Asianet Suvarna News Asianet Suvarna News

ಲಾಲಿತ್ಯದ ಕುಣಿತ ನಿಲ್ಲಿಸಿದ ನಾರಾಯಣ ಹಾಸ್ಯಗಾರ​​

ಯಕ್ಷಗಾನ ರಂಗಕಲೆಯ ಕರ್ಕಿ ಹಾಸ್ಯಗಾರರ ಯಕ್ಷಗಾನ ಮೇಳದ ಪ್ರಮುಖ ಕಲಾವಿದರಲ್ಲೊಬ್ಬರು, ಹಾಸ್ಯಗಾರ ಪರಂಪರೆಯ ಯಕ್ಷಗಾನ ಕಲಾಸೌಧದ ಆಧಾರಸ್ಥಂಭವಾಗಿದ್ದ ನಾರಾಯಣ ಹಾಸ್ಯಗಾರ (90) ತಮ್ಮ ಲಾಲಿತ್ಯಪೂರ್ಣ ಹೆಜ್ಜೆ ಕುಣಿತವನ್ನು ನಿಲ್ಲಿಸಿದ್ದಾರೆ.

Narayana Hasyagar Karki passes away in Uttara Kannada
Author
Bangalore, First Published Jun 23, 2020, 10:22 AM IST

ಹೊನ್ನಾವರ(ಜೂ.23): ಯಕ್ಷಗಾನ ರಂಗಕಲೆಯ ಕರ್ಕಿ ಹಾಸ್ಯಗಾರರ ಯಕ್ಷಗಾನ ಮೇಳದ ಪ್ರಮುಖ ಕಲಾವಿದರಲ್ಲೊಬ್ಬರು, ಹಾಸ್ಯಗಾರ ಪರಂಪರೆಯ ಯಕ್ಷಗಾನ ಕಲಾಸೌಧದ ಆಧಾರಸ್ಥಂಭವಾಗಿದ್ದ ನಾರಾಯಣ ಹಾಸ್ಯಗಾರ (90) ತಮ್ಮ ಲಾಲಿತ್ಯಪೂರ್ಣ ಹೆಜ್ಜೆ ಕುಣಿತವನ್ನು ನಿಲ್ಲಿಸಿದ್ದಾರೆ.

ನಾರಾಯಣ ಹಾಸ್ಯಗಾರರು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕೆಲ ವರ್ಷಗಳಿಂದ ಇವರು ವಯೋಸಹಜ ಅನಾರೋಗ್ಯಕ್ಕೆ ಸಿಕ್ಕಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಕರ್ಕಿಯ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಯಲ್ಲಾಪುರದಲ್ಲಿ ಬಸ್‌ ಕಂಡಕ್ಟರ್‌ಗೆ ಕೊರೋನಾ ಸೋಂಕು

ಕರ್ಕಿಯ ಪರಮಯ್ಯ ಹಾಸ್ಯಗಾರರ ನಾಲ್ವರು ಸುಪುತ್ರರಲ್ಲಿ ಒಬ್ಬರಾಗಿ 1931 ಫೆಬ್ರವರಿ 2ರಂದು ಜನಿಸಿದ ಇವರು ಯಕ್ಷಗಾನ ರಂಗಕಲೆಯನ್ನು ಮೈಗೂಡಿಸಿಕೊಂಡು ಬೆಳೆದವರು. ಎಸ್‌ಎಸ್‌ಎಲ್‌ಸಿ ವರೆಗಿನ ಶಿಕ್ಷಣ ಮುಗಿಸಿದ ತರುವಾಯ ಒಂದು ವರ್ಷ ಶಿಕ್ಷಕರಾಗಿ ದುಡಿದು, ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿದರು.

ನಂತರ ಕೇಂದ್ರ ಸರ್ಕಾರದ ಶಿಷ್ಯ ವೇತನದೊಂದಿಗೆ ಶಿವರಾಮ್‌ ಕಾರಂತರಲ್ಲಿ ಎರಡು ವರ್ಷ ಹಾಗೂ ಹಾರಾಡಿ ಕುಷ್ಟ(ಕೃಷ್ಣ) ಗಾಣಿಗರ ಬಳಿ ಎರಡು ವರ್ಷ ಬಡಗುತಿಟ್ಟಿನ ಯಕ್ಷಗಾನ ಅಭ್ಯಾಸ ನಡೆಸಿದರು.

29 ದಿನಗಳ ನಂತರ ಕೊಡಗಿನಲ್ಲಿ ಕೊರೋನಾ ಸಕ್ರಿಯ..! ಮತ್ತೆ ಹೆಚ್ಚಿದ ಆತಂಕ

ಮುಂದೆ ಉತ್ತರಕನ್ನಡ ಜಿಲ್ಲೆಯಲ್ಲಿ ಮನೆಮಾತಾದ ಹಾಗೂ ತಮ್ಮದೇ ಕುಟುಂಬದ ಕರ್ಕಿ ಹಾಸ್ಯಗಾರರ ಮೇಳದಲ್ಲಿ ತಂದೆ ಪರಮಯ್ಯ ಹಾಸ್ಯಗಾರ ಜೊತೆ ಸೇರಿ, ಅಗ್ರಪಂಕ್ತಿಯ ಕಲಾವಿದರಾದರು.

ನಾರಾಯಣ ಹಾಸ್ಯಗಾರರ ಬಬ್ರುವಾಹನ, ಅಭಿಮನ್ಯು, ಅರ್ಜುನ, ಸುಧನ್ವ, ಕೀಚಕ, ಶಿವ, ರಾಮ, ಕೃಷ್ಣ, ಲಕ್ಷ್ಮಣ, ವಾಲಿ, ಶಲ್ಯ, ಶಬರ ಮೊದಲಾದ ಪಾತ್ರ ನಿರ್ವಹಣೆಗಳು ಇವರಿಗೆ ಹೆಸರು ತಂದುಕೊಟ್ಟಿವೆ. ಕೆಲವೊಮ್ಮೆ ಸ್ತ್ರೀ ಪಾತ್ರಗಳ ಹಾಗೂ ಬಣ್ಣದ ವೇಷಗಳ ಮೂಲಕವೂ ಪ್ರೇಕ್ಷಕರ ಗಮನಸೆಳೆದಿದ್ದಾರೆ.

ಕಷ್ಣಾರ್ಜುನ, ಚಂದ್ರಾವಳಿ ವಿಲಾಸ, ಶಮಂತಕರತ್ನ, ಶ್ರೀಕೃಷ್ಣ ಪಾರಿಜಾತ, ಮುಂತಾದ ಪ್ರಸಂಗಗಳ ಕೃಷ್ಣನ ಪಾತ್ರಗಳು ಇವರ ಕಲಾವಂತಿಕೆಗೆ ಸಾಕ್ಷಿಯಾಗಿದ್ದವು. ಭಾವಕ್ಕೆ ತಕ್ಕುದಾದ ಹಸ್ತಾಭಿನಯಗಳ ಪಾತ್ರ ತನ್ಮಯತೆ ಮತ್ತು ಸಭಾಹಿತ ಮಟ್ಟಿನ ಮೂಲಕ ಪ್ರೇಕ್ಷಕರನ್ನು ಸೆರೆ ಹಿಡಿದಿದ್ದರು.

KSRTC ಕಂಡಕ್ಟರ್‌, ಡ್ರೈವರ್‌ ಭದ್ರತಾ ಕಾರ್ಯಕ್ಕೆ!

ಕರ್ಕಿ ಮತ್ತು ಹೊನ್ನಾವರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಿ.ವಿ. ಹಾಸ್ಯಗಾರರೊಂದಿಗೆ ಯಕ್ಷಗಾನ ಶಾಲೆ ನಡೆಸಿ ನಂತರ ಕರ್ಕಿಯಲ್ಲಿ ಯಕ್ಷಗಾನ ಕಲಾಕೇಂದ್ರವನ್ನು ಆರಂಭಿಸಿ ಕೆಲ ವರ್ಷ ಮುನ್ನಡೆಸಿದ್ದರು. ಕರ್ನಾಟಕವಲ್ಲದæೕ ದೇಶದ ಬೇರೆ ಬೇರೆ ಕಡೆ ಸಾಂಸ್ಕೃತಿಕ ಉತ್ಸವಗಳಲ್ಲಿ ಯಕ್ಷಗಾನ ಮೇಳವನ್ನು ಕೊಂಡೊಯ್ದು ಪ್ರದರ್ಶಗಳನ್ನು ನೀಡಿ ಯಕ್ಷಗಾನ ಕಲೆಯ ಶ್ರೀಮಂತಿಕೆಯ ರಾಯಭಾರಿಯಾಗಿದ್ದರು.

ಕಲಾವಿದರಾಗಿ ಅಲ್ಲದೇ ಮೇಳದ ಸಂಚಾಲಕರಾಗಿ ಅನುಪಮ ಸೇವೆ ಸಲ್ಲಿಸಿರುವುದನ್ನು ರಾಜ್ಯ ಸರ್ಕಾರ ಗುರುತಿಸಿ 1985ರಲ್ಲಿ ಅಜೀವ ಪರ್ಯಂತ ಗೌರವಧನ ನೀಡುವುದನ್ನು ಪ್ರಕಟಿಸಿತ್ತು. ಅಲ್ಲದೇ ಯಕ್ಷಗಾನ ಅಕಾಡಮೆಯ ಸದಸ್ಯರಾಗಿಯೂ ಸೇವೆಯನ್ನು ಯಕ್ಷಕಲಾ ಲೋಕಕ್ಕೆ ಅರ್ಪಿಸಿದ್ದ ನಾರಾಯಣ ಹಾಸ್ಯಗಾರರ ನಿಧನದೊಂದಿಗೆ ಕರ್ಕಿ ಹಾಸ್ಯಗಾರರ ಮೇಳದ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ.

ಅವರ ನಿಧನಕ್ಕೆ ಯಕ್ಷಗಾನದ ಹಲವು ಹಿರಿಯ ಕಲಾವಿದರು , ಸಂಘಸಂಸ್ಥೆಗಳ ಪ್ರಮುಖರು, ಕ್ಷೇತ್ರದ ಶಾಸಕ ದಿನಕರ ಶೆಟ್ಟಿ, ಜಿಪಂ ಸದಸ್ಯ ಶಿವಾನಂದ ಹೆಗಡೆ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಯಕ್ಷಗಾನ ಇತಿಹಾಸದಲ್ಲಿ ಕರ್ಕಿ ಹಾಸ್ಯಗಾರರ ಮೇಳ ಮೊದಲ ಮೈಲಿಗಲ್ಲು. ಈ ಮೇಳದ ಹಿರಿಯ ಕಲಾವಿದ ನಾರಾಯಣ ಹಾಸ್ಯಗಾರರು ಪಾರಂಪರಿಕ ನೃತ್ಯ ಹಾಗೂ ವೇಷಗಾರಿಕೆಯ ಅಧಿಕೃತ ದಾಖಲೆಯಂತೆ ಇದ್ದವರು. ಶಬರನ ತೆರೆ, ಕೃಷ್ಣನ ಒಡ್ಡೋಲಗ, ವಿಶಿಷ್ಟಲಾಲಿನೃತ್ಯ, ಇದೆಲ್ಲ ಇವರೊಂದಿಗೆ ಮುಗಿದಂತೆ. ನಾರಾಯಣ ಹಾಸ್ಯಗಾರರ ನಿಧನ ಯಕ್ಷಲೋಕಕ್ಕೆ ತುಂಬಲಾರದ ಹಾನಿ ಎಂದು ಯಕ್ಷಗಾನ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಜಿ.ಎಲ್‌. ಹೆಗಡೆ . (ನಾರಾಯಣ ಹಾಸ್ಯಗಾರ,

-ದಿನೇಶ್‌ ಹೆಗಡೆ

Follow Us:
Download App:
  • android
  • ios