ದಸರಾ ಗಜಪಯಣಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಚಾಲನೆ
ಮೈಸೂರಿನಲ್ಲಿ ಗಜಪಯಣ ಆರಂಭವಾಗಿದ್ದು ನೂತನ ಡಿಸಿ ರೋಹಿಣಿ ಸಿಂಧೂರಿ ಚಾಲನೆ ನೀಡಿದ್ದಾರೆ
ಬಿ.ಶೇಖರ್ ಗೋಪಿನಾಥಂ
ಮೈಸೂರು (ಅ.02): ಕೊರೋನಾ ಆತಂಕ ನಡುವೆಯೂ ಮೈಸೂರು ದಸರಾ ಮಹೋತ್ಸವ ಆಚರಣೆಗೆ ಸಿದ್ಧತೆಗಳು ನಡೆಯುತ್ತಿದೆ. ದಸರಾ ಮೊದಲ ಅತಿಥಿಗಳಾದ ಗಜಪಡೆಯು ಗುರುವಾರ ಕಾಡಿನಿಂದ ನಾಡಿಗೆ ಆಗಮಿಸಿದ್ದು, ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನ ಆವರಣದಲ್ಲಿ ಬಿಡಾರ ಹೂಡಿವೆ.
ಈ ಬಾರಿಯ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಲು 5 ಆನೆಗಳು ಮಾತ್ರ ಆಗಮಿಸಿವೆ. ಹುಣಸೂರು ತಾಲೂಕು ವೀರನಹೊಸಹಳ್ಳಿಯಲ್ಲಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಗೇಟ್ ಬಳಿ ಗುರುವಾರ ಬೆಳಗ್ಗೆ ದಸರಾ ಗಜಪಯಣಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಚಾಲನೆ ನೀಡಿದರು.
'ದಸರೆಗೆ ಹೋಗಬೇಕಂದ್ರೆ 5 ದಿನ ಮುಂಚೆ ಕೋವಿಡ್ ಟೆಸ್ಟ್ ಅಗತ್ಯ' ...
ಇದೇ ಮೊದಲ ಬಾರಿಗೆ 750 ಕೆ.ಜಿ. ಚಿನ್ನದ ಅಂಬಾರಿ ಹೊರಲಿರುವ ಅಭಿಮನ್ಯು ಆನೆಯೊಂದಿಗೆ ವಿಕ್ರಮ, ಗೋಪಿ, ವಿಜಯ ಮತ್ತು ಕಾವೇರಿ ಆನೆಗಳನ್ನು ಲಾರಿಗಳ ಮೂಲಕ ಮೈಸೂರಿಗೆ ಕರೆ ತರಲಾಗಿದೆ. 2020ರ ದಸರಾಗೆ ಕೋವಿಡ್-19 ಮಹಾಮಾರಿ ಅಡ್ಡಿಯಾಗಿರುವ ಕಾರಣ ಆನೆಗಳ ಸಂಖ್ಯೆಯನ್ನು 5ಕ್ಕೆ ಇಳಿಸಲಾಗಿದೆ. ಅರ್ಜುನ ಆನೆಗೆ 60 ವರ್ಷ ಆಗಿರುವ ಹಿನ್ನೆಲೆಯಲ್ಲಿ ಅಂಬಾರಿ ಹೊರುವ ಜವಾಬ್ದಾರಿಯನ್ನು ಈ ಬಾರಿ ಅಭಿಮನ್ಯು ಆನೆ ನಿರ್ವಹಿಸಲಿದೆ.
ಇಂದು ಆನೆಗಳಿಗೆ ಪೂಜೆ: ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಅ.2ರ ಬೆಳಗ್ಗೆ 9 ರಿಂದ 9.30ಕ್ಕೆ 5 ಆನೆಗಳಿಗೆ ಅರಣ್ಯ ಇಲಾಖೆ ವತಿಯಿಂದ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಗುತ್ತದೆ. ನಂತರ ಲಾರಿಯಲ್ಲಿ 5 ಆನೆಗಳನ್ನು ಅರಣ್ಯ ಭವನದಿಂದ ಅರಮನೆಗೆ ಕರೆದುಕೊಂಡು ಹೋಗಲಾಗುವುದು. ನಂತರ ಮಧ್ಯಾಹ್ನ 12.18ಕ್ಕೆ ಮೈಸೂರು ಅರಮನೆ ಮಂಡಳಿಯಿಂದ ಗಜಪಡೆಗೆ ಸ್ವಾಗತ ಕಾರ್ಯಕ್ರಮವನ್ನು ಅರಮನೆ ಜಯಮಾರ್ತಾಂಡ ದ್ವಾರದಲ್ಲಿ ಆಯೋಜಿಸಿದೆ.
ದಸರಾ ಆನೆಗಳ ವಿವರ
ಆನೆ ವಯಸ್ಸು ತೂಕ (ಕೇ.ಜಿಗಳಲ್ಲಿ)
ಅಭಿಮನ್ಯು 54 5000-5290
ವಿಕ್ರಮ 47 3820
ಗೋಪಿ 38 3710
ವಿಜಯ 61 3250
ಕಾವೇರಿ 42 3000-3220