Asianet Suvarna News Asianet Suvarna News

Mysuru : ದಲಿತ ಮುಖ್ಯಮಂತ್ರಿ ಬಿಎಸ್ಪಿ ಯಿಂದ ಮಾತ್ರ ಸಾಧ್ಯ : ಮುನಿಯಪ್ಪ

ಬಹುಜನ ಸಮಾಜ ಪಕ್ಷದಿಂದ ಮಾತ್ರ ದಲಿತ ಮುಖ್ಯಮಂತ್ರಿ ಮಾಡಲು ಸಾಧ್ಯ ಎಂದು ಪಕ್ಷದ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಹೇಳಿದರು.

Mysuru  Dalit Chief Minister is possible only from BSP snr
Author
First Published Nov 14, 2022, 12:01 PM IST

 ಚಾಮರಾಜನಗರ (ನ.14):  ಬಹುಜನ ಸಮಾಜ ಪಕ್ಷದಿಂದ ಮಾತ್ರ ದಲಿತ ಮುಖ್ಯಮಂತ್ರಿ ಮಾಡಲು ಸಾಧ್ಯ ಎಂದು ಪಕ್ಷದ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಹೇಳಿದರು.

ನಗರದಲ್ಲಿ ಸಂವಿಧಾನ ಸಂಕ್ಷರಣೆಗಾಗಿ ರಾಜ್ಯವ್ಯಾಪಿ ಜೈಭೀಮ್‌ ಜನಜಾಗೃತಿ ಜಾಥಾ ಕಾರ್ಯಕ್ರಮದ ಸಮಾರೋಪ ಉದ್ಘಾಟಿಸಿ ಮಾತನಾಡಿದರು.

ದಲಿತ ಮತ ಬ್ಯಾಂಕ್‌ (Vote Bank) ಮಾಡಿಕೊಂಡಿರುವ ಕಾಂಗ್ರೆಸ್‌ (Congress), ಬಿಜೆಪಿ, ಜೆಡಿಎಸ್‌ ದಲಿತ ಮುಖ್ಯಮಂತ್ರಿ ಮಾಡಲು ಸಿದ್ಧರಿಲ್ಲ, ಇದೀಗ ರಾಜ್ಯದಲ್ಲಿ ಎಸ್ಸಿ, ಎಸ್ಟಿಗಳು ಒಂದಾಗುತ್ತಿದ್ದು ಪ್ರಸನ್ನಾನಂದಪುರಿ ಸ್ವಾಮೀಜಿಗಳ ಹೋರಾಟದ ಫಲವಾಗಿ ಪರಿಶಿಷ್ಟರ ಮೀಸಲಾತಿ ಹೆಚ್ಚಳವಾಗಿದೆ. ಎಸ್ಸಿ, ಎಸ್ಟಿಸಮುದಾಯಗಳ ಶ್ರೀಗಳು ಒಂದಾಗಿದ್ದಾರೆ. ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಬಿಎಸ್ಪಿ ಬಿಟ್ಟು ಯಾವ ಪಕ್ಷದಿಂದಲ್ಲೂ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ ಎಂದರು.

ಕಾಂಗ್ರೆಸ್‌ ಮುಳುಗುವ ಹಡಗು ಆಗಿರುವ ಸಂದರ್ಭದಲ್ಲಿ ಈಗ ಮಲ್ಲಿಕಾರ್ಜುನಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ನನಗೆ ಮೀಸೆ ಬಂದಿರಲಿಲ್ಲ ಅಂದಿನಿಂದಲ್ಲೂ ಮುಖ್ಯಮಂತ್ರಿ ಮಾಡುವುದಾಗಿ ಕಾಂಗ್ರೆಸ್‌ ಹೇಳಿಕೊಂಡು ಬಂದಿದೆಯೇ ಹೊರತು ಮಾಡಲಿಲ್ಲ, ದೇಶ, ರಾಜ್ಯದಲ್ಲಿ 50ಕ್ಕೂ ಹೆಚ್ಚು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ಸಂವಿಧಾನದ ಆಶಯದಂತೆ ಅಧಿಕಾರ ನಡೆಸಿಲ್ಲ. ದೇಶದಲ್ಲಿ 8 ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರಮೋದಿಯವರು ಉತ್ತಮ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ ಎಂದರು.

ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೊರದೇಶದಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ 15 ಲಕ್ಷ ರು. ಹಾಕುವುದಾಗಿ ಹೇಳಿದರು, ಪ್ರತಿವರ್ಷ 2 ಕೋಟಿ ಉದ್ಯೋಗ ಕೊಡುವುದಾಗಿ ಹೇಳಿ ಯಾರ ಖಾತೆಗೂ ನಯಾಪೈಸೆ ಹಾಕಿಲ್ಲ, ಒಬ್ಬರಿಗೂ ಉದ್ಯೋಗ ಕೊಡಿಸಿಲ್ಲ ಇರುವ ಉದ್ಯೋಗ ಕಿತ್ತುಕೊಂಡು ಎಲ್ಲ ಕ್ಷೇತ್ರವನ್ನು ಖಾಸಗೀಕರಣ ಮಾಡುವ ದೇಶ ಜನತೆ ಸಂಕಷ್ಟಕ್ಕೆ ಸಿಲುಕಿಸುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‌, ಬಿಜೆಪಿಯಿಂದ ಸಂವಿಧಾನಕ್ಕೆ ಅಪತ್ತು:

ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಮಾತನಾಡಿ, ಕಾಂಗ್ರೆಸ್‌, ಬಿಜೆಪಿಯಿಂದ ಸಂವಿಧಾನಕ್ಕೆ ಅಪತ್ತು ಬಂದಿದೆ. 55 ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿ ಕಾಂಗ್ರೆಸ್‌ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಸಂವಿಧಾನವನ್ನು ಸಂಪೂರ್ಣವಾಗಿ ಜಾರಿಗೊಳಿಸುವ ಬದಲು 110 ತಿದ್ದುಪಡಿಗಳನ್ನು ತಂದು ದುರ್ಬಲಗೊಳಿಸುವ ಕೆಲಸ ಮಾಡಿದೆ. ಇದೇ ಆಧಾರವಾಗಿಟ್ಟುಕೊಂಡು ಬಿಜೆಪಿ ಸಂವಿಧಾನವನ್ನು ನಾಶ ಮಾಡಲು, ಸಮಾಧಿ ಮಾಡಲು ಹೊರಟಿದೆ ಎಂದು ದೂರಿದರು.

ರಾಜ್ಯ ಬೌದ್ಧ ಸಮಾಜದ ಅಧ್ಯಕ್ಷ ಪ್ರೊ.ಹ.ರಾ. ಮಹೇಶ್‌ ಪ್ರಾಸ್ತಾವಿಕವಾಗಿ ಭಾಷಣ ಮಾಡಿದರು.

ಸಮಾರೋಪದಲ್ಲಿ ಪಕ್ಷದ ರಾಜ್ಯ ಸಂಯೋಜಕ ಎನ್‌.ಗೋಪಿನಾಥ್‌, ರಾಜ್ಯ ಉಪಾಧ್ಯಕ್ಷ ಕೆ.ಪಿ.ವಾಸು, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್‌. ಮುನಿಯಪ್ಪ, ಅರಕಲವಾಡಿ ನಾಗೇಂದ್ರ, ಎಚ್‌.ಮೋಹನ್‌ ಕುಮಾರ್‌, ಕಾರ್ಯದರ್ಶಿರಾದ ಚಿನ್ನಪ್ಪ, ಕಮಲ್‌ ನಾಗರಾಜು,

ಮೈಸೂರು ಜಿಲ್ಲಾಧ್ಯಕ್ಷ ಡಿ.ಆರ್‌. ಪುಟ್ಟಸ್ವಾಮಿ, ಉಪಾಧ್ಯಕ್ಷ ಶ್ರೀಕಂಠ, ಕೊಡುಗು ಜಿಲ್ಲಾಧ್ಯಕ್ಷ ಸಿದ್ದಪ್ಪ, ಜಿಲ್ಲಾಧ್ಯಕ್ಷ ಎನ್‌.ನಾಗಯ್ಯ, ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ಪ್ರಧಾನ ಕಾರ್ಯದರ್ಶಿ ಬ.ಮ. ಕೃಷ್ಣಮೂರ್ತಿ, ತಾಲೂಕು ಸಂಯೋಜಕ ಎಸ್‌.ಪಿ.ಮಹೇಶ್‌, ಗ್ರಾಪಂ ಸದಸ್ಯ ಶಿವಣ್ಣ, ಬಾಲರಾಜ್‌ , ಮುಖಂಡ ಕುಮಾರಸ್ವಾಮಿ, ಇತರರು ಹಾಜರಿದ್ದರು.

ಬಿಜೆಪಿಯಿಂದ ದಲಿತರಿಗೆ ನ್ಯಾಯ

  ಬ್ಯಾಡಗಿ :  ಧರ್ಮಶಾಸ್ತ್ರದಲ್ಲಿ ಉಲ್ಲೇಖಿಸಲಾದ ಅಸ್ಪೃಶ್ಯರನ್ನು ಬಳಕೆ ಮಾಡಿಕೊಂಡ ಬಹುತೇಕ ಹಿಂದಿನ ಸರ್ಕಾರಗಳು ಇಲ್ಲಸಲ್ಲದ ಆಮಿಷಗಳನ್ನು ತೋರಿಸಿ ಕಳೆದ ಐದಾರು ದಶಕಗಳಿಂದ ಮತ ಬ್ಯಾಂಕ್‌ ಮಾಡಿಕೊಂಡಿದ್ದವು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಶೋಷಿತರ ನಾಡಿಮಿಡಿತ ಅರ್ಥೈಸಿಕೊಂಡಿದ್ದು ದಲಿತರಿಗೆ ದೇಶದ ಅತ್ಯುನ್ನತ ಹುದ್ದೆಯ ಅವಕಾಶ ಕಲ್ಪಿಸಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ಪಟ್ಟಣದ ಗಾಂಧಿನಗರದ ಡಾ. ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಸ್ಥಳೀಯ ಪುರಸಭೆ, ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿ ಸಂಯುಕ್ತಾಶಯದಲ್ಲಿ 67 ದಲಿತ ಕುಟುಂಬಗಳಿಗೆ ನಿವೇಶನದ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜನಾಂಗೀಯ ಅಸ್ಪೃಶ್ಯತೆಯನ್ನು ಮುಂದುವರೆಸಿಕೊಂಡು ಬಂದ ಕಾಂಗ್ರೆಸ್‌ ಸರ್ಕಾರ ಶೋಷಿತ ಸಮುದಾಯಕ್ಕೆ ನ್ಯಾಯ ಒದಗಿಸುವ ಬದಲು ಎಡಗೈ/ ಬಲಗೈ ಎಂದು ವಿಭಾಗಿಸುವ ಮೂಲಕ ದಲಿತರನ್ನೇ ಒಡೆದು ಆಳುತ್ತಿದ್ದು ದಲಿತ ಮುಖ್ಯಮಂತ್ರಿ ಫೋಷಣೆ ಸೀಮಿತಗೊಳಿಸಿ ಅವರನ್ನು ರಾಜಕೀಯ ಅಸ್ಪೃಶ್ಯರನ್ನಾಗಿ ಮಾಡಿದ್ದೇ ಈವರೆಗಿನ ಸಾಧನೆಯಾಗಿದೆ ಎಂದರು.

ಪುರಸಭೆ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಬಸವರಾಜ ಛತ್ರದ ಮಾತನಾಡಿ, ದಲಿತ ಸಮುದಾಯಗಳ ನಾಯಕನಾಗಿ ಗುರ್ತಿಸಿಕೊಂಡಿದ್ದ ಡಾ. ಬಿ.ಆರ್‌. ಅಂಬೇಡ್ಕರ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ಯಾರು? ಎಂಬ ವಿಷಯವನ್ನು ಚರ್ಚಿಸುವ ಸಂದರ್ಭ ಬಂದಿದೆ. ಯಾರದೇ ವಿರುದ್ಧ ಆರೋಪ ಮಾಡುವ ಮುನ್ನ ಕಾಂಗ್ರೆಸ್‌ ಒಂದೊಮ್ಮೆ ಈ ವಿಷಯದ ಕುರಿತು ಆತ್ಮಾವಲೋಕನೆ ಮಾಡಿಕೊಳ್ಳಲಿ ಎಂದರು.

ಈ ವೇಳೆ ಪುರಸಭೆ ಅಧ್ಯಕ್ಷೆ ಸರೋಜಾ, ಉಪಾಧ್ಯಕ್ಷೆ ಗಾಯತ್ರಿ ರಾಯ್ಕರ್‌ ಸದಸ್ಯರಾದ ಕಲಾವತಿ ಬಡಿಗೇರ, ಮಲ್ಲಮ್ಮ ಪಾಟೀಲ, ಗಿರಿಜಾ ಪಟ್ಟಣಶೆಟ್ಟಿ, ರಾಮಣ್ಣ ಕೋಡಿಹಳ್ಳಿ, ಹನುಮಂತ ಮ್ಯಾಗೇರಿ, ಕವಿತಾ ಸೊಪ್ಪಿನಮಠ, ಜಮೀಲಾ ಹೆರ್ಕಲ್‌, ಮಂಜಣ್ಣ ಬಾರ್ಕಿ, ರೇಷ್ಮಾಬಾನು ಶೇಖ್‌, ಮುಖ್ಯಾಧಿಕಾರಿ ಏಸು ಬೆಂಗಳೂರು, ಮುಖಂಡರಾದ ಶಿವಬಸಪ್ಪ ಕುಳೇನೂರ, ಸುರೇಶ ಉದ್ಯೋಗಣ್ಣನವರ, ನಾಗರಾಜ ಹಾವನೂರ, ವಿಜಯ ಮಾಳಗಿ, ವಿದ್ಯಾ ಶೆಟ್ಟಿ, ಲಲಿತ ಕಬ್ಬೂರ್‌ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Follow Us:
Download App:
  • android
  • ios