‘ಮಿಸ್ಸಿಂಗ್‌ ಲಿಂಕ್‌’ ಎನ್ನಿಸಿಕೊಂಡಿರುವ ಬೈಯಪ್ಪನಹಳ್ಳಿ-ಕೆ.ಆರ್‌.ಪುರ ಮೆಟ್ರೋ ಜೊತೆಗೆ ಕೆಂಗೇರಿ-ಚಲ್ಲಘಟ್ಟ ನಡುವಿನ ಮೆಟ್ರೋ ಮಾರ್ಗವನ್ನೂ ಏಕಕಾಲಕ್ಕೆ ಪ್ರಯಾಣಿಕರಿಗೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್‌ ತೀರ್ಮಾನಿಸಿದೆ. 

ಬೆಂಗಳೂರು (ಜು.09): ‘ಮಿಸ್ಸಿಂಗ್‌ ಲಿಂಕ್‌’ ಎನ್ನಿಸಿಕೊಂಡಿರುವ ಬೈಯಪ್ಪನಹಳ್ಳಿ-ಕೆ.ಆರ್‌.ಪುರ ಮೆಟ್ರೋ ಜೊತೆಗೆ ಕೆಂಗೇರಿ-ಚಲ್ಲಘಟ್ಟ ನಡುವಿನ ಮೆಟ್ರೋ ಮಾರ್ಗವನ್ನೂ ಏಕಕಾಲಕ್ಕೆ ಪ್ರಯಾಣಿಕರಿಗೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್‌ ತೀರ್ಮಾನಿಸಿದೆ. ಆಗಸ್ಟ್‌ ಅಂತ್ಯ ಅಥವಾ ಸೆಪ್ಟೆಂಬರ್‌ ಎರಡನೇ ವಾರದೊಳಗೆ ಜನತೆ ಈ ಮಾರ್ಗಗಳಲ್ಲಿ ಸಂಚರಿಸಲು ಸಾಧ್ಯವಾಗುವ ನಿರೀಕ್ಷೆಯಿದೆ. ಬೈಯಪ್ಪನಹಳ್ಳಿ-ಕೆ.ಆರ್‌.ಪುರ ಮೆಟ್ರೋ 2.1 ಕಿ.ಮೀ. ಹಾಗೂ ಕೆಂಗೇರಿ-ಚಲ್ಲಘಟ್ಟನಡುವಿನ 1.9 ಕಿ.ಮೀ. ಮೆಟ್ರೋ ಕಾಮಗಾರಿ ಬಾಕಿ ಇದೆ. ಇವೆರಡೂ ಪೂರ್ಣಗೊಂಡಲ್ಲಿ ನೇರಳೆ ಮಾರ್ಗದ 43.5 ಕಿ.ಮೀ. ಲೈನ್‌ ಪೂರ್ಣವಾದಂತಾಗಲಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎರಡೂ ಮಾರ್ಗದ ಶೇ.98ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ. ಹೀಗಾಗಿ ಎರಡೂ ಮಾರ್ಗವನ್ನು ಬೇರೆ ಬೇರೆ ಸಂದರ್ಭದಲ್ಲಿ ಜನತೆಗೆ ಮುಕ್ತಗೊಳಿಸುವ ಬದಲು ಒಂದೇ ಸಮಯಕ್ಕೆ ಪ್ರಯಾಣದ ಅವಕಾಶ ಮಾಡಿಕೊಡಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ. ಸಿಗ್ನಲಿಂಗ್‌, ಟ್ರ್ಯಾಕಿಂಗ್‌ ಸೇರಿ ಇತರೆ ಕಾಮಗಾರಿಗಳು ಇವೆರಡೂ ಮಾರ್ಗದಲ್ಲಿ ಬಾಕಿ ಇವೆ. ಪೂರ್ಣ ಸ್ಟ್ರೆಚನ್ನು ಏಕಕಾಲಕ್ಕೆ ಪ್ರಯಾಣಕ್ಕೆ ಮುಕ್ತಗೊಳಿಸಬೇಕಾದ ಕಾರಣ ಸಂಪೂರ್ಣ ಮಾರ್ಗದ ಸಿಗ್ನಲಿಂಗ್‌ ವ್ಯವಸ್ಥೆಯನ್ನು ಮರು ರೂಪಿಸಿಕೊಳ್ಳಬೇಕಿದೆ. ಈ ಕಾರಣಕ್ಕೆ ಸೋಮವಾರದಿಂದ ರಾತ್ರಿ ಸಿಗ್ನಲಿಂಗ್‌ ಕೆಲಸಗಳು ನಡೆಯಲಿವೆ. ಬಳಿಕ ಪ್ರಯೋಗಿಕ ಚಾಲನೆಯೂ ನಡೆಯಲಿದೆ. 

Bengaluru: ಚೆನ್ನಾಗಿ ಅಡುಗೆ ಮಾಡ್ತಾನೆಂದು ಪ್ರತಿಸ್ಫರ್ಧಿಯ ಹತ್ಯೆ: ಆರೋಪಿಗಳ ಬಂಧನ

ಬೆಳಗ್ಗಿನ 7 ಗಂಟೆಯೊಳಗೆ ಈ ಕೆಲಸ ಮುಗಿಸಲು ಸಾಧ್ಯವಿಲ್ಲದ ಕಾರಣ ಒಂದು ತಿಂಗಳ ಕಾಲ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಕೆ.ಆರ್‌.ಪುರ - ವೈಟ್‌ಫೀಲ್ಡ್‌ ಮಾರ್ಗವನ್ನು ಕಳೆದ ಮಾರ್ಚ್‌ 25ರಂದು ಮುಕ್ತಗೊಳಿಸಲಾಗಿದೆ. ಆದರೆ, ನಿರೀಕ್ಷಿತ ಪ್ರಯಾಣಿಕರು ಇಲ್ಲಿ ಸಂಚರಿಸುತ್ತಿಲ್ಲ. 13.7 ಕಿ.ಮೀ. ಬೈಯಪ್ಪನಹಳ್ಳಿ-ಕೆ.ಆರ್‌.ಪುರ ಮೆಟ್ರೋ ಮಾರ್ಗದ ನಡುವೆ ಫೀಡರ್‌ ಬಸ್‌ಗಳನ್ನೂ ಅವಲಂಭಿಸಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಈ ಮಿಸ್ಸಿಂಗ್‌ ಲಿಂಕನ್ನು ಜುಲೈ ವೇಳೆಗೆ ಪ್ರಯಾಣಿಕರಿಗೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್‌ ತೀರ್ಮಾನಿಸಿತ್ತು. ಆದರೆ ಇದೀಗ ಒಂದೂವರೆ ಎರಡು ತಿಂಗಳು ವಿಳಂಬವಾಗಿ ಆಗಸ್ಟ್‌ ಅಂತ್ಯ ಅಥವಾ ಸೆಪ್ಟೆಂಬರ್‌ಗೆ ಪ್ರಯಾಣಿಕರಿಗೆ ಲಭ್ಯವಾಗಿಸಲು ಪ್ರಯತ್ನಿಸುತ್ತಿದೆ.

ಪ್ರಾಯೋಗಿಕ ಸಂಚಾರದ ಬಳಿಕ ಮೆಟ್ರೋ ರೈಲ್ವೇ ಸುರಕ್ಷತಾ ಆಯುಕ್ತರಿಂದ ತಪಾಸಣೆ ನಡೆಯಲಿದೆ. ಅವರು ಗ್ರೀನ್‌ ಸಿಗ್ನಲ್‌ ನೀಡಿದ ಬಳಿಕ ಪೂರ್ಣ ಎರಡೂ ಮಾರ್ಗವನ್ನು ತೆರೆಯಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲ್ವೆ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಅಂಜುಮ್‌ ಪರ್ವೇಜ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು. ಪೂರ್ಣ ನೇರಳೆ ಮಾರ್ಗದಲ್ಲಿ ಸಂಚರಿಸಲು 1 ಗಂಟೆ 40 ನಿಮಿಷ ತೆಗೆದುಕೊಳ್ಳಲಿದೆ. ಜನ ಬಳಕೆಗೆ ಮುಕ್ತವಾದ ಬಳಿಕ ನೇರಳೆ ಮಾರ್ಗದಲ್ಲಿ ಈಗಿನದಕ್ಕಿಂತ (ಪ್ರಸ್ತುತ 3.10 ಲಕ್ಷ) 1.50 ಲಕ್ಷ ಅಧಿಕ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಬಹುದು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ನಿರೀಕ್ಷಿಸಿದ್ದಾರೆ.

ಬೀದಿಬದಿ ವ್ಯಾಪಾರಿಗಳಿಗೇ ಕಂಟಕವಾದ ತರಕಾರಿ ಬೆಲೆ ಏರಿಕೆ: ಖರೀದಿಗೆ ಗ್ರಾಹಕರ ಹಿಂದೇಟು

ನೇರಳೆ ಮಾರ್ಗದ ಪೂರ್ವ-ಪಶ್ಚಿಮ ಪೂರ್ಣ ಮಾರ್ಗವನ್ನು ಏಕಕಾಲಕ್ಕೆ ಜನತೆಯ ಪ್ರಯಾಣಕ್ಕೆ ಮುಕ್ತಗೊಳಿಸಲಿದ್ದೇವೆ. ಆಗಸ್ಟ್‌ ಎರಡನೇ ವಾರದಲ್ಲಿ ಸಿಎಂಆರ್‌ಎಸ್‌ನಿಂದ ಗುಣಮಟ್ಟ ಪರಿಶೀಲನೆ ನಡೆಯಲಿದೆ.
-ಅಂಜುಮ್‌ ಪರ್ವೇಜ್‌, ನಮ್ಮ ಮೆಟ್ರೋ ಎಂಡಿ