Asianet Suvarna News Asianet Suvarna News

ಇಂದು ಮೈಸೂರಿಗೆ ಮೋದಿ ಅಗಮನ: ಪ್ರಧಾನಿ ಸ್ವಾಗತಕ್ಕೆ ಸಾಂಸ್ಕೃತಿಕ ನಗರಿ ಸಜ್ಜು

*  ಪ್ರಧಾನಿ ಜತೆ ಯೋಗ ದಿನಕ್ಕೆ ಮೈಸೂರು ಸಜ್ಜು
*  ಇಂದಿನಿಂದಲೇ ಅರಮನೆ ನಗರಿಯಲ್ಲಿ ಹಲವು ಕಾರ್ಯಕ್ರಮ
*  ಜೂ.21 ರಂದು ಅರಮನೆ ಆವರಣದಲ್ಲಿ ಯೋಗ ದಿನಾಚರಣೆ
 

Mysuru Prepare For Welcoming PM Narendra Modi grg
Author
Bengaluru, First Published Jun 20, 2022, 12:30 AM IST

ಮೈಸೂರು(ಜೂ.20): ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಭೇಟಿಗಾಗಿ ಇಂದು(ಸೋಮವಾರ) ಸಂಜೆ ಮೈಸೂರಿಗೆ ಆಗಮಿಸಲಿದ್ದು, ಅವರ ಸ್ವಾಗತಕ್ಕೆ ಸಾಂಸ್ಕೃತಿಕ ನಗರಿ ಸಂಪೂರ್ಣ ಸಜ್ಜಾಗಿದೆ.

ಮೋದಿ ಅವರದು ಇದು ಪ್ರಧಾನಿಯಾಗಿ ಮೂರನೇ ಭೇಟಿ. ಮೂರು ಬಾರಿಯೂ ಮೈಸೂರಿನಲ್ಲಿ ವಾಸ್ತವ್ಯ ಮಾಡಿರುವುದು ವಿಶೇಷ. ಇದಲ್ಲದೇ ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗಲೂ ಮೂರು ಬಾರಿ ಭೇಟಿ ನೀಡಿದ್ದರು.
ಈ ಬಾರಿ ಅವರು ವಿಶ್ವವಿಖ್ಯಾತ ಮೈಸೂರು ಅರಮನೆ ಅಂಗಳದಲ್ಲಿ ಜೂ.21 ರಂದು ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಾರೆ. ಪ್ರಧಾನ ಕಾರ್ಯಕ್ರಮ ಇದಾಗಿದ್ದು, ಇದರೊಂದಿಗೆ ಮತ್ತೆರಡು ಕಾರ್ಯಕ್ರಮಗಳನ್ನು ಜೋಡಿಸಲಾಗಿದೆ.

ಅಂತರಾಷ್ಟ್ರೀಯ ಯೋಗ ದಿನದಂದು ಮೈಸೂರಿಗೆ ಮೋದಿ, ಪ್ರಮೋದಾದೇವಿ ಒಡೆಯರ್, ಯದುವೀರ್‌ಗೆ ಆಹ್ವಾನ

ಇದಕ್ಕೂ ಮೊದಲು ಸೋಮವಾರ ಸಂಜೆ ಅವರು ಮಹಾರಾಜ ಕಾಲೇಜು ಮೈದಾನದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಬಗ್ಗೆ ಫಲಾನುಭವಿಗಳೊಂದಿಗೆ ಸಂವಾದ, ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಯ ಎಕ್ಸಲೆನ್ಸ್‌ ಕೇಂದ್ರ ಉದ್ಘಾಟನೆ, ಚಾಮುಂಡಿ ಬೆಟ್ಟದ ತಪ್ಪಲಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಕೆಎಸ್‌ಎಸ್‌ ಸಂಸ್ಕೃತ ಪಾಠಶಾಲೆ ಮತ್ತು ವಿದ್ಯಾರ್ಥಿ ನಿಲಯದ ಕಟ್ಟಡ ಉದ್ಘಾಟನಾ ಸಮಾರಂಭಗಳಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ರಾತ್ರಿ ರಾರ‍ಯಡಿಸನ್‌ ಬ್ಲೂ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಸಕಲ ಸಿದ್ಧತೆ:

ಮೋದಿ ಅವರಿಗೆ ಅದ್ಧೂರಿ ಸ್ವಾಗತ ನೀಡಲು ಜಿಲ್ಲಾಡಳಿತ ಸಜ್ಜಾಗಿದೆ. ವಿಮಾನ ನಿಲ್ದಾಣದಿಂದ ಅರಮನೆ, ಅರಮನೆಯ ಸುತ್ತಮುತ್ತಲಿನ ರಸ್ತೆಗಳು, ಸುತ್ತೂರು ಶಾಖಾ ಮಠ, ಚಾಮುಂಡಿಬೆಟ್ಟಕ್ಕೆ ಹೋಗುವ ರಸ್ತೆಗಳು, ಅರಮನೆಯಿಂದ ಚಾಮರಾಜ ಜೋಡಿ ರಸ್ತೆ. ರಾಮಸ್ವಾಮಿ ವೃತ್ತ, ಎಂಡಿಎ ವೃತ್ತದ ಮೂಲಕ ಮಹಾರಾಜ ಕಾಲೇಜು ಮೈದಾನಕ್ಕೆ ಹೋಗುವ ರಸ್ತೆಗಳನ್ನು ಹೊಸದಾಗಿ ಡಾಂಬರೀಕರಣ ಮಾಡಲಾಗಿದೆ. ವೃತ್ತಗಳನ್ನು ಸಿಂಗರಿಸಲಾಗಿದೆ. ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ಎಸ್‌.ಎ.ರಾಮದಾಸ್‌. ಎಲ್‌.ನಾಗೇಂದ್ರ ಮೊದಲಾದವರೊಂದಿಗೆ ಸತತ ಸಭೆಗಳನ್ನು ಮಾಡಿ, ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಕೂಡ ನಗರಕ್ಕೆ ಭೇಟಿ ನೀಡಿ ಕೋವಿಡ್‌ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಿದ್ದಾರೆ. ಗೃಹ ಸಚಿವ ಅರಗ ಜ್ಞಾನೇಂದ್ರ, ಡಿಪಿಪಿ ಪ್ರವೀಣ್‌ ಸೂದ್‌ ಕೂಡ ನಗರಕ್ಕೆ ಆಗಮಿಸಿ, ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಪರಿಶೀಲಿಸಿದ್ದಾರೆ. ಎಸ್‌ಪಿಜಿ ತಂಡ ನಗರದಲ್ಲಿಯೇ ಬೀಡುಬಿಟ್ಟಿದ್ದು, ಯಾವುದೇ ಭದ್ರತಾ ಲೋಪ ಆಗದಂತೆ ಎಚ್ಚರ ವಹಿಸಿದೆ.

ಯೋಗ ದಿನದಂದು ಅರಮನೆ ನಗರಿಗೆ ಪ್ರಧಾನಿ ಮೋದಿ, ಸ್ವರ್ಣಾಕ್ಷರಗಳ ವಿಶೇಷ ಗಿಫ್ಟ್ ರೆಡಿ!

ಭಾಗವಹಿಸುವ ಕಾರ್ಯಕ್ರಮಗಳು

ಸೋಮವಾರ

-ಸಂಜೆ 5- ಮಹಾರಾಜ ಕಾಲೇಜು ಮೈದಾನದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಬಗ್ಗೆ ಫಲಾನುಭವಿಗಳೊಂದಿಗೆ ಸಂವಾದ. ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಯ ಎಕ್ಸಲೆನ್ಸ್‌ ಕೇಂದ್ರ ಉದ್ಘಾಟನೆ
-ಸಂಜೆ 7-ಸುತ್ತೂರು ಶಾಖಾ ಮಠದಲ್ಲಿ ಕೆಎಸ್‌ಎಸ್‌ ಸಂಸ್ಕೃತ ಪಾಠಶಾಲೆ ಮತ್ತು ವಿದ್ಯಾರ್ಥಿ ನಿಲಯದ ಕಟ್ಟಡ ಉದ್ಘಾಟನೆ, ಪತಂಜಲಿ ಯೋಗ ಸೂತ್ರ, ಶಿವಸೂತ್ರ ಮತ್ತು ನಾರದ ಭಕ್ತಿಸೂತ್ರ ಕೃತಿಗಳ ಬಿಡುಗಡೆ
-ರಾತ್ರಿ 8.15- ಚಾಮುಂಡಿಬೆಟ್ಟಕ್ಕೆ ಭೇಟಿ(ಎಸ್‌ಪಿಜಿ ಸಮ್ಮತಿಸಿದರೆ ಮಾತ್ರ)
-ರಾತ್ರಿ ರಾರ‍ಯಡಿಸನ್‌ ಬ್ಲೂ ಹೋಟೆಲ್‌ನಲ್ಲಿ ವಾಸ್ತವ್ಯ

ಮಂಗಳವಾರ

ಬೆಳಗ್ಗೆ 6.30- ಅರಮನೆ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ.
ಬೆಳಗ್ಗೆ 8- ಯೋಗ ವಸ್ತು ಪ್ರದರ್ಶನ ವೀಕ್ಷಣೆ
ಬೆಳಗ್ಗೆ 8.30- ಅರಮನೆಯಲ್ಲಿ ರಾಜವಂಶಸ್ಥರೊಂದಿಗೆ ಉಪಾಹಾರ
ಬೆಳಗ್ಗೆ 9.25- ಹೆಲಿಕಾಪ್ಟರ್‌ನಲ್ಲಿ ತಿರುವನಂತಪುರಕ್ಕೆ ಪ್ರಯಾಣ
 

Follow Us:
Download App:
  • android
  • ios