ಹೊಸ ವಿಸ್ತರಿತ ಮಾರ್ಗವಾದ ನಮ್ಮ ಮೆಟ್ರೋದ ಕೆ.ಆರ್‌.ಪುರ-ಬೈಯಪ್ಪನಹಳ್ಳಿ ನಡುವೆ ಮೆಟ್ರೋ ಸುರಕ್ಷತಾ ಆಯುಕ್ತರು ಗುರುವಾರ (ಸೆ. 21ರಂದು) ಸುರಕ್ಷತಾ ತಪಾಸಣೆ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಇಡೀ ದಿನ ಕೃಷ್ಣರಾಜಪುರ ಮತ್ತು ಗರುಡಾಚಾರ್‌ಪಾಳ್ಯದವರೆಗಿನ ಮೆಟ್ರೋ ರೈಲ್ವೆ ಸಂಚಾರವನ್ನು ಬಿಎಂಆರ್‌ಸಿಎಲ್‌ ರದ್ದುಪಡಿಸಿದೆ. 

ಬೆಂಗಳೂರು (ಸೆ.20): ಹೊಸ ವಿಸ್ತರಿತ ಮಾರ್ಗವಾದ ನಮ್ಮ ಮೆಟ್ರೋದ ಕೆ.ಆರ್‌.ಪುರ-ಬೈಯಪ್ಪನಹಳ್ಳಿ ನಡುವೆ ಮೆಟ್ರೋ ಸುರಕ್ಷತಾ ಆಯುಕ್ತರು ಗುರುವಾರ (ಸೆ. 21ರಂದು) ಸುರಕ್ಷತಾ ತಪಾಸಣೆ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಇಡೀ ದಿನ ಕೃಷ್ಣರಾಜಪುರ ಮತ್ತು ಗರುಡಾಚಾರ್‌ಪಾಳ್ಯದವರೆಗಿನ ಮೆಟ್ರೋ ರೈಲ್ವೆ ಸಂಚಾರವನ್ನು ಬಿಎಂಆರ್‌ಸಿಎಲ್‌ ರದ್ದುಪಡಿಸಿದೆ. ಈ ಬಗ್ಗೆ ಪ್ರಕಟಣೆ ನೀಡಿರುವ ಬೆಂಗಳೂರು ಮೆಟ್ರೋ ರೈಲು ನಿಗಮ, ಕೃಷ್ಣರಾಜಪುರ ಮತ್ತು ಗರುಡಾಚಾರ್‌ಪಾಳ್ಯದವರೆಗೆ ಇಡೀ ದಿನ ಮೆಟ್ರೋ ರೈಲು ಸಂಚಾರ ಸೇವೆ ಇರುವುದಿಲ್ಲ. ಬೈಯ್ಯಪ್ಪನಹಳ್ಳಿಯಿಂದ ಇಂದಿರಾನಗರ ಮೆಟ್ರೋ ನಿಲ್ದಾಣದವರೆಗೆ ಮಧ್ಯಾಹ್ನ 1.30ರಿಂದ 4.30ರವರೆಗೆ ರೈಲು ಸಂಚರಿಸುವುದಿಲ್ಲ ಎಂದು ತಿಳಿಸಿದೆ.

Add Asianetnews Kannada as a Preferred SourcegooglePreferred

ಉಳಿದಂತೆ ವೈಟ್‌ಫೀಲ್ಡ್‌ (ಕಾಡುಗೋಡಿ) ಮತ್ತು ಗರುಡಾಚಾರಪಾಳ್ಯ ನಡುವೆ ರೈಲು ಸೇವೆ ಎಂದಿನಂತೆ ಇರಲಿದೆ. ಇಂದಿರಾನಗರ ಮತ್ತು ಕೆಂಗೇರಿ ನಡುವೆ ಮಧ್ಯಾಹ್ನ 1.30ರಿಂದ 4.30ರವರೆಗೆ ರೈಲ್ವೆ ಸೇವೆ ಲಭ್ಯವಿದೆ. ಮಧ್ಯಾಹ್ನ 1.30ರವರೆಗೆ ಮತ್ತು ಸಂಜೆ 4.30ರ ಬಳಿಕ ಬೈಯ್ಯಪ್ಪನಹಳ್ಳಿ ಮತ್ತು ಕೆಂಗೇರಿ ಮೆಟ್ರೋ ನಿಲ್ದಾಣದ ನಡುವೆ ರಾತ್ರಿ 11ರವರೆ ಮೆಟ್ರೋ ಸೇವೆ ಎಂದಿನಂತೆ ನಡೆಯಲಿದೆ. ಮೆಟ್ರೋ ಪ್ರಯಾಣಿಕರು ರೈಲ್ವೆ ಸಂಚಾರದ ವ್ಯತ್ಯಯ ಗಮನಿಸಿ ಸಹಕರಿಸುವಂತೆ ಬಿಎಂಆರ್‌ಸಿಎಲ್‌ ಕೋರಿದೆ.

ನಾಳೆ ಕೆ.ಆರ್‌.ಪುರ-ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗ ಸುರಕ್ಷತಾ ತಪಾಸಣೆ: ಹೊಸ ವಿಸ್ತರಿತ ಮಾರ್ಗವಾದ ನಮ್ಮ ಮೆಟ್ರೋದ ಕೆ.ಆರ್‌.ಪುರ-ಬೈಯಪ್ಪನಹಳ್ಳಿ ನಡುವೆ ಅಳವಡಿಸಲಾಗಿರುವ ಮೆಟ್ರೋ ರೈಲು ಮಾರ್ಗದ ಸುರಕ್ಷತಾ ತಪಾಸಣೆಯನ್ನು ಮೆಟ್ರೋ ಸುರಕ್ಷತಾ ಆಯುಕ್ತರು ಗುರುವಾರ (ಸೆ. 21ರಂದು) ಕೈಗೊಳ್ಳಲಿದ್ದಾರೆ. ಇದು 2 ಕಿ.ಮೀ. ಮಾರ್ಗವಾಗಿದ್ದು, ಇದಕ್ಕೆ ಮೆಟ್ರೋ ಸುರಕ್ಷತಾ ಆಯುಕ್ತರು ತಪಾಸಣೆ ಬಳಿಕ ಗ್ರೀನ್‌ ಸಿಗ್ನಲ್‌ ನೀಡಿದರೆ, ಕೆಂಗೇರಿಯಿಂದ ವೈಟ್‌ಫೀಲ್ಡ್‌ವರೆಗೆ ತಡೆರಹಿತ ಸಂಚಾರ ನಡೆಸಬಹುದಾಗಿದೆ. ಇದರಿಂದ ಬೆಂಗಳೂರಿನ ಐಟಿ ಹಬ್‌ ಆಗಿರುವ ವೈಟ್‌ಫೀಲ್ಡ್‌ನ ಸಾವಿರಾರು ಟೆಕ್ಕಿಗಳಿಗೆ ನೆರವಾಗಲಿದೆ.

ಕರ್ನಾಟಕದಲ್ಲಿ ಹುಕ್ಕಾ ಬಾರ್ ನಿಷೇಧ: ಸಚಿವ ದಿನೇಶ್‌ ಗುಂಡೂರಾವ್‌ ಘೋಷಣೆ

ಈವರೆಗೆ ಕೆ.ಆರ್‌.ಪುರ-ಬೈಯಪ್ಪನಹಳ್ಳಿ ಮಾರ್ಗ ನಿರ್ಮಾಣ ಅಪೂರ್ಣವಾಗಿದ್ದ ಕಾರಣ ಕೆಂಗೇರಿಯಿಂದ ವೈಟ್‌ಫೀಲ್ಡ್‌ಗೆ ಹೋಗುವವರು, ಬೈಯಪ್ಪನಹಳ್ಳಿಯಲ್ಲಿ ಇಳಿದು 2 ಕಿ.ಮೀ. ಬಸ್ಸಲ್ಲಿ ಸಾಗಿ ಮತ್ತೆ ಕೆ.ಆರ್‌.ಪುರದಲ್ಲಿ ಮೆಟ್ರೋ ಹತ್ತಿ ಮುಂದೆ ಸಾಗಬೇಕಿತ್ತು. ಇದು ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತಿತ್ತು. ಈ ನಡುವೆ, ಕೆಂಗೇರಿ-ಚಲ್ಲಘಟ್ಟ ವಿಸ್ತರಿತ ಮಾರ್ಗದ ಸುರಕ್ಷತಾ ತಪಾಸಣಾ ದಿನಾಂಕ ಇನ್ನೂ ನಿಗದಿ ಆಗಿಲ್ಲ.