ರಂಗಯಣದ ಪ್ರತಿಷ್ಠಿತ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಸೋಮವಾರ ವರ್ಣ ರಂಜಿತ ತೆರೆ ಬಿದ್ದಿತು.

ಮೈಸೂರು :ರಂಗಯಣದ ಪ್ರತಿಷ್ಠಿತ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಸೋಮವಾರ ವರ್ಣ ರಂಜಿತ ತೆರೆ ಬಿದ್ದಿತು.

Add Asianetnews Kannada as a Preferred SourcegooglePreferred

ಇವ ನಮ್ಮವ ಇವ ನಮ್ಮವ ಹೆಸರಿನ ಆರು ದಿನಗಳ ಈ ನಾಟಕೋತ್ಸವ ಪ್ರಸಿದ್ಧ ನಾಟಕಗಳ ಪ್ರದರ್ಶನ, ಜಾನಪದ ಗಾಯನ, ಸಂಗೀತ, ಸಾಹಿತ್ಯಾತ್ಮಕ ಚರ್ಚೆಗೆ ವೇದಿಕೆಯಾಗಿತ್ತು.

ರಂಗಾಯಣದ ವನರಂಗ, ಭೂಮಿಗೀತ, ಕಿಂದರಿಜೋಗಿ, ಶ್ರೀರಂಗ, ಲಂಕೇಶ್ ಗ್ಯಾಲರಿ, ಕಲಾಮಂದಿರ, ಕಿರುರಂಗ ಮಂದಿರ ಹೀಗೆ ಎಲ್ಲಾ ವೇದಿಗಳಲ್ಲಿಯೂ ಒಂದೊಂದು ಕಾರ್ಯಕ್ರಮದ ಮೂಲಕ ಜನಮನ ಸೆಳೆಯಿತು.

ಸಾಮಾಜಿಕ ಕಳಕಳಿ, ಬಹುತ್ವದ ಭಾವನೆ ಮೂಡಿಸುವ ಮೂಲಕ ಉರಿ ಬಿಸಿಲ ಬೇಸಿಗೆಯಲ್ಲೂ ರಂಗ ಪ್ರಿಯರ ಮನ ತಣಿಸಿತು.

ಕಡೆಯ ದಿನವಾದ ಸೋಮವಾರ ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಎಳೆಕೊರಳು ಉಳಿದಾವೆ ಕೇಳ ಶೀರ್ಷಿಕೆಯಲ್ಲಿ ನಡೆಸಿಕೊಟ್ಟು ರಂಗಸಂಗೀತ, ಬಹುರೂಪಿಯ ಯಶಸ್ಸಿನ ಸಾರ್ಥಕತೆಯನ್ನು ಅನಾವರಣಗೊಳಿಸಿತು.

ಹಿರಿಯ ಕಲಾವಿದ ಚಂದ್ರಶೇಖರಾಚಾರ್ ಹೆಗ್ಗೊಠಾರ ಅವರ ಮಾರ್ಗದರ್ಶನ ಹಾಗೂ ಕೃಷ್ಣ ಚೈತನ್ಯ ಸಾಂಗತ್ಯದಲ್ಲಿ ಹತ್ತು ಹಲವು ರಂಗಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.

ನಂತರ ಕಿಂದರಿಜೋಗಿ ವೇದಿಕೆಯಲ್ಲಿ ಜಾನಪದ ಕಲಾ ವೈಭವ ಮೇಳೈಸಿತು. ಉಡುಪಿ ಉದ್ಯಾವರದ ಪುನೀತ್ ಮತ್ತು ತಂಡ ಕರಗ ಕೋಲಾಟ ಸಾಂಪ್ರದಾಯಿಕ ನೃತ್ಯ ಅಪಾರ ಮೆಚ್ಚುಗೆ ಪಡೆಯಿತು. ನಾದಸ್ವರಕ್ಕೆ ಅನುಗುಣವಾಗಿ ತಲೆಯ ಮೇಲೆ ಕಳಸ ಹೊತ್ತು ಕೋಲಾಟ ಪ್ರದರ್ಶನ ನೀಡಿದ ಕಲಾವಿದರು ಶಿಳ್ಳೆ- ಚಪ್ಪಾಳೆ ಸುರಿಮಳೆ ಪಡೆದರು. ಹಾಗೆಯೇ ಸುಳ್ಯ ಬಂಗ್ಲೆ ಗುಡ್ಡೆಯ ಸುಗಿಪು ಜಾನಪದ ಕಲಾತಂಡದ ಕಂಗೀಲು ನೃತ್ಯ ಸುಗ್ಗಿಯ ಸಂಭ್ರಮ ತೆರೆದಿಟ್ಟಿತು.

ತುಳುನಾಡಿನ ಸಾಂಸ್ಕೃತಿಕ ನೃತ್ಯಗಳಲ್ಲಿ ಒಂದಾದ ಕಂಗೀಲು ನೃತ್ಯ ಕಿಕ್ಕಿರಿದು ನೆರೆದಿದ್ದ ಜಾನಪ್ ಪ್ರಿಯರ ಮನ ಸೆಳೆಯಿತು. ಬಳಿಕ ಕಲಾವಿದರಿಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಸಂಚಾಲಕ ಪ್ರೊ.ಎಚ್.ಎಸ್. ಉಮೇಶ್, ಜಾನಪದ ವಿಭಾಗದ ಸಂಚಾಲಕಿ ಗೀತಾ ಮೋಂಟಡ್ಕ, ಯುವ ಕಲಾವಿದೆ ಭಾಗ್ಯ ಇದ್ದರು.

ಕಿರುರಂಗ ಮಂದಿರದಲ್ಲಿ ರಂಗವಲ್ಲಿ ತಂಡದವರು ಪಾರ್ಶ್ವ ಸಂಗೀತ ನಾಟಕವನ್ನು ಪ್ರಸ್ತುತಪಡಿಸಿದರು. ಭೂಮಿ ಗೀತಾದಲ್ಲಿ ಮಣಿಪುರದ ಅಖೋಕಾ ಥಿಯೇಟರ್ ತಂಡದವರು ಅಬೊರಿಜನಲ್ ಕ್ರೈ ನಾಟಕವನ್ು ಸಂಭಾಷಣೆ ಸಹಿತ ಪ್ರದರ್ಶಿಸಿದರು.

ವನರಂಗದಲ್ಲಿ ನಾಲ್ವಡಿ ಸೋಶಿಯಲ್ ಕಲ್ಚರಲ್ ಅಂಡ್ ಎಜುಕೇಷನಲ್ ಟ್ರಸ್ಟ್ನ ಕಲಾವಿದರು ಬೆರಳ್ಗೆ ಕೊರಳ್ ನಾಟಕವನ್ನು ದಿನೇಶ್ ಚಮ್ಮಾಳಿಗೆ ನಿರ್ದೇಶನದಲ್ಲಿ ಪ್ರಸ್ತುತಪಡಿಸಿದರು.

ಕಲಾಮಂದಿರದಲ್ಲಿ ಮಂಜೇಶ್ವರದ ಶಾರದಾ ಆರ್ಟ್ಸ್ ಕಲಾವಿದರು ಕಥೆ ಎಡ್ಡೆಂಡು ಎಂಬ ತುಳು ನಾಟಕ ಪ್ರದರ್ಶಿಸಿದರು.