ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣದ ಹೆಸರು ಬದಲಾವಣೆ ವದಂತಿಗಳಿಗೆ ಮಾಜಿ ಸಂಸದ ಪ್ರತಾಪ್ ಸಿಂಹ ತೆರೆ ಎಳೆದಿದ್ದಾರೆ. ಹೆಸರು ಬದಲಿಸುವ ಉದ್ದೇಶವಿಲ್ಲ, ಬದಲಾಗಿ 'ಅಮೃತ್ ಭಾರತ್ ಸ್ಟೇಷನ್' ಯೋಜನೆಯಡಿ ಸೇರಿಸಿ 40 ಕೋಟಿ ರೂ. ಅನುದಾನದಲ್ಲಿ ನಿಲ್ದಾಣ ಅಭಿವೃದ್ಧಿಪಡಿಸುವುದೇ ಗುರಿ ಎಂದಿದ್ದಾರೆ.

ಮೈಸೂರು (ಏ.10): ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣದ ಹೆಸರು ಬದಲಾವಣೆ ಮಾಡಲಾಗುತ್ತದೆ ಎಂಬ ವದಂತಿಗಳಿಗೆ ಮಾಜಿ ಸಂಸದ ಪ್ರತಾಪ್ ಸಿಂಹ ಇಂದು ತೆರೆ ಎಳೆದಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಹೆಸರು ಬದಲಾವಣೆ ಮಾಡುವ ಯಾವುದೇ ಉದ್ದೇಶವಿಲ್ಲ, ಕೇವಲ ಅಭಿವೃದ್ಧಿಯಷ್ಟೇ ನನ್ನ ಗುರಿ' ಎಂದು ಸ್ಪಷ್ಟಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಅಮೃತ್ ಭಾರತ್ ಸ್ಟೇಷನ್ ಯೋಜನೆಗೆ ಮನವಿ:

ಕೇಂದ್ರ ಸಚಿವ ವಿ. ಸೋಮಣ್ಣ ಅವರು ನಿನ್ನೆ ಮೈಸೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಮೈಸೂರಿನ ಸಮಗ್ರ ಅಭಿವೃದ್ಧಿಯ ಕುರಿತು ಚರ್ಚಿಸಲಾಗಿದೆ. ರಾಜ್ಯದ 61 ರೈಲ್ವೆ ನಿಲ್ದಾಣಗಳು ಕೇಂದ್ರ ಸರ್ಕಾರದ 'ಅಮೃತ್ ಭಾರತ್ ಸ್ಟೇಷನ್' ಯೋಜನೆಯಡಿ ಅಭಿವೃದ್ಧಿಗೊಳ್ಳುತ್ತಿವೆ. ಇದೇ ಮಾದರಿಯಲ್ಲಿ ಅಶೋಕಪುರಂ ರೈಲ್ವೆ ನಿಲ್ದಾಣವನ್ನೂ ಈ ಯೋಜನೆಗೆ ಸೇರ್ಪಡೆಗೊಳಿಸುವಂತೆ ನಾನು ಸಚಿವರಿಗೆ ಮನವಿ ಮಾಡಿದ್ದೇನೆ ಎಂದು ಪ್ರತಾಪ್ ಸಿಂಹ ತಿಳಿಸಿದರು.

40 ಕೋಟಿ ಅನುದಾನದ ನಿರೀಕ್ಷೆ:

ಒಂದು ವೇಳೆ ಅಶೋಕಪುರಂ ನಿಲ್ದಾಣವು ಈ ಯೋಜನೆಗೆ ಸೇರಿದರೆ ಸುಮಾರು 40 ಕೋಟಿ ರೂಪಾಯಿಗಳ ಬೃಹತ್ ಅನುದಾನ ಲಭ್ಯವಾಗಲಿದೆ. ಇದರಿಂದ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮತ್ತಷ್ಟು ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಈ ಹಿಂದೆ ಸಂಸದನಾಗಿದ್ದಾಗಲೂ ಅಶೋಕಪುರಂ ನಿಲ್ದಾಣದ ಅಭಿವೃದ್ಧಿಗೆ ನಾನು ಶ್ರಮಿಸಿದ್ದೆ, ಈಗಲೂ ಅದೇ ಬದ್ಧತೆ ಮುಂದುವರಿಯಲಿದೆ ಎಂದರು.

ಅಪಪ್ರಚಾರಕ್ಕೆ ಕಿವಿಗೊಡಬೇಡಿ:

'ನಾನು ಅಧಿಕಾರದಲ್ಲಿದ್ದಾಗ ಅಧಿಕಾರ ಬಳಸಿ ಅಭಿವೃದ್ಧಿ ಮಾಡುತ್ತೇನೆ, ಅಧಿಕಾರವಿಲ್ಲದಿದ್ದಾಗ ಜನರ ಪರವಾಗಿ ಹೋರಾಟ ಮಾಡಿ ಅಭಿವೃದ್ಧಿ ಮಾಡಿಸುತ್ತೇನೆ. ಮೈಸೂರು-ಕೊಡಗು ಜನರ ಋಣ ನನ್ನ ಮೇಲಿದೆ, ಅದನ್ನು ತೀರಿಸುವ ಕೆಲಸ ಮಾಡುತ್ತೇನೆ. ಕೆಲವರು ಹೆಸರು ಬದಲಾವಣೆ ಎಂದು ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ, ಇಂತಹ ಅಪಪ್ರಚಾರಗಳಿಗೆ ನಾನು ಕಿವಿಗೊಡುವುದಿಲ್ಲ' ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು.

ಸ್ವಚ್ಛ ಮೈಸೂರಿಗೆ ಆದ್ಯತೆ:

ಅಭಿವೃದ್ಧಿಯ ಜೊತೆಗೆ ಮೈಸೂರನ್ನು ಸ್ವಚ್ಛವಾಗಿಡುವ ಸಂಕಲ್ಪ ಮಾಡಿರುವ ಪ್ರತಾಪ್ ಸಿಂಹ, ಈಗಾಗಲೇ ನಗರದಾದ್ಯಂತ ಅನಗತ್ಯ ಫ್ಲೆಕ್ಸ್ ತೆರವುಗೊಳಿಸುವ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ರಿಂಗ್ ರೋಡ್ ಸುತ್ತಮುತ್ತಲಿನ ಸ್ವಚ್ಛತೆಗೂ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದಾರೆ.