'ಇನ್ನೂ 6 ತಿಂಗಳವರೆಗೆ ಬಿಬಿಎಂಪಿ ಚುನಾವಣೆ ನಡೆಯೋದಿಲ್ಲ'
6 ತಿಂಗಳೊಳಗೆ ವಾರ್ಡ್ಗಳ ಪುನರ್ ವಿಂಗಡನೆ ಮಾಡಲು ಸೂಚನೆ| ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೆಲವು ಹಳ್ಳಿಗಳನ್ನು ಸೇರಿಸಬೇಕು ಅಂತ ಶಾಸಕರು ಪ್ರಸ್ತಾವನೆಯನ್ನ ಇಟ್ಟಿದ್ದಾರೆ| ಹೊಸ ಏರಿಯಾಗಳನ್ನು ಸರ್ಕಾರ ಫೈನಲ್ ಮಾಡುತ್ತದೆ| ಆಗ ಬಿಬಿಎಂಪಿ ಜನಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ: ಬಿಬಿಎಂಪಿ ಕಮಿಷನರ್|
ಬೆಂಗಳೂರು(ಜ.30): ಬಿಬಿಎಂಪಿ ಕೌನ್ಸಿಲರ್ಗಳ ಸಂಖ್ಯೆ 243 ಕ್ಕೆ ಹೆಚ್ಚಳ ಮಾಡಿ ಎಂಬ ಸರ್ಕಾರದ ಅಧಿಕೃತ ಆದೇಶದ ಹಿನ್ನೆಲೆಯಲ್ಲಿ ಇನ್ನೂ 6 ತಿಂಗಳವರೆಗೆ ಬಿಬಿಎಂಪಿ ಚುನಾವಣೆ ನಡೆಯೋದಿಲ್ಲ ಎಂದು ಬಿಬಿಎಂಪಿ ಕಮಿಷನರ್ ಎನ್. ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 6 ತಿಂಗಳೊಳಗೆ ವಾರ್ಡ್ಗಳ ಪುನರ್ ವಿಂಗಡನೆ ಮಾಡಲು ಸೂಚನೆ ನೀಡಲಾಗಿದೆ. ಬಿಬಿಎಂಪಿ ಗಡಿ ರೇಖೆಯ ಹೊರಗೆ 1 ಕಿ.ಮಿ ಸೇರಿಸಿಕೊಳ್ಳಲು ತಿಳಿಸಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೆಲವು ಹಳ್ಳಿಗಳನ್ನು ಸೇರಿಸಬೇಕು ಅಂತ ಶಾಸಕರು ಪ್ರಸ್ತಾವನೆಯನ್ನ ಇಟ್ಟಿದ್ದಾರೆ. ದೃಢಿಕರಿಸಿ ಸರಕಾರಕ್ಕೆ ಪ್ರಸ್ತಾವನೆಯನ್ನ ನೀಡಲಾಗುತ್ತದೆ. ಹೊಸ ಏರಿಯಾಗಳನ್ನು ಸರ್ಕಾರ ಫೈನಲ್ ಮಾಡುತ್ತದೆ. ಆಗ ಬಿಬಿಎಂಪಿ ಜನಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.
ಬಿಬಿಎಂಪಿ ಚುನಾವಣೆ ಮುಂದೂಡಲು ಆಗ್ರಹಿಸಿ ಸಿಎಂಗೆ ಪತ್ರ
ಒಂದು ವಾರ್ಡ್ಗೆ ಎಷ್ಟು ಜನ ಬರುತ್ತಾರೆ ಅಂತ ಫೈನಲ್ ಮಾಡುತ್ತೇವೆ. ಫೈನಲ್ ನೋಟಿಫಿಕೇಶನ್ ಹೊರಡಿಸಿ ನಂತರ ಚುನಾವಣೆ ನಡೆಯಲಿದೆ. 6 ತಿಂಗಳೊಳಗೆ ಹೊಸ ಏರಿಯಾಗಳನ್ನ ಸೇರಿಸಿಕೊಳ್ಳಲು ಸಮಯಾವಕಾಶ ಇರುತ್ತದೆ. ಈ ಹಿಂದೆ ಕೂಡ ಕೆಲ ಹಳ್ಳಿಗಳನ್ನು ಸೇರ್ಪಡಿಸಿಕೊಂಡಿದ್ದೇವೆ. ಈಗ ಅವು ಹಳ್ಳಿಗಳಾಗಿಲ್ಲ ಬದಲಾವಣೆ ಆಗಿದೆ. ಹೆಚ್ಚಿನ ಅಭಿವದ್ಧಿ ಆಗಿರುವ ಪ್ರದೇಶಗಳನ್ನು ಸೇರಿಸಿಕೊಳ್ಳುತ್ತೇವೆ. ಈ ಸಂಬಂಧ ಮುಂದಿನ ವಾರದಲ್ಲಿಕಮಿಟಿ ಮೀಟಿಂಗ್ ಮಾಡುತ್ತೇವೆ ಎಂದು ಹೇಳಿದ್ದಾರೆ.