ನರಗುಂದ-ಗದಗ ರಸ್ತೆಯ ಪ್ರಯಾಣಿಕರ ಯಮಯಾತನೆಗೆ ಕೊನೆ ಯಾವಾಗ?
ಪ್ರವಾಹಕ್ಕೆ ಕೊಚ್ಚಿ ಹೋದ ನರಗುಂದ- ಗದಗ ರಸ್ತೆ| ಕುರ್ಲಗೇರಿ, ತಡಹಾಳ, ನಾಯ್ಕನೂರು, ಕೊಂಗವಾಡ, ಶಲವಡಿ, ಹೊಂಬಳ ಪ್ರಯಾಣಿಕರಿಗೆ ತೊಂದರೆ| ಕೆಲವೊಮ್ಮ ವಿದ್ಯಾರ್ಥಿಗಳು ತರಗತಿಗಳಿಂದ ಹಾಗೂ ಪರೀಕ್ಷೆಗಳಿಂದ ವಂಚಿತರಾಗಬೇಕಿದೆ| ಇದರ ಬಗ್ಗೆ ಅಧಿಕಾರಿಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ ಎಂದು ದೂರಿದ ಸ್ಥಳೀಯರು| ಹಣ ಬಂದ ತಕ್ಷಣ ಶೀಘ್ರವೇ ಇದನ್ನು ದುರಸ್ತಿ ಮಾಡಲಾಗುವುದು ಎಂದ ಲೋಕೋಪಯೋಗಿ ಇಲಾಖೆಯ ಸಹಾಯಹ ಕಾರ್ಯನಿರ್ವಾಹಕ ಆರ್. ಎ. ಮನಗೂಳಿ|
ನರಗುಂದ:(ಸೆ.28) ಆಗಸ್ಟ್ ತಿಂಗಳಲ್ಲಿ ಉಕ್ಕಿ ಹರಿದ ಬೆಣ್ಣಿಹಳ್ಳದ ಪ್ರವಾಹಕ್ಕೆ ತಾಲೂಕಿನ ಕುರ್ಲಗೇರಿ, ನವಲಗುಂದ ತಾಲೂಕಿನ ತಡಹಾಳದ ಬಳಿ ಬೆಣ್ಣಿ ಹಳ್ಳದ ಸೇತುವೆ ಪಕ್ಕದ ರಸ್ತೆ ಸಂಪೂರ್ಣ ಕಿತ್ತು ಹೋಗಿದೆ. ಅಂದಿನಿಂದಲೇ ನರಗುಂದ-ಗದಗ ಒಳಮಾರ್ಗದಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ವಿದ್ಯಾರ್ಥಿಗಳ ಹಾಗೂ ಪ್ರಯಾಣಿಕರ ಪರದಾಟ ಹೇಳತೀರದಾಗಿದೆ.
ವಾಹನ ಸಂಚಾರ ವಿರಳ:
ರಸ್ತೆ ದುರ್ಗಮವಾದ ಹಿನ್ನಲೆಯಲ್ಲಿ ಈ ಮಾರ್ಗದಲ್ಲಿ ಬಸ್ ಸಂಚಾರ ವಿರಳವಾಗಿದ್ದು, ನರಗುಂದ, ಕುರ್ಲಗೇರಿ, ತಡಹಾಳ, ನಾಯ್ಕನೂರು, ಕೊಂಗವಾಡ, ಶಲವಡಿ, ಹೊಂಬಳ ಪ್ರಯಾಣಿಕರಿಗಂತೂ ತೀವ್ರ ತೊಂದರೆಯಾಗಿ ಪರಿಣಮಿಸಿದೆ. ಅದರಲ್ಲೂ ತಡಹಾಳ ಹಾಗೂ ಕುರ್ಲಗೇರಿ ವಿದ್ಯಾರ್ಥಿಗಳ ಪಾಡಂತೂ ದೇವರಿಗೆ ಪ್ರೀತಿ. ಕುರ್ಲಗೇರಿ ಹಾಗೂ ತಡಹಾಳದ ಬಹುತೇಕ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣಕ್ಕಾಗಿ ನರಗುಂದಕ್ಕೆ ಬರುತ್ತಾರೆ. ಈಗ ಅವರಿಗಂತೂ ಸಕಾಲಕ್ಕೆ ಯಾವ ಬಸ್ಗಳೂ ಸಿಗುತ್ತಿಲ್ಲ. ಕುರ್ಲಗೇರಿಯ ವಿದ್ಯಾರ್ಥಿಗಳಿಗೆ ನರಗುಂದ ಡಿಪೋ ಕೆಲ ಬಸ್ಗಳ ವ್ಯವಸ್ಥೆ ಮಾಡಿದೆ.
ತಡಹಾಳಕ್ಕೆ ತೊಂದರೆ:
ತಡಹಾಳ ಗ್ರಾಮದ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ತೀವ್ರ ತೊಂದರೆಗೆ ಸಿಲುಕಿಕೊಂಡಿದ್ದಾರೆ. ಇಲ್ಲಿಂದ ನರಗುಂದಕ್ಕೆ ಬರಬೇಕಾದ ಹಾಗೂ ಇಲ್ಲಿಗೆ ತೆರೆಳಬೇಕಾದ ವಿದ್ಯಾರ್ಥಿಗಳು ಸುಮಾರು ಮೂರು ಕಿ.ಮೀ. ನಡೆದು ಬಂದು ಕುರ್ಲಗೇರಿ ಬಸ್ ಹಿಡಿಯಬೇಕಿದೆ. ಇಲ್ಲವಾದರೆ ಸುಮರು 20 ಕಿ.ಮೀ. ದೂರದ ನವಲಗುಂದಕ್ಕೆ ತೆರಳಿ ನರಗುಂದಕ್ಕೆ ಬರಬೇಕು. ಇದರಿಂದ ವಿದ್ಯಾರ್ಥಿಗಳು ಕೆಲವೊಮ್ಮ ತರಗತಿಗಳಿಂದ ಹಾಗೂ ಪರೀಕ್ಷೆಗಳಿಂದ ವಂಚಿತರಾಗಬೇಕಿದೆ. ಇದರ ಬಗ್ಗೆ ಅಧಿಕಾರಿಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ ಎಂದು ಕುರ್ಲಗೇರಿ ಹಾಗೂ ತಡಹಾಳದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಈ ಬಗ್ಗೆ ಮಾತನಾಡಿದ ಕುರ್ಲಗೇರಿಯ ವಿದ್ಯಾರ್ಥಿ ನದಾಫ್, ಸಂಚಾರಕ್ಕೆ ಕೊಂಚ ಅನುಕೂಲವಾಗಿರುವ ಕುರ್ಲಗೇರಿಯವರೆಗೆ ಕೆಲವೇ ಕಲ ಬಸ್ಗಳು ಸಂಚಾರ ಮಾಡುತ್ತಿವೆ. ಆದರೆ, ಇದರಿಂದ ನೇರವಾಗಿ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ. ಕೆಲ ಬಾರಿ ನಾವು ತರಗತಿಗಳಿಂದ ವಂಚಿತರಾಗಬೇಕಿದೆ ಎಂದು ಎಂದು ಹೇಳಿದ್ದಾನೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನೆರೆ ಪ್ರವಾಹದ ನಂತರ ನಮ್ಮೂರಿಗೆ ಎಲ್ಲ ಅಧಿಕಾರಿಗಳು ಬಂದರು, ಹೋದರು. ಆದರೆ ಈ ಸೇತುವೆ ಹಾಗೂ ರಸ್ತೆ ಮಾತ್ರ ದುರಸ್ತಿಯಾಗಿಲ್ಲ. ಇದರಿಂದ ತಡಹಾಳ ಗ್ರಾಮದ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಸಂಚಾರಕ್ಕಾಗಿ ಪರದಾಡುವಂತಾಗಿದೆ ಎಂದು ತಡಹಾಳ ಗ್ರಾಮದ ಶಿವಯೋಗಿ ಹಿರೇಮಠ ಅವರು ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಲೋಕೋಪಯೋಗಿ ಇಲಾಖೆಯ ಸಹಾಯಹ ಕಾರ್ಯನಿರ್ವಾಹಕರಾದ ಆರ್. ಎ. ಮನಗೂಳಿ ಅವರು, ಕುರ್ಲಗೇರಿ ಮತ್ತು ತಡಹಾಳ ಗ್ರಾಮಗಳ ಮಾರ್ಗ ದುರ್ಗಮವಾಗಿದ್ದು ಇಲಾಖೆ ಗಮನಕ್ಕೆ ಬಂದಿದೆ. ಈಗಾಗಲೇ ರಸ್ತೆ ದುರಸ್ತಿ ಮಾಡುವ ಬಗ್ಗೆ ಎಲ್ಲ ಅಧಿಕಾರಿಗಳು ಬಂದು ವೀಕ್ಷಣೆ ಮಾಡಿದ್ದಾರೆ. ಎಲ್ಲ ಸಮೀಕ್ಷೆ ಮಾಡಿ ಸುಮಾರು 70 ಲಕ್ಷ ವೆಚ್ಚದ ಅಂದಾಜು ಪತ್ರಿಕೆ ಕಳುಹಿಸಲಾಗಿದೆ. ಹಣ ಬಂದ ತಕ್ಷಣ ಶೀಘ್ರವೇ ಇದನ್ನು ದುರಸ್ತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.