ಈಗಾಗಲೇ ರಾಜ್ಯದಲ್ಲಿ ಕೊರೋನಾ ಸಂಕಷ್ಟ ಎದುರಾಗಿ ಸಾರಿಗೆ ಸಂಪರ್ಕ ಸ್ಥಗಿತವಾಗಿತ್ತು. ಇದರ ಬೆನ್ನಲ್ಲೇ ಗುಡ್ ನ್ಯೂಸ್ ಒಂದು ಇಲ್ಲಿದೆ. ಏನದು..?

ಮೈಸೂರು (ಅ.13):  ಕಟ್ಟಡ ಕಾರ್ಮಿಕರಿಗೆ ಉಚಿತ ಪಾಸ್‌ ನೀಡುವುದು ಸೇರಿದಂತೆ ಅನೇಕ ಸುಧಾರಣ ಕ್ರಮ ಕೈಗೊಳ್ಳಲಾಗುತ್ತಿದ್ದು, ನಷ್ಟತಗ್ಗಿಸಲು ಮೈಸೂರು ನಗರ ಮತ್ತು ಗ್ರಾಮಾಂತರ ವಿಭಾಗವನ್ನು ವಿಲೀನಗೊಳಿಸುವ ಸಂಬಂಧ ಚರ್ಚಿಸಿ, ತೀರ್ಮಾನಿಸುವುದಾಗಿ ಕೆಎಸ್‌ಆರ್‌ಟಿಸಿ ಅಧ್ಯಕ್ಷರಾದ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಬ್ಯಾಂಕ್‌ ಸೇರಿದಂತೆ ವಿವಿಧೆಡೆಯಿಂದ ಅನುದಾನ ಬರುತ್ತಿದೆ ಎಂಬ ಕಾರಣಕ್ಕೆ ಹಲವು ವರ್ಷಗಳ ಹಿಂದೆ ಈ ವಿಭಾಗವನ್ನು ಬೇರ್ಪಡಿಸಲಾಗಿತ್ತು. ಈಗ ವಿಶ್ವಬ್ಯಾಂಕ್‌ನಿಂದ 50 ಕೋಟಿ ಅನುದಾನ ಬಂದರೂ ನಿಗಮಕ್ಕೆ ನಷ್ಟವಾಗುತ್ತಿದೆಯೇ ಹೊರತು, ಯಾವ ಲಾಭವೂ ಆಗುತ್ತಿಲ್ಲ. ಡಿಪೋಗಳು, ಘಟಕಗಳು, ಸಿಬ್ಬಂದಿ, ಚಾಲಕರು- ನಿರ್ವಾಹಕರ ವೇತನ, ಬಸ್‌ ನಿಲ್ದಾಣಗಳ ನಿರ್ವಹಣೆ ವಿಚಾರದಲ್ಲಿ ಖರ್ಚು ಹೆಚ್ಚಾಗಿರುವುದರಿಂದ ಎರಡು ಘಟಕಗಳಿಂದ ಆಗುತ್ತಿರುವ ಹೊರೆ ನೋಡಿದರೆ ಪ್ರತ್ಯೇಕ ವಿಭಾಗ ಬೇಡ ಅನ್ನಿಸುತ್ತದೆ. ಆದ್ದರಿಂದ ಈ ಎರಡೂ ವಿಭಾಗವನ್ನು ವಿಲೀನಗೊಳಿಸಲು ಚಿಂತನೆ ಮಾಡಿದ್ದೇವೆ. ಈ ಸಂಬಂಧ ಅಧಿಕಾರಿಗಳ ಜೊತೆ ಚರ್ಚಿಸಿ ನವಂಬರ್‌ನಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.

ಸ್ಥಗಿತಗೊಂಡಿದ್ದ ಈ ಮಾರ್ಗದ ಬಸ್‌ ಸಂಚಾರ ಮತ್ತೆ ಆರಂಭ

ವಿಧಾನಸಭೆ ಉಪ ಚುನಾವಣೆ ಮತ್ತು ವಿಧಾನ ಪರಿಷತ್‌ ಚುನಾವಣೆಯ ಬಳಿಕ ಆಡಳಿತ ಮಂಡಳಿ ಸಭೆಯಲ್ಲಿ ಈ ವಿಚಾರ ಮಂಡಿಸಿ ತೀರ್ಮಾನಿಸಿ, ಬಳಿಕ ಸಚಿವ ಸಂಪುಟದ ಒಪ್ಪಿಗೆ ಪಡೆಯಲಾಗುವುದು. ಮೈಸೂರು ನಗರಕ್ಕೆ 50 ಹೊಸ ಬಸ್‌ಗಳನ್ನು ನೀಡಲಾಗುವುದು. ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್‌ ಸೌಲಭ್ಯ ಕಲ್ಪಿಸುವ ಕುರಿತು ಕಾರ್ಮಿಕ ಇಲಾಖೆಯೊಡನೆ ಸಮಾಲೋಚನೆ ನಡೆಸಲಾಗುವುದು. ಪ್ರಸ್ತುತ ಮೈಸೂರು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿ, ನಂತರ ರಾಜ್ಯದ ಎಲ್ಲೆಡೆ ವಿಸ್ತರಿಸಲಾಗುವುದು. ಜಿಲ್ಲೆ ವ್ಯಾಪ್ತಿಯಲ್ಲಿ ಮಾತ್ರವಲ್ಲದೆ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ತೆರಳಲೂ ಕೂಡ ಅನುಕೂಲ ಕಲ್ಪಿಸಲಾಗುವುದು. ಜಿಲ್ಲೆಯಲ್ಲಿ ಒಟ್ಟು 60,611 ಕಟ್ಟಡ ಕಾರ್ಮಿಕರಿಗೆ ಈ ಯೋಜನೆ ಲಭ್ಯವಾಗಲಿದೆ. ಕೋವಿಡ್‌ ಮತ್ತು ಲಾಕ್‌ಡೌನ್‌ನಿಂದ ಕಂಗಾಲಾಗಿದ್ದ ಕಟ್ಟಡ ಕಾರ್ಮಿಕರಿಗೆ ಇದು ನೆರವಾಗಲಿದೆ. ಕೂಲಿ ಕಾರ್ಯಕ್ಕೆ ತೆರಳುವ ಕಾರ್ಮಿಕರಿಗೆ ಇದು ಹೆಚ್ಚು ಸಹಕಾರಿ ಆಗಲಿದೆ ಎಂದರು.

‘ಬಸ್‌ ಆಟಿಕೆ’ ಕಲಾವಿದ ಆಚಾ​ರ್‌ಗೆ ಕೆಎ​ಸ್ಸಾ​ರ್ಟಿಸಿಯಿಂದ ಬಂಪರ್ ಆಫರ್

ಲಾಕ್‌ಡೌನ್‌ ಸಂದರ್ಭದಲ್ಲಿ ಯಾವುದೇ ಜನಸಂಚಾರ ಇಲ್ಲದ್ದರಿಂದ ನಿಗಮಕ್ಕೆ ಸುಮಾರು .70 ಕೋಟಿ ನಷ್ಟವಾಗಿದೆ. ಈ ಪೈಕಿ ಗ್ರಾಮಾಂತರ ವಿಭಾಗದಿಂದ 55 ಕೋಟಿ, ನಗರ ವಿಭಾಗದಿಂದ 15 ಕೋಟಿ ನಷ್ಟವಾಗಿದೆ. ಲಾಕ್‌ಡೌನ್‌ ನಂತರ ಬಸ್‌ ಕಾರ್ಯಾಚರಣೆ ಮಾಡಿದರೂ ಡಿಸೆಲ್‌ ಪೂರೈಸುವಷ್ಟುಆದಾಯ ಬರುತ್ತಿಲ್ಲ. ಆದರೂ ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್‌ ಚಾಲನೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಒಟ್ಟಾರೆ 1600 ಕೋಟಿ ನಷ್ಟವಾಗಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು 1650 ಕೋಟಿ ನೀಡಿದ್ದರಿಂದ ನೌಕರರಿಗೆ ವೇತನ ನೀಡಲು ಸಾಧ್ಯವಾಯಿತು ಎಂದರು.

ಈ ಬಾರಿ ಸರಳ ದಸರಾ ಆಚರಿಸಲು ಸರ್ಕಾರ ತೀರ್ಮಾನಿಸಿದೆ. ಪ್ರಯಾಣಿಕರ ಅಗತ್ಯತೆಗೆ ಅನುಗುಣವಾಗಿ ಗ್ರಾಮಾಂತರ ವಿಭಾಗದಿಂದ 70 ಹಾಗೂ ನಗರ ವಿಭಾಗದಿಂದ 20 ಬಸ್‌ಗಳ ಬೇಡಿಕೆ ಪೂರೈಸಲಾಗುತ್ತಿದೆ. ಆಂಧ್ರಪ್ರದೇಶ ಹೊರತುಪಡಿಸಿ, ಗೋವಾ, ಕೇರಳ, ತಮಿಳುನಾಡು, ತೆಲಂಗಾಣಕ್ಕೆ ಬಸ್‌ ಹೋಗುತ್ತಿಲ್ಲ. ಸಂಚಾರಕ್ಕೆ ಅನುಮತಿ ನೀಡಿದ್ದರೂ ಅಲ್ಲಿಂದ ಬಸ್‌ ಬರುತ್ತಿಲ್ಲ. ಆದ್ದರಿಂದ ಬೇಡಿಕೆಗೆ ಅನುಗುಣವಾಗಿ ಕಾರ್ಯಾರಂಭಿಸಲಾಗುವುದು ಎಂದರು.