ಕೊಪ್ಪಳದಲ್ಲಿ ಸಿಡಿಲು ಬಡಿದು ಬಾಲಕ ಸಾವು, ರಾಜ್ಯದಲ್ಲಿ ಮಳೆಗೆ ಮೊದಲ ಬಲಿ, ಹೊಲದಲ್ಲಿ ಕೆಲಸ ಮಾಡುತ್ತಿದ್ದ ಬಾಲಕ ಮಂಜುನಾಥ್ ಸಿಡಿಲು ಬಡಿದು ಮೃತಪಟ್ಟ ಘಟನೆ ನಡೆದಿದೆ. ಹಲೆವೆಡೆ ಆಲಿಕಲ್ಲು ಮಳೆಯಾಗಿದೆ.

ಕೊಪ್ಪಳ (ಮಾ.16) ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಹಾಸನ, ರಾಯಚೂರು, ಕೊಡಗು, ದಕ್ಷಿಣ ಕನ್ನಡ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಮಳೆಯಾಗಿದೆ. ಕೆಲವೆಡೆ ಆಲಿಕಲ್ಲು ಸಹಿತ ಮಳೆ ರೈತರ ಆತಂಕ ಹೆಚ್ಚಿಸಿದೆ. ಇದರ ನಡುವೆ ದುರಂತ ಒಂದು ನಡೆದಿದೆ. ಕೊಪ್ಪಳದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ 15 ವರ್ಷದ ಬಾಲಕ ಸಿಡಿಲು ಬಡಿದು ಮೃತಪಟ್ಟ ಘಟನೆ ನಡೆದಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾದ ಎನ್ ಜರಕುಂಟಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಕಂದಾಯ,ಪೊಲೀಸ್ ಇಲಾಖೆ ಅಧಿಕಾರಿಗಳ ಭೇಟಿ ಪರಿಶೀಲನೆ ನಡೆಸಿದ್ದಾರೆ.

15 ವರ್ಷದ ಬಾಲಕ ಮಂಜುನಾಥ್ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದಂತೆ ಮಳೆ ಮೋಡ ಆವರಿಸಿಕೊಂಡಿದೆ. ಮಳೆ ಬರುವ ಮುನ್ನ ಉಳಿದಿರುವ ಕೆಲಸ ಮುಗಿಸಲು ಬಾಲಕ ಮಂಜುನಾಥ್ ಸೇರಿದಂತೆ ರೈತರು ಚುರುಕಿನ ಕೆಲಸ ಆರಂಭಿಸಿದ್ದಾರೆ. ಇದರ ನಡುವೆ ಸಿಡಿಲು ಬಿಡಿದು ಮಂಜುನಾಥ್ ಮೃತಪಟ್ಟಿದ್ದಾನೆ. ತಕ್ಷಣವೇ ಬಾಲಕನ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

ಒಂದು ಗಂಟೆಗೂ ಹೆಚ್ಚು ಕಾಲ ಆಲಿಕಲ್ಲು ಸಹಿತ ಮಳೆ

ಹಾಸನದಲ್ಲಿ ಭಾರಿ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ. ಮನೆ ಮೇಲೆ ರಸ್ತೆ ಬದಿ ಜಮೀನುಗಳಲ್ಲಿ ಆಲಿಕಲ್ಲು ತುಂಬಿ ಹೋಗಿದೆ. ಹಾಸನದ ಹಲವು ಬಡಾವಣೆಗಳಲ್ಲಿ ಆಲಿಕಲ್ಲು ಮಳೆ ಬಿದ್ದಿದೆ. ರಾಶಿ ರಾಶಿ ಆಲಿಕಲ್ಲು ನೋಡಿದ ಮಕ್ಕಳು ಖುಷಿಪಟ್ಟಿದ್ದಾರೆ.

ರಾಯಚೂರಿನಲ್ಲಿ ಆಲಿಕಲ್ಲು ಮಳೆ

ರಾಯಚೂರಿನಲ್ಲೂ ಆಲಿಕಲ್ಲು ಮಳೆಯಾಗಿದೆ. ರಾಯಚೂರು ಜಿಲ್ಲೆ ಸಿಂಧನೂರು ತಾ. ಮಲ್ಲದಗುಡ್ಡು ಗ್ರಾಮದಲ್ಲಿ ಆಲಿಕಲ್ಲು ಮಳೆಯಾಗಿದೆ. ಸತತ 1 ಗಂಟೆಯಿಂದ ನಿರಂತರವಾಗಿ ಆಲಿ ಕಲ್ಲು ಮಳೆಯಾಗಿದೆ. ಆಲಿಕಲ್ಲು ಮಳೆಯಿಂದ ಮಾವು ಸೇರಿದಂತೆ ಇತರ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮೈಸೂರು ಜಿಲ್ಲೆಯಲ್ಲೂ ಭಾರಿ ಮಳೆಯಾಗಿದೆ. ಬಿಸಿಲ ಬೇಗೆಯಿಂದ ಬಳಸಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ಹಾಗೂ ಬೆಟ್ಟದಪುರ ಸುತ್ತಮುತ್ತ ಸುರಿದ ಮಳೆಯಾಗಿದೆ. ಇನ್ನು ಸಿಡಿಲಿಗೆ ತೆಂಗಿನ ಮರ ಹೊತ್ತಿ ಉರಿದ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ.