹಾಗೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿವಿ ಹಣಕಾಸು ಅಧಿಕಾರಿ ಪ್ರೊ.ಪಿ. ಪರಮಶಿವಯ್ಯ, 2050 ರಲ್ಲಿ ಭಾರತದ ಜನಸಂಖ್ಯೆಯ ಶೇ.74ರಷ್ಟು ಯುವಕರಿಂದ ಕೂಡಿರುತ್ತದೆ. ಯುವಜನರಲ್ಲಿ ಆತ್ಮವಿಶ್ವಾಸ, ಏಕಾಗ್ರತೆ ಬರಬೇಕು. ನನ್ನ ದೇಶವೆನ್ನುವ ಭಕ್ತಿ ಹೊರಹೊಮ್ಮಬೇಕು. ಸುಭದ್ರ ರಾಷ್ಟ್ರ ಕಟ್ಟುವ ಉತ್ತಮ ಕಾರ್ಯ ಯುವಕರಿಂದಾಗಬೇಕು ಎಂದು ಹೇಳಿದರು.

ವಿಶ್ವವಿದ್ಯಾನಿಲಯದ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ. ಕರಿಯಣ್ಣ ಮಾತನಾಡಿ, ನಮ್ಮಕಾಲೇಜಿನ ವಿದ್ಯಾರ್ಥಿಗಳನ್ನು ಜ್ಞಾನಿಗಳನ್ನಾಗಿ ಮಾಡುವುದೇ ನಮ್ಮ ಧ್ಯೇಯ. ತಾಯಿಯನ್ನು ಭಾರತ ಮಾತೆಯಾಗಿ, ತಂದೆಯನ್ನು ಯೋಧನೆಂದು ನೆನಯುವ ಪ್ರತಿಯೊಬ್ಬರು ನಾಡನ್ನು ಕಟ್ಟುತ್ತಾರೆ ಎಂದರು.

ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಯುವರೆಡ್‌ ಕ್ರಾಸ್‌ ಘಟಕದ ಸಂಚಾಲಕ ಡಾ. ನಾಗರಾಜು ಆರ್. ಸಿ., ಸಹ ಸಂಚಾಲಕ ವಾಸುದೇವ ಡಿ. ಎಂ. ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios